ಎಸ್ ಪಿ ತೇಜರಾಜು.
ಕೆಲವು ಭೇಟಿ ನಮ್ಮನ್ನು ಮೂಕವಿಸ್ಮಯರನ್ನಾಗಿಸಿ ಬಿಡುತ್ತವೆ ಇಂತಹ ಸಂದರ್ಭದಲ್ಲಿ ಭೇಟಿಯಾದ ವ್ಯಕ್ತಿಗಳ ಮಾತುಗಳನ್ನು ಆಲಿಸುವುದೇ ನಮ್ಮ ಜವಾಬ್ದಾರಿಯುತ ಕೆಲಸವಾಗಿರುತ್ತದೆ. ಮಾತಿನ ಮಧ್ಯ ನಾವೇನಾದರೂ ಪ್ರವೇಶಿಸಿದರೆ ಅವರ ಲಕ್ಷ್ಯ ಇನ್ನಾವುದೋ ವಿಷಯಗಳಿಗೆ ತಿರುಗಿ ಮತ್ತೆ ಅದೇ ವಿಷಯಕ್ಕೆ ಬರಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಅಥವಾ ವಿಷಯ ಅಲ್ಲಿಗೆ ಮುಗಿದು ಹೋಗಬಹುದು ಇಂತಹ ಸಂದರ್ಭದಲ್ಲಿ ನಮ್ಮ ಮಾತುಗಳು ಮೌನವಾಗಿದ್ದರೆ ಒಳಿತು.
ತ್ವರಿತಗತಿಯಲ್ಲಿ ನಮ್ಮ ಸುತ್ತಮುತ್ತಲಾಗುತ್ತಿರುವ ಅನೇಕ ಬದಲಾವಣೆಗಳೊಂದಿಗೆ ಹೊಂದಿಕೊಂಡು ಬೆಳೆದಂತಹ ನಾವೆಲ್ಲರೂ ಇದೆ ಜೀವನವೆಂದರಿತೀರುತ್ತೇವೆ. ನಗರದಿಂದ ಸ್ವಲ್ಪ ದೂರದ ಹಳ್ಳಿಗಳಿಗೆ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಇಲ್ಲಿ ಕರೆಂಟ್ ಸರಿಯಾಗಿರುವುದಿಲ್ಲ, ಸ್ನೇಹಿತರು ಇಲ್ಲ, ಇಂಟರ್ನೆಟ್ ಕರೆಕ್ಟಾಗಿ ವರ್ಕ್ ಆಗೋಲ್ಲ, ಸರಿಯಾಗಿ ನೀರು ಕೂಡ ಬರುವುದಿಲ್ಲ ಎಂದು ನಾನಾ ಕಾರಣಗಳನ್ನು ಹೇಳಿ ಯಾವಾಗ ನಗರಕ್ಕೆ ಹಿಂದಿರುಗುತ್ತೇವೆ ಎಂದು ಯೋಚಿಸುವ ಈ ದಿನಗಳಲ್ಲಿ ನಗರದ ಗೋಜುಗಳನ್ನೆಲ್ಲವನ್ನುಬಿಟ್ಟು ದೂರದ ರಿಮೋಟ್ ಏರಿಯಾಗಳಲ್ಲಿ ಏಕಾಂಗಿಯಾಗಿ ನಿಸರ್ಗದೊಂದಿಗೆ ಬಾಳುವವರನ್ನು ಕಂಡಾಗ ಆಗುವುದು ಆಶ್ಚರ್ಯವಲ್ಲವೇ ಮತ್ತೇನು? ಇಂತಹ ವಿಶಿಷ್ಟ ವ್ಯಕ್ತಿಗಳ ಪರಿಚಯವನ್ನು ಅನೇಕ ಲೇಖಕರು ತಮ್ಮ ಪುಸ್ತಕಗಳಲ್ಲಿ ತಿಳಿಸಿದ್ದಾರೆ.
ನಂಜನಗೂಡು ಚಾಮರಾಜನಗರ ಮಾರ್ಗದ ಒಂದು ಪುಟ್ಟ ಬಲ ರಸ್ತೆಯನ್ನುಹಿಡಿದು ಮೂರ್ನಾಲ್ಕು ಮೈಲಿ ಚಲಿಸಿದರೆ ಒಂದು ಪುಟ್ಟ ಹಳ್ಳಿ, ಬೆರಳೆಣಿಕೆಯಷ್ಟು ಮನೆಗಳು,ಇದೇ ಮಾರ್ಗದಲ್ಲಿ ಮುನ್ನಡೆದರೆ ಸುತ್ತಮುತ್ತಲು ಜಾಲಿ ಮರಗಳು, ಕುರುಚಲು ಗಿಡಗಳು ಬೆಳೆದಿರುವಂತಹ ಮರಳು,ಸುಣ್ಣದ ಕಲ್ಲುಮಿಶ್ರಿತ ಜಮೀನುಗಳು, ರಸ್ತೆಯೂ ಕೊನೆಯಾಗಿ ಕಾಲುದಾರಿಯ ಮುಖಾಂತರ ನಡೆದುಕೊಂಡು ಮುಂದೆ ಸಾಗುತ್ತಿದ್ದಂತೆ ಸುತ್ತಮುತ್ತಲು ಬೆಳೆದಿದಂತಹ ಕುರುಚಲು ಗಿಡಗಳು ಮೈ ಪರಚುತ್ತಿದ್ದವು, ಸುತ್ತಮುತ್ತಲು ಎಲ್ಲಿ ನೋಡಿದರೂ ಇದೇ ರೀತಿ ಗಿಡಗಳು ಬೆಳೆದಿರುವಂತಹ ಜಮೀನುಗಳು. ಇಲ್ಲಿ ಕೃಷಿ ಮಾಡಬಯಸುವವರಿಗೆ ಒಂದಿಲ್ಲ ಒಂದು ರೀತಿಯಾದಂತಹ ಉಪಟಳಗಳು ಸಹಜವಾಗಿಯೇ ಇದ್ದವು ಒಮ್ಮೆ ಕಾಡುಹಂದಿಗಳ ಕಾಟವಾದರೆ, ಮತ್ತೊಮ್ಮೆ ತೋಳಗಳ ಕಾಟ, ಮಗದೊಮ್ಮೆ ನವಿಲು ಜಿಂಕೆಗಳು ಹಾಕಿದ ಬೆಳೆಯನ್ನುತಿಂದು ಮುಗಿಸುತ್ತಿದ್ದವು.
ಇಷ್ಟೆಲ್ಲಾ ಉಪಟಳಗಳಿರುವ ಈ ಭೂಮಿಯಲ್ಲಿ ಬೆಳೆ ಬೆಳೆದರೂ ಸರಿಯಾಗಿ ಬೆಲೆ ಸಿಗದ ಕಾರಣ ಇಲ್ಲಿಯ ಜನ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಮಾರಿಕೊಂಡು ಅನೇಕರು ನಗರವನ್ನು ಸೇರಿದರು. ಇವೆಲ್ಲವೂ ನಿಸರ್ಗಸಹಜ ಎಂದರಿತು ತನ್ನ ಜೀವನದಲ್ಲೊಂದು ತೋಟವನ್ನು ಮಾಡಲೇಬೇಕೆಂಬ ಆತ್ಮವಿಶ್ವಾಸದಲ್ಲಿ ಇಂದಿಗೂ ಏಕಾಂಗಿಯಾಗಿ ಹಗಲಿರುಳೆನ್ನದೆ ಶ್ರಮವಹಿಸಿ ತೋಟವನ್ನು ಮಾಡುತ್ತಿದ್ದಂತಹ ವಯೋವೃದ್ಧರನ್ನು ಕಂಡಾಗ ನಮಗೆ ಆಶ್ಚರ್ಯವಾಯಿತು.
ಒಣಕಲು ದೇಹ, ಬಿಳಿಯ ಕೂದಲು, ಕಪ್ಪು ಮೈಬಣ್ಣ, ಮುರಿದ ಹಲ್ಲುಗಳು, ಯಾವುದೋ ಒಂದು ಮಾಸಿದ ಹಸಿರು ಬಣ್ಣದ ಟೀ-ಶರ್ಟು, ಖಾಕಿ ಚಡ್ಡಿಯ ಜೇಬಿನಲ್ಲಿ ಒಂದು ಕಟ್ಟು ಬೀಡಿ,ಬೆಂಕಿ ಪಟ್ಟಣವನ್ನುಇಟ್ಟುಕೊಂಡಿದ್ದಂತಹ ವ್ಯಕ್ತಿಯು ತಾವು ಬೆಳೆಸಿದಂತಹ ಗಿಡಗಳಿಗೆ ನೀರುಣಿಸುವ ಕಾಯಕದಲ್ಲಿ ಮಗ್ನರಾಗಿದ್ದರು ನಮ್ಮ ಬರುವಿಕೆಯನ್ನು ದೂರದಿಂದಲೇ ಗುರುತಿಸಿ ಹತ್ತಿರಕ್ಕೆ ಬಂದು ಮಾತನಾಡಿಸಿದರು, ನಾವು ಬಂದ ಕಾರಣವೇನೋ ಅವರಿಗೆ ತಿಳಿಯಿತಾದರೂ ಏಕಾಂಗಿಯಾಗಿ ತಾವೇನು ಮಾಡುತ್ತಿದ್ದೀರಿ ಎಂದಿದ್ದಕ್ಕೆ ಸ್ವಲ್ಪದೂರದಲ್ಲೇ ತಾವು ಬೆಳೆಸಿದಂತಹ ತೋಟಕ್ಕೆ ಕರೆದುಕೊಂಡು ಹೋದರು.
ತೆಂಗಿನಗರಿಗಳಿಂದ ನಿರ್ಮಿಸಿದಂತಹ ಪುಟ್ಟ ಗುಡಿಸಲು, ಯಾರ ಸಹಾಯವೂ ಇಲ್ಲದೆ ತಮ್ಮ ಅಡುಗೆಯನ್ನು ತಾವೇ ಮಾಡಿಕೊಳ್ಳುತ್ತಾರೆ, ಸಾಕಿದಂತಹ ಎರಡು ಕರು ಹಾಗೂ ಒಂದು ಹಸುವಿಗೆ ಹುಲ್ಲನ್ನು ತಾನೇ ಬೆಳೆದುಕೊಳ್ಳುತ್ತಾರೆ, ಇವರೊಟ್ಟಿಗೆ ತೋಟವನ್ನೂ ರಕ್ಷಿಸುವ ಕಾಯಕದಲ್ಲಿ ಎರಡು ನಾಯಿಗಳು ಕೂಡ ಸದಾ ಶ್ರಮಿಸುತ್ತಿವೆ. ಸರಿಯಾಗಿ ಸಂಜೆ 6 ಗಂಟೆಯ ಹೊತ್ತಿಗೆ ಕರೆಂಟ್ ಬಂದ್ ಆಗುತ್ತದೆ ಸೀಮೆಎಣ್ಣೆಯ ದೀಪವೋ ಅಥವಾ ಕ್ಯಾಂಡಲ್ ಅನ್ನು ಬೆಳಕಿಗಾಗಿ ಉಪಯೋಗಿಸಿಕೊಳ್ಳುತ್ತಾರೆ. ರಾತ್ರಿ ಯಾವುದಾದರೂ ಕಾಡುಪ್ರಾಣಿಗಳು ತೋಟವನ್ನು ನುಗ್ಗಿದಾಗ ಟಾರ್ಚ್ ಹಿಡಿದು ನಾಯಿಗಳೊಂದಿಗೆ ಅವುಗಳನ್ನು ಓಡಿಸುವ ಕಾಯಕದಲ್ಲಿ ಮಗ್ನರಾಗುತ್ತಾರೆ. ಮರುದಿನ ಎಂದಿನ ಕಾಯಕದಂತೆ ಸೂರ್ಯ ಉದಯಿಸುವುದರೊಳಗೆ ಎದ್ದು ತಮ್ಮ ಕಾಯಕದಲ್ಲಿ ಮಗ್ನರಾಗುತ್ತಾರೆ. ಪ್ರತಿಬಾರಿಯೂ ಬಿದ್ದ ಸ್ವಲ್ಪ ಮಳೆಯಲ್ಲಿಯೇ ದ್ವಿದಳ ಧಾನ್ಯಗಳನ್ನು ಬೆಳೆಯುವುದರೊಟ್ಟಿಗೆ ತೆಂಗು, ಬಾಳೆ, ನುಗ್ಗೆ, ಹೆಬ್ಬೇವು, ಕರಿಬೇವು, ಹೀಗೆ ನಾಲ್ಕಾರು ತರಹದಂತಹ ಮರಗಳು, ಕಾಳು ತರಕಾರಿಗಳನ್ನು ಬೆಳೆದುಕೊಂಡು ಹಾಯಾಗಿದ್ದೇನೆ ಎಂದು ಹೇಳುತ್ತಾರೆ. ನನಗೇನು ಹೊರಗಿನವರ ಚಿಂತೆಯಾಗಲಿ, ತಂಟೆ ತಕರಾರುಗಳು ಏನೂ ಇಲ್ಲ, ಕಾಡು ಪ್ರಾಣಿಗಳಿಂದಲೇನೋ ನನಗೇನು ಉಪಟಳ ಎಂದೆನಿಸಲಿಲ್ಲ ಏಕೆಂದರೆ ಅದು ನಿಸರ್ಗಸಹಜ ನಾವು ಅದರೊಟ್ಟಿಗೆ ಬಾಳಬೇಕು. ಮಾನವನ ಆರೋಗ್ಯದ ರಹಸ್ಯ ಈ ನಿಸರ್ಗದಲ್ಲೇ ಅಡಗಿದೆ ಅದನ್ನ ನಾವು ಅರಿಯಬೇಕಷ್ಟೇ. ನಗರದ ಜೀವನಕ್ಕೆ ಅಂಟಿಕೊಂಡಿರುವಂತಹ ಮಕ್ಕಳು ನಗರಕ್ಕೆ ಬರುವಂತೆ ಒತ್ತಾಯಿಸಿದ್ದು ಬಹಳಷ್ಟು ಸಾರಿ ನಡೆದಿದೆ ಆದರೆ ನನ್ನ ಆತ್ಮವೆಲ್ಲವೂ ಇದೆ ಜಮೀನಿನಲ್ಲಿ ಅಡಗಿದೆಯೆಂದು ಹೇಳಿ ಹಿಂದಿರುಗಿ ಕಳುಹಿಸಿದ್ದಿದೆ.
ಹೀಗೆ ನಮ್ಮ ನಡುವೆ ಸಾವಿರಾರು ಜನ ಎಲೆಮರೆಯ ಕಾಯಿಗಳಂತೆ ನಿಸರ್ಗದೊಂದಿಗೆ ಬದುಕಿದ್ದಾರೆ ಹಾಗೂ ಇಂದಿಗೂ ಕೂಡ ಜೀವನ ನಡೆಸುತ್ತಿದ್ದಾರೆ. ಪ್ರಪಂಚದ ಜಂಜಾಟಗಳಿಂದ ದೂರವುಳಿದು ಸುಖ ಜೀವನವನ್ನು ನಡೆಸುತ್ತಿದ್ದಾರೆ. ಇಂತಹ ಅನೇಕ ಜನರ ಉದ್ದೇಶವೆಲ್ಲವು ಒಂದೇ ಅದುವೇ ಪರಿಸರದೊಂದಿಗೆ ಸುಖ ಜೀವನ ನಡೆಸುವುದಾಗಿದೆ.
ಒಂದು ಲಕ್ಷಕ್ಕೂ ಮಿಗಿಲಾದ ಮರಗಳನ್ನು ಬೆಳೆಸಿದಂತಹ ವೃಕ್ಷಮಾತೆ ತುಳಸಿ ಗೌಡರವರೆ ಆಗಿರಲಿ, ರಸ್ತೆಯ ಬದಿ ಸಾವಿರಾರು ಮರಗಳನ್ನು ನೆಟ್ಟು ಬೆಳೆಸಿದಂತಹ ಸಾಲುಮರದ ತಿಮ್ಮಕ್ಕನವರೇ ಆಗಿರಲಿ, ತಮ್ಮ ಜೀವನವನ್ನೇ ಪರಿಸರಕೆಂದು ಮುಡಿಪಾಗಿಟ್ಟಂತಹ ಸುಂದರ್ ಲಾಲ್ ಬಹುಗುಣ ರವರೆ ಆಗಿರಲಿ, ಮಜೂಲಿ ದ್ವೀಪದಲ್ಲಿ 1360 ಎಕರೆ ಕಾಡನ್ನು ನಿರ್ಮಿಸಿದಂತಹ ಜಾದವ್ ಅವರೇ ಆಗಿರಲಿ, ನಮ್ಮ ಪಕ್ಕದ ವಿರಾಜಪೇಟೆಯಲ್ಲಿ 300 ಎಕರೆ ಪ್ರದೇಶದಲ್ಲಿ SAI SANCTUARY ಎಂಬ ಕಾಡನ್ನು ನಿರ್ಮಿಸಿದಂತಹ ದಂಪತಿಗಳೇ ಆಗಿರಲಿ, ಹೀಗೆ ಸಾವಿರಾರು ಮಂದಿ ತಮ್ಮನ್ನು ತಾವು ನಿಸರ್ಗಕ್ಕೆ ಸಮರ್ಪಿಸಿಕೊಂಡಿದ್ದಾರೆ. ಇವರುಗಳು ತಾವು ಮಾಡಿದ ಕಾರ್ಯಗಳೆಲ್ಲವು ಸಾಧನೆ ಆಗಬೇಕೆಂದು ಮಾಡಿದವರಲ್ಲ ಬದಲಿಗೆ ತಮ್ಮ ಕಾಯಕವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದ್ದಾರೆ. ಇಂತಹ ಅನೇಕ ಮಹನೀಯರನ್ನು ಗುರುತಿಸಿ ಸರಕಾರವು ಪದ್ಮಶ್ರೀಯಂತಹ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿಗಳಿಗೆ ಭಾಜನರಾಗಿದ್ದರು ಸ್ವಲ್ಪವೂ ಗರ್ವ ದರ್ಪಗಳಿಲ್ಲ ಇವರುಗಳೆಲ್ಲರೂ ಬಹಳ ಮುಗ್ಧ ಜನರು. ಸದಾ ಮುಖದಲ್ಲಿ ಮುಗುಳ್ನಗೆಯನ್ನು ಬೀರುತ್ತ ಹಸನ್ಮುಖಿಗಳಾಗಿದ್ದಾರೆ.
ಹಾಗಾದರೆ ಹೀಗೊಮ್ಮೆ ಯೋಚಿಸಿ ಇವರೆಲ್ಲರೂ ತಾವು ಮಾಡಿದ ಕಾಯಕವನ್ನು ಸಾಧನೆಯಾಗಬೇಕೆಂದು ಮಾಡಿದರೆ? ಇಲ್ಲವಲ್ಲ ಒಟ್ಟಿನಲ್ಲಿ ಸಾಧನೆಆಗಿದ್ದಂತೂ ಸತ್ಯವಲ್ಲವೇ? ಹೀಗೆ ನಾವು ಮಾಡಿದಂತಹ ಕಾರ್ಯಗಳೆಲ್ಲವೂ ಸಾಧನೆ ಆಗಬೇಕೆಂಬ ಆಲೋಚನೆಯನ್ನು ಮನಸ್ಸಿನಿಂದ ತೆಗೆದುಹಾಕಿ ಈ ಬಾರಿಯ ವಿಶ್ವ ಪರಿಸರ ದಿನಕ್ಕೆ ನಾವೆಲ್ಲರೂ ನಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಗಿಡಗಳನ್ನು ನೆಡೋಣ ಹಾಗೂ ಈ ಕೆಲಸವನ್ನು ಕೇವಲ ಪರಿಸರ ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತಿ ಮಾಸವು ನಮ್ಮ ಕೈಲಾದಷ್ಟು ಗಿಡಗಳನ್ನು ಬೆಳೆಸೋಣ. ಪ್ರತಿಯೊಬ್ಬರೂ ಒಂದೊಂದು ಗಿಡದಂತೆ ನಮ್ಮ ದೇಶದಲ್ಲಿ ನೆಟ್ಟಿದ್ದೇ ಆದರೆ ಒಟ್ಟು136 ಕೋಟಿ ಗಿಡಗಳಾಗುತ್ತದೆ ಇದೇ ರೀತಿ ಇಷ್ಟು ಪ್ರಮಾಣದ ಗಿಡಮರಗಳನ್ನು ಬೆಳೆಸಿದ್ದೆ ಆದರೆ ಮುಂದಿನ 10-15 ವರ್ಷಗಳಲ್ಲಿ ಇಂದು ಅಕಾಲಿಕವಾಗಿ ಬೀಳುತ್ತಿರುವ ಮಳೆ ಸಕಾಲಕ್ಕೆ ಬೀಳುವಂತೆ ಮಾಡಬಹುದಾಗಿದೆ. ಇದರಿಂದ ದೇಶವು ಸುಭಿಕ್ಷವಾಗಿರುತ್ತದೆ ಅದಕ್ಕೋಸ್ಕರವಾದರೂ ನಾವು ಪರಿಸರವನ್ನು ರಕ್ಷಿಸಬೇಕು ಏಕೆಂದರೆ ಪರಿಸರ ಸದಾ ನಮ್ಮನ್ನು ರಕ್ಷಿಸುತ್ತದೆ.
ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.





