Saturday, November 14, 2020

                                                            -  ಎಸ್ ಪಿ ತೇಜರಾಜು.

 ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಕತ್ತಲರಿದು ಬೆಳಕು ಮೂಡಿ ಜಗದ ಜೀವಕೋಟಿಗೆ 

ಪುಷ್ಟಿ ನೀಡಿದ ಸೂರ್ಯ ತೇಜ ಪ್ರಕರತೆಯನ್ನು 

ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವವರು?


ಬೆಳಕು ಮೂಡಿದ ಖುಷಿಗೆ ಚಂದದಿ ನಲಿದು ರೆಕ್ಕೆ ಬಡಿದು

 ಆಗಸವೇರಲು ಚಿಲಿಪಿಲಿ ಗುಟ್ಟಿದ ಪಕ್ಷಿಗಳ ಇಂಚರವನ್ನು

 ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಇರುವೆಯಿಂದಿಡಿದು ಗಜಾನನ ಮರಿಯವರೆಗೆ

 ಗುಟುಕು ನೀಡಿ ಚಂದದಿ ನಲಿವ ತೀರ್ಯಜಂತುಗಳ ಆನಂದವನ್ನು

 ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಝೇಂಕಾರ ಮೊಳಗಿಸಿ ವೃಕ್ಷದ ಪ್ರತಿ ಪುಷ್ಪಗಳ ಮಕರಂದವೀರಿ 

ಹೂವು ಹಣ್ಣಾಗುವಂತೆ ಮಾಡಿದ ಜೇನು,ದುಂಬಿಯ ಪ್ರತಿಫಲಾಪೇಕ್ಷೆಯಿಲ್ಲದ ಕಾಯಕವನ್ನು

 ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಆಗಸ ಮುಟ್ಟುವ ಭರದಲ್ಲಿ ನಾಮುಂದು ತಾಮುಂದೆ ಎಂಬಂತೆ

 ಚೈತನ್ಯದಿ ನಲಿದು ದೈತ್ಯ ಮರವಾಗಿ ಬೆಳೆಯುವ ವೃಕ್ಷಗಳ ಪೈಪೋಟಿಯನ್ನು

ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಕಾಡಿನಲ್ಲಿ ಅಲೆದು ಬೆಟ್ಟದ ತುತ್ತ ತುದಿಯನೇರಿ 

ದೂರದಿ ಘರ್ಜಿಸಿದ ಆನೆ, ಸಿಂಹ, ಕರಡಿಯ ಶಬ್ದವನ್ನು

 ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಸೂರ್ಯನ ಪ್ರಖರತೆಗೆ ಗಿಡಮರಗಳ ಎಲೆಗಳೆಲ್ಲ

 ಹಣ್ಣಾಗಿ ಉದುರಿ ಭೂಮಿ ಒಣಗಿರೆ, ಬಿದ್ದ ಮೊದಲ ಮಳೆಗೆ ಮಣ್ಣಿನಿಂದ ಹೊರಬಂದ

 ಆ ಮಣ್ಣ ಸುವಾಸನೆಯನ್ನು ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಭೋರ್ಗರೆದು ಜಲಪಾತದಲ್ಲಿ ಧುಮ್ಮಿಕ್ಕಿ ನದಿ ತೊರೆ ಝರಿಗಳಾಗಿ ಹರಿದು

 ಆಮೆ, ಮೀನು, ಮಂಡುಕಗಳಿಗೆ ಆಶ್ರಯ ನೀಡಿ, ಸಮುದ್ರ ಸೇರುವ ನದಿಗಳ ಹಂಬಲವನ್ನು 

ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಹಗಲು ಉರುಳಿ ಕತ್ತಲಾವರಿಸಿ ತನ್ನ ಶಾಂತ ಬೆಳಕಿನಡಿ

 ಪ್ರಶಾಂತತೆ ನೀಡಿದ ಪೂರ್ಣಚಂದ್ರನ ಪ್ರಭಾವಳಿಯನ್ನು

 ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಬಡವನಾಗಿರಲಿ ಬಲ್ಲಿದನಾಗಿರಲಿ ಬಂಗಲೆ ಉಳ್ಳವನಾಗಿರಲ್ಲಿ ಗುಡಿಸಲು ಉಳ್ಳವನಾಗಿರಲಿ 

ಪ್ರತಿ ಮನೆ ಮನದಲ್ಲಿಯೂ ಅಜ್ಞಾನದಿಂದ ಜ್ಞಾನದೆಡೆಗೆ ಬೆಳಕುಚೆಲ್ಲುವ ದೀಪಾವಳಿಯ ಸೊಬಗನ್ನು

 ನಾ ಆಸ್ವಾದಿಸಿದ್ದೀರಿ ಇನ್ನಾರು ಆಸ್ವಾದಿಸುವವರು?


 ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.