Saturday, May 30, 2020

ಸಾಧನೆ ಜೀವನದೊಳಗೋ? ಜೀವನ ಸಾಧನೆಯೋಳಗೋ ?


                          ಎಸ್ ಪಿ ತೇಜರಾಜು.

 ಕೆಲವು ಭೇಟಿ ನಮ್ಮನ್ನು ಮೂಕವಿಸ್ಮಯರನ್ನಾಗಿಸಿ ಬಿಡುತ್ತವೆ ಇಂತಹ ಸಂದರ್ಭದಲ್ಲಿ ಭೇಟಿಯಾದ ವ್ಯಕ್ತಿಗಳ ಮಾತುಗಳನ್ನು ಆಲಿಸುವುದೇ ನಮ್ಮ ಜವಾಬ್ದಾರಿಯುತ ಕೆಲಸವಾಗಿರುತ್ತದೆ. ಮಾತಿನ ಮಧ್ಯ ನಾವೇನಾದರೂ ಪ್ರವೇಶಿಸಿದರೆ ಅವರ ಲಕ್ಷ್ಯ ಇನ್ನಾವುದೋ ವಿಷಯಗಳಿಗೆ ತಿರುಗಿ ಮತ್ತೆ ಅದೇ ವಿಷಯಕ್ಕೆ ಬರಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಅಥವಾ ವಿಷಯ ಅಲ್ಲಿಗೆ ಮುಗಿದು ಹೋಗಬಹುದು ಇಂತಹ ಸಂದರ್ಭದಲ್ಲಿ ನಮ್ಮ ಮಾತುಗಳು ಮೌನವಾಗಿದ್ದರೆ ಒಳಿತು.


 ತ್ವರಿತಗತಿಯಲ್ಲಿ ನಮ್ಮ ಸುತ್ತಮುತ್ತಲಾಗುತ್ತಿರುವ ಅನೇಕ ಬದಲಾವಣೆಗಳೊಂದಿಗೆ ಹೊಂದಿಕೊಂಡು ಬೆಳೆದಂತಹ ನಾವೆಲ್ಲರೂ ಇದೆ ಜೀವನವೆಂದರಿತೀರುತ್ತೇವೆ. ನಗರದಿಂದ ಸ್ವಲ್ಪ ದೂರದ ಹಳ್ಳಿಗಳಿಗೆ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಇಲ್ಲಿ ಕರೆಂಟ್ ಸರಿಯಾಗಿರುವುದಿಲ್ಲ, ಸ್ನೇಹಿತರು ಇಲ್ಲ, ಇಂಟರ್ನೆಟ್ ಕರೆಕ್ಟಾಗಿ ವರ್ಕ್ ಆಗೋಲ್ಲ, ಸರಿಯಾಗಿ ನೀರು ಕೂಡ ಬರುವುದಿಲ್ಲ ಎಂದು ನಾನಾ ಕಾರಣಗಳನ್ನು ಹೇಳಿ ಯಾವಾಗ ನಗರಕ್ಕೆ ಹಿಂದಿರುಗುತ್ತೇವೆ ಎಂದು ಯೋಚಿಸುವ ಈ ದಿನಗಳಲ್ಲಿ ನಗರದ ಗೋಜುಗಳನ್ನೆಲ್ಲವನ್ನುಬಿಟ್ಟು ದೂರದ ರಿಮೋಟ್ ಏರಿಯಾಗಳಲ್ಲಿ ಏಕಾಂಗಿಯಾಗಿ ನಿಸರ್ಗದೊಂದಿಗೆ ಬಾಳುವವರನ್ನು ಕಂಡಾಗ ಆಗುವುದು ಆಶ್ಚರ್ಯವಲ್ಲವೇ ಮತ್ತೇನು? ಇಂತಹ ವಿಶಿಷ್ಟ ವ್ಯಕ್ತಿಗಳ ಪರಿಚಯವನ್ನು ಅನೇಕ ಲೇಖಕರು ತಮ್ಮ ಪುಸ್ತಕಗಳಲ್ಲಿ ತಿಳಿಸಿದ್ದಾರೆ.


 ನಂಜನಗೂಡು ಚಾಮರಾಜನಗರ ಮಾರ್ಗದ ಒಂದು ಪುಟ್ಟ ಬಲ ರಸ್ತೆಯನ್ನುಹಿಡಿದು ಮೂರ್ನಾಲ್ಕು ಮೈಲಿ ಚಲಿಸಿದರೆ ಒಂದು ಪುಟ್ಟ ಹಳ್ಳಿ, ಬೆರಳೆಣಿಕೆಯಷ್ಟು ಮನೆಗಳು,ಇದೇ ಮಾರ್ಗದಲ್ಲಿ ಮುನ್ನಡೆದರೆ ಸುತ್ತಮುತ್ತಲು ಜಾಲಿ ಮರಗಳು, ಕುರುಚಲು ಗಿಡಗಳು ಬೆಳೆದಿರುವಂತಹ ಮರಳು,ಸುಣ್ಣದ ಕಲ್ಲುಮಿಶ್ರಿತ ಜಮೀನುಗಳು, ರಸ್ತೆಯೂ ಕೊನೆಯಾಗಿ ಕಾಲುದಾರಿಯ ಮುಖಾಂತರ ನಡೆದುಕೊಂಡು ಮುಂದೆ ಸಾಗುತ್ತಿದ್ದಂತೆ ಸುತ್ತಮುತ್ತಲು ಬೆಳೆದಿದಂತಹ ಕುರುಚಲು ಗಿಡಗಳು ಮೈ ಪರಚುತ್ತಿದ್ದವು, ಸುತ್ತಮುತ್ತಲು ಎಲ್ಲಿ ನೋಡಿದರೂ ಇದೇ ರೀತಿ ಗಿಡಗಳು ಬೆಳೆದಿರುವಂತಹ ಜಮೀನುಗಳು. ಇಲ್ಲಿ ಕೃಷಿ ಮಾಡಬಯಸುವವರಿಗೆ ಒಂದಿಲ್ಲ ಒಂದು ರೀತಿಯಾದಂತಹ ಉಪಟಳಗಳು ಸಹಜವಾಗಿಯೇ ಇದ್ದವು ಒಮ್ಮೆ ಕಾಡುಹಂದಿಗಳ ಕಾಟವಾದರೆ, ಮತ್ತೊಮ್ಮೆ ತೋಳಗಳ ಕಾಟ, ಮಗದೊಮ್ಮೆ ನವಿಲು ಜಿಂಕೆಗಳು ಹಾಕಿದ ಬೆಳೆಯನ್ನುತಿಂದು ಮುಗಿಸುತ್ತಿದ್ದವು.

 ಇಷ್ಟೆಲ್ಲಾ ಉಪಟಳಗಳಿರುವ ಈ ಭೂಮಿಯಲ್ಲಿ ಬೆಳೆ ಬೆಳೆದರೂ ಸರಿಯಾಗಿ ಬೆಲೆ ಸಿಗದ ಕಾರಣ ಇಲ್ಲಿಯ ಜನ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಮಾರಿಕೊಂಡು ಅನೇಕರು ನಗರವನ್ನು ಸೇರಿದರು. ಇವೆಲ್ಲವೂ ನಿಸರ್ಗಸಹಜ ಎಂದರಿತು ತನ್ನ ಜೀವನದಲ್ಲೊಂದು ತೋಟವನ್ನು ಮಾಡಲೇಬೇಕೆಂಬ ಆತ್ಮವಿಶ್ವಾಸದಲ್ಲಿ ಇಂದಿಗೂ ಏಕಾಂಗಿಯಾಗಿ ಹಗಲಿರುಳೆನ್ನದೆ ಶ್ರಮವಹಿಸಿ ತೋಟವನ್ನು ಮಾಡುತ್ತಿದ್ದಂತಹ ವಯೋವೃದ್ಧರನ್ನು ಕಂಡಾಗ ನಮಗೆ ಆಶ್ಚರ್ಯವಾಯಿತು.


 ಒಣಕಲು ದೇಹ, ಬಿಳಿಯ ಕೂದಲು, ಕಪ್ಪು ಮೈಬಣ್ಣ, ಮುರಿದ ಹಲ್ಲುಗಳು, ಯಾವುದೋ ಒಂದು ಮಾಸಿದ ಹಸಿರು ಬಣ್ಣದ ಟೀ-ಶರ್ಟು, ಖಾಕಿ ಚಡ್ಡಿಯ ಜೇಬಿನಲ್ಲಿ ಒಂದು ಕಟ್ಟು ಬೀಡಿ,ಬೆಂಕಿ ಪಟ್ಟಣವನ್ನುಇಟ್ಟುಕೊಂಡಿದ್ದಂತಹ ವ್ಯಕ್ತಿಯು ತಾವು  ಬೆಳೆಸಿದಂತಹ ಗಿಡಗಳಿಗೆ ನೀರುಣಿಸುವ ಕಾಯಕದಲ್ಲಿ ಮಗ್ನರಾಗಿದ್ದರು ನಮ್ಮ ಬರುವಿಕೆಯನ್ನು ದೂರದಿಂದಲೇ ಗುರುತಿಸಿ ಹತ್ತಿರಕ್ಕೆ ಬಂದು ಮಾತನಾಡಿಸಿದರು, ನಾವು ಬಂದ ಕಾರಣವೇನೋ ಅವರಿಗೆ ತಿಳಿಯಿತಾದರೂ ಏಕಾಂಗಿಯಾಗಿ ತಾವೇನು ಮಾಡುತ್ತಿದ್ದೀರಿ ಎಂದಿದ್ದಕ್ಕೆ ಸ್ವಲ್ಪದೂರದಲ್ಲೇ ತಾವು ಬೆಳೆಸಿದಂತಹ ತೋಟಕ್ಕೆ ಕರೆದುಕೊಂಡು ಹೋದರು.

 ತೆಂಗಿನಗರಿಗಳಿಂದ ನಿರ್ಮಿಸಿದಂತಹ ಪುಟ್ಟ ಗುಡಿಸಲು, ಯಾರ ಸಹಾಯವೂ ಇಲ್ಲದೆ ತಮ್ಮ ಅಡುಗೆಯನ್ನು ತಾವೇ ಮಾಡಿಕೊಳ್ಳುತ್ತಾರೆ,   ಸಾಕಿದಂತಹ ಎರಡು ಕರು ಹಾಗೂ ಒಂದು ಹಸುವಿಗೆ ಹುಲ್ಲನ್ನು ತಾನೇ ಬೆಳೆದುಕೊಳ್ಳುತ್ತಾರೆ, ಇವರೊಟ್ಟಿಗೆ ತೋಟವನ್ನೂ ರಕ್ಷಿಸುವ ಕಾಯಕದಲ್ಲಿ ಎರಡು ನಾಯಿಗಳು ಕೂಡ ಸದಾ ಶ್ರಮಿಸುತ್ತಿವೆ. ಸರಿಯಾಗಿ ಸಂಜೆ 6 ಗಂಟೆಯ ಹೊತ್ತಿಗೆ ಕರೆಂಟ್ ಬಂದ್ ಆಗುತ್ತದೆ ಸೀಮೆಎಣ್ಣೆಯ ದೀಪವೋ ಅಥವಾ ಕ್ಯಾಂಡಲ್ ಅನ್ನು ಬೆಳಕಿಗಾಗಿ ಉಪಯೋಗಿಸಿಕೊಳ್ಳುತ್ತಾರೆ. ರಾತ್ರಿ ಯಾವುದಾದರೂ ಕಾಡುಪ್ರಾಣಿಗಳು ತೋಟವನ್ನು ನುಗ್ಗಿದಾಗ ಟಾರ್ಚ್ ಹಿಡಿದು ನಾಯಿಗಳೊಂದಿಗೆ ಅವುಗಳನ್ನು ಓಡಿಸುವ ಕಾಯಕದಲ್ಲಿ ಮಗ್ನರಾಗುತ್ತಾರೆ. ಮರುದಿನ ಎಂದಿನ ಕಾಯಕದಂತೆ ಸೂರ್ಯ ಉದಯಿಸುವುದರೊಳಗೆ ಎದ್ದು ತಮ್ಮ ಕಾಯಕದಲ್ಲಿ ಮಗ್ನರಾಗುತ್ತಾರೆ. ಪ್ರತಿಬಾರಿಯೂ ಬಿದ್ದ ಸ್ವಲ್ಪ ಮಳೆಯಲ್ಲಿಯೇ ದ್ವಿದಳ ಧಾನ್ಯಗಳನ್ನು ಬೆಳೆಯುವುದರೊಟ್ಟಿಗೆ ತೆಂಗು, ಬಾಳೆ, ನುಗ್ಗೆ, ಹೆಬ್ಬೇವು, ಕರಿಬೇವು, ಹೀಗೆ ನಾಲ್ಕಾರು ತರಹದಂತಹ ಮರಗಳು, ಕಾಳು ತರಕಾರಿಗಳನ್ನು ಬೆಳೆದುಕೊಂಡು ಹಾಯಾಗಿದ್ದೇನೆ ಎಂದು ಹೇಳುತ್ತಾರೆ. ನನಗೇನು ಹೊರಗಿನವರ ಚಿಂತೆಯಾಗಲಿ, ತಂಟೆ ತಕರಾರುಗಳು ಏನೂ ಇಲ್ಲ, ಕಾಡು ಪ್ರಾಣಿಗಳಿಂದಲೇನೋ ನನಗೇನು ಉಪಟಳ ಎಂದೆನಿಸಲಿಲ್ಲ ಏಕೆಂದರೆ ಅದು ನಿಸರ್ಗಸಹಜ ನಾವು ಅದರೊಟ್ಟಿಗೆ ಬಾಳಬೇಕು. ಮಾನವನ ಆರೋಗ್ಯದ ರಹಸ್ಯ ಈ ನಿಸರ್ಗದಲ್ಲೇ ಅಡಗಿದೆ ಅದನ್ನ ನಾವು ಅರಿಯಬೇಕಷ್ಟೇ. ನಗರದ ಜೀವನಕ್ಕೆ ಅಂಟಿಕೊಂಡಿರುವಂತಹ ಮಕ್ಕಳು ನಗರಕ್ಕೆ ಬರುವಂತೆ ಒತ್ತಾಯಿಸಿದ್ದು ಬಹಳಷ್ಟು ಸಾರಿ ನಡೆದಿದೆ ಆದರೆ ನನ್ನ ಆತ್ಮವೆಲ್ಲವೂ ಇದೆ ಜಮೀನಿನಲ್ಲಿ ಅಡಗಿದೆಯೆಂದು ಹೇಳಿ ಹಿಂದಿರುಗಿ ಕಳುಹಿಸಿದ್ದಿದೆ.


 ಹೀಗೆ ನಮ್ಮ ನಡುವೆ ಸಾವಿರಾರು ಜನ ಎಲೆಮರೆಯ ಕಾಯಿಗಳಂತೆ ನಿಸರ್ಗದೊಂದಿಗೆ ಬದುಕಿದ್ದಾರೆ ಹಾಗೂ ಇಂದಿಗೂ ಕೂಡ ಜೀವನ ನಡೆಸುತ್ತಿದ್ದಾರೆ. ಪ್ರಪಂಚದ ಜಂಜಾಟಗಳಿಂದ ದೂರವುಳಿದು ಸುಖ ಜೀವನವನ್ನು ನಡೆಸುತ್ತಿದ್ದಾರೆ. ಇಂತಹ ಅನೇಕ ಜನರ ಉದ್ದೇಶವೆಲ್ಲವು ಒಂದೇ ಅದುವೇ ಪರಿಸರದೊಂದಿಗೆ ಸುಖ ಜೀವನ ನಡೆಸುವುದಾಗಿದೆ.


  ಒಂದು ಲಕ್ಷಕ್ಕೂ ಮಿಗಿಲಾದ ಮರಗಳನ್ನು ಬೆಳೆಸಿದಂತಹ ವೃಕ್ಷಮಾತೆ ತುಳಸಿ ಗೌಡರವರೆ ಆಗಿರಲಿ, ರಸ್ತೆಯ ಬದಿ ಸಾವಿರಾರು ಮರಗಳನ್ನು ನೆಟ್ಟು ಬೆಳೆಸಿದಂತಹ ಸಾಲುಮರದ ತಿಮ್ಮಕ್ಕನವರೇ ಆಗಿರಲಿ, ತಮ್ಮ ಜೀವನವನ್ನೇ ಪರಿಸರಕೆಂದು ಮುಡಿಪಾಗಿಟ್ಟಂತಹ ಸುಂದರ್ ಲಾಲ್ ಬಹುಗುಣ ರವರೆ ಆಗಿರಲಿ, ಮಜೂಲಿ ದ್ವೀಪದಲ್ಲಿ 1360 ಎಕರೆ ಕಾಡನ್ನು ನಿರ್ಮಿಸಿದಂತಹ ಜಾದವ್ ಅವರೇ ಆಗಿರಲಿ, ನಮ್ಮ ಪಕ್ಕದ ವಿರಾಜಪೇಟೆಯಲ್ಲಿ 300 ಎಕರೆ ಪ್ರದೇಶದಲ್ಲಿ SAI SANCTUARY ಎಂಬ ಕಾಡನ್ನು ನಿರ್ಮಿಸಿದಂತಹ ದಂಪತಿಗಳೇ ಆಗಿರಲಿ, ಹೀಗೆ ಸಾವಿರಾರು ಮಂದಿ ತಮ್ಮನ್ನು ತಾವು ನಿಸರ್ಗಕ್ಕೆ ಸಮರ್ಪಿಸಿಕೊಂಡಿದ್ದಾರೆ. ಇವರುಗಳು ತಾವು ಮಾಡಿದ ಕಾರ್ಯಗಳೆಲ್ಲವು ಸಾಧನೆ ಆಗಬೇಕೆಂದು ಮಾಡಿದವರಲ್ಲ ಬದಲಿಗೆ ತಮ್ಮ ಕಾಯಕವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದ್ದಾರೆ. ಇಂತಹ ಅನೇಕ ಮಹನೀಯರನ್ನು ಗುರುತಿಸಿ ಸರಕಾರವು ಪದ್ಮಶ್ರೀಯಂತಹ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿಗಳಿಗೆ ಭಾಜನರಾಗಿದ್ದರು ಸ್ವಲ್ಪವೂ ಗರ್ವ ದರ್ಪಗಳಿಲ್ಲ ಇವರುಗಳೆಲ್ಲರೂ ಬಹಳ ಮುಗ್ಧ ಜನರು. ಸದಾ ಮುಖದಲ್ಲಿ ಮುಗುಳ್ನಗೆಯನ್ನು ಬೀರುತ್ತ ಹಸನ್ಮುಖಿಗಳಾಗಿದ್ದಾರೆ.


 ಹಾಗಾದರೆ ಹೀಗೊಮ್ಮೆ ಯೋಚಿಸಿ ಇವರೆಲ್ಲರೂ ತಾವು ಮಾಡಿದ ಕಾಯಕವನ್ನು ಸಾಧನೆಯಾಗಬೇಕೆಂದು ಮಾಡಿದರೆ? ಇಲ್ಲವಲ್ಲ ಒಟ್ಟಿನಲ್ಲಿ ಸಾಧನೆಆಗಿದ್ದಂತೂ ಸತ್ಯವಲ್ಲವೇ? ಹೀಗೆ ನಾವು ಮಾಡಿದಂತಹ ಕಾರ್ಯಗಳೆಲ್ಲವೂ ಸಾಧನೆ ಆಗಬೇಕೆಂಬ ಆಲೋಚನೆಯನ್ನು ಮನಸ್ಸಿನಿಂದ ತೆಗೆದುಹಾಕಿ ಈ ಬಾರಿಯ ವಿಶ್ವ ಪರಿಸರ ದಿನಕ್ಕೆ ನಾವೆಲ್ಲರೂ ನಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಗಿಡಗಳನ್ನು ನೆಡೋಣ ಹಾಗೂ ಈ ಕೆಲಸವನ್ನು ಕೇವಲ ಪರಿಸರ ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತಿ ಮಾಸವು ನಮ್ಮ ಕೈಲಾದಷ್ಟು ಗಿಡಗಳನ್ನು ಬೆಳೆಸೋಣ. ಪ್ರತಿಯೊಬ್ಬರೂ ಒಂದೊಂದು ಗಿಡದಂತೆ ನಮ್ಮ ದೇಶದಲ್ಲಿ ನೆಟ್ಟಿದ್ದೇ ಆದರೆ ಒಟ್ಟು136 ಕೋಟಿ ಗಿಡಗಳಾಗುತ್ತದೆ ಇದೇ ರೀತಿ ಇಷ್ಟು ಪ್ರಮಾಣದ ಗಿಡಮರಗಳನ್ನು ಬೆಳೆಸಿದ್ದೆ ಆದರೆ ಮುಂದಿನ 10-15 ವರ್ಷಗಳಲ್ಲಿ ಇಂದು ಅಕಾಲಿಕವಾಗಿ ಬೀಳುತ್ತಿರುವ ಮಳೆ ಸಕಾಲಕ್ಕೆ ಬೀಳುವಂತೆ ಮಾಡಬಹುದಾಗಿದೆ. ಇದರಿಂದ ದೇಶವು ಸುಭಿಕ್ಷವಾಗಿರುತ್ತದೆ ಅದಕ್ಕೋಸ್ಕರವಾದರೂ ನಾವು ಪರಿಸರವನ್ನು ರಕ್ಷಿಸಬೇಕು ಏಕೆಂದರೆ ಪರಿಸರ ಸದಾ ನಮ್ಮನ್ನು ರಕ್ಷಿಸುತ್ತದೆ.


ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.

Saturday, May 23, 2020

ನಾವು ಬದಲಾವಣೆಯೊಳಗೋ? ಬದಲಾವಣೆ ನಮ್ಮೊಳಗೋ ?

                     
                        ಎಸ್ ಪಿ ತೇಜರಾಜು.


 ಮಾನವನೆ ಹೀಗೆ ತನ್ನ ಮೂಗಿನ ನೇರಕ್ಕೆ ಏನು ಗೋಚರಿಸುತ್ತದೆ ಅದನ್ನೇ ಸತ್ಯವೆಂದರಿತಿರುತ್ತಾನೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯಗಳು ಮತ್ತೊಬ್ಬರಿಗಿಂತ ವಿಭಿನ್ನವಾಗಿರುತ್ತದೆ ಏಕೆಂದರೆ ಪ್ರತಿಯೊಬ್ಬರೂ ಕೂಡ ಬೆಳೆದಂತಹ ಪೂರಕ ವಾತಾವರಣ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ.

 ಬದಲಾವಣೆಯೇ ಜಗದ ನಿಯಮವೆಂಬಂತೆ ಭೂಮಿಯು ಸಹ ಮಾನವನ ಉಗಮಕ್ಕೆ ಬೇಕಾದಂತಹ ಪೂರಕ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ಸುಮಾರು 200 ಕೋಟಿ ವರ್ಷಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಂದಾಜಿಸಲಾಗಿದೆ ಹೀಗಾಗಿ ಭೂಮಿಗೆ ಇಂದು
460ಕೋಟಿ ವರ್ಷ ವಯಸ್ಸಾಗಿದೆ ಎಂದು ನಿರ್ಧರಿಸಲಾಗಿದೆ.

 ಇಷ್ಟೆಲ್ಲಾ ನಿಧಾನಗತಿಯಲ್ಲಿ ಸಾಗಿದೆ ಬದಲಾವಣೆ ಮಾನವನುಗಮವಾದಗಲಂತೂ ಮಾನವನ ನಡವಳಿಕೆಯೊಂದಿಗೆ ಪರಿಸರಕ್ಕೂ ಕೂಡ  ತ್ವರಿತಗತಿಯ ಬದಲಾವಣೆ ಸಿಕ್ಕಿತು. ಮಾನವನ ಉಗಮ, ನಾಗರಿಕತೆಯ ಬೆಳವಣಿಗೆ, ರಾಜರ ಆಳ್ವಿಕೆ, ಬಹಳ ದೊಡ್ಡ ಇತಿಹಾಸವನೊಂದಿದ್ದರು ಇದಾದ ಬಳಿಕ ಅಂದರೆ ಇಂದಿನಿಂದ ಸುಮಾರು ಐದು ಶತಮಾನಗಳ ಹಿಂದಿನಿಂದಲಂತು ಮಾನವನ ಇತಿಹಾಸದಲ್ಲಿ ಕಂಡರಿಯದಂತಹ ಆವಿಷ್ಕಾರಗಳು ನಡೆದಿವೆ ಅವುಗಳಲ್ಲಿ ಪ್ರಮುಖವೆಂದರೆ :

1.1712 ರಲ್ಲಿ Thomus Newcomen ಹಬೇ ಯಂತ್ರವನ್ನು(Steam engine) ಆವಿಷ್ಕರಿಸಿದರು.

2.1750 ರಲ್ಲಿ Benjamin Fraklin  ವಿದ್ಯುತ್ ಶಕ್ತಿಯನ್ನು(Electricity) ಆವಿಷ್ಕರಿಸಿದರು.

3.1766 ರಲ್ಲಿ Jacob Christin Schaefer ವಾಷಿಂಗ್ ಮಷೀನ್(washing machine) ಅನ್ನು,

4.1805 ರಲ್ಲಿ Oliver Evans ರೆಫ್ರಿಜರೇಟರ್( Refrigerator) ಅನ್ನು,

5.1820 ರಲ್ಲಿ Baron karlvon Drais  ಮೋಟಾರ್ ವೆಹಿಕಲ್ ಅನ್ನು,

6.1836 ರಲ್ಲಿ Charles Babbage  ಗಣಕಯಂತ್ರವನ್ನು(computer),

7.1840 ರಲ್ಲಿ Alexander wollcott  ಕ್ಯಾಮರಾವನ್ನು(camera) ,

8.1873 ರಲ್ಲಿ Montgolfier Brothers ಹಾಟ್ ಏರ್ ಬಲೂನ್ (Hot air balloon) ಅನ್ನು,

9.1876 ರಲ್ಲಿ Alexander grahambell  ಫೋನನ್ನು(Phone)

10.1879 ರಲ್ಲಿ Thomas Edison ಬಲ್ಪನ್ನು(Bulb),

11.1895 ರಲ್ಲಿ Guglilmo Marconic  ರೇಡಿಯೋವನ್ನು(Radio),

12.1902 ರಲ್ಲಿ Willis Carrier - AC ಏರ್ ಕಂಡೀಶನರ್ ನ್ನು,

13.1903 ರಲ್ಲಿ Right brother ವಿಮಾನವನ್ನು,

14.1920 ರಲ್ಲಿ Philo T Farnsworth- TV (Television)ಆವಿಷ್ಕರಿಸಿದರು.

15.1957 ರಲ್ಲಿ ಪ್ರಥಮ ಮಾನವ ನಿರ್ಮಿತ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು.

 ಇಷ್ಟೆಲ್ಲಾ ಆವಿಷ್ಕಾರಗಳು ನಡೆದ ಬಳಿಕವಂತೂ ಪ್ರತಿ  ಕ್ಷೇತ್ರಕ್ಕೂ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಯಿತು ಇದರಿಂದಾಗಿ ಮಂಗಳಯಾನದಂತಹ ಬಾಹ್ಯಾಕಾಶ ಯೋಜನೆಗಳು ಹಾಗೂ 400 ಕಿಲೋಮೀಟರ್ ಗಂಟೆಗೆ ಓಡಬಲ್ಲ ಬುಲೆಟ್ ರೈಲುಗಳು ಆವಿಷ್ಕಾರಗೊಂಡವು.

 ಎಲ್ಲರಿಗೂ ನೆನಪಿರಬಹುದು ನಮ್ಮ ಶಾಲಾ ಶಿಕ್ಷಕರು ಪಾಠವನ್ನು ಹೇಳಿಕೊಡುವುದರೊಟ್ಟಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಇದ್ದಂತಹ ಕೆಲವು ಪದ್ಧತಿಗಳ ಬಗ್ಗೆಯೂ ಹೇಳಿಕೊಡುತ್ತಿದ್ದರು. ಮನೆಯಲ್ಲಿಯೇ ಕುಳಿತುಕೊಂಡು ನಮಗೆ ಬೇಕಾದಂತಹ ಪದಾರ್ಥಗಳನ್ನು ಆರ್ಡರ್ ಮಾಡುವುದರ ಮೂಲಕ ಮನೆಯ ಬಾಗಿಲಿಗೆ ತರುಹಿಸಿಕೊಳ್ಳಬಹುದು ಎಂದು ಹೇಳಿದಾಗ ನಮಗೆ ಆಶ್ಚರ್ಯವಾಗಿದ್ದು ಉಂಟು ಆದರೆ ನೋಡಿ ಈ ಎಲ್ಲಾ ಪದ್ಧತಿಗಳನ್ನು ನಮ್ಮ ತಲೆಮಾರಿನಲ್ಲಿ ನೋಡಿದ್ದಾಗಿದೆ.

 ಕೈಯಲ್ಲೊಂದು ಪುಟ್ಟ ಫೋನ್ ಇದ್ದರೆ ಸಾಕು ಇಡೀ ಪ್ರಪಂಚದ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ  ಪ್ರಚಲಿತ ವಿದ್ಯಾಮಾನಗಳಬಗ್ಗೆ ನಾವು ಕುಳಿತಿರುವ ಜಾಗದಲ್ಲಿಯೇ ತಿಳಿದುಕೊಳ್ಳುವಷ್ಟು ಮಾಹಿತಿ ಸುಲಭವಾಗಿದೆ. ನಮ್ಮ ತಲೆಮಾರಿನಲ್ಲಿ ಕಂಡ ಕೆಲವಷ್ಟು ಬದಲಾವಣೆಗಳೆಂದರೆ :

1.ಊಟಕ್ಕಾಗಿ ಹೋಟೆಲ್ ಹುಡುಕಿಕೊಂಡು ಹೋಗಬೇಕಾದಂತಹ ಪ್ರಮೇಯ ತಪ್ಪಿದೆ ನಾವು ಕುಳಿತ ಜಾಗದಲ್ಲಿಯೇ ಬೇಕಾದ ಆಹಾರವನ್ನು ತರಿಸಿಕೊಳ್ಳಬಹುದಾದಂತಹ ಅಪ್ಲಿಕೇಶನ್ಗಳು(Uber eats,Swiggy)ಬಂದಿದೆ.

2.ಮನೆಗೆ ಬೇಕಾದಂತಹ ಗೃಹೋಪಯೋಗಿ ಉಪಕರಣಗಳನ್ನು ತರಿಸಿಕೊಳ್ಳಬಹುದಾದಂತಹ
Tata cliq  ಅಪ್ಲಿಕೇಶನ್ ಗಳಿವೆ.

3. ಸರಳ ಪೇಮೆಂಟ್ ಗಾಗಿ Bheam app, Google pay, paytm ಗಳಿಗೆ.

4. ಪ್ರತಿಯೊಂದು ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸಬಹುದಾದಂತಹ ಅವಕಾಶಗಳನ್ನು ನೀಡಿದೆ.

5. ಹೊರಗೆ ಓಡಾಡಲು Ola, Uber auto,Rapido Appಗಳಿವೆ. 

6. ನಮಗೆ ಬೇಕಾದಂತಹ ಪುಸ್ತಕಗಳನ್ನು Internetನ ಮೂಲಕ ಓದಬಹುದಾಗಿದೆ.

7. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯಲು ಅನೇಕ ಅಪ್ಲಿಕೇಶನ್( Gramasadak, Dishank,etc) ಗಳಿವೆ.

8. ಹವಾಗುಣಕ್ಕೆ ತಕ್ಕಂತೆ ಬೆಳೆ ಬೆಳೆಯಬಹುದಾದಂತಹ ಕೃಷಿ ಮಾಹಿತಿಗಾಗಿ ಕೃಷಿ ಕೈಪಿಡಿಯಂತಹ ಅಪ್ಲಿಕೇಶನ್ಗಳು ಬಹಳಷ್ಟಿವೆ.

9. ದೂರದ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ಮಾಹಿತಿ ನೀಡಲು ಬಹಳಷ್ಟು ಅಪ್ಲಿಕೇಶನ್ ಗಳಿವೆ.

10. ಪ್ರತಿಯೊಂದು ನ್ಯೂಸ್ ಚಾನಲ್ ರವರು ಅವರದೇ ಆದಂತಹ ನ್ಯೂಸ್ ಅಪ್ಲಿಕೇಶನ್ಗಳನ್ನು ಬಿಡುಗಡೆಗೊಳಿಸಿದ್ದಾರೆ.

11. ದೂರದ ವ್ಯಕ್ತಿಗಳನ್ನು ಹತ್ತಿರವಾಗಿರುವಂತೆ ಮಾಡಲು Facebook, whats app, Telegram, Hike ನಂತಹ ಸೋಶಿಯಲ್ ಮೀಡಿಯಾಗಳಿಗೆ.

12. ಕೋಟಿಗಟ್ಟಲೆ ವ್ಯವಹಾರವನ್ನು ನಡೆಸುವಂತಹ  ಬಿಸಿನೆಸ್ ಗಳು ಕೂಡ ತಮ್ಮ ಅಕೌಂಟನ್ನು Tally ಯಂತಹ ಸಾಫ್ಟ್ವೇರ್ ಗಳಲ್ಲಿ ಸ್ಟೋರ್ ಮಾಡಲಾಗುತ್ತದೆ.

13. ತಲುಪಬೇಕಾದಂತಹ ಪ್ರದೇಶದ ಮಾಹಿತಿಯನ್ನು ನಿಖರವಾಗಿ ನೀಡಿದ್ದಲ್ಲಿ  ನಾವು ಇರುವ ಪ್ರದೇಶದಿಂದ ತಲುಪಬೇಕಾದ ಪ್ರದೇಶಕ್ಕೆ ಇರುವ ಅಂತರವನ್ನು ನಿಖರವಾಗಿ ಹೇಳುವಂತಹ ಅಪ್ಲಿಕೇಶನ್ ಗಳಿವೆ.

 ಇವುಗಳೆಲ್ಲವೂ ಒಬ್ಬ ಅವಿದ್ಯಾವಂತರೂ ಕೂಡ ಬಳಸಬಹುದಾದಷ್ಟು ಸರಳವಾಗಿರುವುದರಿಂದ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಗಳಿವೆ. ಈ ರೀತಿಯಾದಂತಹ ಬದಲಾವಣೆಗಳು ನಮ್ಮದೇ ಆದಂತಹ ಕೆಲಸಗಳನ್ನು ಸರಳಗೊಳಿಸಿರುವುದರಿಂದ ಪ್ರತಿಯೊಬ್ಬರು ಈ ಬದಲಾವಣೆಗಳೊಂದಿಗೆ ಹೊಂದಿಕೊಂಡಿದ್ದಾರೆ.

 ಇಷ್ಟೆಲ್ಲಾ ತ್ವರಿತಗತಿಯ ಬದಲಾವಣೆಗಳು ಮಾನವನಿಂದಾಗಿದ್ದರೂ ಕೂಡ ಪ್ರಕೃತಿಯಿಂದ ಮಾನವನು ಕಲಿಯಬೇಕಾಗಿರುವುದು ಬಹಳಷ್ಟಿದೆ.
 ನೂರಾರು ಕೋಟಿ ವರ್ಷಗಳಿಂದ ಬೆಳೆದು ನಿಂತಿರುವಂತಹ ಸಸ್ಯಸಂಪತ್ತು ಮಾನವನೆದುರೇ ಇದೆ. ನೂರಾರು ಅಡಿ ಎತ್ತರ, ಸಾವಿರಾರು ವರ್ಷಗಳು ಬದುಕಬಲ್ಲಂತಹ ದೈತ್ಯ ಮರಗಳು ಕೂಡ ನಮ್ಮ ಕಣ್ಣುಮುಂದೆಯೇ ಇದೆಯಲ್ಲವೇ? ಹಾಗಾದರೆ ಹೀಗೊಮ್ಮೆ ಯೋಚಿಸಿ ನಿಸರ್ಗದ ಬೆಳವಣಿಗೆಯೂ ಕೂಡ ನಮ್ಮ ಟೆಕ್ನಾಲಜಿಯಷ್ಟು ವೇಗದಲ್ಲಿಯೇ ಬೆಳೆಯಿತೇ? ಇಲ್ಲವಲ್ಲ  ತೋಟಗಾರಿಕೆಯಲ್ಲಿಯೂ ಕೂಡ ಅನೇಕ ಅನ್ವೇಷಣೆಗಳು ನಡೆದಿದ್ದು ಏಳು ವರ್ಷಗಳಾದ ಬಳಿಕ ಫಲಕೊಡಬೇಕಾದಂತಹ ತೆಂಗಿನ ಮರವನ್ನು ಇಂದು 4 ವರ್ಷಕ್ಕೆ ಕಾಯಿ ಬಿಡುವಂತೆ ಮಾಡಲಾಗಿದೆ ಆದರೆ ನಿಸರ್ಗದ ಅದ್ಭುತ ನೋಡಿ ಏನೇ ಟೆಕ್ನಾಲಜಿ ಮುಂದುವರೆದರು ಕೂಡ ಮರ ತನ್ನ ಬೆಳವಣಿಗೆಗೆ ನಾಲ್ಕು ವರ್ಷವನ್ನಾದರೂ ತೆಗೆದೇಕೊಳ್ಳುತ್ತದೆ ಅಲ್ಲವೇ? ಹೆಚ್ಚು ಆಹಾರ ಪದಾರ್ಥಗಳನ್ನು ಬೆಳೆದು ಹೆಚ್ಚು ಹಣ ಸಂಪಾದನೆ ಮಾಡಬೇಕೆಂಬ ಆಸೆಯಲ್ಲಿ ಭೂಮಿಗೆ ವಿಷ ಉಣಿಸಿದ್ದಾಗಿದೆ. ಮೇಲ್ನೋಟಕ್ಕೆ ಸರಿ ಎನಿಸಿದರೂ ಕೂಡ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ.

 ಬದಲಾವಣೆಗಳೊಂದಿಗೆ ಬದಲಾಗಬೇಕೆನ್ನುವುದೇನೋ ನಿಜ ಆದರೆ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ಬೆಲೆಕಟ್ಟಲಾಗದ ಕಾಡುಗಳನ್ನು ಮುಳುಗಿಸಿ ಲಕ್ಷಾಂತರ ರೂಪಾಯಿಯ ಎಲೆಕ್ಟ್ರಿಸಿಟಿ ಪಡೆಯುವಂತಹ ಬದಲಾವಣೆಗಳು ಬೇಕೆ? ಹೆಚ್ಚುತ್ತಿರುವ ನಗರೀಕರಣದಿಂದ ಕೊಳಚೆ ನೀರನ್ನು ಕೆರೆಗಳಿಗೆ ಹರಿ ಬಿಡುತ್ತಿರುವುದು, ಕಸದ ರಾಶಿ ಬೆಟ್ಟದಷ್ಟುತ್ತರ  ಏರುತ್ತಿರುವುದು, ಸುತ್ತಮುತ್ತಲ ಕೃಷಿಯಾಧಾರಿತ ಜಮೀನುಗಳನ್ನು ಲೇಔಟ್ ಗಳಾಗಿ ಪರಿವರ್ತಿಸುತಿರುವಂತಹ ಬದಲಾವಣೆಗಳು ಬೇಕೆ? ಮನೋರಂಜನೆಗಾಗಿ ಇರುವ ಕಾಡುಗಳನ್ನು ಕಡಿದು ರೆಸಾರ್ಟ್ ಗಳಾಗಿ ಪರಿವರ್ತನೆಗೊಳ್ಳುತ್ತಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಕಾರ್ಖಾನೆಗಳು ಹೊರಸೂಸುತ್ತಿರುವಂತಹ ವಿಷಾನಿಲಗಳು ವಾತಾವರಣದಲ್ಲಿ ಬೆರೆತು ಆಮ್ಲ ಮಳೆಗೆ(Asid rain) ಕಾರಣವಾಗುತ್ತಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಗಣಿಗಾರಿಕೆಯಿಂದ ಇರುವ ಕಾಡುಗಳನ್ನು ಚಿದ್ರಗೋಳಿಸಿದ್ದೇವಲ್ಲ ಇಂತಹ ಬದಲಾವಣೆಗಳು ಬೇಕೆ? ಆಳ ಸಮುದ್ರದ ಮೀನುಗಾರಿಕೆಯಿಂದಾಗಿ ಸಮುದ್ರದ ಜೀವಿಗಳ ಸಂತಾನಕ್ಕೆ ಕುತ್ತು ಬಂದಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ರಸ್ತೆ ಅಗಲೀಕರಣಕ್ಕಾಗಿ ಲಕ್ಷಾಂತರ ಮರಗಳನ್ನು ಇಂದಿಗೂ ಕೂಡ ಧರೆಗುರುಳುಸುತ್ತಿದ್ದೇವಲ್ಲ ಇಂತಹ ಬದಲಾವಣೆಗಳು ಬೇಕೆ? ನದಿ ತಿರುವು ಯೋಜನೆಗಳಿಂದಾಗಿ ಕರಾವಳಿಯ ಜನರ ಜೀವನ ನಿರ್ವಹಣೆಗೆ ಕುತ್ತು ಬಂದಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಏಕ ಸಸ್ಯವರ್ಗ ನೆಡುತೋಪುಗಳಿಂದಾಗಿ ಜೀವವೈವಿಧ್ಯದ ಕೊಂಡಿಯನ್ನೇ ನಾಶಗೊಳಿಸಲಾಗಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ನ್ಯೂಕ್ಲಿಯರ್ ವಿದ್ಯುತ್ ಘಟನೆಗಳಿಂದಾಗಿ ಸುತ್ತಮುತ್ತಲ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರದ ಮಟ್ಟ ಹೆಚ್ಚಾಗಿ ಅನೇಕ ದ್ವೀಪಗಳು ಮುಳುಗಿರುವುದರೋಟ್ಟಿಗೆ ಹವಳದಿಬ್ಬಗಳು ಸಾಯುತ್ತಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಒಂದೊಮ್ಮೆ ಯೋಚಿಸಿ. ಪರಿಸರದ ಪ್ರೇಮಿಗಳೇನು ಅಭಿವೃದ್ಧಿಯ ವಿರೋಧಿಗಳಲ್ಲ ಬದಲಿಗೆ ನಮ್ಮ ಅಭಿವೃದ್ಧಿಗಳೆಲ್ಲವೂ ಪರಿಸರಕ್ಕೆಪೂರಕವಾಗಿರಬೇಕೆನ್ನುವುದೇ ಪರಿಸರಾಸಕ್ತರ ಆಶಯವಾಗಿದೆ.

Monday, May 18, 2020

ಹಸಿರು ಪಥಗಳ ನಡುವೆ ಒಂದೆರಡು ದಿನ.


                            ಎಸ್ ಪಿ ತೇಜರಾಜು.


 ಪ್ರವೃತ್ತಿಯೆಂಬ  ಕುದುರೆಯನ್ನೇರಿ
 ನದಿ ತೊರೆ ಝರಿಗಳನ್ನು ದಾಟಿ
 ಬೆಟ್ಟ-ಗುಡ್ಡ ಗಿರಿ ಶಿಖರವನ್ನೇರಿ
 ಕಂಡೆನಾ ದೂರದ ದೈಹಿಕ ಶಿಖರವ
 ತೀರದ ದಾಹ ಕುಗ್ಗದ ಉತ್ಸಾಹದಲ್ಲಿ ಮುನ್ನಡೆದೆ
 ಆಗಸವೆ ಕೈಗೆಟುಕಿತೆಂಬ ಭಾಗದಲ್ಲಿಮುಳುಗಿಹೋದೆ
 ಅಲ್ಲಿನಾ ಕಂಡೆ ಜಗದ ರಹಸ್ಯವ
 ಕೊನೆಯಿಲ್ಲದ ಸಮುದ್ರದ ಅಲೆಗಳಲ್ಲಿ
 ರವಿ ಮುಳುಗಿದ ಚಂದ್ರ ಕೈಬೀಸಿ ಕರೆದ.


 ಪ್ರವೃತ್ತಿ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ವೃತ್ತಿಯಲ್ಲಿ ಕಾಣಲಾಗದ  ಸಂತಸ ಸಂಭ್ರಮವನ್ನು ತಮ್ಮ ಪ್ರವೃತ್ತಿಯಲ್ಲಿ ಕಾಣುತ್ತಾರೆ. ಹಲವು ರೀತಿಯ ಪ್ರವೃತ್ತಿಗಳಿದ್ದರೂ ಕೂಡ ಪ್ರತಿಯೊಂದು ಪ್ರವೃತ್ತಿಗೂ ತನ್ನದೇ ಆದಂತಹ ಕೆಲವು ಸ್ಪಷ್ಟ ಗುಣಗಳಿವೆ. ಕೆಲವರು ಚಾರಣಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಇನ್ನು ಕೆಲವರು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಹೀಗೆ ಯೋಗ, ಸಂಗೀತ, ಸೈಕಲಿಂಗ್, ನಾಣ್ಯ ಹಾಗೂ ಸ್ಟ್ಯಾಂಪ್ಗಳ ಸಂಗ್ರಹ ,ಕೃಷಿ, ಸ್ವಿಮ್ಮಿಂಗ್, ಪ್ರವಾಸ, ಸಮಾಜಸೇವೆ, ಪರಿಸರ ಸಂರಕ್ಷಣೆ, Wildlife photography, ನೃತ್ಯ, ಹಾಸ್ಯ, ಅಭಿನಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

 ಕೆಲವರು ತಮ್ಮ ಪ್ರವೃತ್ತಿಯಲ್ಲೇ ವೃತ್ತಿಯನ್ನು ಕಂಡುಕೊಂಡಿರುತ್ತಾರೆ ಇನ್ನು ಕೆಲವರು ಬಿಡುವಿನ ಸಮಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ರೀತಿ ತಮ್ಮ ಪ್ರವೃತ್ತಿಯಲ್ಲಿ ಅನೇಕ ಮಜಲುಗಳನ್ನು ದಾಟಿ ಸಾಧನೆ ಮಾಡಿದವರು ನಮ್ಮ ಸುತ್ತಮುತ್ತಲಿದ್ದರೆ.

 ಇಷ್ಟೆಲ್ಲಾ ಪ್ರವೃತ್ತಿಗಳಲ್ಲಿ ಪ್ರತಿಯೊಬ್ಬರೂ ತಪ್ಪದೇ ಪ್ರವಾಸವನ್ನು ನಾನಾ ಕಾರಣಗಳಿಂದ ಮಾಡಿಯೇ ಇರುತ್ತಾರೆ ತಮ್ಮ ಮಕ್ಕಳನ್ನು ಚಿಕ್ಕವಯಸ್ಸಿನಿಂದಲೇ ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡು ಹೋಗುವುದರಿಂದ ಪ್ರಾರಂಭವಾಗುವ ಈ ಪ್ರವಾಸಗಳು ಮುಂದೆ ಬೆಳೆಯುತ್ತಾ ಸ್ನೇಹಿತರೊಟ್ಟಿಗೆ ಅದಾದ ಬಳಿಕ ಕೆಲಸದ ನಿಮಿತ್ತವಾದರೂ ಅನೇಕ ಪ್ರದೇಶಗಳಿಗೆ ಭೇಟಿ ನೀಡಿಯೇ ಇರುತ್ತೇವೆ. ಎಷ್ಟೋ  ಪ್ರಯಾಣಗಳನ್ನು ಮಾಡಿದರೂ ಕೂಡ ತಮ್ಮ ಸ್ನೇಹಿತರೊಟ್ಟಿಗೆ ದೂರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ನೆನಪುಗಳು ಪ್ರತಿಯೊಬ್ಬರ ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ಉಳಿದಿರುತ್ತದೆ.

 ಸುಮಾರು ಏಳು ವರ್ಷಗಳ ಹಿಂದೆ ಪಿಯುಸಿ ವ್ಯಾಸಂಗ ಮುಗಿಯಲು ಒಂದು ತಿಂಗಳು ಇರುವ ಸಮಯದಲ್ಲಿ ಪರಿಚಯವಾದ ಬೇರೆ ವಿಭಾಗದ ಸ್ನೇಹಿತನೇ ರಾಘುಲ್, ಪರೀಕ್ಷೆ  ಮುಗಿಯುವುದರೊಳಗೆ ಒಂದೆರಡುಬಾರಿ  ಮಾತನಾಡಿಸಿದ್ದೇವೆ ಹೊರತು ಅವನ ಬಗ್ಗೆ ನನಗಾಗಲಿ ನನ್ನ ಬಗ್ಗೆ ಅವನಿಗಾಗಲಿ ಹೆಚ್ಚೇನು ತಿಳಿದಿರಲಿಲ್ಲ. ಹೀಗೊಮ್ಮೆ ಸ್ನೇಹಿತರೆಲ್ಲರೂ ಮಾತನಾಡುತ್ತಿರುವಾಗ ನಮ್ಮೆಲ್ಲರನ್ನುದ್ದೇಶಿಸಿ ರಾಘುಲ್ ಪರೀಕ್ಷೆ ಮುಗಿದ ಬಳಿಕ ನಮ್ಮ ಊರಿಗೆ ಒಮ್ಮೆ ಹೋಗಿ ಬರೋಣ ಎಂದಿದ್ದ. 
 ಬಹಳ ಸೌಂದರ್ಯಯುತ ಪ್ರವಾಸಿ ತಾಣಗಳಲ್ಲಿ ಒಂದಾಗಿದಂತಹ ಅವರ ಊರಿನ ಹೆಸರನ್ನು ಕೇಳಿದೊಡನೆ ಸ್ನೇಹಿತರೆಲ್ಲರೂ ತಪ್ಪದೇ ಬರುತ್ತೇವೆ ಎಂದು ಒಪ್ಪಿಕೊಂಡರು. ನಮ್ಮ ಸ್ನೇಹಿತರ ಸ್ವಭಾವ ನಮಗೆ ತಿಳಿಯದೆ ಹೊರಡುವ ಕೊನೆಯ ಹಂತದಲ್ಲಿ ನಾನಾ  ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುವವರೇ ಹೆಚ್ಚು. ಈ ವಿಷಯ ತಿಳಿದಿದ್ದ ನನಗೆ ನೇರವಾಗಿ ರಾಘುಲ್ ನ ಬಳಿ ಇವರಾರೂ ಬಾರದೇ ಹೋದರೂ  ಪರವಾಗಿಲ್ಲ ನಾವಿಬ್ಬರೆ ಹೋಗಿಬರೋಣ ಎಂದಿದ್ದಕ್ಕೆ ಆತನು ಸಮ್ಮತಿಸಿದ್ದ.

 ಹೀಗೆ ಈ ಮಾತುಗಳನ್ನೆಲ್ಲವನ್ನು ಆಡಿ ಸುಮಾರು ಆರು ತಿಂಗಳು ಕಳೆದುಹೋಗಿತ್ತು ಎಲ್ಲರೂ ತಮ್ಮ ಮುಂದಿನ ವ್ಯಾಸಂಗಕ್ಕಾಗಿ ಪದವಿ ಕಾಲೇಜು ಸೇರಿಕೊಂಡು ಮೊದಲ ಸೆಮಿಸ್ಟರ್ ಮುಗಿಸಿದ್ದರು. ಜುಲೈ ರಜೆ ಇರುವ ಕಾರಣ ಸ್ನೇಹಿತನ ಊರಿಗೆ ಹೋಗೋಣವೆಂದು ನಿರ್ಧರಿಸಿದಾಗ ನಾವು ಭಾವಿಸಿದಂತೆ ಸ್ನೇಹಿತರೆಲ್ಲರೂ ನಾನಾ ಕಾರಣಗಳನ್ನು ಹೇಳಿ ತಪ್ಪಿಸಿಕೊಂಡರು.

 ಇತ್ತ ನಮ್ಮ ಮನೆಯಲ್ಲಿ ಇಲ್ಲಿಯವರೆಗೂ  ಸ್ನೇಹಿತರೊಟ್ಟಿಗೆ ಹೊರಗೆ ಹೋಗಲು ಬಿಡದಿದಂತಹ ಸಂದರ್ಭದಲ್ಲಿ ಸ್ನೇಹಿತನೂರಿಗೆ ಹೋಗಿಬರುತ್ತೇನೆ ಎಂದ ತಕ್ಷಣ ಮನೆಯಲ್ಲಿ ಎಲ್ಲರೂ ನನ್ನ ಮೇಲೆ ಜಗಳವಾಡಿದ್ದರು ಈ ಜಗಳ ಮುಂದುವರೆದು ನೀನು ಸ್ನೇಹಿತನೊಟ್ಟಿಗೆ ಹೋಗುವುದಾದರೆ ಮನೆಗೆ ಹಿಂತಿರುಗಿ ಬರುವುದೇಬೇಡ ಎಂದಿದ್ದರು.[   ಕಾರಣ ಮನೆಗೆ ಮೊದಲ ಮಗನೆಂಬ ಪ್ರೀತಿ ಹಾಗು ಕಾಳಜಿ ]

ಆದರಿತ್ತ ಸ್ನೇಹಿತನಿಗೆ ಹೇಳಿಯಾಗಿದೆ ಹೋಗಿಬರೋಣವೆಂದು,ಇವರು ನನ್ನನು ಮನೆಗೆ ಸೇರಿಸದೆ ಹೋದರೂ ಪರವಾಗಿಲ್ಲ ಎಂದು ಭಾವಿಸಿ ಒಳ್ಳೆ ಮಳೆಗಾಲದ ತಿಂಗಳದಂತಹ ಜುಲೈ ಮೊದಲ ವಾರದಲ್ಲಿ ಬೆಳಗ್ಗಿನ ಉಪಹಾರವನ್ನು ಮನೆಯಲ್ಲಿಯೇ ಮಾಡಿಕೊಂಡು ಬಸ್ ಹತ್ತಿ ಹೊರೆಟೆವು ಉದಕಮಂಡಲದೆಡೆಗೆ.

ಜೀವನದಲ್ಲಿ ಅದು ಪ್ರಥಮಬಾರಿಗೆ ಸ್ಸ್ನೇಹಿತನೊಟ್ಟಿಗೆ ಬಹಳ ದೂರದೂರಿಗೆ ಹೋಗುತ್ತಿದ್ದಿದರಿಂದ ಮನಸ್ಸಿನಲ್ಲಿ ಒಮ್ಮೆ ರೋಚಕವೆನಿಸಿದರೂ, ಮತೊಮ್ಮೆ ಭಯವಾಗುತ್ತಿತ್ತು ನಿಸರ್ಗದ ಮಡಿಲಿಗೆ ಹೋಗುತ್ತಿದ್ದೇನೇಎಂದು ರೋಚಕವೆನಿಸಿದರು ಊರು ಸೇರಿದ ಬಳಿಕ ಆರೋಗ್ಯ ಕೈಕೊಟ್ಟರೆಂಬ ಭಯವಾಗುತಿತ್ತು ಆದರೆ ಸ್ನೇಹಿತನ ಮಾತುಗಳು ನನ್ನ ಆತ್ಮವಿಶ್ವಾಸವನ್ನು ಬಲಪಡಿಸುತಿತ್ತು.

 ಗುಂಡ್ಲುಪೇಟೆಯನ್ನು ದಾಟಿ ಮುಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬಸ್ ಸಾಗುತಿತ್ತು.ಮಳೆಗಾಲವೇ ಆಗಿದ್ದರಿಂದ ಕಾಡು ಸಂಪೂರ್ಣವಾಗಿ ಹಸಿರಿನ ಹೊದಿಕೆಯೊದ್ದು ಕಂಗೊಳಿಸುತ್ತಿತ್ತು.ಯಾವುದಾದರು ಪ್ರಾಣಿಗಳು ಕಾಣಬಹುದೆಂಬ ಆಶಾಭಾವದಲ್ಲಿ ಕಣ್ಣುಗಳನ್ನು ಅರಳಿಸಿಕೊಂಡು ಕುಳಿತಿದ್ದ ನಮಗೆ ಮೊದಲು ಕಂಡದ್ದು ವಾನರಗಳ ಸಮೂಹ.ಯಾವುದಾದರೂ ಆಹಾರದ ಪೊಟ್ಟಣವನ್ನು ಎಸೆಯುತ್ತಾರೆಂದು ಸಾಲಾಗಿ ಕುಳಿತಿದ್ದ ವಾನರಗಳನ್ನು ಕಂಡಾಗ ಮರುಕ ಹುಟ್ಟಿತು. ರಾಷ್ಟ್ರೀಯ ಉದ್ಯಾನವನವಾಗಿದ್ದರಿಂದ  ಅರಣ್ಯ ಇಲಾಖೆಯವರು ಸ್ವಲ್ಪ ಸ್ವಲ್ಪ ದೂರದಲ್ಲಿಯೇ ಬೋರ್ಡ್ ಗಳ ಮೇಲೆ ದಪ್ಪ ಅಕ್ಷರಗಳಲ್ಲಿ ನಿಧಾನವಾಗಿ ಚಲಿಸಿ, ಪ್ಲಾಸ್ಟಿಕ್ ನಿಷೇಧಿಸಲಾಗಿದೆ, ಛಾಯಾಗ್ರಹಣ ನಿಷೇಧಿಸಲಾಗಿದೆ, ಪ್ರಾಣಿಗಳಿಗೆ ಆಹಾರವನ್ನು ನೀಡಬೇಡಿ ಎಂಬ ಬೋರ್ಡ್ ಗಳು ಆಗಾಗ ಗೋಚರಿಸುತ್ತಲೆ ಇದ್ದವು. ಹೀಗೆ ಮುಂದೆ ಸಾಗುತ್ತಾ ಕಾಡುಕೋಣಗಳು, ನವಿಲು, ಆನೆಗಳು, ಹಾಗೂ ಜಿಂಕೆಗಳ ಹಿಂಡು ಕಂಡವು.

  ಇಷ್ಟಾಗುವುದರೊಳಗೆ ಬಸ್ ತಮಿಳುನಾಡನ್ನು ಪ್ರವೇಶಿಸಿ ಮುಂದೆ ಮಧ್ಯಾಹ್ನದ ಊಟವನ್ನು ಮುಗಿಸಿಕೊಂಡು ಹೊರಟೆವು, ಗಾಳಿಯ ರಭಸಕ್ಕೆ/ಬಡಿತಕ್ಕೆ ಮರಗಳು ಉರುಳಿ ತೆರವುಗೊಳಿಸಿದ ರಸ್ತೆಗಳ ಮೂಲಕ ಉದಕಮಂಡಲದ ಕಣಿವೆಯಲ್ಲಿ ಬಸ್ ನಿಧಾನವಾಗಿ ಬೆಟ್ಟ ಗುಡ್ಡವನ್ನೇರುತ್ತಿತ್ತು, ಸುತ್ತಲೂ ನೀಲಗಿರಿಸ್ ನೆಡುತೋಪುಗಳು ಹೆಚ್ಚಾಗಿರುವ ಕಾರಣ ನೀಲಗಿರೀಸ್ ಮರಗಳ ಮೂಲಕ ಬೀಸುತ್ತಿದಂತಹ ಸುಗಂಧಭರಿತ ಗಾಳಿಯು ನಮ್ಮನ್ನು ಮತ್ತಷ್ಟು ನೀಳವಾಗಿ ಉಸಿರೆಳೆದು ಕೊಳ್ಳುವಂತೆ ಪ್ರೇರೇಪಿಸುತ್ತಿತ್ತು. ಅಂತೂ ಕೊನೆಗೂ ಘಾಟ್ ಸೆಕ್ಷನ್ ಗಳನ್ನೆಲ್ಲವನ್ನು ದಾಟಿ ಸ್ನೇಹಿತನ ಮನೆಯ ಹತ್ತಿರವಿರುವ ಬಸ್ ಸ್ಟ್ಯಾಂಡ್ ಅನ್ನು ತಲುಪಿದಾಗ  ಸಮಯ ಮೂರು ಗಂಟೆಯಾಗಿತ್ತು.

 ನಮ್ಮ ಆಗಮನವನ್ನು ನಿರೀಕ್ಷಿಸಿದ್ದ ಸ್ನೇಹಿತನ ತಂದೆಯವರು ನಮಗಾಗಿ ಇನ್ನೆರಡು ಕೊಡೆಗಳನ್ನು ಹಿಡಿದುಕೊಂಡು ನಿಂತಿದ್ದರು, ಮಳೆ ಸುರಿಯುತ್ತಲೇ ಇದ್ದಿದ್ದರಿಂದ ಬಸ್ ಇಳಿದ ಕೂಡಲೇ ಅರಳಿಸಿದ್ದ ಕೊಡೆಯೊಳಗೆ ಸೇರಿಕೊಂಡೆವು. ಸುತ್ತಲೂ ಬೆಳೆದಿದ್ದ ದೈತ್ಯ ಮರಗಳ  ರಸ್ತೆಯ ಮೂಲಕ ಸ್ವಲ್ಪ ದೂರದಲ್ಲಿ ಇದ್ದ ಮನೆಯನ್ನು ಸೇರಿಕೊಂಡೆವು. ನಮ್ಮನ್ನು ಬಹಳ ಪ್ರೀತಿಯಿಂದ ಬರಮಾಡಿಕೊಂಡವರು ಸ್ನೇಹಿತನ ಅಜ್ಜಿ ಹಾಗೂ ಅವರ ಚಿಕ್ಕಮ್ಮ. Freshup ಆದ ಬಳಿಕ ಬಿಸಿ ಬಿಸಿ ಊಟವನ್ನು ಬಿಡಿಸಿದರು. ಪ್ರಯಾಣದ ಚಳಿಯಲ್ಲಿ ನಡುಗಿದ್ದ ನಮಗೆ ಈ ಬಿಸಿಊಟ ದೇಹದ ಶಾಖವನ್ನು ಹೆಚ್ಚು ಮಾಡಿತು. ಸಂಜೆ ಗುಡ್ಡದ ಮೇಲಿರುವ ದೇವಸ್ಥಾನಕ್ಕೂ ಹಾಗೂ ಗೌರ್ನಮೆಂಟ್ ಗೆಸ್ಟ್ ಹೌಸ್ ಅನ್ನು ನೋಡಿಕೊಂಡು ಮನೆಗೆ ಹಿಂತಿರುಗಿದೆವು.

 ಮರುದಿನದ ಭೇಟಿ ನೀಡಬೇಕಾದಂತಹ ಪ್ರವಾಸಿ ತಾಣವನ್ನು ಸ್ನೇಹಿತನೆ ನಿರ್ಧರಿಸಿದ್ದ. ಹೀಗಾಗಿ ಬೆಳಿಗ್ಗೆ ಬೇಗನೆ ಎದ್ದು ಉಪಹಾರವನ್ನುಮಾಡಿ ಬಸ್ ಹತ್ತಿ ಊಟಿ ತಲುಪಿದೆವು. ಸ್ನೇಹಿತನ ತಂದೆಯವರು ಸುತ್ತಮುತ್ತಲ ಪ್ರವಾಸಿ ತಾಣಗಳದಂತಹ Botanical garden, Rose garden  ಹಾಗೂ ಸುತ್ತಲಿದ್ದ ಕೆರೆಗಳಿಗೆ ಕರೆದುಕೊಂಡು ಹೋದರು. ಮಳೆ ದೋ ಎಂದು ಸುರಿಯುತ್ತಿದ್ದರಿಂದ ಹಾಕಿಕೊಂಡು ಹೋಗಿದಂತಹ ಬಟ್ಟೆಗಳೆಲ್ಲವೂ ಮಳೆಯ ನೀರಿನಲ್ಲಿ ತೊಯ್ದುಹೋಗಿದ್ದವು. ಜುಲೈ ಪ್ರವಾಸಿ ಸಮಯವಲ್ಲವಾಗಿದ್ದುದರಿಂದ ಎಲ್ಲಾ ಪ್ರವಾಸಿ ತಾಣಗಳು ಖಾಲಿ ಖಾಲಿ ಹೊಡೆಯುತ್ತಿದ್ದವು ಆದರೂ ಆಗಾಗ ಅಲ್ಲಲ್ಲಿ ಬೆರಳೆಣಿಕೆಯಷ್ಟು ಜನ ಕಾಣಿಸಿಕೊಳ್ಳುತ್ತಿದ್ದರು.

 ಸುತ್ತಮುತ್ತಲಿದ್ದ ಪ್ರವಾಸಿ ತಾಣವನ್ನು ನೋಡುವುದರೊಳಗೆ ಸಮಯ ನಾಲ್ಕು ಗಂಟೆಯಾಗಿತ್ತು ಈಗ ಶಾಪಿಂಗ್ ಸಮಯ ಸ್ನೇಹಿತನ ತಂದೆಯವರು ಕೆಲವಷ್ಟು ಅಂಗಡಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು ಅಂಗಡಿಯವರು ನಾವು ಕನ್ನಡಿಗರೆಂದು ತಿಳಿದಾಗ ನಮ್ಮನ್ನು ಬಹಳ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು.[ ಆಗಲೇ ನನಗೆ ತಿಳಿದಿದ್ದು ಮೊದಲು ಉದಕಮಂಡಲ ಕರ್ನಾಟಕಕ್ಕೆ ಸೇರಿತೆಂದು] ಊಟಿಯ ಹೆಸರಾಂತ Homemade chocolate ,Tea powder, Nilgiri oil, Varkeyಗಳನ್ನು ತೆಗೆದುಕೊಳ್ಳುವುದರೂಳಗೆ ಬ್ಯಾಗ್ ತುಂಬಿತುಳುಕುತ್ತಿತ್ತು.ಇವುಗಳನ್ನೆಲ್ಲವನ್ನೂ ಎತ್ತಿಕೊಂಡು ಮನೆಗೆ ಹಿಂತಿರುಗಿದೆವು.

 ರಾತ್ರಿ ಊಟ ಮಾಡಿ ಅಜ್ಜಿ ಅವರೊಂದಿಗೆ ಮಾತನಾಡುತ್ತಿದ್ದಾಗ ಅವರು ಊಟಿಯಲ್ಲಿ ಕಳೆದ ಬಾಲ್ಯದ ದಿನಗಳ ಅನುಭವಗಳನ್ನು  ನಮ್ಮಟ್ಟಿಗೆ ಹಂಚಿಕೊಳ್ಳುತ್ತಿದ್ದರು, ಅವರು ತಮ್ಮ ಬಾಲ್ಯದಲ್ಲಿ ಬೆಟ್ಟಗುಡ್ಡಗಳಲ್ಲಿ ಆಟವಾಡಿಕೊಂಡು ಬೆಳೆದಂತಹ ಸಮಯವನ್ನು ನೆನಪಿಸಿಕೊಂಡು ಬಹಳ ಸಂತೋಷ ಪಡುತ್ತಿದ್ದರು. ಸ್ವಲ್ಪ ದೊಡ್ಡ ಮನೆತನದವರೇ ಆಗಿದ್ದರಿಂದ ಯಾರೇ ಹೊರಗಿನವರು ಬಂದರು ಅವರ ಯೋಗಕ್ಷೇಮ ಊಟೋಪಚಾರಗಳೆಲ್ಲವೂ ಇವರ ಮನೆಯಲ್ಲಿ ನಡೆಯುತ್ತಿತ್ತು. ನಾಳೆ ಇಲ್ಲೇ ಸುತ್ತಮುತ್ತಲಿರುವ ಟೀ ಎಸ್ಟೇಟ್ ಹಾಗೂ ಉದಕಮಂಡಲದಲ್ಲಿ ಅತ್ಯಂತ ಹಳೆಯ ಹಾಗೂ ಬೃಹದಾಕಾರವಾಗಿ ಗುಡ್ಡದಮೇಲೆ ಬೆಳೆದಿರುವಂತಹ ನೀಲಗಿರಿ ಮರವನ್ನು ನೋಡಿಕೊಂಡು ಬರುವಂತೆ ಸಲಹೆಯನ್ನು ಕೊಟ್ಟರು.

 ಅಜ್ಜಿಯವರ ಸಲಹೆಯಂತೆ ಎಸ್ಟೇಟ್ಅನ್ನು ನೋಡುತ್ತಿರುವಾಗಲೇ ನಮಗಿಂತ ದೂರದಲ್ಲೇ ಅಜಾನುಬಾಹುವಾಗಿ ಬೆಳೆದಿದಂತಹ ನೀಲಗಿರಿ ಮರಗಳ ಸಮೂಹ ನಮ್ಮನ್ನು ಕೈಬೀಸಿ ಕರೆದವು. ಮುಂದೆ ಸಾಗಿ ಮರದ ಹತ್ತಿರ ಬರುತ್ತಿದ್ದಂತೆ ನೀಳವಾಗಿ ಬೆಳೆದು ನಿಂತಿದಂತಹ ಮರವನ್ನು ನೋಡಿ ಮೂಕವಿಸ್ಮಿತರಾದೆವು. ಅದರ ಬುಡದಲ್ಲಿ ನಿಂತಿದ್ದ ನಮಗೆ ಗಲಿವಾರನ ಮುಂದೆ ನಿಂತ ಮನುಷ್ಯನಂತೆ ಭಾಸವಾಯಿತು ಏನು ಅದರ ಬೆಳವಣಿಗೆ!! ಹತ್ತಾರು ಜನ ಸುತ್ತುವರಿಯ ಬಹುದಾದಂತಹ ಅದರ ಬುಡ!! ತಲೆಯೆತ್ತಿ ನೋಡಿದರೆ ಕಣ್ಣಿನ ದೃಷ್ಟಿಗೆ ನಿಲುಕದ ಎತ್ತರ!! ಏನೀ ನಿಸರ್ಗದ ಮಹಿಮೆ ತನ್ನೊಳಗಿನ್ನೆಷ್ಟು ವಿಸ್ಮಯಗಳನ್ನು ಅಡಗಿಸಿಕೊಂಡಿದೆಯೋ ಎಂದೆನಿಸಿತು.

 ಮನೆಗೆ ಹಿಂದಿರುಗಿ ಕಾಡುದಾರಿಯಲ್ಲಿ ನಡೆದುಕೊಂಡು ಹೋಗೋಣವೆಂದು ನಿರ್ಧರಿಸಿದ್ದಾಯಿತು. ಹುಲಿಗಳಿರುವ ದೈತ್ಯ ನೀಲಗಿರಿ ನೆಡುತೋಪುಗಳ ನಿಶಬ್ದ ಕಾಲುದಾರಿಯ ಮುಖಾಂತರ ನಡೆದುಕೊಂಡು ಹೋಗುವುದೇ ರೋಚಕವೆನಿಸಿತ್ತು. ಅಂದು ಎಂದಿನಂತೆ ಸುತ್ತಮುತ್ತಲ ಪ್ರವಾಸಿ ತಾಣ ವಾದಂತಹ Shooting made, Pay lakeಗಳನ್ನು ನೋಡಿದ್ದಾಯಿತು ಇಷ್ಟಗುವುದರೊಳಗೆ ಮೂರು ದಿನ ಮೂರುಗಳಿಗೆಯಂತೆ ಕಳೆದುಹೋಗಿತ್ತು.ಇತ್ತ ಮೈಸೂರಿಗೆ ವಾಪಸ್ ಹಿಂದಿರುಗಿ ಬರುವಂತೆ ಕರೆಯಮೇಲೆ ಕರೆಗಳು ಬರುತ್ತಲೇ ಇದ್ದವು ಅದರಂತೆ ಬಟ್ಟೆಗಳನ್ನೆಲ್ಲವನ್ನು ಜೋಡಿಸಿ ಕೊಳ್ಳುತ್ತಿದ್ದಾಗ ತೆಗೆದುಕೊಂಡು ಹೋಗಿದ್ದ ಒಂದು ಬ್ಯಾಗ್ ಜೊತೆ ಇನ್ನೆರಡುಸೇರಿಕೊಂಡಿದ್ದವು.

 ಬೆಳಗ್ಗೆ ನಾವು ಹೊರಡುತ್ತೇವೆ ಎಂದು ವಿಷಯ ತಿಳಿದ ಅಜ್ಜಿಗೆ ನಮ್ಮನ್ನು ಕಳುಹಿಸಿಕೊಡಲು ಸ್ವಲ್ಪವೂ ಮನಸ್ಸಿರಲಿಲ್ಲ ಇನ್ನೆರಡು ದಿನ ಇಲ್ಲಿಯೇ ಇದ್ದು ಆಮೇಲೆ ಹೊರಡಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು.ಸ್ನೇಹಿತನ ಚಿಕ್ಕಮ್ಮನವರಂತೂ ನಮ್ಮನ್ನು ತಮ್ಮ ಮಕ್ಕಳಂತೆ ನೋಡಿಕೊಂಡರು. ಸದಾ ನಮಗಾಗಿ ಮಾಡಿ ಬಡಿಸುತ್ತಿದ್ದಂತಹ ಬಿಸಿ ಅಡುಗೆ ಮೃಷ್ಟಾನ್ನ ಭೋಜನವಾಗಿತ್ತು ಅದರಲ್ಲಿಯೂ ಅವರು ಮಾಡಿದಂತಹ ಮೆಣಸಿನ ಸಾರು ನನಗೆ ಈಗಲೂ ನೆನಪಿಸಿಕೊಂಡರೆ ಬಾಯಲ್ಲಿ  ನೀರೂರುತ್ತದೆ ಅಷ್ಟು ಚೆನ್ನಾಗಿ ಸಾಂಬಾರ್ ಮಾಡಿದ್ದರು.

 ಇಷ್ಟೆಲ್ಲಾ ಚೆನ್ನಾಗಿ ನೋಡಿಕೊಂಡಿದಂತಹ ನನ್ನ ಸ್ನೇಹಿತನ ಮನೆಯವರ ಪ್ರೀತಿ ವಿಶ್ವಾಸಕ್ಕೆ ನಾನು ಮಾರುಹೋಗಿದ್ದೆ. ಆ ಸಮಯದಲ್ಲಿ ನಾನು ಅವರಿಗೆ ಏನೇ ಕೊಟ್ಟರು ಅದು ಅವರ ಪ್ರೀತಿ-ವಿಶ್ವಾಸಕ್ಕೆ ಕಡಿಮೆಯೇ ಎಂದೆನಿಸುತ್ತಿತ್ತು. ಕೊನೆಯದಾಗಿ ಅಜ್ಜಿಯ ಆಶೀರ್ವಾದವನ್ನು ಪಡೆಯುತ್ತಿದ್ದಾಗ ಇನ್ನು ಮುಂದೆ ರಜದ ಸಮಯದಲ್ಲಿ ಇಲ್ಲಿಗೆ ಬರುತ್ತಲೇ ಇರಬೇಕು ಎಂದು ಹೇಳಿದ್ದರು. ಎಷ್ಟೇ ಆದರೂ ನನ್ನಂತಹ ಸಾವಿರಾರು ಜನರ ಯೋಗಕ್ಷೇಮವನ್ನು ವಿಚಾರಿಸಿದ ಕೈಯಲ್ಲವೇ ?. ಮನೆಗೆ ಬಂದವರನ್ನು ಬರೀ ಕೈಯಲ್ಲಿ ಕಳುಹಿಸಬಾರದೆಂದು, ದೊಡ್ಡವರು ಕೊಟ್ಟಿದ್ದನ್ನು ತಿರಸ್ಕರಿಸಬಾರದು ಎಂದೇಳಿ ಹಣವನ್ನು ಕೊಟ್ಟಿದ್ದರು. ಅವರ ಅಪಾರ ಪ್ರೀತಿಗೆ ಮಾರುಹೋಗಿದ್ದ ನನಗೆ ಮನೆಯಿಂದ ಹೊರಡುವಾಗ ಕಣ್ಣುಗಳು ಹಸಿಯಾಗಿದ್ದವು ಭಾರವಾದ ಮನಸ್ಸಿನಲ್ಲಿ ಬಸ್ ಹತ್ತಿ ಮೈಸೂರಿಗೆ ತಲುಪಿದ ಬಳಿಕ, ತಲುಪಿದ ವಿಷಯವನ್ನು ಕರೆಮಾಡಿ ತಿಳಿಸಿದ್ದಾಯಿತು.

ಇಲ್ಲಿ ರೋಚಕದ ವಿಷಯವೆಂದರೆ ನಾನು ಹಿಂತಿರುಗಿ ಬಂದ ಬಳಿಕವೇ ಮನೆಯವರಿಗೆ ತಿಳಿದಿದ್ದು ನಾನು ಯಾರ ಜೊತೆ ಹೋಗಿದ್ದೇನೆಂದು.

 ಇದಾದ ಅನೇಕ ವರ್ಷಗಳಾದ ಮೇಲೆ ನಾನು  ಊಟಿಗೆ ಹೋಗಿದ್ದೆ ಅಷ್ಟರಲ್ಲಾಗಲೇ ಅಜ್ಜಿ ಇಹಲೋಕ ತ್ಯಾಜಿಸಿದ್ದರು.ವಿಷಯ ತಿಳಿದು ಮತ್ತಷ್ಟು  ದುಃಖವಾಯಿತು. ಈ ಪ್ರವಾಸ ಕಥನವನ್ನು ನಾನು ಎಷ್ಟೊ ಬಾರಿ ಬರೆಯಬೇಕೆಂದು ಪ್ರಯತ್ನಪಟ್ಟಿದ್ದರು ನಾನಾ ಕಾರಣಗಳಿಂದ ಆಗಿರಲಿಲ್ಲ ಆದರೆ ಈ Lockdown ಸಮಯದಲ್ಲಿ ಸ್ನೇಹಿತನ ತಂದೆಯವರು ಸರಕಾರಿ ಇಲಾಖೆಯಿಂದ ನಿವೃತ್ತಿ ಹೊಂದಿದ್ದಾರೆ,  ಹೀಗಾಗಿ ಅವರ ಬರುವಿಕೆಗಾಗಿ ನಾವಿಲ್ಲಿ ಕಾಯುತ್ತಿದ್ದೇವೆ.ಅವರ ಪ್ರೀತಿ ವಿಶ್ವಾಸಕ್ಕೆ ಮಾರುಹೋದ ನಾನು ನನ್ನ ಈ ಪುಟ್ಟ ಬರಹವನ್ನು ಸಂಪೂರ್ಣವಾಗಿ ನನ್ನ ಸ್ನೇಹಿತನ ಮನೆಯವರಿಗೆ ಸಮರ್ಪಿಸಿದ್ದೇನೆ. ಸ್ನೇಹಿತನ ಚಿಕ್ಕಮ್ಮನವರು ಕೂಡ ನಿವೃತ್ತಿ ಹೊಂದಿದ ಬಳಿಕ ನಮ್ಮೊಟ್ಟಿಗೆ ಮೈಸೂರಿನಲ್ಲಿ ಇರಬೇಕೆಂಬುದು ನನ್ನ ಆಶಯವಾಗಿದೆ.

 ಹೀಗೆ ನಾವೆಲ್ಲರೂ ಸ್ನೇಹಿತರೊಟ್ಟಿಗೆ ಅನೇಕ ಪ್ರದೇಶಗಳಿಗೆ ಭೇಟಿ ನೀಡಿಯೇ ಇರುತ್ತೇವೆ ಅವುಗಳಲ್ಲೆಲ್ಲಾ ಪ್ರಕೃತಿಯೊಂದಿಗೆ ಕಳೆದ ಸಮಯವನ್ನು ಮರೆಯಲು ಸಾಧ್ಯವೇ ಇರುವುದಿಲ್ಲ ಏಕೆಂದರೆ ಪ್ರಕೃತಿಯ ಹಸಿರಿನೊಂದಿಗೆ ಕಳೆದ ಜೀವನದ ಸಮಯ ಸದಾ ಹಸಿರಾಗಿರುತ್ತವೆ.

Sunday, May 10, 2020

ಪರಿಸರ ಹೋರಾಟಗಾರರು ಅಭಿವೃದ್ಧಿಯ ವಿರೋಧಿಗಳೇ??


                         - ಎಸ್.ಪಿ.ತೇಜರಾಜು.

 ಜಗತ್ತು ವೇಗವಾಗಿ ಮುಂದುವರೆದಿದೆ,
 ಆದರೆ ಆ ವೇಗದಲ್ಲಿ ವಿನಯವಿಲ್ಲ,
 ವಿಚಾರವಿಲ್ಲ ಮೌಲ್ಯಗಳಿಲ್ಲ.
              - ಶ್ರೀ ಶ್ರೀ ಸಿದ್ದಗಂಗಾ ಶ್ರೀಗಳು.


 ಇಂತಹ ಮಹನೀಯರು, ಕಾಲಜ್ಞಾನಿಗಳು ಹೇಳಿರುವಂತಹ ಮಾತುಗಳು ಸರ್ವಕಾಲಿಕ ಸತ್ಯವಾಗಿದೆ. ನಾವಿಂದು ಎಲ್ಲಾ ವಿಷಯಗಳಲ್ಲಿಯೂ ನಮ್ಮತನವನ್ನು  ಕಳೆದುಕೊಂಡಿದಾಗಿದೆ ಹಾಗೂ ಎಲ್ಲಾ ವಿಷಯಗಳಲ್ಲಿಯೂ ವಿದೇಶಿಯರನ್ನು ಅನುಸರಿಸುತ್ತಿದ್ದೇವೆ. ಅಭಿವೃದ್ಧಿ ಎಂಬ ಹೆಸರಿನಲ್ಲಿ ಕೃಷಿಯಾಧಾರಿತವಾದ ದೇಶವನ್ನು ಸೇವಾ ವಲಯದ ಕಡೆಗೆ ತಿರುಗಿಸಲಾಗಿದೆ ಹೀಗಾಗಿ ಕೃಷಿಗಿಂತಲೂ ಹೆಚ್ಚು ಸೇವಾ ವಲಯಗಳಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿದೆ. ವಿದ್ಯಾವಂತ ಹಾಗೂ ಪಟ್ಟಣದ ನಾಲ್ಕು ಜನರಿಗೆ ಉದ್ಯೋಗ ದೊರಕುತ್ತದೆ ಇದರಿಂದ ಅವರ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುವುದರೊಂದಿಗೆ ದೇಶದ ಬೊಕ್ಕಸಕ್ಕೆ ಹಣವರಿದುಬರುತ್ತದೆ ಎಂಬ ಮಹದಾಸೆಯಲ್ಲಿ ಹೊರದೇಶದ ಕಂಪನಿಗಳಿಗೆ ಕೆಂಪು ಹಾಸನ್ನು ಹಾಸಿ ಕರೆದುಕೊಂಡಿದ್ದರಿಂದ ನಮ್ಮ ಪರಿಸ್ಥಿತಿಗಳು ಅದೋಗತಿಗೆ ತಲುಪಿದೆ. ಎಷ್ಟೇ ಆದರೂ ಕೈಗಾರೀಕರಣಕ್ಕೆ ಹೆಚ್ಚು ಮಹತ್ವವನ್ನು ನೀಡುವುದೇ ಈ ಅಭಿವೃದ್ಧಿಯ ಅರ್ಥವಾಗಿದೆ ಅಲ್ಲವೇ?


 ಇಷ್ಟೆಲ್ಲಾ ಯೋಜನೆಗಳು ಬಂದರೇನು ಬಡವರ ಸಂಖ್ಯೆ ಕಡಿಮೆಯಾಗಿದೆ ? ಯಾರಿಗಾಗಿ ಈ ಬೆಳವಣಿಗೆ ? ಯಾರಿಗಾಗಿ ಈ ಅಭಿವೃದ್ಧಿ? ನಮ್ಮ ನಿಸರ್ಗವನ್ನು ಹಾಳುಮಾಡಿಕೊಂಡು ಹೊರದೇಶಗಳ ಕಂಪನಿಗಳನ್ನು ಉದ್ಧಾರ ಮಾಡುವ ಉಸಾಬರಿ? ಈ ಎಲ್ಲ ಯೋಜನೆಗಳು ಎಷ್ಟು ಜನರನ್ನು ತಲುಪಿವೆ? ಈ ಎಲ್ಲ ಯೋಜನೆಗಳಿಂದ ತಮ್ಮ ಜೇಬು ತುಂಬಿಕೊಂಡಿರುವ ಒಂದಷ್ಟು ರಾಜಕಾರಣಿಗಳು ಹಾಗೂ ಅಧಿಕಾರಿಗಳು.

 ಸರಕಾರದ ಅನೇಕ ಯೋಜನೆಗಳಿಂದ ನಿಸರ್ಗದ ಮೇಲಾದ ದೌರ್ಜನ್ಯಗಳನ್ನು ನಾವಿಂದು ತಿಳಿದುಕೊಳ್ಳಲೇಬೇಕಾಗಿದೆ.

1. ಹುಬ್ಬಳ್ಳಿಯಿಂದ ಅಂಕೋಲಾಗೆ ರೈಲ್ವೆ ಯೋಜನೆ ಕಾರ್ಯಗತಿಯಲ್ಲಿದ್ದು ಇದಕ್ಕಾಗಿ 2,50,000  ಮರಗಳನ್ನು ಕಡಿಯಲಾಗುತ್ತಿದೆ ಹಾಗೂ 1472  ಎಕರೆ ಅರಣ್ಯ ಪ್ರದೇಶ ನಾಶವಾಗುತ್ತದೆ.

2. 2011- 2019 ರೊಳಗೆ ಬೆಂಗಳೂರು ಜಿಲ್ಲೆಯೊಂದರಲ್ಲೇ ಅನೇಕ ಯೋಜನೆಗಳಿಗಾಗಿ 50,000  ಮರಗಳನ್ನು ಧರೆಗುರುಳಿಸಲಾಗಿದೆ.

3.ಮೈಸೂರಿನಿಂದ ಕೇರಳಕ್ಕೆ ವಿದ್ಯುತ್ ಸಂಪರ್ಕಕೆಂದು 54,000 ಮರಗಳನ್ನು ಧರೆಗುರುಳಿಸಲಾಗಿದೆ.

4.ಕಾಳಿ ನದಿಯೊಂದಕ್ಕೆ ಐದು ಅಣೆಕಟ್ಟುಗಳನ್ನು ಕಟ್ಟಲಾಗಿದೆ ಇದರಿಂದ 32,000 ಎಕರೆ ಕಾಡು ನಾಶವಾಗಿದೆ.

5. ಮಡಿಕೇರಿಯಲ್ಲಿ ಕೇವಲ ಒಂದು ರೆಸಾರ್ಟ್ ನಿರ್ಮಾಣಕ್ಕಾಗಿ 800 ಮರಗಳನ್ನು ಕಡಿಯಲಾಗಿದೆ.

6.ಎತ್ತಿನಹೊಳೆ ಯೋಜನೆಗೆಂದು ಅಪೂರ್ವ ಪಶ್ಚಿಮ ಘಟ್ಟದ ಜೀವ ವೈವಿಧ್ಯದ ಕೊಂಡಿಯನ್ನು ನಾಶಪಡಿಸಲಾಗುತ್ತಿದೆ.

7. ಕುದುರೆಮುಖದ ಕಬ್ಬಿಣದ ಅದಿರಿನ ಕಾರ್ಖಾನೆಗೆ ಎಂದು ನಿರ್ಮಿಸಲಾದ ಲಕ್ಯ ಡ್ಯಾಮ್ ಹೂಳಿನಿಂದ ತುಂಬಿದೆ ಹಾಗೂ ಭದ್ರಾ ನದಿಯ ನೀರು ಕೆಮ್ಮಣ್ಣಿನಿಂದ ಹರಿಯುತ್ತಿದೆ.

8.ಹರಿಹರ ಪಾಲಿಫೈಬರ್ ಕಾರ್ಖಾನೆಯ ಕಲುಷಿತ ನೀರನ್ನು ತುಂಗಾ ನದಿಗೆ ಹರಿಬಿಡಲಾಗುತ್ತಿದೆ.

9.ನಗರ ಹಾಗೂ ಕಾರ್ಖಾನೆಗಳ ಕಲುಷಿತ ನೀರನ್ನು ಜೀವನದಿಗಳಿಗೆ ಸೇರುತ್ತಿರುವುದರಿಂದ ನದಿಗಳ ಗುಣಮಟ್ಟ C grade ನಿಂದ D gradeಗೆ ಸೇರುತ್ತದೆ.

10.ಮಹಾನಗರಗಳಿಗೆ 24 ಗಂಟೆಗಳ ವಿದ್ಯುತ್ ಸಂಪರ್ಕಕ್ಕೆ ನಿರ್ಮಿಸುವಂತಹ ಅಣೆಕಟ್ಟೆಗಳ ಸುತ್ತಮುತ್ತಲಿರುವ ಜನರಿಗೆ ಇಂದಿಗೂ ಕೂಡ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ.

11.ಮೈಸೂರು ಹಾಗೂ ಬೆಂಗಳೂರು, ಬೆಂಗಳೂರು ಹಾಗೂ ಮಂಗಳೂರು, ಮೈಸೂರು ಹಾಗೂ ಚಾಮರಾಜನಗರಗಳ ರಸ್ತೆ ಅಗಲೀಕರಣಕ್ಕೆಎಂದು ಲಕ್ಷಾಂತರ ಮರಗಳನ್ನು ಕಡೆದಿದ್ದಾರೆ. ಕೇವಲ ಬೀದರ್ ರಸ್ತೆ ಅಗಲೀಕರಣಕೆಂದು 5000 ಮರಗಳನ್ನು ಕಡಿಯಲಾಗಿದೆ.

12.ಅನೇಕ ಅಣೆಕಟ್ಟುಗಳ ನಿರ್ಮಾಣಗಳಿಂದಾಗಿ ಮುಳುಗಡೆಯಾದ ಜನರಿಗೆ ಇಂದಿಗೂ ಕೂಡ ಯೋಜನೆಗಳು ತಲುಪದಗಿವೆ.

13.ಕುದುರೆಮುಖ ದಿನಗೂಲಿ ನೌಕರರ ಜೀವನ ಇಂದಿಗೂ ಕೂಡ ಶೋಚನೀಯವಾಗಿದೆ.

14.ಪ್ರಪಂಚದ ನಾನಾ ದೇಶಗಳು ಅಣುವಿದ್ಯುತ್ ಸ್ಥಾವರಗಳ ಅಪಾಯವನ್ನರಿತು ನಿರ್ಬಂಧಿಸಿರುವ ಸಂದರ್ಭದಲ್ಲಿ ನಮ್ಮ ಸರಕಾರಗಳು ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಐದು ಮತ್ತು ಆರನೇ ಘಟ್ಟಗಳನ್ನು ಪ್ರಾರಂಭಿಸಲು ಮುಂದಾಗಿದೆ.[ ಒಮ್ಮೆ ಚೆರ್ನೋಬಿಲ್ ಹಾಗೂ ಜಪಾನಲ್ಲಿ ನಡೆದಂತಹ  ಅಣು ವಿದ್ಯುತ್ ಸ್ಥಾವರಗಳ ದುರಂತವನ್ನು ನೆನಪಿಸಿಕೊಳ್ಳಿ].

15. ಹೊಸಯೋಜನೆಗಳಿಂದ ಹೊರಗಿನವರು ಉದ್ಯೋಗ ಪಡೆಯುತ್ತಿದ್ದಾರೆ ಹೊರತು ಸ್ಥಳೀಯರಿಗೆ ಸರಿಯಾದ ಉದ್ಯೋಗಗಳು ಇಂದಿಗೂ ದೊರೆತಿಲ್ಲ.

16.ಪ್ರತಿ ಜಿಲ್ಲೆಗಳಲ್ಲಿ ಇರುವಂತಹ ಕೈಗಾರಿಕಾ ಪ್ರದೇಶಗಳಿಂದ ಉದ್ಯೋಗ ದೊರೆಯುತ್ತಿರುವುದೇನೋ ನಿಜವಾದರೂ ಇದರಿಂದ ಸುತ್ತಮುತ್ತಲ ಜನರ ಆರೋಗ್ಯದ ಪರಿಸ್ಥಿತಿಗಳು ದಿನೇ ದಿನೇ ಹದಗೆಡುತ್ತಿದೆ.

17.ಕೈಗಾರಿಕೆಗಳಿಗಾಗಿ ಅಂತರ್ಜಲ ನೀರನ್ನು ಬಳಸಿಕೊಳ್ಳುವುದರ ಜೊತೆಗೆ ಕಲುಷಿತ ನೀರನ್ನು ಸುತ್ತಮುತ್ತಲ ಕೆರೆಗಳಿಗೆ ಹರಿ ಬಿಡಲಾಗುತ್ತಿದೆ.

18.ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಬೆಂಗಳೂರು, ಮೈಸೂರು ,ಹುಬ್ಬಳ್ಳಿ-ಧಾರವಾಡ, ಮಂಗಳೂರು ಜಿಲ್ಲೆಗಳದ್ಯಂತ ಕಸದ ರಾಶಿ ಬೆಟ್ಟದಷ್ಟೆತ್ತರ ಏರಲಿದೆ.

19.ಮೇಲುಕೋಟೆ - ಧನುಷ್ಕೋಟಿ ಸುತ್ತಮುತ್ತಲಿದ್ದ ಮರಗಳನ್ನು ಧರೆಗುರುಳಿಸಲಾಗಿದೆ.

20.ರಾಜ್ಯದ ಒಟ್ಟು ವಿಸ್ತೀರ್ಣದ 21% ಕಾಡಿದೆ ಎಂದು ರಾಜ್ಯ ಸರ್ಕಾರದ ವರದಿಯಲ್ಲಿದಾದರು ಪರಿಸರ ಹೋರಾಟಗಾರರ ಸಮಗ್ರ ವರದಿಯ ಪ್ರಕಾರ 19% ಕಾಡಿದೆ ಅಷ್ಟೇ.

21.ಸಾವಿರಾರು ಯೋಜನೆಗಳು ಶ್ರೀಸಾಮಾನ್ಯರ ನಡುವೆಯೇ ನಡೆಯುತ್ತಿದ್ದರು ಯೋಜನೆಗಳಿಗಾಗಿ ಕಡಿಯುತ್ತಿರುವಂತ ಮರಗಳ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ.

22.ಇಂದಿಗೂ ಕೂಡ ಹರಳುಗಳು ಹಾಗೂ ಮರಳಿನ ಹಗರಣ ನಡೆಯುತ್ತಲಿದೆ.

 ಹೀಗೆ ಸಾವಿರಾರು ಯೋಜನೆಗಳಿಂದ ಕೋಟ್ಯಂತರ ಮರಗಳು ದೇಶದಲ್ಲಿ ಧರೆಗುರುಳಿವೆ, ಲಕ್ಷಾಂತರ ಜನರು ಪರಿಸರದ ಅಸಮತೋಲನದಿಂದ ಸಾವಿಗೀಡಾಗುತ್ತಿದ್ದಾರೆ. ಅನೇಕ ಜನರಿಗೆ ಈ ರೀತಿಯಾದಂತಹ ಮಾಹಿತಿಗಳೇ ತಿಳಿದಿಲ್ಲ.
ತಿಳಿದವರೆಲ್ಲರೂ ತಮ್ಮ ಜೀವನದೋಟದಲ್ಲಿ ಮುಳುಗಿಹೋಗಿದ್ದಾರೆ.

 ಇಷ್ಟಾದರೂ ಸರಕಾರಗಳೇ ಸಮಿತಿಗಳನ್ನು ರಚಿಸಿ ತಯಾರಿಸಿದಂತಹ ಮಾಧವ ಗಾಡ್ಗಿಲ್ ಹಾಗೂ ಕಸ್ತೂರಿ ರಂಗನ್ ವರದಿಗಳನ್ನು ಮೂಲೆಗುಂಪಾಗಿಸಿದೆ. ನಮ್ಮ ರಾಜಕಾರಣಿಗಳೇ ಈ ವರದಿಗಳಿಂದ ಸ್ಥಳೀಯರನ್ನು ಒಕ್ಕಲೆಬ್ಬಿಸುತ್ತಾರೆ ಎಂದು ಸುಳ್ಳು ಸಂದೇಶಗಳನ್ನು ತಿಳಿಸಿದ್ದರಪರಿಣಾಮವಾಗಿ ಜನರು ಈ ವರದಿಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.  ಇವರೇನಾದರೂ ಪರಿಸರ ಆಸಕ್ತರಾಗಿದ್ದರೆ ನಿಜವಾಗಿಯೂ ಇಂತಹ ವರದಿಗಳನ್ನು ತಳ್ಳಿ ಹಾಕುತ್ತಿದ್ದಾರೆ ? ಈ ಯೋಜನೆಗಳು ಜಾರಿಯಾಗಿ ಬಿಟ್ಟರೆ ತಮ್ಮ ಜೋಬಿಗೆ ಸೇರಬಹುದಾದಂತಹ  ಹಣ ಇಲ್ಲದಗುತ್ತದಲ್ಲ ಎಂದು ಅವರ ಭಾವನೆಯಾಗಿದೆ.ಇದರಿಂದಲೇ ನಮಗೆ ತಿಳಿಯುತ್ತದೆ ರಾಜಕಾರಣಿಗಳು ಪರಿಸರದ ಮೇಲೆ ಇಟ್ಟಿರುವ ಕಾಳಜಿ.


 ಇಂದು ಕರೋನಾ ಮಹಾಮಾರಿ ವಿಶ್ವವನ್ನು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸಿದ್ದಾಗಿದೆ ಈ ನಿಟ್ಟಿನಲ್ಲಿ ಪ್ರತಿ ದೇಶಗಳು ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಅನೇಕ ವಿದೇಶಿ ಕಂಪನಿಗಳಿಗೆ ಕೆಂಪು ಹಾಸನ್ನು ಹಾಕುವುದರ ಮೂಲಕ ತನ್ನ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ನಮ್ಮ ರಾಷ್ಟ್ರವು ಕೂಡ ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಎಂದು 4.61ಲಕ್ಷ ಹೆಕ್ಟೇರ್
 ಪ್ರದೇಶವನ್ನು ಗುರುತಿಸಲಾಗಿದೆ [ ಲಕ್ಸಂಬರ್ಗ್ ದೇಶದ ವಿಸ್ತೀರ್ಣದ ಎರಡುಪಟ್ಟು]  ಇದಕ್ಕಾಗಿ ಜಪಾನ್,ಅಮೆರಿಕ,ಚೀನಾ,ದೇಶಗಳಿಗೆ ಕೆಂಪು ಹಾಸನ್ನು ಹಾಸಲಾಗಿದೆ ಇವುಗಳಿಂದ ಸದ್ಯಕ್ಕೆ ನಮ್ಮ ಪರಿಸರದಮೇಲಿರುವ ಹಾನಿಗಳ ಜೊತೆಗೆ ಮತ್ತಷ್ಟು ಸೇರಿಕೊಳ್ಳಲಿದೆ. ಒಮ್ಮೆ ಯೋಚಿಸಿ ಇನ್ನೂ ನೂರಾರು ತಲೆಮಾರುಗಳಿಗೆ ಬೇಕಾಗಿರುವ ಪರಿಸರವನ್ನು ಹಾಳು ಮಾಡಿಕೊಂಡು ಸದ್ಯದ ಮಟ್ಟಿಗೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಪರಿ. ನಿಜವಾಗಿಯೂ ನಮಗೆ ಈ ರೀತಿಯಾದಂತಹ ಅಭಿವೃದ್ಧಿಗಳು ಬೇಕೆ?


 ಹೀಗಾಗಿ ಪರಿಸರ ಹೋರಾಟಗಾರರೇನೋ ಸರಕಾರದ ಅಥವಾ ಸರಕಾರದ ಯೋಜನೆಗಳಿಗೆ ವಿರೋಧಿಗಳಲ್ಲ ಬದಲಿಗೆ ನಮ್ಮ ಅಭಿವೃದ್ಧಿಗಳೆಲ್ಲವೂ ಕೂಡ ಪರಿಸರ ಪೂರಕವಾಗಿರಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ. 

1.ಹುಟ್ಟಿದ ಪ್ರತಿ ಮಗುವಿಗೆ ಎರಡು ಗಿಡದಂತೆ ಸರ್ಕಾರದ ಸಾವಿರಾರು ಹೆಕ್ಟೇರ್ ಪಾಳುಬಿದ್ದಿರುವ ಭೂಮಿಯಲ್ಲಿ ಬೆಳೆಸಬಹುದಾಗಿದೆ.

2.ಸೋಲಾರ್ ಹಾಗೂ ವಿಂಡ್ ಎನರ್ಜಿಗಳಿಗೆ ಇನ್ನಷ್ಟು ಆದ್ಯತೆಯನ್ನು ಕೊಡಬಹುದಾಗಿದೆ. 

3.ಪೆಟ್ರೋಲ್ ಅಥವಾ ಡೀಸೆಲ್ ವೆಹಿಕಲ್ಗಳನ್ನು ತೆಗೆದುಕೊಳ್ಳುವ ಬದಲಾಗಿ ಎಲೆಕ್ಟ್ರಿಕ್ ವಾಹನಗಳನ್ನು ತೆಗೆದುಕೊಳ್ಳಬಹುದಾಗಿದೆ.

ಹೀಗೆ ಕೆಲವಷ್ಟು ಮುಂಜಾಗ್ರತಾ ಕ್ರಮಗಳನ್ನು ಇಂದಿನಿಂದಲೇ ಪಾಲಿಸುವುದರ ಮೂಲಕ ಪರಿಸರವು ಸಮತೋಲನವಾಗಿರುತ್ತದೆ ಹಾಗೂ ಜನರು ಸುಭಿಕ್ಷವಾಗಿರುತ್ತಾರೆ. ಹೀಗಾಗಿ

 "ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ".

 (Source : different news papers, journals, Magazines, internet source and many international reports)

Monday, May 4, 2020

ಆಯ್ಕೆ ನಮ್ಮದೇ


                      - ಎಸ್.ಪಿ.ತೇಜರಾಜು.


 ನಾವೆಲ್ಲರೂ ಕೂಡ ನಮ್ಮ ಸುತ್ತಮುತ್ತ ನಡೆಯುತ್ತಿರುವ ನಾನಾ ವಿಷಯಗಳನ್ನು ಕೇಳಿ, ತಿಳಿದು, ನೋಡಿ ಬೆಳೆದವರು ಹಾಗೂ ಇಂದಿಗೂ ಕೂಡ ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ಬೆಳೆಯುತ್ತಿರುವವರೆ. 

 ಇಲ್ಲಿಯ ಜನದಟ್ಟಣೆ, ವಾಹನಗಳು ಓಡಾಡುವ ಶಬ್ದ, ನಾನಾ ಕಾರಣಗಳಿಂದ ನಡೆಯುವ ಕೊಲೆ, ದರೋಡೆ, ಮೋಸ, ಸುಲಿಗೆ, ಸದಾ ತುಂಬಿಹರಿಯುವ ಮೋರಿಗಳು ಹಾಗೂ ಅದರ ದುರ್ಗಂಧ, ನಾವು ಕೂಡ ನಾಲ್ಕು ಜನರಂತೆ ಬಾಳಬೇಕೆಂದು ನಗರಗಳಿಗೆ ವಲಸೆ ಬರುವ ಅಪಾರ ಜನಸಮೂಹ, ಒಬ್ಬರೇ ದುಡಿದರೆ  ಮನೆ ನಿರ್ವಹಿಸಲಾಗುವುದು ಇಲ್ಲವೆಂದು ಭವಿಷ್ಯದ ಒಳಿತಿಗಾಗಿ ಹಗಲಿರುಳೆನ್ನದೆ ದುಡಿಯುವ ಜನ, ಸ್ವಂತ ಮನೆಯವರು ಬಾಡಿಗೆ ಮನೆಯವರಿಗೆ ತೋರುವ ತಾರತಮ್ಯ, ಯಾವುದೋ ಸಣ್ಣ ಪುಟ್ಟ ವಿಷಯಗಳಿಗೆ ನೆರೆಯವರೊಂದಿಗೆ ಜಗಳವಾಡಿ ಸಾಯುವವರೆಗೂ ಮಾತನಾಡದ ಜನ, ಹಾಗೂ ಇನ್ನೂ ಕೆಲವೆಡೆ ವಿಶಾಲ ರಸ್ತೆಗಳು ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಿಸುವಂತಹ ಬೆರಳೆಣಿಕೆಯಷ್ಟು ಜನ, ಇರುವ ಜಾಗವು ಸಾಕಾಗದೆ ರಸ್ತೆ ಹಾಗೂ ಮೋರಿಗಳ ಮೇಲು ಕಟ್ಟಿರುವ ಮನೆಗಳು ಹಾಗು ಇಲ್ಲಿ ವಾಸಿಸುವ ಅಪಾರ ಜನ ಹೇಳುತ್ತಾ ಹೋದರೆ ಪಟ್ಟಿಗಳು ಬೆಳೆಯುತ್ತಾ ಹೋಗುತ್ತದೆ.
[ ಒಮ್ಮೆ ಬೆಂಗಳೂರನ್ನು ನೆನಪಿಸಿಕೊಳ್ಳಿ]


 ಮಕ್ಕಳ ಭವಿಷ್ಯವೇ ಮುಖ್ಯವೆಂದು ಕೆಲವಷ್ಟು ಜನರನ್ನು ತೋರಿಸಿ ನೀವು ಕೂಡ ಹೀಗಾಗಬೇಕು ಎನ್ನುವ ಪೋಷಕರು ತಮ್ಮ ಸಾಮರ್ಥ್ಯಕ್ಕೆ ತಕ್ಕಹಾಗೆ ಶಾಲಾ-ಕಾಲೇಜುಗಳಿಗೆ ಸೇರಿಸುತ್ತಾರೆ. ಶ್ರೀಮಂತರು ತಮ್ಮ ಮಕ್ಕಳನ್ನು ಬಹಳ ಹಣ ತೆತ್ತು ಶಾಲೆಗಳಿಗೆ ಸೇರಿಸುತ್ತಾರೆ ಬೇಸಿಗೆಯ ರಜದ ಸಮಯ ಹಾಳಾಗಬಾರದೆಂದು summer camp, music class, swimming clasಗಳಿಗೆ ಸೇರಿಸುವುದರ ಜೊತೆಗೆ ತಮ್ಮೊಟ್ಟಿಗೆ ಒಂದಕ್ಕೆ ಎರಡರಷ್ಟು ಖರ್ಚಾಗುವ ದೊಡ್ಡ ದೊಡ್ಡ Mallಗಳಿಗೆ, Entertainment park,Hotel, Movie theater ಗಳಿಗೆ ಕರೆದುಕೊಂಡು ಹೋಗುತ್ತಾರೆ.

 ಇತ್ತ ಬಡವರು ತಮ್ಮ ಮಕ್ಕಳನ್ನು ಹತ್ತಿರದ ಶಾಲೆಗಳಿಗೆ ಕಳುಹಿಸಿ ಕೊಂಡು ಜೀವನ ನಡೆಸುತ್ತಾರೆ ಬೇಸಿಗೆಯ ರಜೆಗೆ ಮಕ್ಕಳನ್ನು ಪಕ್ಕದಲ್ಲೇ ಇರುವ ದೇವಸ್ಥಾನಗಳಿಗೂ ಪಾರ್ಕ್ ಗಳಿಗೂ ಹಾಗೂ ಮಕ್ಕಳೊಂದಿಗೆ ಆಟವಾಡಿಕೊಂಡು ಕಾಲಕಳೆಯುತ್ತಾರೆ.

 ಆನೆಗೆ ಆನೆ ಬಾರ ಇಲಿಗೆ ಇಲಿಯಬಾರ ಎಂಬಂತೆ ಶ್ರೀಮಂತರು ತಮ್ಮ ಸಮಯವನ್ನೆಲ್ಲವನ್ನು ತಾವು ಮಾಡುವ ಖರ್ಚುಗಳನ್ನು ಸರಿದೂಗಿಸಲು ಹಣ ಸಂಪಾದಿಸುತ್ತಾರೆ ಅದೇ ಬಡವ ತನ್ನ  ಖರ್ಚುಗಳ ಆದಂತಹ ಮನೆ ಬಾಡಿಗೆ, Electricity bill, Water bill, cable charge, Traveling expenses, Medical expenses, Food, Different loan premium etc, ಹೀಗೆ ನಾನಾ ರೀತಿಯ ಖರ್ಚುಗಳಿಗೆ ಹಣ ಹೊಂದಿಸುವುದುರಲ್ಲಿ ತನ್ನ ಜೀವನದ ಸಮಯವನ್ನು ಕಳೆದು ಬಿಡುತ್ತಾರೆ.

  ಇವುಗಳ ನಡುವೆ ಮಕ್ಕಳು ತನ್ನ ಸುತ್ತಮುತ್ತಲಿರುವ ಸ್ನೇಹಿತರೊಂದಿಗೆ ಬೆರೆತು ಕೇವಲ ನಗರದ ಪರಿಧಿಯ ಚೌಕಟ್ಟಿನೊಳಗೆ ತಮಗೆ ಅರಿವಿಲ್ಲದೆ ಬೆಳೆಯುತ್ತಾರೆ. ಹಾಗೆ ಈ ರೀತಿ ನಗರಗಳಓಳಗೆ ಬದುಕುವುದನ್ನು ಜೀವನವೆಂದು ಅರ್ಥ ಮಾಡಿಕೊಂಡು ಬಿಡುತ್ತಾರೆ.
 ಹೀಗೆ ಬೆಳೆದ ಶ್ರೀಮಂತರ ಮಕ್ಕಳುಗಳು ಇನ್ನಷ್ಟನ್ನು ಸಂಪಾದಿಸಿ ವಿಲಾಸಿ ಜೀವನಕ್ಕೆ ಹೊಂದಿಕೊಳ್ಳುತ್ತಾರೆ ಹಾಗೂ ಬಡವರ ಮಕ್ಕಳು ಬೆಳೆದು ದಿನದ ಖರ್ಚುಗಳಿಗೆ ಸಾಲ ಮಾಡಿ ಕೆಲವು ದುಷ್ಚಟಗಳಿಗೆ ದಾಸರಾಗುತ್ತಾರೆ.

 ಹೀಗೆ ಎರಡು ವಿಧವಾದ ಜನಸಮೂಹವು ಕೂಡ ತಮ್ಮ ಮಕ್ಕಳಿಗೆ ಹೇಳಿಕೊಡ ಬೇಕಾದಂತಹ ಸ್ಪೂರ್ತಿದಾಯಕ ವಿಷಯಗಳನ್ನು ಮರೆತೇ ಬಿಡುತ್ತಾರೆ ಅವುಗಳೆಂದರೆ
 ತಂದೆತಾಯಿಗಳು ಹಳ್ಳಿಯಲ್ಲಿ ತೋಟ ಮಾಡಲು ಪಟ್ಟಂತಹ ಶ್ರಮ, ಅವರ ಮಡಿಲಿನಲ್ಲಿ ಬೆಳೆಯುವ ಪ್ರೀತಿ, ತೋಟದಲ್ಲಿ ಬೆಳೆಯುವ ನಾನಾ ರೀತಿಯ ಹಣ್ಣು ಹೂವುಗಳು, ನಿಸರ್ಗದ ಕಾಲಚಕ್ರಕ್ಕೆ ತಕ್ಕಂತೆ ಬದಲಾಗುವ ತೋಟದ ಬೆಳವಣಿಗೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜಮೀನಿನ ಸಮೃದ್ಧಿಗಾಗಿ ದುಡಿಯುತ್ತಿರುವ ಅಂತಹ ಎರೆಹುಳುಗಳು, ಜೇನುನೊಣಗಳು, ಇರುವೆಗಳು, ಗೆದ್ದಲು ಹುಳುಗಳು, ಜೇಡ, ಚಿಟ್ಟೆ, ಹಾವು, ಕಪ್ಪೆಗಳೊಂದಿಗೆ ನಡೆಸುವ ಸೌಹಾರ್ದಯುತ ಜೀವನ, ಹೂ ಕಾಯಾಗಿ ಕಾಯಿ ಹಣ್ಣಾಗಿ ಬದಲಾಗುವ ರೀತಿ, ಎಲ್ಲ ಜನರೊಂದಿಗೆ ಪ್ರೀತಿ ವಿಶ್ವಾಸದಲ್ಲಿ ಬೆಳೆಯುವ ರೀತಿ, ಶ್ರಮಜೀವನ, ನೀರಿನ ಮಿತಬಳಕೆ, ಒಂದೇ ಒಂದು ಬೀಜದಿಂದ ಒಂದು ಹಿಡಿಯಷ್ಟು ಬೆಳೆಯನ್ನು ತೆಗೆಯುವ ಕಲೆ, ಗಿಡದ ತುಂಬಾ ತುಂಬಿರುವಂತಹ ಹಣ್ಣುಗಳನ್ನು ತೋರಿಸಿ ನೀವು ಕೂಡ ಹೀಗೆ ನಾಲ್ಕು ಜನರಿಗೆ ಉಪಕಾರ ವಾಗುವಂತೆ ಬದುಕಬೇಕೆಂದು ಹೇಳಿಕೊಡಬೇಕಾದ ನೀತಿ ಪಾಠಗಳು ಎಲ್ಲವನ್ನೂ ಹೇಳಿ ಕೊಡಲಿಲ್ಲ ಏಕೆ?  ಇವರುಗಳಿಗೆ ತಮ್ಮ ಪೋಷಕರು ಮಾಡಿದಂತಹ ಕಾರ್ಯ ಮಾದರಿಯಾಗಲಿ ಇಲ್ಲ ಏಕೆ? ಎಂದೆಲ್ಲಾ ಇವರುಗಳಿಗೆ ಪ್ರಶ್ನಿಸಲಾಗುವುದಿಲ್ಲ ಏಕೆಂದರೆ ಈ ರೀತಿಯ ಬದಲಾವಣೆಗಳೆಲ್ಲವೂ ನಿಮಗೋಸ್ಕರ ಎನ್ನುತ್ತಾರೆ.


 ಇಂತಹ ಬದಲಾವಣೆಯ ಬೆಳವಣಿಗೆಗಳು ನಮ್ಮ ಮನೆಗಳಿಗೆ ಅನ್ವಯವಾಗುವಂತೆ ನಮ್ಮ ದೇಶಕ್ಕೂ ಕೂಡ ಅನ್ವಯವಾಗುತ್ತದೆ. ಪ್ರಪಂಚದ ಪುಟ್ಟ ರಾಷ್ಟ್ರಗಳಲ್ಲಿ ಒಂದ್ ಆಗಿರುವಂತಹ, ಜಗತ್ತಿಗೇ ಮಾದರಿಯಾದ, ನಮ್ಮ ದೇಶದ ಗಡಿಗೆ ಹೊಂದಿಕೊಂಡಿರುವ ಪುಟ್ಟರಾಷ್ಟ್ರ ಭೂತಾನ್
 ಈ ಪುಟ್ಟ ರಾಷ್ಟ್ರದಿಂದ ನಾವು ಕಲಿಯಬೇಕಾಗಿರುವುದು ಬಹಳಷ್ಟಿದೆ ಅವುಗಳಲ್ಲಿ ಮುಖ್ಯವಾದವುಗಳೆಂದರೆ

1.ನಿಸರ್ಗ ಸ್ನೇಹಿ ಜೀವನ: ದೇಶದ %71 ಭೂಭಾಗ  ಹಸಿರಿನಿಂದ ಕಂಗೊಳಿಸುತ್ತಿದೆ.

2.ಪ್ರಪಂಚದ ಮೊದಲ Corbon negative ರಾಷ್ಟ್ರವಾಗಿದೆ.

3. ಮಹಿಳೆಯರಿಗೆ ಸಮಾನ ಗೌರವ ಹಾಗೂ ಸ್ಥಾನಮಾನಗಳನ್ನು ನೀಡಲಾಗಿದೆ.

4.400 ವರ್ಷಗಳ ಇತಿಹಾಸವುಳ್ಳ ವೇಷಭೂಷಣವನ್ನು ಇಂದಿಗೂ ಪಾಲಿಸುತ್ತಿದೆ.

5.ರಾಸಾಯನಿಕ ಕೃಷಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

6.ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ವಸತಿ ಸೌಕರ್ಯವನ್ನು ಒದಗಿಸಲಾಗಿದೆ.

7.ಪ್ರಪಂಚದ ಮೊದಲ ತಂಬಾಕು ಬೆಳೆ ನಿಷೇಧಿಸಿದ ರಾಷ್ಟ್ರವಾಗಿದೆ.

8.ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ತನ್ನ ದೇಶದ ಜನರ ಸಂತೋಷವನ್ನು ಅಳೆಯುವ ಸಮಿತಿಯನ್ನು ಕಾರ್ಯರೂಪಕ್ಕೆ ತಂದಿದೆ[GNH:Gross national happyness committee]

9.ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ Decorationಗಳನ್ನು ತಮ್ಮ ಸಂಸ್ಕೃತಿಗೆತಕ್ಕ ಹಾಗೆ ತಾವೇ ಮಾಡಿಕೊಳ್ಳುತ್ತಾರೆ.

10.ಒಂದೇ ಒಂದು Traffic signalಗಳಿಲ್ಲದ ರಾಷ್ಟ್ರವಾಗಿದೆ.

 ಈರೀತಿ ಅರ್ಥಪೂರ್ಣ ಜೀವನವನ್ನು ನಡೆಸು ತ್ತಿರುವ ರಾಷ್ಟ್ರ ನಮಗಿಂದು ಮಾದರಿಯಾಗಬೇಕಿದೆ. ನಮ್ಮ ಸರ್ಕಾರಗಳ ಪರಿಸ್ಥಿತಿಗಳು ನಮಗೆ ಚೆನ್ನಾಗಿ ತಿಳಿದಿದೆ. ಇಂತಹ ಸಂದರ್ಭದಲ್ಲಿ ಈ ಮಾದರಿಗಳನ್ನು ದೇಶಕ್ಕೆ ಅಳವಡಿಸಿಕೊಳ್ಳಲಾಗಿದೆ ಇದ್ದಾಗ, ನಾವೆಲ್ಲರೂ ಇಂತಹ ಆಯ್ಕೆಗಳನ್ನು ನಮ್ಮ ಮನೆಗಳಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಮರಳಿ ಮಣ್ಣಿಗೆ ಹಿಂತಿರುಗಿದ್ದೆ ಆದಲ್ಲಿ ನಮ್ಮ ದೇಶವು ಕೂಡ ಭೂತಾನ್ ರಾಷ್ಟ್ರದಂತೆ ಜಗತ್ತಿಗೆ ಮಾದರಿಯಾಗುತ್ತದೆ.
     

Friday, May 1, 2020

ಯಾರು ಹೆಚ್ಚು ಬುದ್ಧಿವಂತರು?


                                         - ಎಸ್. ಪಿ. ತೇಜರಾಜು.

  
         

  ಬದಲಾವಣೆ ಜಗದ ನಿಯಮ ಹೀಗೆ ನಮ್ಮ ಸುತ್ತಮುತ್ತಲ ಆಗುತ್ತಿರುವ ಬದಲಾವಣೆಗಳೊಂದಿಗೆ ನಾವೆಲ್ಲರೂ  ಬೆರೆತುಕೊಂಡಿದ್ದೇವೆ ಆದರೆ ಈ ಬದಲಾವಣೆಗಳಿಂದ ನಮ್ಮಲ್ಲಿ ಆದಂತಹ ಬದಲಾವಣೆಗಳನ್ನು ಗುರುತಿಸುವುದರಲ್ಲಿ ನಾವು ಸೋತಿದ್ದೇವೆ. ಟೆಕ್ನಾಲಜಿ ಎಂಬ  ಈ ಯುಗದಲ್ಲಿ ನಾವೆಲ್ಲರೂ ಮುಳುಗಿಹೋಗಿದೆ. ಮೊಬೈಲೇ ಪ್ರಪಂಚ ಇಂಟರ್ನೆಟ ಜೀವವಾಗಿದೆ. ಇಂದಿನ ದಿನದ ಇಂಟರ್ನೆಟ್ ಮುಗಿದು ಹೋಯಿತಲ್ಲ ಎಂದೆ ತಲೆ ಕೆಡಿಸಿಕೊಳ್ಳುತ್ತಿದ್ದೇವೆ.

 ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ನಮ್ಮ ಸನಾತನ ಸಂಸ್ಕೃತಿಯನ್ನು ಬೇರೆ ದೇಶಗಳು ಅಳವಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನಾವು ನಮಗೆ ತಿಳಿಯದ ಹಾಗೆ ವಿದೇಶಿ ಸಂಸ್ಕೃತಿಗೆ ಒಗ್ಗಿಕೊಂಡಿದ್ದೇವೆ. ನಮ್ಮ ಪೂರ್ವಜರು ಅನುಸರಿಸುತ್ತಿದ್ದಂತಹ ಈ ಸನಾತನ ಸಂಸ್ಕೃತಿಯು ವಿಶಿಷ್ಟ ಸ್ಥಾನಮಾನಗಳನ್ನು ಪಡೆಯಲು ಮುಖ್ಯವಾದ ವಿಷಯವೆಂದರೆ ನಿಸರ್ಗ ಸ್ನೇಹಿ ಜೀವನ ಹಾಗೂ ಅವರ ಅಪಾರ ಅನುಭವದ ಜ್ಞಾನಭಂಡಾರ.

 ಈ ನಿಸರ್ಗ ಸ್ನೇಹಿ ಜೀವನ ಬಹಳಷ್ಟು ಸ್ವಾರಸ್ಯಮಯವಾಗಿರಲು ಮುಖ್ಯ ಕಾರಣಗಳೆಂದರೆ:

1. ನಮ್ಮ ಪೂರ್ವಜರು ಮನೆಗಳನ್ನು ಮಣ್ಣಿನ ಗೋಡೆಗಳಿಂದ ಕಟ್ಟುತ್ತಿದ್ದರು ಹಾಗೂ ಇದಕ್ಕೆ ಬಳಸುತ್ತಿದಂತಹ ಹೆಂಚುಗಳನ್ನು ಕೂಡ ಮಣ್ಣಿನಿಂದಲೇ ತಯಾರಾಗುತ್ತಿತ್ತು ತಾನೊಬ್ಬನೇ ಮನೆಯಲ್ಲಿ  ವಾಸಿಸದೇ ಗುಬ್ಬಚ್ಚಿಗಳಂತಹ ಸಣ್ಣಪುಟ್ಟ ಪಕ್ಷಿಗಳಿಗೂ ಆಸರೆಯನ್ನು ನೀಡಿದ್ದರು.

2. ಮನೆಯ ಅಲಂಕಾರಕ್ಕಾಗಿ ನಿಸರ್ಗ ಸ್ನೇಹಿ ಬಣ್ಣಗಳನ್ನು ಉಪಯೋಗಿಸುತ್ತಿದ್ದರು.

3. ತನ್ನೆಲ್ಲಾ ಗೃಹ ಹಾಗೂ ಕೃಷಿ ಕೆಲಸಗಳಿಗೆ  ಬಿದುರಿನ ಬುಟ್ಟಿಗಳನ್ನು ಉಪಯೋಗಿಸುತ್ತಿದ್ದರು.

4. ಗಿಡಮೂಲಿಕೆ ಸಸ್ಯಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದು ತನಗಾದಂತಹ ಸಣ್ಣಪುಟ್ಟ ಕಾಯಿಲೆಗಳಿಗೆ ಗಿಡದ ಬೇರನ್ನು ಅಥವಾ ಸೊಪ್ಪಿನ ಕಷಾಯ ಮಾಡಿ ಕುಡಿಯುತ್ತಿದ್ದರು, ತರಚಿದ ಗಾಯಗಳಿಗೆ  ತುಂಬೆ ರಸವನ್ನು ಸವಾರಿ ಗಾಯವನ್ನು  ಗುಣಪಡಿಸಿಕೊಳ್ಳುತ್ತಿದ್ದರು.

5. ಪ್ರತಿಯೊಬ್ಬರೂ ನದಿಯಲ್ಲಿ ಸ್ನಾನ ಮಾಡುತ್ತಿದ್ದರಿಂದ ಈಜುವುದನ್ನು ಕಲಿತಿದ್ದರು, ವಿಧವಿಧವಾದಂತಹ ಮೀನುಗಳ ಪ್ರಭೇದಗಳನ್ನು ಗುರುತು ಹಿಡಿಯುತ್ತಿದ್ದರು, ನೀರಿನಲ್ಲಿ ಮುಳುಗಿ ಪ್ರಾಣಾಪಾಯದಲ್ಲಿರುವವರನ್ನು ರಕ್ಷಿಸುತ್ತಿದ್ದರು, ಕೆಲವು ಸಂದರ್ಭಗಳಲ್ಲಿ ಪಕ್ಕದ ಊರುಗಳಿಗೆ ನದಿಯಲ್ಲಿ ಈಜಿ ತಲುಪುತ್ತಿದ್ದರು ಹಾಗೂ ಸ್ನಾನಕ್ಕೆ ಅಂಟುವಾಳದ ಬೀಜಗಳನ್ನು ನೈಸರ್ಗಿಕ ಸಾಬೂನು ಗಳನ್ನಾಗಿ ಉಪಯೋಗಿಸುತ್ತಿದ್ದರು.

6. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಮರ ಹತ್ತುವುದನ್ನು ಕಲಿತಿದ್ದರು ತನಗೆ ಬೇಕಾದಂತಹ ಹಣ್ಣುಗಳನ್ನು ಮರದಿಂದಲೇ ಕಿತ್ತು ತಿನ್ನುತ್ತಿದ್ದರು.

7. ಜೇನಿನ ವಿಧಗಳು ಹಾಗೂ ಅವುಗಳ ಚಲನವಲನಗಳನ್ನು ಗುರುತಿಸಿ ಜೇನುತುಪ್ಪವನ್ನು ಬಿಡಿಸುವಂತಹ ಕಲೆಯನ್ನು ಅರಿತಿದ್ದರು.

8. ರಾತ್ರಿಯ ಬೆಳಕಿಗಾಗಿ ಎಣ್ಣೆ ದೀಪಗಳನ್ನು ಬಳಸುತ್ತಿದ್ದರು.

9. ತನ್ನ ಪ್ರಯಾಣ ಸುಖಮಯವಾಗಿರಲಿ ಎಂದು ಹಾದಿಯುದ್ದಕ್ಕೂ ಮರಗಳನ್ನು ಬೆಳೆಸಿದ್ದರು, ದೂರದ ಊರುಗಳಿಗೆ  ನಡಿಗೆಯಲೋ, ಎತ್ತಿನ ಗಾಡಿಯಲೋ, ಸೈಕಲ್ನನಲ್ಲೂ ಸಂಚರಿಸುತ್ತಿದ್ದರಿಂದ ಆರೋಗ್ಯವಂತರಾಗಿದ್ದರು.

10. ಕಾಡುಗಳಲ್ಲಿ ಸಂಚರಿಸುವಾಗ ಪ್ರಾಣಿಗಳಿಂದ ಆಗಬಹುದಾದಂತಹ ಅಪಾಯಗಳಿಂದ ತಪ್ಪಿಸಿಕೊಳ್ಳುವ ಕಲೆಯನ್ನು ಕಲಿತಿದ್ದರೂ.

11. ಉರುವಲಿಗಾಗಿ ಕಾಡುಗಳಲ್ಲಿ ಬಿದ್ದಂತಹ ಮರವನ್ನು ಉಪಯೋಗಿಸುತ್ತಿದ್ದರು.

12. ಮನೆಯ ಹೊರಾಂಗಣವನ್ನು ಸಗಣಿಯಲ್ಲಿ ಸಾಯಿಸುತ್ತಿದ್ದರಿಂದ ಮನೆಯೊಳಗೆ ಬರುತ್ತಿದ್ದಂತಹ ಕ್ರಿಮಿಕೀಟಗಳು  ನಿಯಂತ್ರಣದಲ್ಲಿದ್ದವು.

13. ತನ್ನ ಘನ ಪರಂಪರೆ ಸಂಸ್ಕೃತಿಗೆ ಹೆಚ್ಚು ಗೌರವ ಕೊಡುತ್ತಿದ್ದರು.

14. ಭೂಮಿತಾಯಿಯನ್ನು ಸಂಪೂರ್ಣವಾಗಿ ನಂಬಿದ್ದರು ತನಗೆ ಬೇಕಾದಂತಹ ಬೆಳೆಗಳನ್ನು ತಾನೇ ಬೆಳೆದುಕೊಂಡು ಹೆಚ್ಚಾಗಿದ್ದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದರು.

15. ಪೌಷ್ಟಿಕ ಆಹಾರ ಸೇವನೆಯಿಂದ ಹೆಚ್ಚು  ಸದೃಢ ರಾಗಿದ್ದರು.

16. ಆಹಾರ ತಯಾರಿಕೆಗೆ ಮಣ್ಣಿನ ಪಾತ್ರೆಗಳು, ಜಾಡಿಗಳು,ಪಿಂಗಾಣಿಯನ್ನುಉಪಯೋಗಿಸುತ್ತಿದ್ದರು ಪಾತ್ರೆಗಳನ್ನು ತೊಳೆಯಲು  ಬೂದಿಯನ್ನು ಉಪಯೋಗಿಸುತ್ತಿದ್ದರು.

17. ಭೋಜನಕ್ಕೆ ಬಾಳೆ ಎಲೆಗಳನ್ನು ಉಪಯೋಗಿಸುತ್ತಿದ್ದರು.

18. ತಾನು ವಾಸಿಸುತ್ತಿದ್ದ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಗೌರವ ಸಂಪಾದಿಸಿದ್ದರು.

19. ಮನೋರಂಜನೆಗೆ ಭಜನೆ, ಜಾತ್ರೆ, ಪ್ರವಚನ, ಕಂಸಾಳೆ, ಕಂಬಳ, ಭೂತರಧನೆ, ಪೂಜಾಕುಣಿತ, ಹುಲಿವೇಷ, ವೀರಗಾಸೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿದ್ದರು.

20. ಕಾಲಗಣನೆಗೆ ಜ್ಯೋತಿಷ್ಯಶಾಸ್ತ್ರದ ಪಂಚಾಂಗವನ್ನು ತಿಳಿದಿದ್ದರೂ ಹಾಗೂ ಸೂರ್ಯನನ್ನು ನೋಡಿ ಸಮಯವನ್ನು ನಿರ್ಧರಿಸುತ್ತಿದ್ದರು.

21. ಕೃಷಿಗಾಗಿ ಮಳೆನೀರು,ನದಿ,ಕೆರೆ,ಅಥವಾ ತೆರೆದ ಬಾವಿಗಳನ್ನು ಮಾತ್ರ ಉಪಯೋಗಿಸುತ್ತಿದ್ದರು.

22. ಸಂತೋಷವೇ ಜೀವನದ ಪರಮಾಸ್ತಿಎಂಬ ಮೂಲ ಮಂತ್ರವನ್ನು ಅರಿತಿದ್ದರು.

23. ಎಲ್ಲಿಯೂ ತಪ್ಪು ಹಾದಿಯನ್ನು ತುಳಿಯದೆ ಗುರು ಹಿರಿಯರ ಮಾರ್ಗದರ್ಶನದಲ್ಲಿ ಸಂಸ್ಕಾರವಂತ ಜೀವನವನ್ನು ನಡೆಸುತ್ತಿದ್ದರು.

24.ಅತಿಥಿ ದೇವೋಭವ ಎಂಬಂತೆ ಅತಿಥಿಗಳಲ್ಲಿ ದೇವರನ್ನು ಕಾಣುತ್ತಿದ್ದರು ದೂರದೂರುಗಳಿಂದ ಬಂದ ಅತಿಥಿಗಳ ಯೋಗಕ್ಷೇಮ,ಊಟೋಪಚಾರ, ನೋಡಿಕೊಳ್ಳುತ್ತಿದ್ದರು.

25. ಕುಳಿತು ಓದದೇ ಇದ್ದರೂ ಕೂಡ ಕಾವ್ಯ ಪರಿಣತರಂತೆ ಜಾನಪದ ಹಾಡುಗಳನ್ನು ಹೆಣೆಯುವ ಕಲೆಯನ್ನು ಕಲಿತಿದ್ದರೂ.

26. ಕೊನೆಯವರೆಗೂ ಕೂಡ ಆಡಂಬರವಿಲ್ಲದ ಜೀವನವನ್ನು ನಡೆಸಿ ಉಸಿರು ನಿಂತ ಮೇಲು ಮಣ್ಣಲ್ಲಿ ಮಣ್ಣಾಗುವುದು ಮೂಲಕ ಪರಿಸರಸ್ನೇಹಿ ಯಾಗಿದ್ದರು.

 ಈ ರೀತಿ ನಮ್ಮ ಪೂರ್ವಜರ ನಿಸರ್ಗ ಸ್ನೇಹಿ ಜೀವನದ ಹಿಂದಿನ ರಹಸ್ಯ ಅವರ ತಾಳ್ಮೆ ಹಾಗೂ ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸುವ ಕಲೆಯಲ್ಲದೆ ಮತ್ತೇನು? ಇವರೇನು ನಮ್ಮ ಹಾಗೆ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದವರೇ? ಹಾಗಾದರೆ ಈಗ ಹೇಳಿ ಯಾರು ಹೆಚ್ಚು ಬುದ್ಧಿವಂತರು??????