Thursday, November 3, 2022

ನಾನು ಯಾರು ?

                                  


 ನಾನು ನಿಮ್ಮೊಳಗೊಬ್ಬ ಶ್ರೀಸಾಮಾನ್ಯ, ಬಾಲ್ಯದಿಂದಲೂ ಇದ್ದ ಒಂದು ಸಣ್ಣ ಬರವಣಿಗೆಯಂಬ ಬಯಕೆಗೆ ಲಾಗ್ದೌನ್ ಮುನ್ನಡಿಯನ್ನು ಹಾಡಿತು, ಅಲ್ಲಿಂದ ಪ್ರಾರಂಭವಾದ ಪುಟ್ಟ ಪಯಣ ಇಂದು ಐವತ್ತು ಅಂಕಗಳು ಪ್ರಕಟಗೊಂಡಿದೆ ಎಂಬ ವಿಷಯ ನನಗೂ ಕೂಡ ನಿಜಕ್ಕೂ ಆಶ್ಚರ್ಯವೆನಿಸುತ್ತದೆ.

ಓದಿ ಬೆಳೆದದ್ದೆಲ್ಲ ಮೈಸೂರಿನಲ್ಲಿ, ಮೈಸೂರು ವಿಶ್ವವಿದ್ಯಾನಿಲಯದ ಗಂಗೋತ್ರಿಯಲ್ಲಿ, ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತರ ಪದವಿಯನ್ನು ಗಳಿಸಿ, ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದವನು, ಕ್ಷಮಿಸಿ ಇಲ್ಲಿ ಹೆಚ್ಚಿನದಾಗಿ ನನ್ನ ಬಗ್ಗೆ ಹೇಳುವುದಕ್ಕಿಂತ ಅಂಕಣ ಬೆಳೆದು ಬಂದ ಹಾದಿಯನ್ನ ಹೇಳಲಿಕ್ಕೆ ನನಗೆ ಬಹಳ ಸಂತೋಷವೆನಿಸುತ್ತದೆ.

ಬಾಲ್ಯದಿಂದಲೂ ಕನ್ನಡ ಪುಸ್ತಕಗಳನ್ನು ಓದಿದ ಹವ್ಯಾಸ, ಅಂಕಣ ಬರವಣಿಗೆಗೆ ಮೂಲ ಕಾರಣ, ಮೊದಲಂತೂ ಪ್ರಥಮ ಅಂಕಣ ಪ್ರಕಟಗೊಳ್ಳುವ ಪೂರ್ವದಲ್ಲಿ ನಾನು ಬರೆದ ಅಂಕಣವನ್ನೇ 100 ಬಾರಿ ಓದಿ, ಒಂದಷ್ಟು ಸ್ನೇಹಿತರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಚರ್ಚಿಸಿ ಆನಂತರ ಪ್ರಕಟಿಸಲಾಗಿತ್ತು, ಅಂಕಣಗಳನ್ನು ಬರೆಯುವ ಮೂಲ ಉದ್ದೇಶ ಪ್ರಕೃತಿ ಹಾಗೂ ನಿಸರ್ಗದಲ್ಲಿ ಅಡಕವಾಗಿರುವ ಕೌತುಕಗಳನ್ನು ತಿಳಿಯುವುದು, ಈ ಸಾಲಿನಲ್ಲಿಯ ನಾವು ದಾಪುಗಾಲನ್ನಿಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.

ಅಂಕಣದ ತಿರುಳು :

ಅಂಕಣಗಳನ್ನು ಬರೆದೆ ಎಂದು ಹೇಳಿಕೊಳ್ಳುವುದಕ್ಕಿಂತ ಇದರಿಂದ ನಾನು ಕಲಿತದ್ದೇ ಹೆಚ್ಚು, ಒಂದು ಅಂಕಣ ಪರಿಪೂರ್ಣತೆಯನ್ನು ಪಡೆಯಬೇಕು ಅಥವಾ ಚಂದವಾಗಿ ಹೊರಹೊಮ್ಮಬೇಕೆಂದಾಗ ಹತ್ತಾರು ಅಂಶಗಳನ್ನು / ಆಯಾಮಗಳನ್ನು ಪರಿಗಣಿಸಬೇಕಾಗುತ್ತದೆ.

1 ಅಂಕಣ ಬರಹಗಾರನಿಗಿಂತ ಓದುಗನಿಗೆ ಹೆಚ್ಚು ಆತ್ಮೀಯವೆನಿಸಬೇಕು,

2 ಅಂಕಣದ ಪೀಠಿಕೆ ಅಂತಿಮಕ್ಕೆ ನೇರ ಸಂಬಂಧವನ್ನು ಹೊಂದಿರಬೇಕು.

3 ಅಂಕಣದ ವಿಷಯ ವೈವಿಧ್ಯಮಯವಾಗಿರಬೇಕು,

4 ಅಂಕಣದ ಪದಬಳಕೆ ಸುಲಭವಾಗಿದ್ದು ಎಲ್ಲರಿಗೂ ಅರ್ಥವಾಗುವಂತಿರಬೇಕು,

5 ಅಂಕಣದಲ್ಲಿ ಬಳಸಿರುವ ಚಿತ್ರಗಳು ಅಂಕಣಕ್ಕೆ ಪೂರಕವಾಗಿರಬೇಕು,

6 ಅಂಕಣದ ವ್ಯಾಕರಣ ಸ್ಪಷ್ಟವಾಗಿರಬೇಕು,

7 ಓದುವ ಮಧ್ಯದಲ್ಲಿ ಬೇಸರವೆನಿಸಬಾರದು,

8 ಅಂಕಣದ ಆಳ ಅಗಲ ಒಂದು ಪರಿದಿಯಲ್ಲಿರಬೇಕು,

9 ಅಂಕಣ ಓದುಗರಿಗೆ ಮುಜುಗರವೆನಿಸಬಾರದು,

10 ಅಂಕಣ ಪುರಾವೆಯನ್ನುಳಗೊಡು, ಸತ್ಯತೆಯಿಂದ ಕೂಡಿರಬೇಕು.

ಇದರೊಂದಿಗೆ ಮತ್ತಷ್ಟು ನಾನ ವಿಷಯಗಳನ್ನು ಬರಹಗಾರ ನೆನಪಿಟ್ಟುಕೊಂಡು ಬರವಣಿಗೆಗೆ ಮುಂದಾದಾಗ ಸುದೀರ್ಘ ಸಮಯವನ್ನು ತೆಗೆದುಕೊಳ್ಳುತ್ತದೆ, ನನಗಂತೂ ಮೊದಮೊದಲು ಒಂದು ಅಂಕಣವನ್ನು ಬರೆಯಲಿಕ್ಕೆ 10 ದಿನಗಳ ಸಮಯಾಕಾಶ ತೆಗೆದುಕೊಳ್ಳುತ್ತಿತ್ತು ಏಕೆಂದರೆ ನಾನು ಬರೆಯುವ ಅಂಕಣದ ಕ್ರಮ ಈ ಕೆಳಕಂಡಂತಿರುತ್ತದೆ,

ಮೊದಲು ವಿಷಯದ ಆಯ್ಕೆ, ಆನಂತರ ಅದಕ್ಕೆ ಸಂಬಂಧಪಟ್ಟ ವೈವಿಧ್ಯಮಯ ವಿಷಯ ಹಾಗೂ ಚಿತ್ರಗಳನ್ನು ಕಲೆ ಹಾಕುವುದು, ಈ ವಿಷಯಗಳನ್ನೆಲ್ಲವನ್ನು ಪೋಣಿಸಿ ಅಂಕಣದ ಅಳತೆಗೆ ಇಳಿಸಿಕೊಳ್ಳುವುದು, ಕ್ರಮೇಣ ಅಂಕಣಕ್ಕೆ ಒಂದು ಸ್ವರೂಪವನ್ನು ಕೊಟ್ಟು ಕರಡು ಪ್ರತಿ ತಯಾರಿಸಿಕೊಳ್ಳುವುದು ಇದಾದ ನಂತರ ಮೂರ್ನಾಲ್ಕು ಬಾರಿ ಅಂಕಣವನ್ನು ಓದಿ ವ್ಯಾಕರಣ, ಸಾಲುಗಳು ಹೆಚ್ಚು ಕಡಿಮೆ ಆಗದಂತೆ ಒಂದಕ್ಕೊಂದು ಪೂರಕವಾಗಿರುವಂತೆ ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು, ಸ್ನೇಹಿತನೊಟ್ಟಿಗೆ ಚರ್ಚಿಸಿ ಆನಂತರ ಅದರಲ್ಲಿ ಮತ್ತಷ್ಟು ವಿಷಯಗಳನ್ನು ಪೋಣಿಸುವುದಾಗಲಿ ತೆಗೆಯುವುದಾಗಲಿ ನೆರವೇರಿಸಿ ಕೊನೆಯದಾಗಿ ಅಂತಿಮ ಪ್ರತಿಯನ್ನು ಮಾಡಿ ಮೂರ್ನಾಲ್ಕು ಬಾರಿ ಓದಿ ಖಚಿತಪಡಿಸಿಕೊಂಡ ನಂತರ ಅಂಕಣ ಪ್ರಕಟಗೊಳ್ಳಲು ಸಿದ್ಧವಾಗುತ್ತದೆ, ಕೊನೆಯದಾಗಿ ಅಂಕಣ ಪ್ರಕಟಗೊಳ್ಳುವ ದಿನ ಮತ್ತೊಮ್ಮೆ ಓದಿ ಖಾತ್ರಿಪಡಿಸಿಕೊಂಡ ನಂತರ ಅಂಕಣ ನಿಮ್ಮ ಕೈ ಸೇರುವುದು.

ಅಂಕಣ ಪ್ರಕಟಗೊಂಡ ಪ್ರಾರಂಭದಿಂದಲೂ ನಿಮ್ಮ ಪ್ರತಿಕ್ರಿಯೆಗಳಿಗೆ ನಾನು ಆಭಾರಿಯಾಗಿದ್ದೇನೆ, ನೀವಿಲ್ಲದಿದ್ದರೆ ಈ ಅಂಕಣಗಳು ಇಷ್ಟೊಂದು ವೈವಿಧ್ಯಮಯವಾಗಿ ಇರುತ್ತಿರಲಿಲ್ಲ ಅದಕ್ಕಾಗಿ ನನ್ನ ಕಡೆಯಿಂದ ನಿಮಗೆ ಅನಂತಾನಂತ ಧನ್ಯವಾದಗಳು.

ನಿಮ್ಮ ಪ್ರೋತ್ಸಾಹದ ಫಲದಿಂದ ಎರಡು ವರ್ಷದ ಸಮಯದಲ್ಲಿ 50 ಅಂಕಣಗಳು ಅದರಲ್ಲಿ 5 ಪುಟ್ಟ ಕವಿತೆಗಳು, NSSಗೆ ಸಂಬಂಧಪಟ್ಟ 3 ಅಂಕಣ, ಪುಸ್ತಕಗಳಿಗೆ, ಮಕ್ಕಳಿಗೆ, ಸಮಯಕ್ಕೆ, ಚಲನಚಿತ್ರಕ್ಕೆ, ಭಾಷೆಗೆ, ಇದರೊಟ್ಟಿಗೆ ಪುಟ್ಟ ಕಾದಂಬರಿ, ಪ್ರವಾಸಿ ಕಥನಗಳು ಹಾಗೂ ಪ್ರಕೃತಿಗೆ ಸಂಬಂಧಪಟ್ಟ ನಾನ ಆಯಾಮಗಳಾದ ಪ್ರಾಣಿ, ಪಕ್ಷಿ, ಹೂಗಳು, ಮೀನುಗಳು, ಮರಗಳು, ನಕ್ಷತ್ರ, ಶಿಲೆ, ಮಣ್ಣು, ಭತ್ತ, ತಾಳೆ, ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿವಿಧ ಮಜಲುಗಳ ಪರಿಸರದ ವಿವಿಧ ಆಯಾಮಗಳ ಪರಿಚಯವನ್ನು ಮಾಡಿಕೊಂಡಿದ್ದೇವೆ.

ನಿಮ್ಮ ಪ್ರೋತ್ಸಾಹ ಹಾಗೂ ಸಲಹೆಗಳು ಹೀಗೆ ಮುಂದುವರೆಯಲಿ, ನಿಮ್ಮೊಳಗೆ ಬಹಳಷ್ಟು ಸ್ನೇಹಿತರು ಈ ಅಂಕಣಗಳನ್ನೆಲ್ಲವನ್ನು ಸೇರಿಸಿದಂತೆ ಒಂದು ಪುಸ್ತಕದ ರೂಪದಲ್ಲಿ ತರಲು ಸಲಹೆಗಳನ್ನು ನೀಡಿದ್ದೀರಿ, ಇದಕ್ಕೆ ಪೂರಕ ಬೆಂಬಲ ಹಾಗೂ ಸಮಯ ನೋಡಿಕೊಂಡು ಪ್ರಕಟಿಸಲು ಪ್ರಯತ್ನ ಪಡುತ್ತೇನೆ, ಮತ್ತಷ್ಟು ಅಂಕಣಗಳನ್ನು  ಬರೆಯಲು ನೀವು ಅಪೇಕ್ಷಿಸಿದ್ದೀರಿ ಈ ನಿಮಿತ್ತ ಈಗಾಗಲೇ ಬಹಳಷ್ಟು ಅಂಕಣಗಳಿಗೆ ಪೀಠಿಕೆಯನ್ನು ನೀಡಿ ಮುಖ್ಯ ಅಂಶಗಳನ್ನು ಕಲೆ ಹಾಕಿದ್ದೇನೆ ಸಮಯ ಮಾಡಿಕೊಂಡು ಅಂಕಣವನ್ನು ಬರೆದು ಅವುಗಳನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ.

ಮತ್ತೊಮ್ಮೆ ಅನಂತಾನಂತ ಧನ್ಯವಾದಗಳು.

ಎಲ್ಲೆಡೆಯೋ ಹಸಿರು ಹೆಚ್ಚಲಿ.

- ಎಸ್ ಪಿ ತೇಜರಾಜು.

Saturday, September 24, 2022

ಸೇವೆಯೆಂಬ ನಿಷ್ಕಲ್ಮಶತೆ.

         


                           ಎಸ್ ಪಿ ತೇಜರಾಜು. 

 ಶಾಲೆಯ ದಿನಗಳಲ್ಲಿ ಎಂದೂ ಫೇಲ್ ಆಗದೆ ಹೋದರು, ಓದುವುದರಲ್ಲಿ ಆರಕ್ಕೇರದ ಮೂರಕ್ಕಿಳಿಯದ ಸಾಧಾರಣ ವಿದ್ಯಾರ್ಥಿಯಾಗಿದ್ದೆ, ತರಗತಿಯ ಇತರ ಹುಡುಗರಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಅಂಕ ಗಳಿಸುತ್ತಿದ್ದರೂ ಗುರುಗಳು ಅಪೇಕ್ಷಿಸುತ್ತಿದ್ದಷ್ಟು ಅಂಕವೇನೋ ಬರುತ್ತಿರಲಿಲ್ಲ, ಈ ಹೈಸ್ಕೂಲ್ ಮೆಟ್ಟಿಲೇರುತ್ತಿದ್ದಂತೆಯೇ ಎಲ್ಲಾ ಹುಡುಗರಿಗೂ ಗಂಟಲು ಓಡೆದು ಮತ್ತಷ್ಟು ಎತ್ತರ ಬೆಳವಣಿಗೆ ಹೊಂದುವಂತೆ ನನ್ನ ಬೆಳವಣಿಗೆಯೂ ಪ್ರಾರಂಭವಾಯಿತು.

ಪ್ರತಿದಿನ ಪ್ರೇಯರ್ ಗೆಂದು ಸಾಲಿನಲ್ಲಿ ನಿಲ್ಲಿಸುವಾಗ 4 ಅಥವಾ 5 ಹುಡುಗರ ಹಿಂದೆ ನಿಲ್ಲುತ್ತಿದ್ದೆ, ನನ್ನ ಹಿಂದೆ ಇನ್ನಷ್ಟು ಎತ್ತರವಿದ್ದ ಹತ್ತಾರು ಹುಡುಗರು ನಿಲ್ಲುತ್ತಿದ್ದರು, ಬಹುಪಾಲು ಈ ರೀತಿಯ ಕುಳ್ಳರದ್ದು ಪ್ರತ್ಯೇಕವಾದ ಗುಂಪು ಇರುವಂತೆ ನಮ್ಮ ಸಂಗಡಿಗದೊಂದು ಗುಂಪು ಇತ್ತು, ಬಹುಪಾಲು ವಿದ್ಯಾರ್ಥಿಗಳು ಶಾಲೆಗೆ ಸೈಕಲ್ ಹೊಡೆದುಕೊಂಡು ಬರುವಂತೆ ನಾವು ಕೂಡ ಸರ್ವತೋಮುಖ ಬೆಳವಣಿಗೆಗೆಂದು (ಆಟ-ಪಾಠ) ಸೈಕಲ್ ಹೊಡೆದದ್ದಾಯ್ತು.

ನಗುವು ಸಹಜ ಧರ್ಮ ಎಂಬ ಡಿವಿಜಿಯವರ ಮಾತಿನಂತೆ ಹೈಸ್ಕೂಲಿನ ಬಹಳಷ್ಟು ದಿನಗಳನ್ನು ನಗುತ್ತಲೇ ಕಳೆದುಬಿಟ್ಟೆ, ಈ ಕಂಪ್ಲೇಂಟ್ ಗಳನ್ನು ಪೋಷಕರಿಗೆ ವರದಿ ಒಪ್ಪಿಸಲೆಂದೇ ಮಾಡುವ ಪೇರೆಂಟ್ಸ್ ಟೀಚರ್ಸ್ ಮೀಟಿಂಗ್ ಮಾತ್ರ ತಪ್ಪದೇ ನಡೆಯುತ್ತಿತ್ತು. ಇದೇ ಸಮಯಕ್ಕೆ ಸರಿಯಾಗಿ ಶಾಲೆಯಲ್ಲಿ ಪ್ರಥಮ ಬಾರಿಗೆ NCC  ಪ್ರಾರಂಭವಾಯಿತು, ಬಹಳಷ್ಟು ಸ್ನೇಹಿತರು ತಮ್ಮ ಹೆಸರನ್ನು ನೊಂದಾಯಿಸಿಕೊಂಡರು, ಆದರೆ ನನಗೆ ಏನಾಯಿತೆಂದು ತೋಚದೆ ನೊಂದಾಯಿಸಿಕೊಳ್ಳದೆ ಸುಮ್ಮನಾಗಿಬಿಟ್ಟೆ.

ಶಾಲೆಯಲ್ಲಿ NCC ಪ್ರಥಮ ಬಾರಿಗೆ ಪ್ರಾರಂಭವಾದ ಖುಷಿಯಲ್ಲಿ ಶಿಬಿರವನ್ನು ನಡೆಸಿದರು, ಶಿಬಿರದಲ್ಲಿ ಭಾಗವಹಿಸಿ ಬಂದ ಸ್ನೇಹಿತರು ಶಿಬಿರದ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರೆ ಮರುಕುವೇನೋ ಹುಟ್ಟಿದರು, ಮುಂದೆ ಅವಕಾಶ ಸಿಕ್ಕರೆ ತಪ್ಪದೇ ಹೋಗೋಣವೆಂದು ನಿರ್ಧರಿಸಿದೆ, ದುರಾದೃಷ್ಟಕ್ಕೆ ಶಾಲೆಯಲ್ಲಿ ಮತ್ತೊಂದು ಶಿಬಿರವನ್ನು ಆಯೋಜಿಸಲು ಇಲ್ಲ.

ಎಸೆಸೆಲ್ಸಿ ಉತ್ತೀರ್ಣನಾದ ಬಳಿಕ, ಹತ್ತಿರದ ಸರಕಾರಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿ ಸೇರಿಕೊಂಡು ತರಗತಿಗಳು ಪ್ರಾರಂಭವಾಗಿದ್ದವು, ಸೀನಿಯರ್ಸ್ ನ ಒತ್ತಾಸೆ ಮೇರೆಗೆ ಕಾಲೇಜಿನಲ್ಲಿ ಪ್ರಥಮ ಬಾರಿಗೆ NSS ಘಟಕವನ್ನು ಪ್ರಾರಂಭಿಸಲಾಯಿತು, ಶಾಲೆಯ ದಿನಗಳಲ್ಲಿ ಅವಕಾಶಗಳಿಂದ ವಂಚಿತವಾಗಿದ್ದ ನನಗೆ ಇದಕ್ಕಾದರೂ ಸೇರಬೇಕೆಂದು ದೃಢನಿರ್ಧಾರವನ್ನು ಮಾಡಿ ಸೇರಿದ್ದಾಯ್ತು.

ನಮ್ಮ ಕನ್ನಡ ಪ್ರಾಧ್ಯಾಪಕರಾಗಿದ್ದಂತಹ ತಿಮ್ಮರಾಜು ಸರ್ ಅವರು ಕಾಲೇಜಿನ NSS ಸಂಯೋಜನಾಧಿಕಾರಿಗಳಾಗಿದ್ದರು, ಮೊದಲು ವಿದ್ಯಾರ್ಥಿಗಳ ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯಿಂದ ಪ್ರಾರಂಭವಾಗಿ, ಶನಿವಾರದಂದು ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳೆಲ್ಲರೂ ಒಂದುಗೂಡಿ ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ ಗಿಡಗಳನ್ನು ತಂದು ನೆಡಲಾಗುತ್ತಿತ್ತು, ಮಧ್ಯವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಶಿಬಿರ ಆಯೋಜಿಸುವಂತೆ ಕೇಳಿಕೊಂಡಿದ್ದರಿಂದ 50 

ವಿದ್ಯಾರ್ಥಿಗಳನ್ನೊಳಗೊಂಡ ಒಂದು ವಾರದ ಶಿಬಿರಕ್ಕೆ ಯೋಜನೆಗಳು ನಡೆದವು, ನೂರಕ್ಕೂ ಅಧಿಕ ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರಿಂದ ಇವರುಗಳಲ್ಲಿ ಯಾರನ್ನು ಕರೆದುಕೊಂಡು ಹೋಗಬೇಕೆಂದು ಮೊದಮೊದಲು ಕಷ್ಟವೆನಿಸಿದರೂ, ಕೊನೆಗೆ ವಿದ್ಯಾರ್ಥಿಗಳ ನಡುವಳಿಕೆ ಆಧಾರದ ಮೇಲೆ ಕರೆದುಕೊಂಡು ಹೋಗುವುದಾಗಿ ನಿರ್ಧರಿಸಿದ್ದಾಯಿತು.

ಅಂತಿಮವಾಗಿ ಶಿಬಿರಕ್ಕೆ ಯೋಜನೆಗಳೆಲ್ಲವೂ ಪ್ರಾರಂಭಗೊಂಡವು, ಶಿಬಿರಕ್ಕೆ ಬೇಕಾದಂತಹ ಉಪಕರಣಗಳನ್ನು ಹೊಸದಾಗಿ ಖರೀದಿಸಿದ್ದಾಯಿತು, ಐವತ್ತು ಜನ ವಿದ್ಯಾರ್ಥಿಗಳ ಪೈಕಿ ಹುಡುಗ-ಹುಡುಗಿಯರಿಗೆ ಸಮಾನ ಅವಕಾಶ ನೀಡಲಾಗಿತ್ತು, ಶಿಬಿರಕ್ಕೆ ಹೊರಡುವ ಸ್ವಲ್ಪ ದಿನಗಳು ಇರುವ ಹಾಗೆ NSS ಸಂಯೋಜನಾಧಿಕಾರಿಗಳೊಂದಿಗೆ ಕಾಲೇಜಿನ ಇತರ ಉಪನ್ಯಾಸಕರು ಶಿಬಿರವನ್ನು ಎಲ್ಲಿ ಆಯೋಜಿಸಲಾಗಿದೆ? ಎಷ್ಟು ದಿನ ನಡೆಯುತ್ತದೆ? ನಾವು ಕೊಂಡಯ್ಯ ಬೇಕಾದಂತಹ ವಸ್ತುಗಳು  ಯಾವುವು? ಊರ ಜನರೊಂದಿಗೆ ನಾವು ಹೇಗೆ ವರ್ತಿಸಬೇಕು? ನಮ್ಮ ಕರ್ತವ್ಯಗಳೇನು? ಜನರಲ್ಲಿ ಅರಿವು ಮೂಡಿಸುವುದು ಹೇಗೆ? ಶಿಬಿರದಲ್ಲಿ ಯಾವ ಯಾವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ? ಪೋಷಕರು ಮಕ್ಕಳನ್ನು ವಿಚಾರಿಸುವುದು ಹೇಗೆ? ಮೊಬೈಲ್ ಗಳನ್ನು ತರಕೂಡದು, ಅಸಭ್ಯವಾಗಿ ವರ್ತಿಸಿದ ವಿದ್ಯಾರ್ಥಿಗಳನ್ನು ನಿರ್ಧಾಕ್ಷಿಣ್ಯವಾಗಿ ಶಿಬಿರದಿಂದ ಹೊರಗೆ ಕಳುಹಿಸಿಕೊಡಲಾಗುತ್ತದೆ, ಗಂಭೀರ ಕಾಯಿಲೆ ಇರುವವರು ಬರಕೂಡದು, ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಬಂದು ಕಳೆದುಕೊಂಡರೆ ಅದಕ್ಕೆ ನೀವೇ ಜವಾಬ್ದಾರರು ಎಂಬಿತ್ಯಾದಿ ಮಾರ್ಗದರ್ಶನವನ್ನು ನೀಡುತ್ತಿದ್ದರು.

ಅಂತಿಮವಾಗಿ ಶಿಬಿರವನ್ನು ದಸರಾದ ರಜದಲ್ಲಿ ಆಯೋಜಿಸಲಾಯಿತು, ಇದಕ್ಕೆಂದು ಸಕಲ ಸಿದ್ಧತೆಗಳು ಭರದಿಂದಲೇ ಸಾಗಿದವು, ಶಿಬಿರಕ್ಕೆ ಹೊರಡುವ ದಿನದಂದು ಎಲ್ಲ ಶಿಬಿರಾರ್ಥಿಗಳು ಕಾಲೇಜಿನ ಆವರಣಕ್ಕೆ ಬಂದು ಸೇರುತ್ತಿದ್ದರು, ಶಿಬಿರಕ್ಕೆ ಬೇಕಾದಂತಹ ಎಲ್ಲ ಉಪಕರಣಗಳನ್ನು ಜೋಡಿಸಿ ಎನಿಸಿಕೊಳ್ಳಲಾಗುತ್ತಿತ್ತು, ಎಲ್ಲರೂ ಬಂದು ಸೇರಿಯೇ ಸ್ವಲ್ಪ ಹೊತ್ತಾದ ಬಳಿಕ ಬಸ್ ಬಂದು ನಿಂತಿತು.

ಗಾತ್ರದಲ್ಲಿ ಚಿಕ್ಕದಾಗಿದ್ದ ಬಸ್ಸನ್ನು ನೋಡಿ ಎಲ್ಲರೂ ದಿಗಿಲುಗೊಂಡರು, ಬಸ್ನ ಹಿಂಭಾಗದಿಂದ ಶಿಬಿರಕ್ಕೆ ಬೇಕಾದಂತಹ ಅಡುಗೆ ಉಪಕರಣಗಳು ಪಾತ್ರೆ  ಪಗಾರಗಳು ಗ್ಯಾಸ್ ಸಿಲಿಂಡರ್ ಇಡಲಾಯಿತು, ಇದಾದ ಬಳಿಕ ಶಿಬಿರಕ್ಕೆ ಬೇಕಾದಂತಹ ಉಪಕರಣಗಳಾದ ಆರೆ, ಗುದ್ದಲಿ, ಮಚ್ಚು, ಪೊರಕೆ ಇತ್ಯಾದಿ ಉಪಕರಣಗಳನ್ನು ತುಂಬಿದ ಬಳಿಕ, ವಿದ್ಯಾರ್ಥಿಗಳ ಲಗೇಜ್ ಗಳನ್ನು ತುಂಬುವುದರೊಳಗಾಗಿ ಬಸ್ನ ನ ಅರ್ಧಬಾಗ ತುಂಬಿಹೋಗಿತ್ತು, ಇದನ್ನೆಲ್ಲಾ ನೋಡುತ್ತಿದ್ದ ಹುಡುಗಿಯರು ಈ ಉಪಕರಣಗಳೊಂದಿಗೆ ಹುಡುಗರು ಮೊದಲು ಹೋಗಿ ತಲುಪಲಿ, ಎರಡನೇ ಟ್ರಿಪ್ನಲ್ಲಿ ನಾವೆಲ್ಲಾ ಬರುತ್ತೇವೆ ಎಂದುಕೊಂಡು ಕುಳಿತಿದ್ದರು, ಹುಡುಗ-ಹುಡುಗಿಯರ ನಡುವೆ ವಾದ ಮುಗಿಲುಮುಟ್ಟಿತಿದ್ದಂತೆ ಗುರುಗಳು ಬಂದು ಎಲ್ಲರನ್ನೂ ಗದರಿಸಿ ಒಂದೇ ಟ್ರಿಪ್ಪಿನಲ್ಲಿ ಎಲ್ಲವೂ ಮುಗಿಯಬೇಕು, ಬರಲಿಕ್ಕೆ ಆಗದೆ ಇರುವವರು ಇಲ್ಲಿಯೇ ಉಳಿಯಬಹುದು ಎನ್ನುತ್ತಿದ್ದಂತೆ ಎಲ್ಲರೂ ತೆಪ್ಪಗಾಗಿ ಬಸ್ಸನ್ನೇರಿದರು.

ಮೊದಲೇ ಅರ್ಧಭಾಗ ತುಂಬಿರುವ ಬಸ್ ನ ಹಿಂಭಾಗದಿಂದ ಎತ್ತರಕ್ಕೆ, ಡುಮ್ಮಗಿರುವ ಹುಡುಗರನ್ನು ಒತ್ತೊತ್ತಾಗಿ ನಿಲ್ಲಿಸಿದ್ದಾತು, ಇದಾದ ಬಳಿಕ ಸಣ್ಣಗೆ ಕುಳ್ಳಗಿದ್ದ ಹುಡುಗರನ್ನು ನಿಲ್ಲಿಸಿದ ಬಳಿಕ, ಉಳಿದ ಸೀಟ್ನಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ಹುಡುಗಿಯರು ಕುಳಿತುಕೊಳ್ಳುವಂತೆ ಹೇಳಿ, ಬಾಗಿಲ ಬಳಿಯವರೆಗೂ ಒತ್ತೊತ್ತಾಗಿ ತುಂಬಿಸಿ, ಒಬ್ಬ ಶಿಕ್ಷಕರಿಗೂ ಅದರಲ್ಲಿ ಜಾಗ ಮಾಡಿಕೊಟ್ಟು, ಡ್ರೈವರ್ ನ ಬಳಿ ಎಲ್ಲರನ್ನೂ ಸೌಖ್ಯವಾಗಿ ಶಿಬಿರದ ಶಾಲೆಯ ಬಳಿ ಕರೆದುಕೊಂಡು ಬರುವಂತೆ  ಹೇಳಿದ್ದಾಯಿತು. ಮೊದಲೇ ವಯಸ್ಸಾದ ಗಾಡಿಗೆ ತುಂಬು ಬಸರಿಯ ಹಾಗೆ ಒಳಗೆ ತುಂಬಿಸಿ, ಬಾರ ಹೊರಲಾಗದ ಸ್ಥಿತಿಯಲ್ಲಿ ಎಲ್ಲರನ್ನೂ ತುಂಬಿಕೊಂಡು ಮತ್ತಷ್ಟು ಶಬ್ದವನ್ನು ಮಾಡುತ್ತಾ, ಯಥೇಚ್ಛವಾದ ಗಾಢ ಹೊಗೆಯನ್ನು  ಹೊರಸೂಸುತ, ನಿಧಾನವಾಗಿ ಮುನ್ನಡೆಯುತ್ತಿತ್ತು, ಬಸ್ ಎಡ-ಬಲ ರಸ್ತೆಗಳಲ್ಲಿ ತಿರುಗಿ, ವಾಹನಗಳ ಹಿಂದೆ ವೇಗವಾಗಿ ಚಲಿಸಿ, ಸಡನ್ನಾಗಿ ಬ್ರೇಕ್ ಆಕಿ, ಒಬ್ಬರ ಮುಖ ಇನ್ನೊಬ್ಬರು ಮುಖಕ್ಕೆ ಚೆಚ್ಚಿ, ಚೀರಿ ಆಕ್ರಂದಿಸುತ್ತಾ ವಿದ್ಯಾರ್ಥಿಗಳು ಸುಮ್ಮನಾಗಿ, ಮತ್ತೆಲ್ಲೂ ಹಾರಿಸಿದ  ಹಂಸ್ ನಿಂದಾಗಿ ಹುಡುಗರು ಇನ್ನೊಬ್ಬರ ಮೇಲೆ ಬಿದ್ದು ಎದ್ದು ಸಮಾಧಾನ ತಂದುಕೊಂಡ ಬಳಿಕ ಬಸ್ ನಗರವನ್ನು ದಾಟಿ ಶಿಬಿರದ ಹಳ್ಳಿಯನ್ನು ತಲುಪಿತು.

ಶಿಬಿರವನ್ನು ಮೈಸೂರಿನ ಪಕ್ಕದಲ್ಲಿರುವ ಕೇರ್ಗಳ್ಳಿಯ ರಾಮನಹುಂಡಿ ಶಾಲೆಯಲ್ಲಿ ಆಯೋಜಿಸಲಾಗಿತ್ತು, ಬಸ್ ಬಂದು ತಲುಪಿದ ಬಳಿಕ ಒಬ್ಬೊಬ್ಬರೇ ನಿಧಾನವಾಗಿ ಇಳಿದು ತಮ್ಮ ಲಗೇಜುಗಳನ್ನು ತೆಗೆದುಕೊಂಡು ಒಂದು ಕಡೆ ಕುಳಿತು ಸಮಾಧಾನ ಪಟ್ಟುಕೊಳ್ಳುತ್ತಿದ್ದರು, ಒಂದರ್ಧ ಗಂಟೆ ಒಳಗಾಗಿ ಎಲ್ಲರೂ ವೇದಿಕೆ ಮುಂಬಾಗದಲ್ಲಿ ಬಂದು ನಿಂತ ಬಳಿಕ 5 ಹುಡುಗರು 5 ಹುಡುಗಿಯರನ್ನು ಒಳಗೊಂಡ ಹತ್ತು ಜನರ ಐದು ಗುಂಪುಗಳಾಗಿ ಪ್ರತ್ಯೇಕಗೊಳಿಸಿ, ಪ್ರತಿ ಗುಂಪಿಗೆ ನಾಯಕನನ್ನು ನೇಮಿಸಿ, ಅವುಗಳಿಗೆ ತಮ್ಮದೇ ಆದಂತಹ ಹೆಸರುಗಳನ್ನು ಇಟ್ಟುಕೊಳ್ಳಬಹುದು ಎಂದು ಹೇಳಿ ಆದ ನಂತರ ಕೆಲ ಮಾಹಿತಿಗಳನ್ನು ಕೊಡಲಾರಂಭಿಸಿದರು,


1. ಶ್ರಮದಾನದ ಸಮಯದಲ್ಲಿ ಮಾತ್ರ ಶಾಲೆಯ ಆವರಣವನ್ನು ದಾಟಬೇಕೆಹೊರತು ಕಾರಣವಿಲ್ಲದೆ ಹೊರಗೆ ಹೋಗಬಾರದು.

2. ಊರ ಪಕ್ಕಪಕ್ಕದಲ್ಲಿ ಕೆರೆ ಬಾವಿ ಇದೆಯೆಂದು  ಹುಡುಕಿಕೊಂಡು ಹೋಗುವಂತಿಲ್ಲ.

3. ಬೆಳಿಗ್ಗೆ ಐದು ಗಂಟೆಗೆ ಎದ್ದು ತಮ್ಮ ನಿತ್ಯಕರ್ಮಗಳನ್ನು ಮುಗಿಸಿ ಯೋಗಾಸನವಾದ ಬಳಿಕ ತಿಂಡಿಯನ್ನು ಮುಗಿಸಿಕೊಂಡು ಶ್ರಮದಾನಕ್ಕೆ ಹೊರಡಬೇಕು.

4. ಶ್ರಮದಾನಕ್ಕೆ ತೆಗೆದುಕೊಂಡು ಹೋದಂತಹ ವಸ್ತುಗಳನ್ನು ಒಂದು ಕಡೆ ಬರೆದುಕೊಂಡು ಹಿಂತಿರುಗಿ ಬರುವಾಗ ಅವುಗಳಿರುವಿಕೆಯನ್ನು ಖಾತ್ರಿಪಡಿಸಿಕೊಳ್ಳಬೇಕು.

5. ಶ್ರಮದಾನ ಮುಗಿಸಿ ಬಂದ ಬಳಿಕ ಸ್ನಾನ ಮಾಡಿ ಒಟ್ಟಿಗೆ ಎಲ್ಲರೂ ಕುಳಿತು ಊಟಮಾಡಬೇಕು.

6. ತಾವು ತೆಗೆದುಕೊಂಡು ಬಂದ ತಟ್ಟೆಯಲ್ಲಿ ಹೊಟ್ಟೆತುಂಬಾ ಊಟ ಸೇವಿಸಬೇಕು,ಯಾವುದೇ ಕಾರಣಕ್ಕೆ ಆಹಾರವನ್ನು ಚೆಲ್ಲುವುದಕ್ಕೆ ಅನುಮತಿ ಇಲ್ಲ.

7. ಪ್ರತಿದಿನವೂ ಶ್ರಮದಾನ ಕೆಲಸವನ್ನು, ವೇದಿಕೆ ಸಿದ್ಧಪಡಿಸುವುದನ್ನು, ನಿರೂಪಣೆ ಮಾಡುವುದನ್ನು, ಅಡಿಗೆಯವರಿಗೆ ಸಹಾಯ ಮಾಡುವುದನ್ನು, ಗುಂಪುಗಳು ಬದಲಾಯಿಸಿಕೊಳ್ಳುತ್ತೀರಿಬೇಕು.

8. ಮನೆಯವರಿಂದ ಮಾತನಾಡಬೇಕಾದರೆ ಶಿಕ್ಷಕರ ಮೊಬೈಲ್ ಗಳನ್ನು ಉಪಯೋಗಿಸಿಕೊಳ್ಳಬಹುದು.

9. ಯಾವುದೇ ಕಾರಣಕ್ಕೂ ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನಬಾರದು.

10. ಶಿಬಿರದ ಉಪಕರಣಗಳನ್ನು ಪ್ರತ್ಯೇಕವಾದ ಕೋಣೆಯಲ್ಲಿಯೇ ಇಡಬೇಕು.

11. ಹುಡುಗ-ಹುಡುಗಿಯರು ಹೆಚ್ಚು ಮಾತನಾಡಿಕೊಂಡು ಕಾಲಹರಣ ಮಾಡುವಂತಿಲ್ಲ.

12. ಹುಡುಗ-ಹುಡುಗಿಯರಿಗೆ ಪ್ರತ್ಯೇಕವಾದ ಕೊಠಡಿಯನ್ನು ನಿಗದಿಪಡಿಸಲಾಗಿದೆ.

13. ಯಾವುದೇ ಮನಸ್ತಾಪಗಳಿಗೆ ಆಸ್ಪದವಿಲ್ಲ.

14. ಆಯಾಸಗೊಂಡವರು ಫಸ್ಟ್ ಏಡ್ ಬಾಕ್ಸ್ ನಲ್ಲಿರುವ ಗ್ಲೂಕೋಸ್ ಅನ್ನು ಬಳಸಬಹುದು.

15. ಧ್ವಜಾರೋಹಣ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ತಪ್ಪದೇ ಭಾಗವಹಿಸಬೇಕು.

16. ಶ್ರಮದಾನದ ಸಮಯದಲ್ಲಿ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು.

17.  ಶ್ರಮಧಾನದಲ್ಲಿ ದೊರೆತ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ದೂರಕ್ಕೆ ಹೋಗಿ ಒಂದು ಕಡೆ ಗುಡ್ಡೆ ಮಾಡಬೇಕು.

18.  ಶ್ರಮಧಾನದ ಸಮಯದಲ್ಲಿ ಬಿಸಿಲು ಇರುವುದರಿಂದ ಹೆಚ್ಚು ನೀರು ಕುಡಿಯಬೇಕು.

19. ಮಧ್ಯಾಹ್ನ ಊಟವಾದ ಬಳಿಕ ಬಿಡುವಿನ ಸಮಯದಲ್ಲಿ ಬಟ್ಟೆಗಳನ್ನು ತೆಗೆದುಕೊಳ್ಳಬಹುದು.

20. ಸಂಜೆ ಕಾರ್ಯಕ್ರಮಗಳೆಲ್ಲವೂ ಮುಗಿದ ಬಳಿಕ ವೇದಿಕೆ ಮೇಲೆ ತಮ್ಮ ಪ್ರತಿಭೆಗಳನ್ನು ಗುರುತಿಸಿಕೊಳ್ಳಬಹುದು.

21. ರಾತ್ರಿ ಊಟವಾದ ಬಳಿಕ ತಮ್ಮ ದಿನಚರಿಯನ್ನು ಡೈರಿಯಲ್ಲಿ ಬರೆಯತಕ್ಕದ್ದು.

ಇನ್ನಿತರ ಮಾಹಿತಿಗಳನ್ನು ಸಮಯಕ್ಕೆ ಅನುಗುಣವಾಗಿ ನೀಡುತ್ತೇವೆ ಎಂದು ಹೇಳಿದ್ದಾಯಿತು. ಇದಾದ ಬಳಿಕ ಎಲ್ಲರೂ ಕಾಫಿಯನ್ನು ಹೀರಿ, ರಾತ್ರಿ ಊಟ ಮುಗಿಸಿ ಮಲಗಿದ್ದಾಯಿತು.

ಮರುದಿನ ಬೆಳಿಗ್ಗೆ ಎಲ್ಲರೂ ಬೇಗ ಎದ್ದು ಧ್ವಜಾರೋಹಣವಾದ ಬಳಿಕ ಯೋಗಾಸನವನ್ನು ಮಾಡಿ ಬಿಸಿ ಬಿಸಿ ಕಾಫಿ ತಿಂಡಿ ತಿಂದುಕೊಂಡು ಶ್ರಮದಾನಕ್ಕೆ ಬೇಕಾದಂತಹ ಸಲಕರಣೆಗಳನ್ನು ತೆಗೆದುಕೊಂಡು ಹಳ್ಳಿ ಕಡೆಗೆ ನಡೆದಿದ್ದಾಯಿತು, ಮೊದಲ ದಿನವಾಗಿದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಕೂಡಿದ್ದು ಶಾಲೆಯ ಇಕ್ಕೆಲಗಳಿಂದ ಹಳ್ಳಿಯ ಮನೆ ತಲುಪುವ ದಾರಿ ಉದ್ದಕ್ಕೂ ಬೆಳೆದು ನಿಂತಿದ್ದ ಗಿಡಗಂಟೆಗಳನ್ನು ಕೆಲವರು ಕತ್ತರಿಸುತ್ತಿದ್ದರೆ, ಇನ್ನು ಕೆಲವರು ಪ್ಲಾಸ್ಟಿಕ್, ಟೈಯರ್, ಗಾಜಿನ ತುಂಡುಗಳನ್ನು ಎತ್ತಿ ಒಂದು ಕಡೆ ಹಾಕುತ್ತಿದ್ದರೆ, ರಸ್ತೆಯ ಮೇಲೆ ಬಿದ್ದಂತಹ ಕಸವನ್ನೆಲ್ಲ ಹುಡುಗಿಯರು ಗುಡಿಸಿ ಸ್ವಚ್ಛಗೊಳಿಸಿದರು, ಇನ್ನುಳಿದವರು ಗುಡ್ಡೆ ಮಾಡಿದ ಕಸಗಳನ್ನು ದೂರಕ್ಕೆ ಎಸೆದು ಬರುತ್ತಿದ್ದರು, ಉತ್ಸಾಹದಲ್ಲಿದ್ದ ಯುವಜನತೆಯ ಸಹಯೋಗದೊಂದಿಗೆ ಊರಿನ ಮುಖ್ಯ ರಸ್ತೆ ಸ್ವಲ್ಪವೂ ಕಸದಿಂದ ಕೂಡಿರದೆ ಗ್ರಾಮಸ್ಥರು ಇದು ನಿಜವಾಗಿಯೂ ನಮ್ಮ ಹಳ್ಳಿಯ ರಸ್ತೆಯೇ ಎನ್ನುವಷ್ಟು ನಳನಳಿಸುತ್ತಿತ್ತು, ಇಷ್ಟಗುವುದರೊಳಗೆ ಮಧ್ಯಾಹ್ನ ಕಳೆದೇಹೋಗಿತ್ತು, ಎಲ್ಲರೂ ಉಪಕರಣಗಳನ್ನು ತೆಗೆದುಕೊಂಡು ಮರಳಿ ಶಾಲೆಗೆ ಹಿಂತಿರುಗಿದೆವು.

ಎಲ್ಲರದ್ದು ಸ್ನಾನವಾಗಿ ಊಟವಾದ ಬಳಿಕ, ವಿಶೇಷ ಆಹ್ವಾನಿತರಿಂದ ವೇದಿಕೆಯ ಕಾರ್ಯಕ್ರಮ ಪ್ರಾರಂಭವಾಯಿತು, ಅಂದಿನ ಕಾರ್ಯಕ್ರಮಕ್ಕೆ ಮೈಸೂರಿನ ಉರಗ ತಜ್ಞರಾದಂತಹ ಸ್ನೇಕ್ಸ್ ಶಾಮ್ ಹಾವುಗಳ ಚಲನವಲನ, ಅವುಗಳ ಆಹಾರ, ಪರಿಸರಕ್ಕೆ ಹಾವುಗಳ ಕೊಡುಗೆ, ಎಂಬಿತ್ಯಾದಿ ಮಾಹಿತಿಗಳು ನೀಡುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು. ಹೀಗೆ ಪ್ರತಿದಿನವೂ ವೇದಿಕೆಯ ಕಾರ್ಯಕ್ರಮಕ್ಕೆ ಪತ್ರಕರ್ತರನ್ನು, ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು, ಎನ್ಎಸ್ಎಸ್ ನ ಮುಖ್ಯ ಅಧಿಕಾರಿ ಗಳನ್ನು ಕರೆಸಲಾಗುತ್ತಿತ್ತು, ಈ ಕಾರ್ಯಕ್ರಮಗಳು ಮುಗಿದು ಟೀ ಬ್ರೇಕ್ ಆದನಂತರ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ಕಾರ್ಯಕ್ರಮವನ್ನು ಮಾಡಲು ಅವಕಾಶ ನೀಡಲಾಗಿತ್ತು.

ಮಾರನೆಯ ದಿನ ಹಳ್ಳಿ ಒಳಗೆ ಶ್ರಮದಾನ ವಾದುದರಿಂದ ಪ್ರತಿಯೊಂದು ಗುಂಪಿನವರು ಒಂದೊಂದೇ ರಸ್ತೆಗಳನ್ನು ಸ್ವಚ್ಛಗೊಳಿಸುತ್ತಾ, ಊರಿನ ಅಂದವನ್ನು ಹೆಚ್ಚುಗೂಳಿಸುವುದರೊಂದಿಗೆ, ಜನರಿಗೆ ಸ್ವಚ್ಛತೆಯ ಬಗ್ಗೆ ತಿಳಿಯುವ ರೀತಿಯಲ್ಲಿ, ನೀರಿನ ಬಳಕೆ, ಕಸವನ್ನು ವಿಂಗಡಿಸುವಿಕೆ, ಮೋರಿಗಳ ಸ್ವಚ್ಛತೆಯಿಂದ ಕ್ರಿಮಿಕೀಟಗಳ ಮುಕ್ತಿ, ಶೌಚಾಲಯ ಬಳಕೆ, ಎಂಬಿತ್ಯಾದಿ ವಿಷಯಗಳ ಬಗ್ಗೆ ಅರಿವು ಮೂಡಿಸಿದ್ದಾಯಿತು, ಇದರೊಂದಿಗೆ ಊರಿನವರು ದಣಿವಾದ ವಿದ್ಯಾರ್ಥಿಗಳಿಗೆ ನೀರು ಕೊಡುವುದರ ಮೂಲಕ ಸಹಕರಿಸುತ್ತಿದ್ದರು, ಶ್ರಮದಾನವಾದ ಬಳಿಕ ಶಾಲೆಗೆ ಹಿಂದಿರುಗುವಷ್ಟರಲ್ಲಿ ಪ್ರತಿದಿನವೂ ಅಡುಗೆ ಮಾಡುವವರಿಗೆ ಸಹಕರಿಸುತ್ತಿದ್ದ ಗುಂಪುಗಳು ಬದಲಾಗುತ್ತಾ ಅಡಿಗೆಯನ್ನು ಮಾಡಿಕೊಂಡು ಬಡಿಸಲು ನೆರವಾಗುತ್ತಿದ್ದರು, ಅಂದು ಆ ಗುಂಪಿನವರೇ ಅಡುಗೆ ಪಾತ್ರೆಗಳನ್ನು ತೊಳೆದು ಶುಚಿಗೊಳಿಸುತ್ತಿದ್ದರು.

ಉಳಿದ ಇನ್ನೆರಡು ದಿನ ಊರಹೊರಗೆ ಪಾಳುಬಿದ್ದಿದಂತಹ ದೇವಸ್ಥಾನ, ಪುಷ್ಕರಣಿಯ ಸುತ್ತಲೂ ನಮ್ಮಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಂತಹ ಗಿಡಗಂಟಿಗಳನ್ನು ತೆರವುಗೊಳಿಸಿ, ಕಸವನ್ನು ದೂರಕ್ಕೆ ಎಸೆದು ಬಂದಿದ್ದರಿಂದ ಸುತ್ತಲೂ ಶುಭ್ರತೆ ನಳನಳಿಸುತ್ತಿತ್ತು, ನಮ್ಮೆಲ್ಲರ ಶ್ರಮಧಾನವನ್ನು ನೋಡಿದಂತಹ ಊರಿನವರು ಇನ್ನಷ್ಟು ಹತ್ತಿರವಾದರೂ, ಇದರೊಂದಿಗೆ ಸಂಜೆಯ ಕಾರ್ಯಕ್ರಮಕ್ಕೆ ತಾವು ಬಂದು ಕೂರುತ್ತಿದ್ದರು,ಇದರ ಸಲುವಾಗಿಯೇ ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಅರಿವು ಮೂಡುವಂತೆ ಸಣ್ಣ ನಾಟಕಗಳನ್ನು, ಹಾಡುಗಳನ್ನು ಪ್ರದರ್ಶಿಸಲಾಗುತ್ತಿತ್ತು, ವೇದಿಕೆಯ ಮೇಲೆ ನಿಲ್ಲಲು ಹೆದರುತ್ತಿದ್ದ ಎಷ್ಟೋ ವಿದ್ಯಾರ್ಥಿಗಳು ಈ ಮೂಲಕ ತನಗೆ ತಿಳಿಯದ ಹಾಗೆ ವೇದಿಕೆ ಮೇಲೆ ಬರಲಾರಂಭಿಸಿದರು, ಇಷ್ಟೆಲ್ಲಾ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ಗ್ರಾಮದ ಜನತೆಯಲ್ಲಿ ಸ್ವಚ್ಛತೆಎಡೆಗೆ ಬೆಳಕು ಚೆಲ್ಲಿ ತಾವು ಶುಚಿತ್ವವನ್ನು ಕಾಪಾಡಬೇಕೆಂದು ಅರಿವಾಯಿತು.


ಎನ್ಎಸ್ಎಸ್ ನ ದ್ಯೆಯೋದ್ದೇಶವಾದ "ನನಗಲ್ಲ ನಿನಗೆ", ಹಾಗೂ ಸೇವೆಯ ಮಾಡೋಣ ಬನ್ನಿ ಎಂಬ ಗೀತೆಯು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗಾಢವಾದ ಪ್ರಭಾವವನ್ನು ಬೀರಿ, ಗಾಂಧೀಜಿಯವರ ಕನಸಾದಂತಹ ಗ್ರಾಮಗಳ ಏಳಿಗೆಗೆಗಿ ಯುವಕರು ಬೆಳಕು ಚೆಲ್ಲಿದಂತಾಯಿತು, ಇಷ್ಟೆಲ್ಲ ಸಮಾಜಸೇವೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಾರ್ಥಕತೆಯ ಭಾವವನ್ನು ಮೂಡಿಸಿತು .

ಎನ್ಎಸ್ಎಸ್ ನ ಸಂಪ್ರದಾಯದಂತೆ ಶಿಬಿರ ಮುಕ್ತಾಯಗೊಳ್ಳುವ ಹಿಂದಿನ ದಿನ ಸಂಜೆಯ ಕಾರ್ಯಕ್ರಮ ಮುಗಿದ ಬಳಿಕ ಎಲ್ಲರೂ ಮೌನವಾಗಿದ್ದುಕೊಂಡು, ಶಿಬಿರದಲ್ಲಿ ನಡೆದ ಎಲ್ಲಾ ಚಟುವಟಿಕೆಗಳನ್ನು ನೆನಪಿಸಿಕೊಂಡು, ಯಾವುದಾದರೂ ಕಹಿಘಟನೆ ಅಥವಾ ಮನಸ್ತಾಪಗಳಿದ್ದರೆ ಅವುಗಳನ್ನು ಮರೆತು, ಎಲ್ಲರೂ ಒಂದೊಂದು ಕ್ಯಾಂಡಲ್ ಅನ್ನು ಹಚ್ಚಿ, ಮೌನವಾಗಿ ಊಟ ಮಾಡಲಾಯಿತು, ನಮ್ಮೆಲ್ಲ ಶ್ರಮದಾನವನ್ನು ಮೆಚ್ಚಿ ಹಳ್ಳಿಯವರು ರಾತ್ರಿಯ ಊಟವನ್ನು ಏರ್ಪಡಿಸಿದ್ದರು, ಊಟ ಚೆನ್ನಾಗಿತ್ತು ಇದಾದ ಬಳಿಕ ಎಲ್ಲರೂ ಮಲಗಿಕೊಂಡೆವು.

ಮರುದಿನ ಬೆಳಿಗ್ಗೆ ಬೇಗ ಎದ್ದು ಎಲ್ಲರೂ ಶಾಲೆಯ ಆವರಣವನ್ನು ಮತ್ತೊಮ್ಮೆ ಸ್ವಚ್ಛಗೊಳಿಸಿ, ಉಪಹಾರವನ್ನು ಮುಗಿಸಿಕೊಂಡು, ಕಟ್ಟಕಡೆಯ ವೇದಿಕೆಯ ಕಾರ್ಯಕ್ರಮಕ್ಕೆ ಗ್ರಾಮಸ್ಥರನ್ನು ಕರೆಯಲೆಂದು ಒಂದಷ್ಟು ಜನ ಹೋಗಿ ಬಂದದ್ದಾಯಿತು, ಜನ ಸೇರುತ್ತಿದ್ದಂತೆ ಕಾರ್ಯಕ್ರಮ ಪ್ರಾರಂಭವಾಯಿತು, ವೇದಿಕೆಯ ಮೇಲೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳು, ಶಿಬಿರಕ್ಕೆ ಸಹಕರಿಸಿದ ಕಾಲೇಜಿನ ಇತರ ಶಿಕ್ಷಕರು, ಶಾಲೆಯ ಮುಖ್ಯೋಪಾಧ್ಯಾಯರು, ಊರಿನ ಅಧ್ಯಕ್ಷರು, ಮುಖಂಡರು, ವೇದಿಕೆ ಮೇಲೆ ಆಸೀನರಾಗಿದ್ದರು, ವೇದಿಕೆಯ ಮುಂಭಾಗದಲ್ಲಿ ಊರಿನ ಗ್ರಾಮಸ್ಥರು ಜೊತೆಗೆ ಶಿಬಿರಾರ್ಥಿಗಳು ಕುಳಿತಿದ್ದರು, ಸ್ವಾಗತ ಭಾಷಣವನ್ನು ಮಾಡಿದ ಬಳಿಕ ವೇದಿಕೆ ಮೇಲೆ ಕುಳಿತಿದ್ದಂತಹ ಗಣ್ಯರು ಶಿಬಿರ ಯಶಸ್ವಿಯಾಗಲು ಕಾರಣೀಭೂತರಾದ ಎಲ್ಲರನ್ನೂ ಸ್ಮರಿಸಲಾಯಿತು ಇದರೊಂದಿಗೆ ವಿದ್ಯಾರ್ಥಿಗಳ ಸೇವೆಯೆಂಬ ನಿಷ್ಕಲ್ಮಶ ಮನೋಧರ್ಮಗಳಿಗೆ ಬೆಳಕು ಚೆಲ್ಲುತ್ತದೆ ವಿದ್ಯಾರ್ಥಿಗಳನ್ನು ಶ್ಲಾಘಿಸುವುದರೊಂದಿಗೆ ಕಾರ್ಯಕ್ರಮ ಮಧ್ಯಾಹ್ನದ ಮುಕ್ತಾಯವಾಯಿತು. 

ಇದಾದ ಬಳಿಕ ಎಲ್ಲ ವಿದ್ಯಾರ್ಥಿಗಳು ಊಟವನ್ನು ಮಾಡಿ, ಪಾತ್ರೆಯನ್ನು ತೊಳೆದು, ಶಿಬಿರದ ಉಪಕರಣಗಳೆಲ್ಲವನ್ನೂ, ತಮ್ಮ ಲಗೇಜುಗಳನ್ನು ಬಸ್ಸಿಗೆ ತುಂಬಿ ಹೊರಡಲು ಸಿದ್ಧರಾಗುತ್ತಿದಂತೆ, ಶಿಬಿರ ಇನ್ನೆರಡು ದಿನ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುತ್ತಾ ಸ್ವಲ್ಪ ಮರುಗಿ, ಕೆಲವರು ಕಣ್ಣೀರನ್ನು ಸುರಿಸಿ ಬಸ್ ಹತ್ತಿ ಕುಳಿತರು, ಭಾರವಾದ ಮನಸ್ಸಿನಲ್ಲಿ ಶಿಬಿರದ ಶಾಲೆಯನ್ನು ಹಿಂತಿರುಗಿ ನೋಡುತ್ತಾ ಕಾಲೇಜಿನತ್ತ ಪಯಣ ಬೆಳೆಸಿದೆವು, ಸಮಯ 4:30 ಒಳಗಾಗಿ ಬಸ್ ಕಾಲೇಜನ್ನು ಸೇರಿದ ಬಳಿಕ, ಕಾಲೇಜು ಪ್ರಾರಂಭವಾದ ಬಳಿಕ ಎಲ್ಲರೂ ಸಿಗೋಣ ವೆಂದು ಹೇಳಿ ಎಲ್ಲರೂ ತಮ್ಮ ತಮ್ಮ ಮನೆಗೆ ಹೊರಡುವ ಮೂಲಕ ಶಿಬಿರ ಮುಕ್ತಾಯವಾಯಿತು.

ಕಾಲೇಜು ಪ್ರಾರಂಭವಾದ ಸ್ವಲ್ಪದಿನಗಳಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳನ್ನುಳಗೊಂಡ ಸಭೆಯನ್ನು ಕರೆಯಲಾಗಿತ್ತು, ಈ ಕಾರ್ಯಕ್ರಮದಲ್ಲಿ ಶಿಬಿರದ ವಿವಿಧ ಕಾರ್ಯಕ್ರಮಗಳಲ್ಲಿ ಗೆದ್ದಂತಹ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು, ಇದರೊಂದಿಗೆ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಂತಹ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿಕ್ಷಕರು ಬಹುಮಾನವನ್ನು ತೆಗೆದುಕೊಳ್ಳುವುದು ಎರಡನೆಯ ಮಾತು ಆದರೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ನಿಜಕ್ಕೂ ಪ್ರಶಸ್ತಿಗಳನ್ನು ತೆಗೆದುಕೊಳ್ಳುವುದಕ್ಕೆ ಸಮ ಎಂದು ಹೇಳಿದರು, ಇದರೊಂದಿಗೆ ಒಬ್ಬ ಶಿಬಿರಾರ್ಥಿ ಮಾತನಾಡುತ್ತಾ  ಶಿಬಿರ ನಮಗೆ ತಿಳಿಯದಹಾಗೆ ನಮ್ಮನ್ನು ಬಹಳಷ್ಟು ಪರಿವರ್ತಿಸಿದೆ, ಶಿಸ್ತು, ಸಂಯಮ, ತಾಳ್ಮೆಯಲ್ಲಿ ಜೀವನ ನಡೆಸುವುದನ್ನು ಕಲಿಸಿಕೊಟ್ಟಿದೆ, ಸೇವೆಯನ್ನು ಮಾಡುವ ಮೂಲಕ ಅದರೊಳಗಿನ ನಿಜ ಆನಂದವನ್ನು ತಿಳಿಸಿಕೊಟ್ಟಿದೆ, ಈ ಮೂಲಕ ಶಿಬಿರ ಸಾರ್ಥಕತೆಯಹಾದಿಯನ್ನು ಹಿಡಿದಿದೆ ಎಂಬ ಮಾತುಗಳಿಗೆ ಚಪ್ಪಾಳೆಯ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.

ಈ ಕಾರ್ಯಕ್ರಮ ಮುಗಿದು ಎಷ್ಟೊ ದಿನಗಳಾದ ಬಳಿಕದ ಸ್ನೇಹಿತರಿಂದ ತಿಳಿದಿದ್ದೇನೆಂದರೆ, ಎನ್ಎಸ್ಎಸ್ ಆಫೀಸಿನಿಂದ ರಿಲೀಸ್ ಆಗುವ ಫಂಡ್ ಸಾಕಾಗದೆ ಶಿಕ್ಷಕರು ತಮ್ಮ ಸ್ವಂತ ಹಣವನ್ನು ಹಾಕಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು, ಈ ವಿಷಯಗಳನ್ನು ಎಲ್ಲಿಯೂ ತೋರ್ಪಡಿಸಿಕೊಳ್ಳದ ಗುರುಗಳಿಗೆ ನಾವು ನಿಜವಾಗಿಯೂ ನಮಿಸಬೇಕಾಗುತ್ತದೆ. ದುಃಖದ ಸಂಗತಿಯೆಂದರೆ ಕಾರಣಾಂತರಗಳಿಂದ ನಾವು ಸೆಕೆಂಡ್ ಇಯರ್ ಬರುವುದರೊಳಗೆ ಎನ್ಎಸ್ಎಸ್ ಘಟಕವನ್ನೇ ಮುಚ್ಚಲಾಗಿತ್ತು,ಮುಚ್ಚಿದ್ದು ಘಟಕವನ್ನೇ ಹೊರತು ನಮ್ಮ ನೆನಪುಗಳಲ್ಲ, ನೀವು ಓದುವ ಶಾಲಾ ಕಾಲೇಜುಗಳಲ್ಲಿ ಯಾವುದಾದರೊಂದು ಸ್ವಯಂಸೇವಾ ಘಟಕ ಇದ್ದೇ ಇರುತ್ತದೆ, ಅದರಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಮನೆಯಲ್ಲಿ ಮಕ್ಕಳೇನಾದರೂ ಇದ್ದಲ್ಲಿ ಅವರನ್ನು ಶಿಬಿರಕ್ಕೆ ಕಳುಹಿಸಿಕೊಡಿ ಏಕೆಂದರೆ ಶಿಬಿರದಲ್ಲಿ ಕಲಿಯುವುದು ಬಹಳಷ್ಟಿದೆ.

 ಧನ್ಯವಾದಗಳು.

Saturday, September 10, 2022

ತಾಳ್ಮೆ ಬೇಕು ತಾಳೆಗೆ.

 - ಎಸ್ ಪಿ ತೇಜರಾಜು.

 ಸಂಬಂಧಗಳು ಕೇವಲ ಮಾನವನಿಗಷ್ಟೇ ಸೀಮಿತವಾಗಿದೆಯೇ ? ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ, ಜಲಚರಗಳಲ್ಲಿ ಸಂಬಂಧಗಳನ್ನು ನಾವು ಸಾಮಾನ್ಯವಾಗಿ ಕಂಡಿರುತ್ತೇವೆ, ಹಾಗಾದರೆ ಸಸ್ಯಗಳಲ್ಲಿ ಸಂಬಂಧಗಳು ಇದೆಯೇ ? ಮುಂದೆ ನೋಡೋಣ.

ಬಾಲ್ಯದಲ್ಲಿ ಈಚಲ ಮರದ ಹಣ್ಣನ್ನು ತಿಂದು ಸಂಭ್ರಮಿಸಿರಬಹುದು, ಬೇಸಿಗೆಯ ಧಗೆ ಹೆಚ್ಚಾಗಿ ತಾಟಿನಿಂಬು ಅಥವಾ ಎಳನೀರನ್ನು ಕುಡಿದಿರಬಹುದು, ಅಡುಗೆಯ ಖಾದ್ಯಕ್ಕೆ ತಾಳೆಯ ಎಣ್ಣೆಯನ್ನು ಉಪಯೋಗಿಸಿರಬಹುದು, ದೇಹದಲ್ಲಿ ಕಬ್ಬಿಣದಂಶ ಹೆಚ್ಚಾಗಲಿ ಎಂದು ಖರ್ಜೂರವನ್ನು  ತಿಂದಿರಬಹುದು, ತಾಂಬೂಲ ಪ್ರಿಯರಿಗೆ ಅಡಕೆ ಇರದೇ ತಾಂಬೂಲ ಸಂಪೂರ್ಣವಾಗಿದಿರಬಹುದು. ಮೇಲಿನವುಗಳೆಲ್ಲವೂ ಮಾನವನ ಆಹಾರದೊಳಗೆ ಬೆರೆತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ.

ಹೇಗೆ ಮನೆಯಲ್ಲಿ ಕಾರ್ಯಕ್ರಮವಾದರೆ ದೂರದ ನೆಂಟರಿಷ್ಟರು, ಸಂಬಂಧಿಕರು ಬಂದು ಸೇರುತ್ತಾರೆಯೋ ಅದನ್ನೇ ಒಂದು ಕುಟುಂಬ ಎಂದು ಕರೆಯುವುದಲ್ಲವೇ ? ಹೀಗೆಯೇ ಸಸ್ಯಗಳೆಲ್ಲವೂ, ಸಸ್ಯ ಸಾಮ್ರಾಜ್ಯದೊಳಗೆ ಸೇರಿದ್ದರೂ, ಅವುಗಳೊಳಗೆ ಪ್ರತ್ಯೇಕ ಪ್ರತ್ಯೇಕ ಮನೆತನ /  ಕುಟುಂಬ / ಸಂಬಂಧಿಕರು ಇದ್ದಾರೆ. ಖರ್ಜೂರ ಮರುಭೂಮಿಯಲ್ಲಿ ಬೆಳೆದಿರಬಹುದು, ತೆಂಗು ಬಯಲು ಸೀಮೆಯಲ್ಲಿಯೂ ಬೆಳೆಯಬಹುದು, ಅಡಿಕೆ ಮಲೆನಾಡಿನಲ್ಲಿ ಹೆಚ್ಚು ಕಂಡುಬರುವುದುಂಟು, ತಾಳೆ ಹೊಳೆ ದಂಡೆಯಲ್ಲಿ ಬೆಳೆದಿರಬಹುದು, ಬೈನೇ ಮರದಿಂದ ಸೇಂದಿ ಮಾಡುವುದನ್ನು, ಇನ್ನೂ ಉದ್ಯಾನವನಗಳಲ್ಲಿ ಅಲಂಕಾರಿಕ Royal palm ಮರಗಳು ಇರುವುದನ್ನು ನೋಡಬಹುದು, ಇವುಗಳೆಲ್ಲವೂ ಕಾಂಡಗಳ ಮಧ್ಯದಲ್ಲಿ ಕವಲೊಡೆಯದ, ದಪ್ಪ ಕಾಂಡದ, ನಾರಿನಿಂದ ಕೂಡಿದ, ದೊಡ್ಡ ಎಲೆಗಳುಳ್ಳ ನಿತ್ಯಹರಿದ್ವರಣ ಸಸ್ಯಗಳು. ನೋಡ್ಲಿಕ್ಕೆ ಹೆಚ್ಚುಕಡಿಮೆ ಒಂದೇ ರೀತಿ ಕಾಣುವ ಈ ಸಸ್ಯಗಳು ಅರೆಕೇಸಿಯೇ ಕುಟುಂಬಕ್ಕೆ ಸೇರಿದ ತಾಳೆಯ ಜಾತಿಯ ಮರಗಳು, 2,600 ಕ್ಕೂ ಹೆಚ್ಚು ಅರೆಕೇಸಿಯೇ ಕುಟುಂಬಕ್ಕೆ ಸೇರಿದ ಮರಗಳನ್ನು 200 ಕ್ಕೂ ಹೆಚ್ಚು ತಾಳೆ ಜಾತಿಗಳಾಗಿ ವರ್ಗೀಕರಿಸಲಾಗಿದೆ. 

ಅರೆಕೇಸಿಯೇ ಕುಟುಂಬಕ್ಕೆ ಸೇರಿದ ಪಾಮ್ ಮರವು ( ಅಡುಗೆ ಎಣ್ಣೆ ತಯಾರಿಕೆಯಿಂದ ) ಇಂಡೋನೇಷಿಯಾದಂತ ದೇಶಕ್ಕೆ ಕೋಟ್ಯಂತರ ರೂಪಾಯಿ ವ್ಯವಹಾರ ತಂದುಕೊಡುತ್ತದೆ. ಆದರೆ ಏಕ ಜಾತಿಯ ಪಾಮ್ ಮರಗಳ ನೆಡುತೋಪಿನಿಂದಾಗಿ ಅಲ್ಲಿಯ ನಿತ್ಯಹರಿದ್ವರ್ಣ ಕಾಡು ಕಣ್ಮರೆಯಾಗುತ್ತಿದೆ, ಅನೇಕ ಪ್ರಾಣಿಸಂಕುಲ ಕಣ್ಮರೆಯಾಗಿದೆ, ಒರಂಗುಟಾನ್ ಆಹಾರ ಸಿಗದೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ. ಅದೇ ಅರೆಕೇಸಿಯೇ ಕುಟುಂಬಕ್ಕೆ ಸೇರಿದ ಖರ್ಜೂರದ ಮರ ಮರುಭೂಮಿಯ ರಾಣಿ ಹಣ್ಣು ಎಂದು ಗುರುತಿಸಲ್ಪಟ್ಟ ಅಲ್ಲಿಯ ಜನರ ಜೀವನ ಮಟ್ಟವನ್ನು ಸುಧಾರಿಸುತ್ತಿದೆ. ನಮ್ಮ ದೇಶದಲ್ಲಿಯೂ ಅಡಿಕೆ ತೆಂಗು ವಾಣಿಜ್ಯ ಸಸ್ಯಗಳಾಗಿದೆ.

ಈ ಮೇಲೆ ತಿಳಿಸಿದ ಮರಗಳೆಲ್ಲವೂ ತಾಳೆ ಜಾತಿಗೆ ಸೇರಿದ ಮರಗಳಾದರೂ ಮತ್ತೊಂದು ತಾಳೆಯ ಗಿಡವಿದೆ ಅದು ನನ್ನ ತಾಳ್ಮೆಯನ್ನು ಪರೀಕ್ಷಿಸಿಯೇ ಬಿಟ್ಟಿತು. Technology era ದಲ್ಲಿ ಇರುವ ನಮಗೆ ಕುಳಿತಲ್ಲಿಂದಲೇ ಬೇಕಾದ ಪದಾರ್ಥಗಳನ್ನು ತರಿಸಿಕೊಳ್ಳಬಹುದು, ಓದುವ ಆಸಕ್ತಿ ಇರುವವರು ಇಡೀ ಪುಸ್ತಕವನ್ನು ಮೊಬೈಲ್ನಲ್ಲಿ ಓದಿ ಮುಗಿಸಬಹುದು. ಆದರೆ ನಮ್ಮ ಪೂರ್ವಜರ ಪರಿಸ್ಥಿತಿಯ ಇವತ್ತಿನ ರೀತಿ ಇರಲಿಲ್ಲ ಮೊದಲು ಕಲ್ಲುಗಳ ಮೇಲೆಯೂ,  ಶಾಸನಗಳಲ್ಲಿಯೂ, ಮುಂದೆ ಓಲೆ / ತಾಳೆ ಗರಿಯಲ್ಲಿ ಮುಂದಿನ ಪೀಳಿಗೆಗಾಗಿ ತಮ್ಮ ಜ್ಞಾನಭಂಡಾರವನ್ನು ಮುದ್ರಿಸುತ್ತಿದ್ದರು.

ತಾಳೆ ಪ್ರತಿಗಳಿಗೆ ಬಳಸಿದಂತಹ ಎಲೆಗಳು ಯಾವುದು ಎಂದು ತಿಳಿಯಹೊರಟಾಗ ನಿಜವಾದ ಚಾಲೆಂಜಿಂಗ್ ಟಾಸ್ಕ್ ಎದುರಾಯಿತು, ಒಬ್ಬೊಬ್ಬರು ಒಂದೊಂದು ರೀತಿಯ ಮರಗಳ ಹೆಸರನ್ನು ಹೇಳಲು ಪ್ರಾರಂಭಿಸಿದರು, ಒಬ್ಬರು Ola palnt ಎಂದರೆ ಮತ್ತೊಬ್ಬರು Borassus flabellifer, ತಾಟಿನಿಂಬು ಗಿಡದ ಎಲೆ, Asian palmyar palm ಎಂದು, Palm ಮರ ಎಂದರು, ಕೇದಿಗೆ ಸಸ್ಯದ ಎಲೆಗಳು ಎಂದರು ಆದರೆ ಕೇದಿಗೆ ಸಸ್ಯ ತಾಳೆ ಜಾತಿಗೆ ಸೇರಿದ ಗಿಡವಾಗಿರಲಿಲ್ಲ ಇದರ ಮಧ್ಯದಲ್ಲಿ ತೆಂಗು, ಅಡಕೆ, ಖರ್ಜೂರದ ಎಲೆಗಳು ಅದನ್ನೇ ಹೊಲಿದರು ಇವು ತಾಳೆಗರಿಗೆ ಯೋಗ್ಯವಾದ ಎಲೆಗಳಲ್ಲ ಇವು ಬೇಗ ಹಾಳಾಗುತ್ತವೆ, ಹಾಗಾದರೆ 200 ಜಾತಿಯ ತಾಳೆ ಗಿಡಗಳಲ್ಲಿ ತಾಳೆ ಪ್ರತಿಗಳನ್ನು ತಯಾರಿಸಲಿಕ್ಕೆ ಬಳಸಿದಂತಹ ಗಿಡಗಳು ಯಾವುದಿರಬಹುದು ?

ಪಶ್ಚಿಮ ಘಟ್ಟಗಳ ಸಾಲುಗಳಲ್ಲಿ ರಾರಾಜಿಸುತ್ತಿದ್ದ ಮರಗಳ ಸಾಲುಗಳಲ್ಲಿ ಒಂದಾನೊಂದು ಕಾಲಕ್ಕೆ ತಾಳೆ ಜಾತಿಯ ಮರಗಳು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದವು,  ಇವುಗಳಲ್ಲಿ Asian palmyra palm ( ತಾಟಿನಿಂಬು ) ಹಾಗೂ Taliopt palm ಎಂಬ ಎರಡು ವಿಧವಾದ ಮರಗಳಿವೆ, ಎರಡು ನಿತ್ಯಹರಿದ್ವರ್ಣ ಮರಗಳು ಬೃಹತ್ತಾದ ಎಲೆಗಳನ್ನು ಹೊಂದಿರುತ್ತವೆ.



ನಮ್ಮ ಭಾರತದಲ್ಲಿ ತಾಳೆ ಪ್ರತಿಗಳ ತಯಾರಿಕೆಯಲ್ಲಿ ತಾಟಿನಿಂಬು ಮರದ ಎಲೆಯನ್ನು ಬಳಸಿದ್ದು ಹೆಚ್ಚು, ಈ ಮರ ಕೇವಲ ತಾಳೆಗರಿ ಕೆಲಸಕ್ಕೆ ಮಾತ್ರ ಉಪಯೋಗಿಸಲ್ಪಟ್ಟಿದಲ್ಲದೆ

1 ಇದೊಂದು ಅದ್ಭುತವಾದಂತಹ ಔಷಧೀಯ ಸಸ್ಯ ಗುಪ್ತ ರೋಗಗಳಿಗೆ ರಾಮಬಾಣ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

2 ರಾಜ-ಮಹಾರಾಜರ ಛತ್ರಿಗಳಲ್ಲಿ ಈ ಮರದ ಎಲೆಗಳನ್ನು ಬಳಸಲಾಗುತ್ತಿತ್ತು.

3 ಕೃಷಿ ನಾಟಿ ಸಂದರ್ಭದಲ್ಲಿ ಗೊರಬಾಗಿ ಬೆಳಕೆ.

4 ಬ್ರಿಟಿಷರು ಈ ಮರದ ದಿಮ್ಮಿಗಳನ್ನು ಬೀದಿದೀಪ ಕಂಬಗಳಾಗಿ ಬಳಸುತ್ತಿದ್ದರು.

5 ಬೀಜಗಳನ್ನು ಅಂಗಿಯ ಗುಂಡಿಯಾಗಿ,

6 ಮಣ್ಣಿನ ಪಾತ್ರೆಯ ಮುಚ್ಚಳವಾಗಿ,

7 ಸಿಡಿಮದ್ದು ತಯಾರಿಕೆಯಲ್ಲಿ,

8 ಯಕ್ಷಗಾನದಲ್ಲಿ ನವಿಲುಗರಿಗಳಿಂದ ಅಲಂಕೃತವಾಗಿ,

9 ಶ್ರೀರಾಮ ವನವಾಸದಲ್ಲಿದ್ದಾಗ ಕುಟೀರ ನಿರ್ಮಾಣಕ್ಕಾಗಿ ಈ ಮರವನ್ನು ಬಳಸಲಾಗಿತ್ತು,

10 ಗೆದ್ದಲು ನಿವಾರಕವಾಗಿ ಎಲೆಯ ಬಳಕೆ,

11 ಹೂಗಳು ಅರಳಿದಾಗ ಇಡೀ ಕಾಡು ಪರಿಮಳದಿಂದ ಕೂಡಿರುತ್ತಿತ್ತು. ಇದರ ಹಣ್ಣು ಹತ್ತಾರು ಪ್ರಾಣಿ-ಪಕ್ಷಿಗಳಿಗೆ ಆಹಾರ.

12 ಮರ ಸದೃಢವಾಗಿ ಮಣ್ಣಿನಲ್ಲಿ ನಿಲ್ಲುವುದರಿಂದ  ಮಣ್ಣಿನ ಸವಕಳಿಯನ್ನು ತಡೆಗಟ್ಟುತಿತ್ತು.

ಇಷ್ಟೆಲ್ಲಾ ಬಳಕೆಯಲ್ಲಿದ್ದ ಮರ ಅತಿಯಾದ ಕಾಡಿನ ಕಡಿತದಿಂದಾಗಿ ಕಣ್ಮರೆಯಾದತೊಡಗಿತು, ಇದರೊಂದಿಗೆ ತಾಳೆಗರಿಯ ಜಾಗವನ್ನು ಕಾಗದ ಆಕ್ರಮಿಸಿದ್ದರಿಂದ, ಜನರಿಂದ ಇದು ನಿಧಾನವಾಗಿ ಮರೆಯಾಗತೊಡಗಿತು.

ತಾಳೆ ಮರವ ಗುರುತಿಸಿದ್ದಾಯಿತು ಆದರೆ ತಾಳೆ ಎಲೆಗಳನ್ನು ತಾಳೆ ಪ್ರತಿಗಳಾಗಿ ತಯಾರಿಸುವುದು ಹೇಗೆ ? ಈ ಕೆಲಸ ಮತ್ತಷ್ಟು ಕುತೂಹಲವನ್ನು ಕೆರಳಿಸುತ್ತದೆ.

ಮರದಿಂದ ಎಲೆಗಳನ್ನು ಕತ್ತರಿಸಿಕೊಂಡು ಪ್ರತಿ ಎಲೆಗಳನ್ನು ತುಂಡರಿಸಿಕೊಂಡು ಬಳೆಯ ಆಕಾರದಲ್ಲಿ ಸುತ್ತಬೇಕು, ಇದನ್ನು ಕುದಿಯುತ್ತಿರುವ ಅಲೋವೆರಾ ನೀರಿನೊಂದಿಗೆ ಸ್ವಲ್ಪ ಹೊತ್ತು ಬೇಯಿಸಿ ನಂತರ ಗಾಳಿಯಲ್ಲಿ ಒಣಗಿಸಿ, ಶಾಸನಗಳಿಗೆ ಸೂಕ್ತವಾಗುವ ಅಳತೆಯಲ್ಲಿ ತುಂಡರಿಸಿಕೊಂಡು ಪ್ರತಿಗಳನ್ನು ಒಂದರ ಹಿಂದೆ ಜೋಡಿಸುತ್ತಾ ಭಾರವಿರುವ ವಸ್ತುವಿನ ಕೆಳಗೆ ಇಟ್ಟಾಗ ಹಾಳೆಯ ರೀತಿಯ ಮಾರ್ಪಾಡಾಗುತ್ತದೆ, ಈ ಪ್ರತಿಗಳಿಗೆ ಮೇಲೆ ಕಬ್ಬಿಣದ ಸೂಜಿಗಳಿಂದ ಒತ್ತಿದಾಗ ಅಕ್ಷರದ ರೂಪದಲ್ಲಿ ಕಾಣಿಸತೊಡಗುತ್ತವೆ, ಈ ಅಕ್ಷರಗಳು ಸ್ಪಷ್ಟವಾಗಿ ಕಾಣಲಿಕ್ಕೆ ಕಪ್ಪು ಬಣ್ಣ ಹಚ್ಚಿ ಆನಂತರ ಹರಿಶಿಣ ಮಿಶ್ರಿತ ಬಟ್ಟೆಯಲ್ಲಿ ಸವರಿ ಒಣಗಿಸಿ ಇಟ್ಟುಕೊಳ್ಳಬೇಕು ಹೀಗೆ ಮಾಡಿದಲ್ಲಿ ಹತ್ತಾರು ವರ್ಷ ಪ್ರತಿಗಳು ಸುರಕ್ಷಿತವಾಗಿರುತ್ತದೆ.

ಇಷ್ಟೆಲ್ಲಾ ಪ್ರಕಾರವನ್ನು ಅನುಸರಿಸಿ ತಮ್ಮ ಜ್ಞಾನಭಂಡಾರವನ್ನು ಮುಂದಿನ ಪೀಳಿಗೆಗಾಗಿ ವರ್ಗಾಯಿಸಿದ ನಮ್ಮ ಪೂರ್ವಜರ ಕಾಯಕ ( ತಾಳೆ ಎಲೆಗಳನ್ನು ಪ್ರತಿಗಳಾಗಿ ಮಾರ್ಪಡಿಸಿದ ಕಲೆ ಎಲ್ಲಕ್ಕೂ ಹೆಚ್ಚಿನದಾಗಿ ಅವರ ತಾಳ್ಮೆ ) ಸ್ಮರಣೀಯ. ಅತಿಯಾದ  ಅರಣ್ಯನಾಶದಿಂದ ತಾಳೆ ಮರಗಳು ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ಹೊಸ ಪ್ರತಿಗಳು ತಯಾರಿಕೆ ಹಾಗೂ ಬಳಕೆ ಇಲ್ಲದೆ ಹೋದರೂ ಇರುವ ಪ್ರತಿಗಳ ಸಂರಕ್ಷಣೆಯ ಕಾಯಕದಲ್ಲಿ ಅನೇಕ ಮಠ-ಮಂದಿರ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿದೆ, ಮೈಸೂರಿನಲ್ಲಿರುವ Oriental Research Institute ಈ ಪ್ರತಿಗಳನ್ನು ಡಿಜಿಟಲ್ ಸ್  ಮಾಡುತ್ತಿದೆ, ಪ್ರತಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಅವಧಿಯಲ್ಲಿ ಸಂಸ್ಥೆಗೆ ಭೇಟಿ ನೀಡಬಹುದು.

ಎಲೆಮರೆ ಕಾಯಿಯಂತಿರುವ ಪ್ರೊಫೆಸರ್ ಎಸ್ ಎ ಕೃಷ್ಣಯ್ಯ ಎಂಬುವವರು ಈ ಪ್ರತಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉಚಿತವಾಗಿ ತಾಳಿ ಪ್ರತಿಗಳ ಸಂಸ್ಕರಣೆಯನ್ನು ಜನರಿಗೆ ಮಾಡಿಕೊಡುತ್ತಿದ್ದಾರಷ್ಟೇಅಲ್ಲದೆ ತಾಳೆಮರ ಬೆಳಸುವವರಿಗೆ ಬೀಜಗಳನ್ನು ಹಾಗೂ 49,000 ಕ್ಕೂ ಅಧಿಕ ಮರಗಳನ್ನು ದೇಶದುದ್ದಕ್ಕೂ ನಡೆಸಿ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ, ನಿಜಕ್ಕೂ ಇವರ ಕಾಯಕ ಸ್ಮರಣೀಯ.

ಜಾಗ ಇರುವಲ್ಲಿ ಇಂತಹ ಒಂದೊಂದು ತಾಳೆ ಮರಗಳನ್ನು ಬೆಳೆಸಿ ಪೋಷಿಸಿದ್ದಲ್ಲಿ ಕಣ್ಮರೆಯಾಗುತ್ತಿರುವ ಮರ ಉಳಿಸಿಕೊಂಡತಾಗುತ್ತದೆ, ಇತಿಹಾಸದ ಪುಟ ಸೇರುತ್ತಿರುವ ಶಾಸನಗಳ ಬಗ್ಗೆ ಒಲವು ಮೂಡುತ್ತದೆ, ಒಂದು ಕಾಲಕ್ಕೆ ಗತ ವೈಭವದ ಉನ್ನತ ಹಂತದಲ್ಲಿದ್ದ ತಾಳೆಗರಿಯ ಕಾಲವನ್ನು ಸ್ಮರಿಸಿದಂತಾಗುತ್ತದೆ, ಮಕ್ಕಳಿಗೆ ಅರಿವು ಮೂಡುತ್ತದೆ, ಹಾಗೂ ಇವುಗಳ ಸಂರಕ್ಷಣೆಯಲ್ಲಿ ನಮ್ಮದು ಒಂದು ಅಳಿಲು ಸೇವೆಯಾಗುತ್ತದೆ.


ಧನ್ಯವಾದಗಳು.





Sunday, August 28, 2022

ಮುಡಿಗೇರದ ಮೊಲ್ಲೆ.


                        - ಎಸ್ ಪಿ ತೇಜರಾಜು.

  ಆಡುಭಾಷೆಯ ಮಾತೊಂದಿದೆ 'ಹೊಟ್ಟೆಗೆ ಹಿಟ್ಟಿಲ್ಲದೆ ಹೋದರು ಜುಟ್ಟಿಗೆ ಮಲ್ಲಿಗೆ ಹೂವು' ಎಂದು ಹೌದು ಇದು ನಿಜಾನೆ ತಾನೆ ? ಜನ ಎಲ್ಲಿಯಾದರೂ ಹೊಟ್ಟೆ ಖಾಲಿ ಇರುವುದನ್ನು ನೋಡುತ್ತಾರೆಯೇ ಅವರಿಗೆ ಮೊದಲು ಕಾಣಿಸುವುದೇ ವೇಷಭೂಷಣಗಳಲ್ಲವೇ ? 

ಉಳ್ಳವರ ಮನೆಯ ಸಮಾರಂಭಗಳಲ್ಲಿ ನಡೆಯುವ ಆಡಂಬರವನ್ನು ನೀವು ನೋಡಿದ್ದೀರಾ ಎಂದು ಭಾವಿಸುತ್ತೇನೆ, ಇಂತಹ ಕಾರ್ಯಕ್ರಮಗಳನ್ನು ಮಾಡುವುದೇ ಕೆಲವೊಮ್ಮೆ ತೋರ್ಪಡಿಕೆಗಾಗಿ ಎನಿಸಿದರೂ ತಪ್ಪಲ್ಲ, ಟಿಪ್ ಟಾಪಾ ಆಗಿ ರೆಡಿಯಾಗಿ ಕೋಟಿ ಬೆಲೆಬಾಳುವ ಕಾರಿನಿಂದ ಗಂಡಸರು ಇಳಿದರೆ, ಹಿಂದೆಯಿಂದ ಅಲಂಕಾರಗೊಂಡ ಹೆಂಗಸರು ಕೆಜಿಗಟ್ಟಲೆ ಬಂಗಾರವನ್ನು ಹಾಕಿಕೊಂಡು ಬಂದಿರುತ್ತಾರೆ, ಹೂ ಮುಡಿಯುವ ಸಂಸ್ಕೃತಿ ಸ್ವಲ್ಪ ದಿನದ ಹಿಂದೆಯಷ್ಟೇ ಟ್ರೆಂಡಿ ಚೇಂಜ್ ಆಗಿದೆ, ಈಗ ಹೂವಿನ ಡಿಸೈನಿನ ಚಿನ್ನದಾಭರಣಳೇ ಬಂದಿದೆ, ಇನ್ನು ಇಲ್ಲಿ ಬಡಿಸುವ ಊಟದ ವಿಚಾರಕ್ಕೆ ಬಂದರೆ 30 - 40 ವಿಧವಾದ ಭಕ್ಷ್ಯಗಳೇನೋ ಇರುತ್ತದೆ ಎಲ್ಲವನ್ನೂ ಎಲೆಗೆ ಹಾಕಿಸಿಕೊಂಡು ಅನೇಕ ಮಂದಿ ಬಿಡುವುದು ಬೇಸರದ ಸಂಗತಿ, ಆ ವಿಚಾರ ಹಾಗಿರಲಿ

ಶಿವರಾಮ ಕಾರಂತರು ಬರೆದ ಬೆಟ್ಟದ ಜೀವದ ಕಾದಂಬರಿಯ ಸಾಲುಗಳು ಇಲ್ಲಿ ಪ್ರಸ್ತುತವೆನಿಸುತ್ತದೆ, ವೈವಾಹಿಕ ಜೀವನದ 50 ಸಂವತ್ಸರಗಳನ್ನು ಪೂರೈಸಿದ ಭಟ್ಟರು ಹೆಂಡತಿ ಶಂಕರಿಯೊಂದಿಗೆ ಮಾತನಾಡುತ್ತಾ, ತಮ್ಮ ಕೈಯಲ್ಲೇ ಇದ್ದ ಬಟ್ಟೆಯನ್ನು ಅವರ ಹೆಗಲಿಗೆ ಹೊದಿಸಿ ' ನಾವು ಮದುವೆಯಾಗುವ ಸಂದರ್ಭದಲ್ಲಿ ಚಿನ್ನಾಭರಣಗಳು ಇರಲಿಲ್ಲ ಆದರೆ ಹೂವಿನ ಮಾಲೆಯೇ ಆಭರಣವಾಗಿದ್ದವು', ನಿಸರ್ಗ ಶ್ರೀಮಂತಿಕೆಯೊಂದಿಗೆ ಬೆಟ್ಟದಲ್ಲಿ ಜೀವನವನ್ನು ಕಳೆದ ಭಟ್ಟರ ಹೃದಯ ವೈಶಾಲ್ಯ ಎಂತಹದ್ದು ಎಂದು ಈ ಸಾಲುಗಳು ತಿಳಿಸುತ್ತವೆ.

ಮಾನವ ಎಲ್ಲಾ ವಿಷಯದಲ್ಲಿ ತಾರತಮ್ಯ ಮಾಡುವುದನ್ನು ಬಿಡಲಿಲ್ಲ ಎಂಬುದು ಮಾನವನ ಉದ್ದಗಲಕ್ಕೂ ಕಾಣಸಿಗುವ ಚಿತ್ರಣವಾಗಿದೆ, ಈತ ಎಲ್ಲಿಯೋ ಒಂದು ಕಡೆ ಹೂಗಳೊಳಗೂ ಮಾಡಿದ ತಾರತಮ್ಯ ಕೆಲವು ಪುಷ್ಪಗಳು ಮೂಡಿಗೆರೆದಂತಾಗಿ ಅಲಂಕಾರಿಕ ಸಸ್ಯಜಾತಿಗಳೊಳಗೆ ಸೇರಿಕೊಂಡವು ಅವುಗಳಲ್ಲಿ ಕೆಲವೆಂದರೆ ಡೇರೆ ಹೂ, ಟುಲಿಪ್, ದಾಸವಾಳ ಇತ್ಯಾದಿ, ಒಂದು ಕಡೆ ಮಾನವ ಹೂಗಳಲ್ಲಿ ತಾರತಮ್ಯ ಮಾಡಿದ್ದು ಒಳ್ಳೆಯದೆನಿಸುತ್ತದೆ, ಏಕೆಂದರೆ ಕೊನೆಯಪಕ್ಷ ಇಂತಹ ಹೂವುಗಳನ್ನಾದರೂ ಗಿಡದಲ್ಲಿ ನೋಡಿ ಆನಂದಿಸಬಹುದು ಆದರೆ ಈ ಸಸ್ಯಗಳ ಇಂದಿನ ಚಿತ್ರಗಳೇ ಬೇರೆ ಇಂದು ಇವುಗಳನ್ನು ಮದುವೆ, ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.

ಹೂಗಳ ವೈವಿಧ್ಯತೆ ಅಪಾರವಾದದ್ದು ಇವುಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ವೈವಿಧ್ಯಮಯವಾದ ಪುಷ್ಪಗಳು ಇದ್ದರೂ ಸಹ ಯಾವುದೇ ರೀತಿಯ ತಾರತಮ್ಯ ಮಾಡದೆ ತಮ್ಮಷ್ಟಕ್ಕೆ ತಾವು ಶತಮಾನಗಳಿಂದ ಬೆಳೆದು ಬಂದಿವೆ, ಹೂಗಳ ಸೌಂದರ್ಯಕ್ಕೆ ಮಾರುಹೋಗದ ಜನ ಎಲ್ಲಿಯಾದರೂ ಇದ್ದಾರ ? ಪ್ರತಿ ಜೇನುಹುಳುಗಳಿಗೂ ಹೂವು ಬೇಕೇ ಬೇಕು ಇಲ್ಲವಾದಲ್ಲಿ ಹಸುನೀಗುತ್ತವೆ, ಇದರೊಂದಿಗೆ ಹೂಗಳು ಸೌಂದರ್ಯಯುತವಾಗಿ ಬೆಳೆಯಲು ಕಾರಣವೇನು ? ಇವುಗಳು ವಿವಿಧ ಬಣ್ಣ ಹಾಗೂ ಆಕಾರದ ವೈವಿಧ್ಯತೆಯನ್ನು ಹೇಗೆ ಪಡೆದವು ? ಪ್ರತಿ ಮರದ ಹೂ ಮತ್ತೊಂದಕ್ಕಿಂತ ವಿಭಿನ್ನವಾಗಿ ಬೆಳೆದದ್ದು ಹೇಗೆ ? ಇದೇ ಹೂಗಳು ಪಕ್ಷಿಗಳನ್ನು, ಸಾಹಿತಿಗಳನ್ನು ತನ್ನತ್ತ ಸೆಳೆದದ್ದು ಹೇಗೆ ? ಇವು ಸಣ್ಣ ಪ್ರಶ್ನೆಗಳೇ ಎನಿಸಬಹುದು ಆದರೆ ಇಂತಹ ಪ್ರಶ್ನೆಗಳು ವಿಜ್ಞಾನಿಗಳ ತಲೆ ಕೆಡಿಸಿದ್ದವು.

ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲಾದ ( ಜೀವ ವಿಕಸನದಲ್ಲಾದ ) ಬದಲಾವಣೆಗಳು ವೈವಿದ್ಯಮಯವಾದ ಸಸ್ಯ ಜಾತಿಗಳನ್ನು ತಳೆಯಲು ಕಾರಣವಾಯಿತು, ಈ ಸಸ್ಯಗಳಲ್ಲಿ ನಾಲ್ಕು ಲಕ್ಷಕ್ಕಿಂತಲೂ (4,00,000) ಹೆಚ್ಚು ವೈವಿಧ್ಯಮಯವಾಗಿ ಹೂ ಬಿಡುವ ಸಸ್ಯ ಜಾತಿಗಳಿವೆ, ಇವುಗಳಲ್ಲಿ ಕೆಲವು ಪರಾವಲಂಬಿ ಸಸ್ಯಗಳಿವೆ, ಇವುಗಳು ಸಹ ಅಲಂಕಾರಿಕ ಹೂಬಿಡುವ ಸಸ್ಯ ಜಾತಿಗಳಿಗೆ ಸೇರಿದೆ, ಇಂತಹ ಪರಾವಲಂಬಿ ಸಸ್ಯಗಳಲ್ಲಿ ಅತ್ಯಾಕರ್ಷಕವಾಗಿ ಹೂಬಿಟ್ಟ ಸಸ್ಯಗಳೇ ಸೀತಾಳೆ ಗೆಡ್ಡೆ / ಆರ್ಕಿಡ್ಸ್ ಗಳು.

ಹೂಗಳಿಗೆ ವೈವಿಧ್ಯಮಯವಾದ ಬಣ್ಣ ಹೇಗೆ ಬಂದಿತು ಎಂಬ ವಿಚಾರ ರೋಚಕ ವಹಿಸುತ್ತದೆ, ಹೂವುಗಳೊಳಗಿರುವ ವಿವಿಧ ಬಣ್ಣದ ಪಿಗ್ಮೆಂಟ್ ಗಳು / ರಾಸಾಯನಿಕ ಸಂಯೋಜನೆ ಹೂಗಳಿಗೆ ವಿವಿಧ ಬಣ್ಣ ಬರುವಂತ ಮಾಡಿತು.

ಆರ್ಕಿಡ್ ಸಸ್ಯದ ಹೂ ಎಂಬ ಅರ್ಥವೇ ಕೆಲವು ಕಡೆ ಸಂಕೀರ್ಣವಾದ, ಅತಿ ಮನಮೋಹಕ, ಸುಂದರ ಹಾಗೂ ಅತ್ಯಾಕರ್ಷಕ ಹೂ ಎಂದು ಇದೆ, ಈ ಆರ್ಕಿಡ್  ಎಂಬ ಪದ ಗ್ರೀಕ್ ಭಾಷೆಯ 'Orkhis' ಪದದಿಂದ ಬಂದದ್ದು, ಪಾಶ್ಚಾತ್ಯ ಗ್ರೀಕ್ ಸಸ್ಯಶಾಸ್ತ್ರಜ್ಞ Throphrastos ಈ ಪುಷ್ಪಗಳನ್ನು ಕಂಡು ವಿಲಕ್ಷಣ ಹೂವು ಎಂದು ಕರೆದಿದ್ದಾನೆ. ಈ ಆರ್ಕಿಡ್ ಸಸ್ಯಗಳು ಭೂಮಿಯ ಮೇಲೆ ಎರಡನೇ ಅತಿ ಹೆಚ್ಚು ಹೂ ಬಿಡುವ Asteraceae ಕುಟುಂಬಕ್ಕೆ ಸೇರಿದೆ, ಆರ್ಕಿಡ್ ಸಸ್ಯಗಳಲ್ಲಿ 25 ಸಾವಿರಕ್ಕೂ ಹೆಚ್ಚು ಜಾತಿಗಳಿದ್ದು, ಇವುಗಳನ್ನು 763 ತಳಿಗಳನ್ನಾಗಿ ವರ್ಗೀಕರಿಸಲಾಗಿದೆ.

ಆರ್ಕಿಡ್ ಗಳನ್ನು ಬೆಳವಣಿಗೆಯ ಆಧಾರದ ಮೇಲೆ ಮೂರು ಮುಖ್ಯವಾಗಿ ವಿಂಗಡಿಸಲಾಗಿದೆ ಅದುವೇ,

1 ಎಪಿಫೈಟ್ -  ಮರದ ತೊಗಟೆಯ ಮೇಲೆ ಬೆಳೆಯುತ್ತವೆ, ಆದರೆ ಮರಕ್ಕೆ ಯಾವುದೇ ರೀತಿಯ ಹಾನಿ ಉಂಟುಮಾಡುವುದಿಲ್ಲ,

2 ಟೆರೆಸ್ಟ್ರಿಯಲ್ -  ಇದು ಮಣ್ಣಿನಲ್ಲಿ ಬೆಳೆಯುತ್ತದೆ,

3 ಮೈಕೋಹೆಟೆರೊಟ್ರೋಫಿಕ್ -  ಇವುಗಳು ಭಾಗಶಃ ಅಥವಾ ಸಂಪೂರ್ಣವಾಗಿ ದ್ಯುತಿಸಂಶ್ಲೇಷಕವಲ್ಲದ ಸಸ್ಯಗಳಾಗಿವೆ, ಇವು ಶಿಲೀಂಧ್ರಗಳಿಂದ ಶಕ್ತಿ ಮತ್ತು ಪೋಷಕಾಂಶಗಳನ್ನು ಪಡೆಯುತ್ತವೆ.

ಆರ್ಕಿಡ್ ಗಳು ಧ್ರುವ ಪ್ರದೇಶಗಳನ್ನು ಹೊರತುಪಡಿಸಿ, ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಬೆಳೆದರೂ ಮಳೆಗಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ,ಈ ಸಸ್ಯಗಳು ಬಿಡುವ ಹೂಗಳಲ್ಲಿ ಕೆಲವು ಒತ್ತೊತ್ತಾಗಿ ಬೆಳೆದರೆ ಇನ್ನು ಕೆಲವು ಪ್ರತ್ಯೇಕ ಪ್ರತ್ಯೇಕವಾಗಿ ಹೂಬಿಡುತ್ತದೆ, ಇವುಗಳು ಹೂ ಹಿಡಿದು ಏಕದಳ ಬೀಜವನ್ನು ಬಿಡುತ್ತದೆ, ಇವುಗಳ ಎಲೆಗಳು ದಪ್ಪವಾಗಿದ್ದು ಕ್ಲೋರೊಫಿಲ್ ಕೊರತೆ ಇರುವ ಕಾರಣ ಪರಾವಲಂಬಿ ಸಸ್ಯವಾಗುತ್ತದೆ, ಬೇರುಗಳು ದುಂಡಾದ ರಚನೆಯಿಂದ ದಪ್ಪವಾಗಿದ್ದು ನೀರು ಮತ್ತು ಪೋಷಕಾಂಶವನ್ನು ಅರಸುತ್ತಾ ಮರದ ತೊಗಟೆಯ ಮೇಲೆ ಅಂಟಿರುವ ಸಾವಯವ ವಸ್ತುಗಳು, ಧೂಳು ಹಾಗೂ ಪಕ್ಷಿಗಳ ಹಿಕ್ಕೆಯನ್ನು ಆಹಾರವಾಗಿ ಸೇವಿಸುತ್ತಾ ಮರದ ತೊಗಟೆಯನ್ನು ಭದ್ರವಾಗಿ ಹಿಡಿದು ನಿಲ್ಲುತ್ತದೆ.

ಇನ್ನು ಈ ಆರ್ಕಿಡ್ಸ್ ಸಸ್ಯಗಳು ಜನರಿಗೆ ಹೇಗೆ ಪರಿಚಯವಾಯಿತು, ಹೇಗೆ ಮನ್ನಣೆ ಪಡೆಯಿತು, ಹೇಗೆ ಪ್ರಖ್ಯಾತಿಯನ್ನು ಪಡೆಯಿತು ಎಂದು ಮಾಹಿತಿ ತಿಳಿಯಬೇಕಾದರೆ ಕನಿಷ್ಠಪಕ್ಷ ಸುಮಾರು 400 ವರ್ಷಗಳ ಇತಿಹಾಸ ನೋಡಬೇಕಾಗುತ್ತದೆ, 16 ರಿಂದ 17 ನೇ ಶತಮಾನದ ಭಾಗದಲ್ಲಿ ಕಾಡಿಗೆ ಹಾಗೂ ಕೆಲವೇ ಕೆಲವು ಅರಮನೆಗಳಿಗೆ ಸೀಮಿತವಾಗಿದ್ದ ಈ ಪುಷ್ಪ 18ನೇ ಶತಮಾನದ ಆದಿಭಾಗದಲ್ಲಿಯೇ ಬಹಳಷ್ಟು ಪ್ರಖ್ಯಾತಿಯನ್ನು ಪಡೆದು ಪಾಶ್ಚಿಮಾತ್ಯರ ಮನೆಗಳಲ್ಲಿ ತಮ್ಮ ಶ್ರೀಮಂತಿಕೆಯನ್ನು ತೋರ್ಪಡಿಸಿಕೊಳ್ಳಲಿಕ್ಕೆ ಅಲಂಕಾರಿಕ ಗಿಡವಾಗಿ ಬೆಳೆಸಲು ಪ್ರಾರಂಭಿಸುತ್ತಾರೆ. ( ಶ್ರೀಮಂತಿಕೆಯನ್ನು ತೋರ್ಪಡಿಸಿಕೊಳ್ಳುವ ಗಿಡ ಏಕೆಂದರೆ ಈ ಸಸ್ಯ ಹೆಚ್ಚು Care ಅನ್ನು Expect ಮಾಡುತ್ತದೆ, ಹಾಗೂ ಈ ಗಿಡವನ್ನು ಕೊಂಡು ತರುವ ಬೆಲೆಯೂ ಹೆಚ್ಚು ).

ಹೇಗೆ ಈ ಸಸ್ಯ ಜನರ ಮನಸ್ಸಿನಲ್ಲಿ ಹಾಗೂ ಮನೆಯಲ್ಲಿ ಪ್ರಖ್ಯಾತಿಯನ್ನು ಪಡೆದು ವ್ಯಾಪಾರ ವಹಿವಾಟುಗಳು ಹೆಚ್ಚಾದವೋ ಅಂದಿನಿಂದ ಹೆಚ್ಚು ಜನ ವೈವಿಧ್ಯಮಯವಾದ ಆರ್ಕಿಡ್ ಸಸ್ಯಗಳ ಹುಡುಕಾಟದಲ್ಲಿ ಪ್ರಪಂಚದ ಮೂಲೆಗಳನ್ನು ಸುತ್ತಲಾರಂಭಿಸಿ ಜನಮನ್ನಣೆಯನ್ನು ಪಡೆದರು, ಈ ಬೆಳವಣಿಗೆ 18ನೇ ಶತಮಾನದ ಮಧ್ಯ ಭಾಗಕ್ಕೆ ಅತ್ಯಂತ ವೇಗ ಪಡೆದು ಸಸ್ಯಗಳ ಹುಡುಕಾಟ ಎಂಬ ಪದ ಹೋಗಿ ಆರ್ಕಿಡ್ಸ ಸಸ್ಯಗಳ ಬೇಟೆ ಎಂದು ಹೆಸರನ್ನು ಪಡೆದ ಪರಿಣಾಮವಾಗಿ ಒಂದೊಂದಾಗಿ ಆರ್ಕಿಡ್ಸ್ ಜಾತಿಯ ಸಸ್ಯಗಳು ಕಣ್ಮರೆಯಾಗಿ, ಕೆಲವಂತೂ ಅಳಿವಿನಂಚಿಗೆ ಬಂದವು, ಇದು ಹದಿನೆಂಟನೇ ಶತಮಾನದ ಅಂತ್ಯದೊಳಗಾಗಿ 1500 ಹೆಚ್ಚು ಆರ್ಕಿಡ್ಸ್ ಸಸ್ಯಗಳು IUCN ನ Redbook ಗೆ ಸೇರಿದವು.

ಬಹಳಷ್ಟು ಮಂದಿ ಆರ್ಕಿಡ್ಸ್ ಬೇಟೆಗಾರರು 18ನೇ ಶತಮಾನದಲ್ಲಿ ಭಾರತಕ್ಕೆ ಬಂದು ಸಸ್ಯಗಳನ್ನು ಹುಡುಕಿದ್ದಾರೆ, ಆದರೆ ಆ ಸಮಯಕ್ಕೆ ಭಾರತೀಯರು ಆರ್ಕಿಡ್ಸ್ ಪುಷ್ಪಗಳನ್ನು ಗಿಡದಲ್ಲಿಯೇ ನೋಡಿ ಆನಂದಪಡುತ್ತಿದ್ದರೇ ಹೊರತು ಯಾವ ಆರ್ಕಿಡ್ ಸಸ್ಯಗಳನ್ನು ಅಳಿವಿನಂಚ ಹಂತಕ್ಕೆ ತಲುಪಿಸಿರಲಿಲ್ಲ, ಬ್ರಿಟಿಷರೇ ಆಳುತ್ತಿದ್ದ ಆ ಕಾಲದಲ್ಲಿ ಸ್ಕಾಟ್ಲೆಂಡ್ನ ನ ಸಸ್ಯಶಾಸ್ತ್ರಜ್ಞ William Roxburgh, Hortus Bengalensis ಎಂಬ ಪುಸ್ತಕದಲ್ಲಿ ನೂರಾರು ಸಸ್ಯಗಳ ವಿವರಣೆಗಳನ್ನು ನೀಡಿದ್ದಾನೆ ಇದರಲ್ಲಿ ಈತ ಒಂದು ಬಾರಿ ಚಿತ್ತಗಾಂಗ್ ಪ್ರದೇಶದಲ್ಲಿ ( ಇಂದಿನ ಬಾಂಗ್ಲದಲ್ಲಿದೆ ) Thecostele alata ಎಂಬ ಆರ್ಕಿಡ್ ಸಸ್ಯವನ್ನು ನೋಡಿದ್ದೇನೆ ಎಂದು ಉಲ್ಲೇಖಿಸಿದ್ದಾನೆ, ಆದರೆ ಈ ವಿಧವಾದ ಆರ್ಕಿಡ್ ಸಸ್ಯ ಇಲ್ಲಿಯವರೆಗೂ ಎಲ್ಲಿಯೂ ಕಾಣಸಿಕ್ಕಿಲ್ಲ.

ಭಾರತದ ಉದ್ದಗಲಕ್ಕೂ ವೈವಿಧ್ಯಮಯವಾದ ಆರ್ಕಿಡ್ ಸಸಿಗಳನ್ನು ನೋಡಲು ಸಿಗುತ್ತವೆ, Botanical survay of India ಎಂಬ ಸಂಸ್ಥೆ ಭಾರತದಲ್ಲಿ 1252 ವಿಧವಾದ ಆರ್ಕಿಡ್ ಸಸ್ಯಗಳಿವೆ ಎಂದು, ಇವುಗಳ ಸಾಂದ್ರತೆ ಹೆಚ್ಚಿನದಾಗಿ ಈಶಾನ್ಯ ಭಾರತದ ಕಾಡುಗಳು, ಪಶ್ಚಿಮ ಘಟ್ಟದ ಸಾಲುಗಳು ಹಾಗೂ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಕಾಣಸಿಗುತ್ತದೆ ಎಂದು ತಿಳಿಸುತ್ತದೆ.

ಪ್ರಸ್ತುತ ಪ್ರಪಂಚದಲ್ಲಿ 30,000 ವೈವಿಧ್ಯಮಯವಾದ ಆರ್ಕಿಡ್ ಸಸ್ಯಗಳು ಇರಬಹುದು, ಆದರೆ ಇಂದು ಅವುಗಳನ್ನೆಲ್ಲವನ್ನೂ ಸಂರಕ್ಷಣೆಯ ದೃಷ್ಟಿಕೋನದಲ್ಲಿಯೇ ನೋಡಿಕೊಳ್ಳಲಾಗುತ್ತದೆ, ಏಕೆಂದರೆ 1500 ಹೆಚ್ಚು ಆರ್ಕಿಡ್ ತಳಿಗಳು ಕಣ್ಮರೆಯಾಗಿದೆ, 195 Critically endangerd ಪಟ್ಟಿಯಲ್ಲಿದೆ ಹಾಗೂ 394 endangerd ಸಾಲಿನಲ್ಲಿದೆ. 

ಪ್ರಸ್ತುತ ಬಾಂಗ್ಲಾದೇಶ ಒಂದರಲ್ಲಿಯೇ 32 ಪ್ರಭೇದದ ಆರ್ಕಿಡ್ ಳು ಗತಿಸಿಹೋಗಿದೆ, ಕಾಂಬೋಡಿಯ ದೇಶ ಒಂದರಲ್ಲಿಯೇ 4270 ವಿಧವಾದ ಆರ್ಕಿಡ್ ಸಸ್ಯ ಗಳಿದ್ದು ಇವುಗಳಲ್ಲಿ ಶೇಕಡಾ 37 ಅಳಿವಿನಂಚಿಗೆ ತಲುಪುತ್ತಿವೆ, 21ನೇ ಶತಮಾನದ ವಿಜ್ಞಾನ ಯುಗದಲ್ಲಿರುವ ನಾವು Grafting & Hybrid ವಿಧಾನದಿಂದ 1,00,000 ದಷ್ಟು ವೈವಿಧ್ಯಮಯವಾದ ಆರ್ಕಿಡ್ ತಳಿಗಳನ್ನು ಸಂಶೋಧಿಸಿ ಬೆಳೆಸಲಾಗಿದೆ.

ಈ ಪ್ರಕೃತಿಯನ್ನು ಎಷ್ಟು ಬಾರಿ ಅರ್ಥ ಮಾಡಿಕೊಳ್ಳಲಿಕ್ಕೆ ಪ್ರಯತ್ನಪಟ್ಟರು ಮನುಷ್ಯನಿಂದ ಸಾಧ್ಯವೇ ಆಗಿಲ್ಲ, ಏಕೆಂದರೆ, ಈ ಹಿಂದೆಯೇ ಗತಿಸಿ ಹೋಗಿದೆ ಎಂದುಕೊಳ್ಳಲಾಗಿದ್ದ Eulophia obtusa ಎಂಬ ನೆಲದ ಆರ್ಕಿಡ್ ಸಸ್ಯ ಸುಮಾರು 118 ವರ್ಷಗಳ ಬಳಿಕ ಭಾರತದ ಉತ್ತರಾಖಂಡ ರಾಜ್ಯದಲ್ಲಿ ಕಾಣಸಿಕ್ಕಿದ್ದು.
ಆರ್ಕಿಡ್ ಸಸಿಗಳನ್ನು ಕೇವಲ ಅಲಂಕಾರಿಕ ಸಸ್ಯ ಅಷ್ಟೇ ಅಲ್ಲದೆ, ಇದರಲ್ಲಿರುವ ಕೆಲವು ಸಸ್ಯಗಳು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದ್ದು ಆಯುರ್ವೇದದಲ್ಲಿಯೂ ಬಳಕೆಯಲ್ಲಿದೆ.

ಪ್ರಪಂಚದಲ್ಲಿ ವೈವಿಧ್ಯಮಯವಾದ ಆರ್ಕಿಡ್ ಸಸ್ಯಗಳು ನೋಡಲು ಸಿಗುತ್ತವೆ,
Grammatophyllum speciosum ಎಂಬ ಆರ್ಕಿಡ್ ಹೂವು ಪ್ರಪಂಚದ ದೈತ್ಯ ಹೂ ಎಂದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ನೊಂದಾಯಿಸಿ ಕೊಂಡಿದೆ,

Platystele jungermannioides ಎಂಬ ಆರ್ಕಿಡ್ ಹೂಗಳು ಪ್ರಪಂಚದ ಪುಟ್ಟ ಹೂಗಳೆಂದು ಗುರುತಿಸಿಕೊಂಡಿದೆ.

ಗ್ರೀಕ್ ಸಸ್ಯಶಾಸ್ತ್ರಜ್ಞ Throphrastos ಈ ಪುಷ್ಪಗಳನ್ನು ವಿಲಕ್ಷಣ ಹೂವು ಎಂದು ಕರೆಯಲು ಕಾರಣಗಳಿವೆ, ಹಾಗೂ ಕೆಲವು ಆರ್ಕೆಟ್ ಸಸ್ಯಗಳಿಗಿರುವ ಹೆಸರುಗಳು ನಗೆಯನ್ನು ತರಿಸುತ್ತದೆ,

1 Naked man orchid / Orchis italica
2 Bird orchid 
3 Flyingduck orchid
4 Monyey face orchid
5 Bee orchid
6 White egret orchid


7 Holy ghost orchid
8 Swaddhed babies orchid
9 Tiger face orchids
10 Clamsell orchids
11 Moth orchids
12 Angel orchids


13 Ballerina orchids
14 Lady slipper orchids
15 Violet color orchids
16 Rose orchids
17 Queen orchids
18 Little star orchids


ಬಹಳಷ್ಟು ಆರ್ಕಿಡ್ ಸಸ್ಯಗಳು ಕೇವಲ ಬಣ್ಣಕ್ಕೆ ಮಾತ್ರ ಸೀಮಿತವಾಗದೆ ಪರಿಮಳ ಗಂಧವನ್ನು ಹೊಂದಿದೆ,

1 Sweet / ಸಿಹಿ ರುಚಿಯನ್ನು - Brassavola nodosa, Little star orchid

2 Coconut / ತೆಂಗಿನಕಾಯಿಯ ರುಚಿಯನ್ನ - Encyclia radiata, Maxillaria tenifolia 

3 Jasmine / ಮಲ್ಲಿಗೆ ರುಚಿಯನ್ನು - Neofinetia falcata 

4 Rose / ಗುಲಾಬಿ ರುಚಿಯನ್ನು - Miltoniopsis

5 Honey /  ಜೇನುತುಪ್ಪದ ರುಚಿಯನ್ನು-  Encyclia fragrans


ಕೆಲವು ದೇಶಗಳು ಆರ್ಕಿಡ್ ಸಸ್ಯಗಳನ್ನು ರಾಷ್ಟ್ರ ಪುಷ್ಪ ಎಂದು ಗುರುತಿಸಿಕೊಂಡಿದೆ ಅವುಗಳಲ್ಲಿ ಕೆಲವೆಂದರೆ

1 Venuzuela - Cattleya mossiae

2 Colombia - Cattleya trianae

3 Singapor - Vanda Miss 

4 Belize - Black orchids, etc


ಇನ್ನು ನಮ್ಮ ಭಾರತದಲ್ಲಿಯೇ ಮನಮೋಹಕ ಆರ್ಕಿಡ್ ಸಸ್ಯಗಳಿವೆ,

1 Blue vanda orchid
2 Dearei orchid
3 Miss joaguim orchid
4 Stangeana orchid
5 Mountain vanda orchid

6 Vanda bicolor orchid
7 Vanda tessellate orchid
8 Vanda wightii
9 Vanda cristata


ಭಾರತದಲ್ಲಿ ಅತ್ಯಂತ ಹೆಚ್ಚು ಆರ್ಕಿಡ್ಸ್ ಸಸ್ಯಗಳು ಸಿಕ್ಕಿಂ ರಾಜ್ಯದಲ್ಲಿ ಕಂಡು ಬರುತ್ತವೆ, ಆದುದರಿಂದಲೇ ಈ ರಾಜ್ಯವನ್ನು ಹೂ ಪ್ರೀತಿಸುವವರ ಸ್ವರ್ಗ ' A flower lovers heaven' ಎಂದು ಕರೆಯಲಾಗುತ್ತದೆ. ಹಾಗೂ ತನ್ನ ರಾಜ್ಯ ಪುಷ್ಪವೆಂದು Dendrobium nobile ಆರ್ಕಿಡ್ ಸತ್ಯವನ್ನೇ ಗುರುತಿಸಿಕೊಂಡಿದೆ, ಈ ರಾಜ್ಯದಲ್ಲಿ ಒಟ್ಟು 165 ವೈವಿಧ್ಯಮಯವಾದ ಆರ್ಕಿಡ್ಸ್ ಸಸ್ಯಗಳು ಕಂಡುಬಂದಿದ್ದು ಇವು ದೇಶದ 30% ಆರ್ಕೆಟ್ ಸಸಿಗಳನ್ನು ಪ್ರತಿನಿಧಿಸುತ್ತದೆ.

ಅರುಣಾಚಲಪ್ರದೇಶದಲ್ಲಿ ದೇಶದ ಮೊದಲ ಆರ್ಕಿಡ್ ಗಾರ್ಡನ್ ಅನ್ನ ನಿರ್ಮಿಸಲಾಗಿದೆ.

ಕನ್ನಡಿಗರಿಗೆ ಅತಿ ಹೆಚ್ಚು ಹತ್ತಿರವಾಗಿರುವ ಆರ್ಕಿಡ್ ಸಸ್ಯ ಯಾವುದು ಎಂದು ನಿಮಗೆ ತಿಳಿದಿದೆಯೇ ? ಈ ಸಸ್ಯವನ್ನು ಅನೇಕರು ತಮ್ಮ ಮನೆಗಳಲ್ಲಿ ಬೆಳೆಸಿದ್ದಾರೆ, ಪರಿಮಳವನ್ನು ಸೂಸುವುದಷ್ಟೇ ಅಲ್ಲದೆ ಔಷಧೀಯ ಗುಣವನ್ನು ಹೊಂದಿದೆ ಇದರ ತೈಲವನ್ನು ತಲೆನೋವಿನ ರಾಮಬಾಣವಾಗಿ ಉಪಯೋಗಿಸುತ್ತಾರೆ, ಹಾಗಾದರೆ ಈಗ ಹೇಳಿ ಆ ಆರ್ಕಿಡ್ ಸಸ್ಯ ಯಾವುದಾಗಿರಬಹುದು ? ನನಗೂ ಮೊದಲು ಈ ಸಸ್ಯ ಆರ್ಕಿಡ್ ಗೆ ಸೇರಿದೆ ಎಂದು ತಿಳಿದಿರಲಿಲ್ಲ, Bauhinia acuminata ಎಂಬ ವೈಜ್ಞಾನಿಕ ಹೆಸರುಳ್ಳ ಆರ್ಕಿಡ್ಸ್ ಸಸ್ಯವನ್ನು ಕನ್ನಡಿಗರು ಇದನ್ನ ಮಂದಾರ ಪುಷ್ಪ ಎಂದು ಕರೆಯುತ್ತಾರೆ.

ಇನ್ನು ನಮ್ಮ ಪಶ್ಚಿಮಘಟ್ಟದ ಸಾಲಿನಲ್ಲಿ ಪ್ರಖ್ಯಾತಿಯನ್ನು ಪಡೆದ Aerides maculos ಎಂಬ ವೈಜ್ಞಾನಿಕ ಹೆಸರುಳ್ಳ ಆರ್ಕಿಡ್ಸ್ ಸಸ್ಯ ಇಂಗ್ಲಿಷ್ ನಲ್ಲಿ Fox tail ಕನ್ನಡದಲ್ಲಿ ನರಿಯ ಬಾಲ ಅಥವಾ ದ್ರೌಪತಿ ಪುಷ್ಪವೆಂದು ಕರೆಯುತ್ತಾರೆ.
ಇನ್ನು ಕೆಲವು ಆರ್ಕಿಡ್ಸ್ ಸಸ್ಯದ ಹಣ್ಣುಗಳ ಸ್ವಾದವನ್ನು ನಾವು ಆಸ್ವಾದಿಸಿರುತ್ತೇವೆ ಆದರೆ ಅವು ನಿಜವಾಗಿಯೂ ಆರ್ಕಿಡ್ ಸಸ್ಯಗಳಿಂದ ಬೆಳೆದಿದೆ ಎಂದು ತಿಳಿದಿರುವುದೇ ಇಲ್ಲ ಇದಕ್ಕೆ ಒಂದು ಉದಾಹರಣೆ ಮಡಗಾಸ್ಕರ್ ದೇಶದಲ್ಲಿ ಹೆಚ್ಚು ಬೆಳೆದು ಇಡೀ ಪ್ರಪಂಚಕ್ಕೆ ರಫ್ತಾಗುವ ಹಾಗೂ ಹೆಚ್ಚು ಬೆಲೆಬಾಳುವ ಹಣ್ಣುಗಳೇ Vanilla orchids, ಈ flavour ರನ್ನು ಹೆಚ್ಚಿನದಾಗಿ ಐಸ್ ಕ್ರೀಮ್ ಲ್ಲಿ ತಿಂದಿರುತ್ತವೆ ಅಲ್ಲವೇ ? ಹೀಗೆ ಅನೇಕ ವಿಧವಾದ ಆರ್ಕಿಡ್ ಗಳನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಇಷ್ಟೆಲ್ಲ ವೈವಿಧ್ಯಮಯವಾದ ಹಾಗೂ ಇತಿಹಾಸವನ್ನು ಹೊಂದಿರುವ ಆರ್ಕಿಡ್ ಸಸ್ಯಗಳನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಜೀವವೈವಿಧ್ಯ ( Botanical garden ) ಪಾರ್ಕ್ ಗಳು ಉಳಿಸಿ ಮುಂದಿನ ಭವಿಷ್ಯಕ್ಕಾಗಿ ಸಂರಕ್ಷಿಸುತ್ತಿದೆ, ಇವುಗಳಲ್ಲಿ ಕೆಲವೆಂದರೆ Royal botanical garden - London , North american orchids conservation etc, ಇನ್ನೂ ರಾಷ್ಟ್ರೀಯ ಮಟ್ಟದಲ್ಲಿ ಭಾರತದಲ್ಲಿ ಜಗದೀಶ್ ಚಂದ್ರ ಬೋಸ್ Botanical garden ನಲ್ಲಿ & number of botanical garden ಗಳಲ್ಲಿ ಸಂರಕ್ಷಿಸಲ್ಪಪಟ್ಟಿದೆ, ರಾಜ್ಯಮಟ್ಟದಲ್ಲಿ ಅದರಲ್ಲಿಯೂ ನಮ್ಮ ಕರ್ನಾಟಕದಲ್ಲಿ Orchids society of karnataka ಸಂರಕ್ಷಣೆಯಲ್ಲಿ ತೊಡಗಿದೆ, ಸಂಸ್ಥೆಗಳ ಹೊರತಾಗಿಯೂ ಅನೇಕ ಖಾಸಗಿ ವ್ಯಕ್ತಿಗಳು ಎಲೆಮರೆ ಕಾಯಿಗಳಂತೆ ಇಂತಹ ಅದ್ಭುತ ಸಸ್ಯಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ, ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಅರಣ್ಯ ಇಲಾಖೆಯ ನೌಕರರು ಆದ ಕೆ ಎಸ್ ಶಶಿಧರ್ ಎಂಬುವವರು ತಮ್ಮ ಮನೆಯ ತಾರಸಿಯಲ್ಲಿ ವೈವಿಧ್ಯಮಯವಾದ ಆರ್ಕಿಡ್ಸ್ ಸಸ್ಯಗಳನ್ನು ಬೆಳೆಸಿದ್ದಾರೆ.

ನೋಡಿ ಒಂದು ಪುಟ್ಟ ಹೂ ಬಿಡುವ ಸಸ್ಯ ಇಡೀ ಪ್ರಪಂಚದ ಜನರನ್ನು ತನ್ನತ್ತ ಸೆಳೆದು, ಅಲಂಕಾರಿಕ ಸಸ್ಯಗಳ ಸಾಲಿನ ಅಗ್ರಗಣ್ಯ ಸ್ಥಾನಮಾನ ಪಡೆದ ಬಗೆಯನ್ನು, ಹೇಗೆ ಜನರು ದುಶ್ಚಟಗಳಿಗೆ ದಾಸರಾಗುತ್ತಾರೋ, ಅದೇ ರೀತಿ ಪ್ರಪಂಚದ ಹಲವಾರು ಜನ ವೈವಿಧ್ಯಮಯವಾದ ಆರ್ಕಿಡ್ ಸಸ್ಯಗಳ ಸಂಗ್ರಹದಲ್ಲಿ ದಾಸರಾಗಿದ್ದಾರೆ, ಈ ಸಂಗ್ರಹ ನಮಗೆ ಸಂತಸ, ಮನಶಾಂತಿ ಹಾಗೂ ಆನಂದವನ್ನು ನೀಡಿದೆ ಎಂದು ಹೇಳುತ್ತಾರೆ.

ಪ್ರತಿವರ್ಷವೂ ಹವಾಮಾನದ ವೈಪರೀತ್ಯ ಹಾಗೂ ಇತರೆ ಕಾರಣಗಳಿಂದ ಈ ಅದ್ಭುತ ಸಸ್ಯಗಳು ಕಣ್ಮರೆಯಾಗುತ್ತಲಿವೆ, ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ.

ಮುಡಿಗೇರಿದ ಪುಷ್ಪವಾದರೂ ಸೀತಾಳೆ ಗೆಡ್ಡೆ / ಆರ್ಕಿಡ್  ಸಸ್ಯಗಳಿಗಿರುವ ವೈವಿಧ್ಯತೆ ಹಾಗೂ ಇತಿಹಾಸ ಈ ಅಂಕಣದಿಂದ ತಿಳಿಯಿತು ಎಂದು ಭಾವಿಸಿದ್ದೇನೆ, ಎಲ್ಲೆಡೆಯೂ ಹಸಿರು ಕಿಚ್ಚೆಚ್ಚಲಿ, ಕಿಚ್ಚಸ್ಟೇಯಲ್ಲ ಹಸಿರು ಹೆಚ್ಚಲಿ.

ಧನ್ಯವಾದಗಳು.



Friday, July 1, 2022

ಮಣ್ಣಿಂದ ಕಾಯ ಮಣ್ಣಿಂದ.



                     -  ಎಸ್ ಪಿ ತೇಜರಾಜು.

 ದಾಸರ ಪದಗಳಲ್ಲಿ ಒಂದಾದ ಮಣ್ಣಿಂದ ಕಾಯ ಮಣ್ಣಿಂದ ಗೀತೆಯನ್ನು ಕೇಳಿರಬಹುದು, ಜಾನಪದದಲ್ಲಿ ಬೆಳಗಾಗೆದ್ದು ಕುಂಬಾರಣ್ಣ, ಬೆಳಗಾಗಿ ಎದ್ದು ಯಾರ್ಯಾರ ಮುಖ ನೋಡಲಿ ಎಳ್ಳು ಜೀರಿಗೆ ಬೆಳೆಯೋ ಭೂಮ್ತಾಯಿನಾ ಎದ್ದೊಂದುಗಳಿಗೆ ನೆನೆದೇನು ಎಂಬ ಗೀತೆಯನ್ನು, ಈಳೆ ನಿಂಬೆ ಮಾವು ಮಾದಲಿಕೆಗೆ ಹುಳಿ ನೀರೆರೆದವರಾರಯ್ಯ ? ಎಂಬ ವಚನವನ್ನು, ಕುವೆಂಪು ರಚಿತ ಉಳುವ ಯೋಗಿಯ ನೋಡಲ್ಲಿ, ಡಾಕ್ಟರ್ ರಾಜಕುಮಾರ್ ಅವರ ಹಾಡಿರುವ ಆಗದು ಎಂದು ಕೈ ಕಟ್ಟಿ ಕುಳಿತರೆ, ನಾವಿರುವ ತಾಣವೆ ಗಂಧದ ಗುಡಿ ಎಂಬ ಗೀತೆಗಳನ್ನು ನೀವು ಆಲಿಸಿರಬಹುದು, ಈ ಗೀತೆಗಳೆಲ್ಲವೂ ಜನಪ್ರಿಯವಾದದ್ದು ಮಣ್ಣಿನ ಶ್ರೇಷ್ಠತೆಯಿಂದ ತಾನೇ ?

ಮಣ್ಣಿಲ್ಲಿ ಅಂತಹ ವಿಷಯ ಏನಿದೆ ಎಂದು ಭಾವಿಸಿ ಸುಮ್ಮನಾಗಿಬಿಡುತ್ತೇವೆ ಆದರೆ ಈ ಮಣ್ಣು ಎಷ್ಟು ವಿಷಯಗಳಲ್ಲಿ ಕಲೆತು ಬೆರೆತು ಕರಗತವಾಗಿದೆ ಎಂದರೆ ನಮ್ಮ ದೇಹದ ಪ್ರತಿ ಜೀವಕೋಶದಲ್ಲಿಯೂ ಮಣ್ಣಿನ ಕಣಗಳು ಅಡಕವಾಗಿದೆ.

ಭೂಮಿಯ ಮೇಲೆ ಮಣ್ಣೇ ಸರ್ವಸ್ವ, ಹೌದು ನಿಜ ಅಲ್ಲವೇ ? ಮಣ್ಣಿಂದಲೇ ಮರ-ಗಿಡಗಳು, ಮಣ್ಣಿಂದಲೇ ಆಹಾರ, ಮಣ್ಣಿಂದಲೇ ನೀರು, ಮಣ್ಣಿಂದಲೇ ನಾವು, ಇದೇ ಮಣ್ಣನ್ನು ಬಳಸಿಯೇ ಅಲ್ಲವೇ ಮಾನವ ಮನೆ-ಮಠ, ಮಡಕೆ, ಹೆಂಚನ್ನು ಮಾಡಿದ್ದು ? ಈ ಮಣ್ಣೊಳಗೆ ತಾನೇ ಗಿಡಗಳಿಗೆ ಬೇಕಾದಂತಹ ಸಮಸ್ತ ಪೋಷಕಾಂಶಗಳು ಅಡಕವಾಗಿದ್ದು, ಅಂತರ್ಜಲ ಸೇರಿದ್ದು, ಮಣ್ಣ ಮಗ ಕೆಸರಲ್ಲಿ ಬೆರೆತು ತಾನೆ ಶ್ರೀಮಂತನಾಗಿದ್ದು, ಸ್ತ್ರೀಯರು ಬಲು ಇಷ್ಟ ಪಡುವ ಚಿನ್ನ, ಬೆಳ್ಳಿ, ವಜ್ರ ಬಗೆಬಗೆಯ ಲೋಹಗಳು ದೊರಕಿದ್ದು, ಪ್ರಪಂಚದ ಎತ್ತರದ ಪ್ರತಿಮೆ ಇರುವುದು ಈ ಮಣ್ಣ ಮೇಲೆಯೇ ತಾನೇ ?

ಎಲ್ಲಕ್ಕಿಂತ ಮಿಗಿಲಾಗಿ ಭೂಮಿಯ ಮೇಲಿರುವ ಸಕಲ ಚರಾಚರ ವಸ್ತುಗಳು ಕೂಡ ಹುಟ್ಟಿರುವುದು ಈ ಮಣ್ಣಿಂದಲೇ, ಉಸಿರು ನಿಂತಾಗ ಕೊನೆಗೆ ಸೇರುವುದು ಈ ಮಣ್ಣಲ್ಲೇ, ಇಷ್ಟೆಲ್ಲಾ ಕಾರಣಗಳಿಂದಲೇ ಮಣ್ಣು ಮಾನವನ ಜೀವನದಲ್ಲಿ ಜೀವಂತಿಕೆಯನ್ನು ಪಡೆದುಕೊಂಡಿದೆ. 

ಕಟ್ಟಡ ಮಣ್ಣ ಮೇಲೆ ನಿಂತಿರುವುದರಿಂದ ಜೀವಂತಿಕೆಯನ್ನು ಪಡೆದುಕೊಳ್ಳಬಹುದೆಂದಾದರೆ, ಮಣ್ಣಿಗೆ ಜೀವಂತಿಗೆ ಹೇಗೆ ಬಂದಿತು ? ಮಣ್ಣಿನ ನಿಜವಾದ ಜೀವಂತಿಕೆಗೆ ಎಂದರೇನು ? ಮಣ್ಣು ನಿಜವಾಗಿಯೂ ಜೀವಿಸುತ್ತದ ? ಹಾಗಾದರೆ ಅದು ಹೇಗೆ ಜೀವಿಸುತ್ತದೆ ? ಇಂತಹ ಅನೇಕ ಕುತೂಹಲ ಸಂಗತಿಯ ಆಗರವೇ ಇಂದಿನ ಅಂಕಣ.

ಭೂಮಿ ಉಗಮವಾಗಿ ಸುಮಾರು 4.5 ಬಿಲಿಯನ್ ವರ್ಷಗಳಾಗಿದೆ, ಇದರಲ್ಲಿ ಸುಮಾರು 1.5 ಬಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲೆ ಮಣ್ಣಿನ ಪದರ ರಚನೆಯಾಗಿ ಜೀವ ಚಕ್ರ ಪ್ರಾರಂಭವಾಗತೊಡಗಿತು, ಮಣ್ಣು ಭೂಮಿಯ ಮೇಲಿನ ತೆಳುವಾದ ಮೇಲ್ಪದರ, ( ಮಾನವನ ದೇಹದ ಮೇಲಿರುವ ಚರ್ಮದ ಹಾಗೆ ) ಇದು ಸಾವಯವ ವಸ್ತು, ಖನಿಜ, ಅನಿಲ, ದ್ರವಗಳ ಸಮ್ಮಿಶ್ರಣ, ತರಗೆಲೆ, ಕೊಳೆತ ಪ್ರಾಣಿಗಳ ದೇಹ ಮಣ್ಣೊಳಗೆ ಸಮ್ಮಿಶ್ರಣವಾಗಿದೆ ಮಣ್ಣು ಮತ್ತಷ್ಟು ಜೀವಂತಿಕೆಯನ್ನು ಪಡೆಯುತ್ತದೆ.

ಮಣ್ಣು ಶಿಲೆಗಳ ಉಪ ಉತ್ಪನ್ನ, 1 CM ಮಣ್ಣು ತಯಾರಾಗಲು 400 ರಿಂದ 500 ವರ್ಷ ಸಮಯ ತೆಗೆದುಕೊಳ್ಳುತ್ತದೆ. ಸತ್ವಯುತ 1ಗ್ರಾಂ ಮಣ್ಣಿನಲ್ಲಿ 2.5 ಬಿಲಿಯನ್ micro-organisms ಜೀವಿಸುತ್ತವೆ. ಮಣ್ಣು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗುತ್ತಾ ಹೋಗುತ್ತದೆ, ರುಚಿ, ಬಣ್ಣ, ಸತ್ವ, ರಚನೆ ಆಧಾರದ ಮೇಲೆ ಮುಖ್ಯವಾಗಿ 6 ವಿಧವಾಗಿ ವಿಂಗಡಿಸಲಾಗಿದೆ.1 ಮೆಕ್ಕಲು ಮಣ್ಣು, 2 ಕೆಂಪು ಮಣ್ಣು,3 ಕಪ್ಪು ಮಣ್ಣು,4 ಲ್ಯಾಟರೈಟ್ ಮಣ್ಣು,5 ಮರುಭೂಮಿ ಮಣ್ಣು, 6 ಅರಣ್ಯ ಮಣ್ಣು. 
 

ಸತ್ವಯುತ ಮಣ್ಣು ಕೇವಲ 100 ಸೆಂಟಿಮೀಟರ್ ಮಾತ್ರ ಇದ್ದು ಅದರಲ್ಲಿ ಮೊದಲ 50 CM ಮಣ್ಣು ಬಹಳ ಶ್ರೀಮಂತವಾಗಿರುತ್ತದೆ ಈ ಸಂಪತ್ತು ಗಿಡಮರಗಳ ಬೆಳವಣಿಗೆ ಬಹುಮುಖ್ಯವಾಗಿರುತ್ತದೆ, ಮಣ್ಣು ಖನಿಜ ಸಂಪನ್ಮೂಲಗಳಿಂದಲೂ ಆವೃತವಾಗಿದೆ ಅವುಗಳೆಂದರೆ  ಮೆಗ್ನೀಷಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ, ಐರನ್, ಜಿಂಕ್, ಕಾಪರ್, ಸಿಲ್ವರ್, ಇತ್ಯಾದಿ, ಇಷ್ಟೆಲ್ಲಾ ಅಂಶಗಳು ಮಣ್ಣಲ್ಲಿ ಇದ್ದಿದ್ದರಿಂದ ಕರ್ನಾಟಕ ಗಂಧದಗುಡಿಯಾದದ್ದು.

ಇನ್ನೂ ಕೃಷಿಯ ವಿಷಯಕ್ಕೆ ಬರುವುದಾದರೆ ಮಣ್ಣಿರದೆ ಯಾವ ಬೆಳೆಯನ್ನು ಬೆಳೆಯಲಿಕ್ಕೆ ಸಾಧ್ಯವಿಲ್ಲ, ಇಡೀ ಪ್ರಪಂಚಕ್ಕೆ ಮಾದರಿಯಾದ ಕೃಷಿ ಪದ್ಧತಿ ಇದ್ದಿದ್ದು ನಮ್ಮ ಭಾರತದಲ್ಲಿ, ಇದಕ್ಕೆ ಬಹಳ ಪುರಾವೆ ಹಾಗೂ ಉಲ್ಲೇಖಗಳು ದೊರಕುತ್ತದೆ, ಸುಮಾರು ಹತ್ತನೇ ಶತಮಾನದ ಕಾಲದಲ್ಲಿಯೇ ಇಲ್ಲಿಯ ಸುರಪಾಲ ತನ್ನ ವೃಕ್ಷಾಯುರ್ವೇದ ಮೂಲಕ ಪಂಚಭೂತಗಳಲ್ಲಿ ಒಂದಾದ ಮಣ್ಣಿನ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದ್ದಾರೆ, ಮಣ್ಣಿನ ರಚನೆ, ಧರ್ಮ, ಭೌಧಿಕ ಗುಣಧರ್ಮ, ಗಿಡಗಳ ಆಯ್ಕೆ, ಮಣ್ಣಿನ ಆಧಾರದ ಮೇಲೆ ಗಿಡಗಳನ್ನು ಬೆಳೆಯುವ ಕ್ರಮ, ಮಣ್ಣು ಹಾಗು ಗಿಡದ ಪೋಷಣೆ, ಮಳೆ, ನಕ್ಷತ್ರ, ಉಳುಮೆ ಮಾಡಬೇಕಾದಂತಹ ದಿನ, ಹೀಗೆ ಹತ್ತಾರು ವಿಷಯಗಳ ಬಗ್ಗೆ ಬಹಳ ವಿಸ್ತೃತವಾಗಿ ವೃಕ್ಷಾಯುರ್ವೇದದಲ್ಲಿ ತಿಳಿಸಲಾಗಿದೆ, ಇದಲ್ಲದೆ, ಅಥರ್ವವೇದ, ವರಹಮಿಹಿರರ ಬೃಹತ್ ಸಂಹಿತೆ, ಸಾರಂಗಧರನ ಸಾರಂಗಧರ ಪದ್ಧತಿ ಕೃಷಿಯ ಬಗ್ಗೆ ಮಾಹಿತಿ ದೊರಕುತ್ತದೆ.

                          

ಮಾನವ ತಯಾರಿಸಿದ ಕೆಲವು ವಸ್ತುಗಳನ್ನು ಹೊರತುಪಡಿಸಿ ಪ್ರಕೃತಿಯಲ್ಲಿ ದೊರಕುವ ಎಲ್ಲ ವಸ್ತುಗಳು ನೂರಕ್ಕೆ ನೂರು ಪ್ರತಿಶತ ಜೈವಿಕ ಕ್ರಿಯೆಯಲ್ಲಿ ವಿಲಿನವಾಗುತದೆ, ಅರ್ಥಾರ್ಥ ಭೂಮಿಯ ಮೇಲೆ ತ್ಯಾಜ್ಯ ಎನ್ನುವುದು ಯಾವುದೂ ಇಲ್ಲ. ಇಲ್ಲಿ ಬಹಳ ದೊಡ್ಡದಾಗಿ ಬೆಳೆದ ಮರವು ಕೊನೆಗೊಂದು ದಿನ ಮಣ್ಣಲ್ಲಿ ಲೀನವಾಗುತ್ತದೆ, ಮಣ್ಣಿನಲ್ಲಿ ಅಡಕವಾಗಿರುವ ಸೂಕ್ಷ್ಮಾಣುಜೀವಿಗಳು ಬೇರನ್ನು ತಿಂದು ಸೃಷ್ಟಿಯಾಗುವ ಜಾಗದ ಮೂಲಕ ಮಳೆ ನೀರು ನೇರವಾಗಿ ಅಂತರ್ಜಲ ಸೇರುತ್ತದೆ, ಇದೇ ಮಣ್ಣಲಿ ಗೆದ್ದಲು ಹುಳುಗಳು ಗೂಡು ನಿರ್ಮಿಸುತ್ತದೆ ಇದರಲ್ಲಿ ಹಾವುಗಳು ಬಂದು ಸೇರುತ್ತವೆ, ಎರೆಹುಳು ಕೊಳೆತ ವಸ್ತುವನ್ನು ತಿಂದು ಮಣ್ಣನ್ನು ಮತ್ತಷ್ಟು ಸಮೃದ್ಧಿಯಾಗಿಸುತ್ತದೆ, ಮಳೆಗಾಲ ಮುಗಿಯುತ್ತಿದ್ದಂತೆ ಶಂಖದಹುಳು ಮಣ್ಣಿನೊಳಗೆ ನಿದ್ರಾವಸ್ಥೆಗೆ ಹೋಗುತ್ತದೆ, ಒಣಗಿನಿಂತ ಭೂಮಿಗೆ ವರ್ಷದ ಪ್ರಥಮ ಮಳೆಯಾದಾಗ ಮಣ್ಣಿನ ಸುವಾಸನೆ ಎಲ್ಲೆಡೆಯೂ ಪಸರಿಸುತ್ತದೆ, ಚಿಟ್ಟೆಗಳು ಹಾರಲು ಪ್ರಾರಂಭಿಸುತ್ತದೆ.

ಮಣ್ಣು ಕೇವಲ ಕೃಷಿಗಷ್ಟೇ ಸೀಮಿತವಾಗಿರದೆ ಆಯುರ್ವೇದದಲ್ಲಿಯೂ ಬಳಕೆಯಲ್ಲಿತ್ತು ಶುಶೃಷ ಹಾಗೂ ಧನ್ವಂತ್ರಿ ಮಣ್ಣಿನ ಸ್ನಾನಕ್ಕೆ ಆದ್ಯತೆಯನ್ನು ನೀಡಿದ್ದು ಮಣ್ಣಿನ ಸ್ನಾನದಿಂದ ಆಗುವ ಪ್ರಯೋಜನಗಳನ್ನು ತಿಳಿಸಿದ್ದಾರೆ.

ಈ ಮಣ್ಣು ಬಹಳಷ್ಟು ಘಟನೆಗಳಿಗೆ ಸಾಕ್ಷೀಭೂತವಾಗಿದೆ ಹಿಂದೂಗಳ ನಂಬಿಕೆಯ ಪ್ರಕಾರ ಹೇಳುವುದಾದರೆ ವಿಷ್ಣುವಿನ ಅವತಾರ, ರಾಮಾಯಣ, ಮಹಾಭಾರತ, ಕುರುಕ್ಷೇತ್ರ ಯುದ್ಧ ನಡೆದಿದ್ದು ಈ ಮಣ್ಣಿನ ಮೇಲೆ, ಹಾಗೂ ಮಣ್ಣಿಗಾಗಿಯೇ, ರಾಮಾಯಣದ ಸುಂದರಕಾಂಡದಲ್ಲಿ ಬರುವ ಗೊಂಡಾರಣ್ಯ, ವಿಂದ್ಯಾರಣ್ಯ, ಹರ್ಬಧಾರಣೆಯ, ನೇಮಿಕಾರಣ್ಯ, ದಂಡಕಾರಣ್ಯ ದಂತಹ ಅರಣ್ಯವು ಸೃಷ್ಟಿಯಾಗಿದ್ದು ಈ ಮಣ್ಣು ಮೇಲೆ.

ಪ್ರಪಂಚದ ಅತ್ಯಂತ ಎತ್ತರದ ಶಿಖರ ನಿಂತಿರುವುದು ಈ ಭೂಮಿಯ ಮೇಲೆ, ಚಂದ್ರನೂ ಭೂಮಿಯ ಒಂದು ಭಾಗವೇ, ಸಮುದ್ರದ ಆಳವನ್ನು ನಾವು ಕಂಡುಹಿಡಿಯದೆ ಇರಬಹುದು ಆದರೆ ಅದರ ಆಳದಲ್ಲಿರುವುದು ಭೂಮಿಯೇ.

ಹೂವಿಗೆ ಪರಿಮಳ ಬಂದಿದ್ದು ಮಣ್ಣಿನಿಂದಲೇ, ಹೂವಿಗೆ ಬಣ್ಣದ ಮೆರಗು ಬಂದಿದ್ದು ಮಣ್ಣಿನಿಂದಲೇ, ಹೂ ಹಿಡಿದು ಕಾಯಿಯಾಗಿ ಮಾರ್ಪಾಡಾಗುವಗ ಸೇರಲ್ಪಟ್ಟ ಸಿಹಿ, ಹುಳಿ, ಉಪ್ಪು ಸೇರಿದ್ದು ಮಣ್ಣಿನಿಂದಲೇ, ಸೂರ್ಯಕಾಂತಿಗೆ ಎಣ್ಣೆ ಅಂಶ ಬಂದಿದ್ದು ಮಣ್ಣಿನಿಂದಲೇ, ಇವು ಕಣ್ಣಿಗೆ ಗೋಚರಿಸುವ ಆಹಾರವಾದರೆ, ಕಣ್ಣಿಗೆ ಗೋಚರಿಸದೆ ಭೂಮಿಯೊಳಗೆ ಆಹಾರದ ಮತ್ತೊಂದು ಖಜಾನೆಯಾದ ಗೆಡ್ಡೆಗೆಣಸು ಬೆಳವಣಿಗೆಗೆ ಸಹಕರಿಸಿದ್ದು ಮಣ್ಣೆ, ನಾವು ಬಳಸಲ್ಪಡುವ ಚಿನ್ನ, ಖನಿಜ ಸಂಪನ್ಮೂಲಗಳು, ಪೆಟ್ರೋಲ್ ದೊರೆತಿದ್ದು ಮಣ್ಣಿನ ಒಳಗಿಂದನೆ, ಅಭಿವೃದ್ಧಿಯ ಕಾಮಗಾರಿಗಳಾಗುತ್ತಿರುವುದು ( ರಸ್ತೆಯ, ರೈಲ್ವೆ, ಬಂದರೂ etc ) ಈ ಮಣ್ಣು ಮೇಲೆ.

ಇಷ್ಟೆಲ್ಲಕ್ಕೂ ಮಣ್ಣು ಬೇಕು ಆದುದರಿಂದಲೇ ಹಿರಿಯರು ಹೇಳಿದ್ದು ಮಣ್ಣಿಂದಲೇ ಸರ್ವಸ್ವವೆಂದು. ಆಧುನಿಕ ಭರಾಟೆಯಲ್ಲಿ ಓಡುತ್ತಿರುವ ನಾಗರಿಕ ಸಮುದಾಯಕ್ಕೂ ಹಾಗೂ ಪ್ರಕೃತಿಗೂ ಇರಬೇಕಾದ ಕೊಂಡಿ ಕಳಚಿದೆ, ಇದಕ್ಕೆ ಅನೇಕ ಕಾರಣಗಳಿವೆ, ಮಾನವ ಎಲ್ಲಾ ವಿಧದಿಂದಲೂ ತನಗೆ ಅರಿವಿದ್ದರೂ ಅರಿವಿಲ್ಲದಂತೆ ಭೂಮಿಯನ್ನು ಹಾಳು ಮಾಡುತ್ತಿದ್ದಾನೆ, ಭೂಮಿಗೂ ಒಂದು ಹಂತದ ತನಕ ತಡೆಯುವ ಶಕ್ತಿ ಇದೆ ಅದು ಮಿತಿಮೀರಿದಲ್ಲಿ ಎಲ್ಲವನ್ನೂ ಪ್ರಕೃತಿಯ ವಿಕೋಪ ಎಂಬ ಹೆಸರಿನಲ್ಲಿ ಅಪೋಹನ ಪಡೆಯುತ್ತದೆ.

ಮಣ್ಣನ್ನ ಜೀವಂತವಾಗಿ ಉಳಿಸಿಕೊಳ್ಳಲೇಬೇಕಾದಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ, ಈ ಕಾರ್ಯಕ್ಕೆ ಕೃಷಿಯಲ್ಲಿ ಯಥೇಚ್ಛ ಮರ-ಗಿಡಗಳು ಬರಬೇಕು, ಜಾಗ ಇದ್ದಲ್ಲೆಲ್ಲ ಹಸಿರು ಆವರಿಸಬೇಕು, ಪ್ರತಿಯೊಬ್ಬರೂ ಸಾಧ್ಯವಾದಷ್ಟು ಮರಗಿಡಗಳನ್ನು ಬೆಳೆಸಬೇಕು, ಸಾವಯವ ಕೃಷಿಯನ್ನು ಅವಲಂಬಿಸಬೇಕು, ಮಳೆನೀರಿಗೆ ಭೂಮಿಯ ಮೇಲ್ಮಣ್ಣು ಕೊಚ್ಚಿ ಹೋಗದಂತೆ ತಡೆಯಬೇಕು, ಇಲ್ಲವಾದಲ್ಲಿ ಮಣ್ಣು ಮರುಭೂಮಿಯಾಗಿ ಮಾರ್ಪಾಡಾಗುತ್ತದೆ, ಇದಕ್ಕೆ ಸಂಬಂಧಿಸಿದಂತೆ ಇಂಗ್ಲಿಷಿನಲ್ಲಿ Kiss the ground ಎಂಬ ಚಲನಚಿತ್ರವಿದೆ ಅದನ್ನ ತಪ್ಪದೆ ವೀಕ್ಷಿಸಿ.

ಬ್ರಹ್ಮಪುತ್ರ ನದಿಯಲ್ಲಿ ಕಂಡುಬರುವ ಅತ್ಯಂತ ದೊಡ್ಡದಾದ ಮಜುಲಿ ದ್ವೀಪ ನದಿಯ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದು ಇದನ್ನು ಮನೆಗಂಡ ಜಾಧವ್ ಅವರು ತಾವೊಬ್ಬರೇ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ, ಇಂದು ಆ ಮರಗಳೆಲ್ಲವೂ ಎತ್ತರಕ್ಕೆ ಬೆಳೆದು ನಿಂತಿವೆ ಹಾಗೂ ನದಿಯ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದಂತಹ ಮಜುಲಿ ದ್ವೀಪ ಉಳಿದುಕೊಂಡಿದೆ, ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೆ ಮೌನದಿಂದಲೇ ಜಾಧವ್ ಅವರು ಈ ಕೆಲಸವನ್ನು ಮಾಡಿದ್ದಾರೆ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.

ಮಣ್ಣಿನ ಬಗ್ಗೆ ಕೇವಲ ದೊಡ್ಡವರಿಗೆ ಅಷ್ಟೇ ಅಲ್ಲದೆ ಮಕ್ಕಳಿಗೂ ಮಾಹಿತಿಯ ಕೊರತೆ ಇದೆ ಅದಕ್ಕಾಗಿ ಈ ಕೆಳಗಿನ ಪುಟ್ಟದೊಂದು ಪ್ರಯೋಗವನ್ನು ಮಾಡಿ : ಎರಡು ಹಿಡಿಯಷ್ಟು ಮಣ್ಣನ್ನು ಆಯ್ದು ತನ್ನಿ, ಅದನ್ನ ಒಂದು ವಾರ, ಹದಿನೈದು ಅಥವಾ ಒಂದು ತಿಂಗಳಾದರೂ ಒಣಗಲು ಬಿಡಿ, ಒಣಗಿದಾಗ ಎಲ್ಲಾ ಸತ್ವಗಳು ಸಾಯುತ್ತವೆ ಅಲ್ಲವೇ ? ನಂತರ ಚೆನ್ನಾಗಿ ಒಣಗಿದ ಮಣ್ಣನ್ನು ತೆಗೆದು ಒಂದು ಡಬ್ಬದಲ್ಲಿಡಿ, ಆ ಮಣ್ಣಿಗೆ ನೀವು ಯಾವುದೇ ಬೀಜವನ್ನು ಹಾಕುವುದು ಬೇಡ, ಪ್ರತಿದಿನವೂ ಸ್ವಲ್ಪ ಸ್ವಲ್ಪ ನೀರನ್ನು  ಹಾಕುತ್ತಾ ಬನ್ನಿ, ಕೆಲವು ದಿನಗಳು ಕಳೆಯುತ್ತಿದ್ದಂತೆ, ಮಣ್ಣು ಜೀವಂತಿಕೆಯನ್ನು ಪಡೆದು ಯಾವುದೋ ಒಂದು ಸಸ್ಯ ಚಿಗುರೊಡೆಯುತ್ತದೆ ಈ ಪ್ರಕ್ರಿಯೆ ಹೇಗೆ ಆಯಿತು ? ಹಾಗಾದರೆ ಆ ಮಣ್ಣಿಗೆ ಜೀವಂತಿಕೆ ಹೇಗೆ ಬಂದಿತು ? ಇದನ್ನೇ ಪಾಶ್ಚಾತ್ಯ ದೇಶದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾದ ಲೂಯಿಸ್ ಪಾಶ್ಚರ್ ಇದನ್ನ ಸೂಪರ್ ನ್ಯಾಚುರಲ್ ಪವರ್ ( Super natural power ) ಎಂದು ಕರೆದದ್ದು. ನಮ್ಮ ಸುರಪಾಲ ಜೀವಂತಿಗೆ ಎಂದದ್ದು, ಜಾನಪದದಲ್ಲಿ ಭೂಮಿ ತಾಯಿ ಎಂದು ನಮಿಸಿದ್ದು.

ಮಣ್ಣಿನ ಮೇಲೆ ಜೀವಿಸುತ್ತಿರುವ ನಮ್ಮ ಜೀವಂತಿಕೆ ಬಹಳ ಚಿಕ್ಕದು, ಮಣ್ಣು ಮುಂದಿನ ಪೀಳಿಗೆಗಾಗಿ ಉಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಸಾಧ್ಯವಾದಷ್ಟು ಮರಗಳನ್ನು ಬೆಳೆಸೋಣ ಮಣ್ಣಿನ ಜೀವಂತಿಕೆಯನ್ನು ಉಳಿಸೋಣ.

ಕೊನೆಯದಾಗಿ, ಅಂದಹಾಗೆ ಸದ್ಗುರು ಜಗ್ಗಿ ವಾಸುದೇವ ಅವರು ಜಾಗತಿಕವಾಗಿ ಕೈಗೊಂಡಿರುವ ಮಣ್ಣು ಉಳಿಸಿ / Save soil ಅಭಿಯಾನದ ಬಗ್ಗೆ ನಿಮಗೀಗಾಗಲೇ ತಿಳಿದಿರಬಹುದು, ಇದು ಕೂಡ ಮಣ್ಣಿನ ಮಹತ್ವವನ್ನು ತಿಳಿಸುತ್ತದೆ.

ಧನ್ಯವಾದಗಳು.



Friday, May 20, 2022

ಬರೀ ಮೂರ್ತಿಯಲ್ಲವೋ ಬಾಹುಬಲಿ.

 

                      - ಎಸ್ ಪಿ ತೇಜರಾಜು.

  ನೀವು ಅಮೆರಿಕದ ನ್ಯೂಯಾರ್ಕ್ ಸಿಟಿ ಭೇಟಿ ನೀಡಿದಲ್ಲಿ ಅಲ್ಲಿರುವ ಸ್ಟ್ಯಾಚು ಆಫ್ ಲಿಬರ್ಟಿಯನ್ನು ನೋಡಿರುತ್ತೀರಿ, ಬ್ರೆಜಿಲ್ನ ನ ರಿಯೊ ಡಿ ಜನೈರೊ ನಗರ ಬೇಟಿ ನೀಡಿದಲ್ಲಿ ಕ್ರಿಸ್ತನ ಪ್ರತಿಮೆಯನ್ನು ನೋಡಿರುತ್ತೀರಿ, ಅಷ್ಟೆಲ್ಲಾ ದೂರ ಯಾಕೆ ನಮ್ಮ ದೇಶದಲ್ಲೇ ಇರುವ ಪ್ರಪಂಚದ ಅತ್ಯಂತ ಎತ್ತರದ ವಿಗ್ರಹವಾದ ಸ್ಟಾಚು ಆಫ್ ಯುನಿಟಿ, ದಕ್ಷಿಣ ಭಾರತದಲ್ಲಿ ಇರುವ ಸ್ಟ್ಯಾಚು ಆಫ್ ಈಕ್ವಾಲಿಟಿ ಪ್ರತಿಮೆಗಳನ್ನು ನೋಡಿರಬಹುದು, ಈ ಶತಮನಕ್ಕೆ ಇಂತಹ ಮೂರ್ತಿಗಳು ಪ್ರಪಂಚದ ಅದ್ಭುತ ಎಂದು ಹೇಳಿದರೆ ತಪ್ಪಾಗಲಾರದು.

ಭೂಮಿಯ ಮೇಲೆ ಮಾನವ ಸೃಷ್ಟಿಯಾದ ಬಳಿಕ, ಮಾನವ ತನ್ನದೇ ಆದಂತಹ ಅದ್ಭುತಗಳನ್ನ ಭೂಮಿ ಮೇಲೆ ಸೃಷ್ಟಿಸುತ್ತ ಬಂದಿದ್ದಾನೆ, ಕಲ್ಲಿನ ಬಳಕೆ ಈತನ ಜೀವನದಲ್ಲಿ ಹಾಸು ಹೊಕ್ಕಾಗಿ ಬೆಳೆದು ನಿಂತಿದೆ, ಬೇಟೆಯಾಡಲಿಕ್ಕೆ, ಪಾತ್ರೆ ತಯಾರಿಕೆಗೆ, ತನ್ನ ಮನೆ ಕಟ್ಟಿಕೊಳ್ಳಲು, ದೇಗುಲ, ಮೂರ್ತಿನಿರ್ಮಾಣಕ್ಕೆ ಕಲ್ಲನ್ನು ತನ್ನ ಕೈಯಿಂದ ಕೆತ್ತಿ ಶಿಲೆಗೆ ಕಲೆಯ ಚಾಪನ ನೀಡಿದ್ದಾನೆ.

ಇಂತಹ ಶಿಲೆಗೆ ಕಲೆಯ ಛಾಪನ್ನು ನೀಡಿರುವಂತಹ ಅದ್ಭುತ ವಿನ್ಯಾಸಗಳು ನಮ್ಮ ಸುತ್ತಮುತ್ತಲಿವೆ, ಅವುಗಳು ಶಿಲೆಯನ್ನು ಕೊರೆದು ಮಾಡಿದಂತಹ ಗುಹಾಂತರ ದೇವಾಲಯಗಳಾಗಿರಬಹುದು ( ಅಜಂತ, ಎಲ್ಲೋರ, ಐಹೊಳೆ) ಸೂಕ್ಷ್ಮ ಕೆತ್ತನೆಗಳುಳ್ಳ ಹೊಯ್ಸಳರ ಬೇಲೂರು, ಹಳೇಬೀಡು ದೇವಾಲಯಗಳಾಗಿರಬಹುದು, ಶ್ರವಣಬೆಳಗೊಳದ ಏಕಶಿಲಾ ವಿಗ್ರಹವಾಗಿರಬಹುದು.

ಇನ್ನು ಗೊಮ್ಮಟೇಶ್ವರನ ವಿಗ್ರಹದ ಮುಂದೆ ನಿಂತಾಗ ಹೊಂದಾಣಿಕೆಯಾಗದ ಎತ್ತರ ನಮ್ಮನ್ನು ಮೂಕವಿಸ್ಮಯರನ್ನಾಗಿಸುತ್ತದೆ. ಶ್ರವಣಬೆಳಗೊಳದ ಏಕಶಿಲಾ ವಿಗ್ರಹ ಕೇವಲ ಮೂರ್ತಿಯಾಗಿ ನಿಲ್ಲದೆ ಹತ್ತಾರು ವಿಷಯಗಳನ್ನು ಆಗರವಾಗಿದೆ.

ನಮ್ಮಲ್ಲಿ ಕೆಲವರು ಆಸ್ತಿಕರು ಇರಬಹುದು, ನಾಸ್ತಿಕರು ಇರಬಹುದು, ಇದರಲ್ಲಿಯೂ ಕೆಲವರು ಮೂರ್ತಿ ಆರಾಧಕರು ಇರಬಹುದು, ಇಲ್ಲದೆಯೂ ಇರಬಹುದು, ಕೆಲವು ಬಾರಿ ಮೂರ್ತಿಗಳನ್ನು ನಿರ್ಲಿಪ್ತ ರೂಪದಲ್ಲಿ ಪೂಜಿಸಲುಬಹುದು ಉದಾ ಶಿವನನ್ನು ಲಿಂಗದ ರೂಪದಲ್ಲಿ ಆರಾಧಿಸುವುದು, ಮೂರ್ತಿ ಆರಾಧಕರಲ್ಲೊಂದು ಮಾತು ಪ್ರಚಲಿತದಲ್ಲಿದೆ " ನಂಬಿದರೆ ದೈವ ಇಲ್ಲವಾದರೆ ಮೂರ್ತಿ", ಈ ಮೂರ್ತಿಗಳನ್ನು ಇಡುವ ಆಲಯ / ದೇಗುಲ ಎಂಬುದು ಕೇವಲ ಧಾರ್ಮಿಕ ದೃಷ್ಟಿಕೋನಕ್ಕೆ ಮಾತ್ರ ಸೀಮಿತವಾಗಿರದೆ, ಇದೊಂದು ಅದ್ಭುತ ವಾಸ್ತುವನ್ನು ಒಳಗೊಂಡ ವಿಜ್ಞಾನವಾಗಿದೆ. ಸೂಕ್ಷ್ಮ ಕೆತ್ತನೆಗಳುಳ್ಳ ದೇವಾಲಯಗಳು ನಮ್ಮ ಪೂರ್ವಜರ ಜ್ಞಾನದ ಮಟ್ಟವನ್ನು ವ್ಯಕ್ತಪಡಿಸುತ್ತದೆ ಅರ್ಥಾತ್ ಕಲ್ಲಲ್ಲಿ ಹೂವು ಹೊರಳಿಸಿದ ಬಗೆ.

ಬೇಲೂರಿನ ಚೆನ್ನಕೇಶವ ದೇವಾಲಯ ತೆಗೆದುಕೊಳ್ಳಿ ಇದೊಂದು ಅದ್ಭುತ ಶಿಲಾ ವಿನ್ಯಾಸ, ಈ ದೇವಾಲಯದ ವಿಶೇಷತೆ ಎಂದರೆ ಕಲ್ಲಿನಿಂದ ನಿರ್ಮಾಣವಾದ ಈ ದೇವಾಲಯವನ್ನು ಒಂದೊಂದೇ ಕಲ್ಲನ್ನು ತೆಗೆದು ಮತ್ತದೇ ರೀತಿಯಲ್ಲಿ ಜೋಡಿಸಬಹುದು ( Puzzel  ಜೋಡಿಸುವ ರೀತಿಯಲ್ಲಿ ) ಇಂತಹ ಅದ್ಭುತ ದೇವಾಲಯ ನಿರ್ಮಾಣಕ್ಕೆ ಆಗಿನ ಕಾಲದಲ್ಲಿಯೇ ಸುಮಾರು 190 ವರ್ಷಗಳಾಗಿದ್ದವು. ಪೂರ್ವಜರನ್ನು ಹೋಲಿಸಿಕೊಂಡರೆ ನಾವು ಅವರಿಗಿಂತ ವೈಜ್ಞಾನಿಕವಾಗಿ ಮುಂದಿರಬಹುದು ಆದರೆ ಅಂತಹ ದೇವಾಲಯಗಳ ಮರುಸೃಷ್ಟಿ ಇಂದಿಗೆ ನಿಜವಾಗಿಯೂ ಸಾಧ್ಯವೇ ?

ಇಂತಹ ಅದ್ಭುತ ಕಲೆ ಸೃಷ್ಟಿ ಆಗಬೇಕಾದರೆ ಮೂಲವಾಗಿ ಬೇಕಾಗಿದ್ದು ಶಿಲೆಗಳು, ಈ ಶಿಲೆಗಳು ಇರದೆ ಹೋಗಿದ್ದರೆ ಇಂತಹ ಕಲೆ ಸೃಷ್ಟಿಯಾಗುತ್ತಿರಲಿಲ್ಲ. ಶಿಲೆಗಳಿಗೆ ಸಂಬಂಧಪಟ್ಟಂತೆ ನಮಗೆ ಬಹಳಷ್ಟು ಬಾರಿ ಗೊಂದಲಗಳು ಇರಬಹುದು ಏಕೆಂದರೆ ಒಂದು ಕಡೆಯ ಶೀಲಾ ವಿನ್ಯಾಸ ಮತ್ತೊಂದು ಕಡೆ ಕಾಣಸಿಗದು, ಮೈಸೂರಿನಲ್ಲಿರುವ ಚಾಮುಂಡಿಬೆಟ್ಟದ ಶಿಲೆಯನ್ನು, ತುಮಕೂರಿನಲ್ಲಿರುವ ದೇವರಾಯನದುರ್ಗ, ದೊಡ್ಡಬಳ್ಳಾಪುರದಲ್ಲಿ ಇರುವ ನಂದಿಬೆಟ್ಟ ತೆಗೆದುಕೊಳ್ಳಿ ಇದರ ವಿನ್ಯಾಸವೇ ಬೇರೆ, ಮಧುಗಿರಿಯಲ್ಲಿರುವ ಶಿಲೆಯನ್ನು ಗಮನಿಸಿ ಇದು ಏಷ್ಯಾ ಖಂಡದ ಎರಡನೇ ಅತಿದೊಡ್ಡ ಏಕಶಿಲಾ ಬಂಡೆ, ಗಜೇಂದ್ರಗಡ ಬೆಟ್ಟವನ್ನು ಗಮನಿಸಿ ಇದು ಭೂಮಿಯ ಮೇಲೆದ್ದ ದಿಣ್ಣೆಯಂತೆ ಕಾಣುತ್ತದೆ, ನಮ್ಮ ಬಳ್ಳಾರಿ ರಾಯಚೂರು ಭಾಗದ ಶಿಲಾ ರಚನೆಯನ್ನು ಗಮನಿಸಿ ಇವುಗಳನ್ನು ಯಾರೋ ಒಂದರ ಮೇಲೆ ಮತ್ತೊಂದು ಶಿಲೆಯನ್ನು ಜೋಡಿಸಿದ ರೀತಿ ಕಾಣಸಿಗುತ್ತವೆ. ಹಗದ್ರೆ ಶಿಲೆಗಳ ಏಕಿಷ್ಟು ವೈವಿಧ್ಯಮಯವಾದವು ? ( ಕೆಳಗೆ ಕೊಟ್ಟಿರುವ ಚಿತ್ರವನ್ನು ಗಮನಿಸಿ )

ಶಿಲೆಗಳ ವೈವಿಧ್ಯತೆಯ ಬಗ್ಗೆ ತಿಳಿಯಬೇಕಾದರೆ ಅವುಗಳ ರಚನಾಕ್ರಮವನ್ನು ಗಮನಹರಿಸಬೇಕಾಗುತ್ತದೆ, ಶಿಲೆಗಳನ್ನ ಮುಖ್ಯವಾಗಿ ಮೂರು ವಿಧವಾಗಿ ವಿಂಗಡಿಸಲಾಗಿದೆ

1 ಅಗ್ನಿಶಿಲೆ / Igneous 

2 ಪದರುಶಿಲೆ / Sedimentary rock 

3 ರೂಪಾಂತರ ಶಿಲೆ / Metamorphic rock 

ಅಗ್ನಿಶಿಲೆ ಮೂಲ ಜ್ವಾಲಾಮುಖಿಯ ರಸದಿಂದ ಸೃಷ್ಟಿಯಾದದ್ದು ಆದ್ದರಿಂದ ಇವು ಬಹಳ ಗಡುಸಾಗಿರುತ್ತವೆ ಉದಾಹರಣೆಗೆ : ಬಸಾಲ್ಟ್, ಗ್ರಾನೆಟ್ 

ಪದರು ಶಿಲೆಗಳು ವಾಯುಮಂಡಲದ ಘಟಕಗಳಾದ ಉಷ್ಣ, ಗಾಳಿ, ನದಿ ಸಮುದ್ರಗಳ ಶೀತಲೀಕರಣದಿಂದ ಪದರಾಗಿ ನಿರ್ಮಾಣವಾಗಿರುತ್ತದೆ, ಇವುಗಳು ಅರೆ ಗಡುಸಾಗಿದ್ದು ಭೂಮಿಯ ಮೇಲೆ ಕಾಣಸಿಗುವ % 75 ಶಿಲೆಗಳು ಇವುಗಳೇ ಆಗಿರುತ್ತದೆ, ಉದಾ: ಸುಣ್ಣದ ಕಲ್ಲು, ಮರಳು ಶಿಲೆ, ರೇವೆಗಲ್ಲು. 

ಕೊನೆಯದು ರೂಪಾಂತರ ಶಿಲೆ, ಅಗ್ನಿ ಹಾಗೂ ಪದರುಶಿಲೆ ಭೂಮಿಯೊಳಗೆ ಸಿಲುಕಿ ಒತ್ತಡ ಹಾಗುವ ಶಾಖದಿಂದ ಬದಲಾವಣೆ ಹೊಂದಿದಾಗ ಸೃಷ್ಟಿಯಾಗುವುದು ರೂಪಾಂತರ ಶಿಲೆ ಉದಾ: ಗ್ರಾಫೈಟ್ ಅಮೃತಶಿಲೆ, ವಜ್ರ, ರೂಬಿ, ಚಿನ್ನ, ಬೆಳ್ಳಿ, ಪ್ಲಾಟಿನಂ, ಕಬ್ಬಿಣ, ತಾಮ್ರ ,ನಿಕಲ್, ಸೀಸ ಇತ್ಯಾದಿ 

ಹಾಗಾದರೆ ಮಾನವರು ಅತ್ಯಂತ ಹೆಚ್ಚು ಬೆಲೆ ಕಟ್ಟುವ ವೈಡೂರ್ಯ ಗಳೆಲ್ಲವೂ ಕಲ್ಲು ಎಂದಾಯಿತಲ್ಲವೇ ?

ಯಾವುದೇ ಮೂರ್ತಿ ವಿಗ್ರಹ ಕೆತ್ತನೆಗೆ ಶಿಲೆ ಆಯ್ಕೆ ಬಹಳ ಮಹತ್ವಪೂರ್ಣ ಕೆಲಸವಾಗಿರುತ್ತದೆ, ಇಂತಹ ಶಿಲೆಗಳ ಆಯ್ಕೆಯನ್ನು ಹಿರಿಯ ಹಾಗೂ ನಿಪುಣ ಶಿಲ್ಪಿಗಳು ಆಯ್ಕೆ ಮಾಡುವುದು ಹೆಚ್ಚು ಏಕೆಂದರೆ ಮೂರ್ತಿಯನ್ನು ಮಾಡುವಾಗ ಮಧ್ಯದಲ್ಲಿ ಯಾವುದೇ ಬಿನ್ನ ಅಥವಾ ಬಿರುಕುಗಳು ಆಗಬಾರದು, ಪಂಡಿತೋತ್ತಮ ಶಿಲ್ಪಿಗಳು ಶಿಲೆಗಳನ್ನು ಗಂಡು ಹಾಗೂ ಹೆಣ್ಣು ಶಿಲೆಗಳು ಎಂದು ವಿಂಗಡಿಸುವುದು ಉಂಟು ಹಾಗೂ ಶಿಲೆಗಳನ್ನು ಕೆತ್ತುವ ಕಾರ್ಯ ಗ್ರಹಗತಿ ನಕ್ಷತ್ರಗಳ ಆಧಾರದ ಮೇಲೆ ಪ್ರಾರಂಭಿಸುವುದುಂಟು. ನಮ್ಮಲ್ಲಿ ಪ್ರತಿ ದೇವರುಗಳ ವೈಶಿಷ್ಯ ವೈವಿಧ್ಯಮಯವಾಗಿರುವುದರಿಂದ ಮೂರ್ತಿಗಳ ಕೆತ್ತನೆಯು ವೈವಿಧ್ಯಮಯವಾಗಿರುತ್ತದೆ, ಕೆಲವಕ್ಕೆ ಹೂವಿನ ಅಲಂಕಾರಗಳು ಹೆಚ್ಚು, ಕೆಲವಕ್ಕೆ ಆಭರಣದ ಅಲಂಕಾರಗಳು ಹೆಚ್ಚು ( ವೆಂಕಟೇಶ್ವರ ), ಕೆಲವು ಮೂರ್ತಿಗಳ ವೈಶಿಷ್ಟತೆ ಕೆಲವು ಭಾಗಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ ಕೆಲವಕ್ಕೆ ಕಣ್ಣು, ಕೆಲವಕ್ಕೆ ಮೂಗುತಿ, ಕೆಲವಕ್ಕೆ ಪೀಠ ( ಲಕ್ಷ್ಮಿಗೆ ತಾವರೆ, ನಾರಾಯಣನಿಗೆ ಸರ್ಪದ ಹಾಸಿಗೆ ), ಕೆಲವಕ್ಕೆ ಕೈಯಲ್ಲಿ ಹಿಡಿದಿರುವ ಆಯುಧಗಳು / ಉಪಕರಣಗಳು ( ಸರಸ್ವತಿಗೆ ವೀಣೆ, ಪಾರ್ವತಿಯ ತ್ರಿಶೂಲ, ಆಂಜನೇಯನಿಗೆ ಕೈಯಲ್ಲಿ ಹಿಡಿದಿರುವ ಪರ್ವತ) ಪಾದುಕೆ ಇತ್ಯಾದಿ,

ಬಾಹುಬಲಿ ಮೂರ್ತಿಯು ಇಂತಹ ಶಿಲೆಯಿಂದ ಒಡಮೂಡಿದ ಒಂದು ಅದ್ಭುತ ಕೆತ್ತನೆ, ಈ ಕೆತ್ತನೆಗೆ ಸಂಬಂಧಿಸಿದಂತೆ ಬಹಳಷ್ಟು ವಿಷಯಗಳು ವಿಜ್ಞಾನಕ್ಕೆ ಸವಾಲನ್ನು ಒಡ್ಡಿದೆ, ಮೂರ್ತಿಯನ್ನು ನೆಟ್ಟಗೆ ನಿಲ್ಲಿಸಿದ ಶಿಲೆಯ ಮೇಲಿನಿಂದ ಕೆತ್ತಲಾಯಿತೇ ? ಶಿಲೆಯನ್ನು ಅಡ್ಡವಾಗಿಟ್ಟು ಕೆತ್ತಿ ಆಮೇಲೆ ನೇರವಾಗಿ ನಿಲ್ಲಿಸಿದರೆ ? ಮೂರ್ತಿಯನ್ನು ಬೆಟ್ಟದ ಕೆಳಗೆ ಕೆತ್ತಿದ್ದರೂ ಬೆಟ್ಟದ ಮೇಲಕ್ಕೆ ಹೇಗೆ ಸಾಗಿಸಿದರು ? ಎಷ್ಟು ಮಾನವಶಕ್ತಿ ಉಪಯೋಗಿಸಲಾಯಿತು ? ಅದಕ್ಕೆ ಬಳಸಿದ ಉಪಕರಣಗಳಾವುವು ? ಮಹಾಮಸ್ತಕಾಭಿಷೇಕದಲ್ಲಿ ನಡೆಯುವ ಮಜ್ಜನದ ನೀರು ಎಲ್ಲಿಗೆ ಹೋಗಿ ಸೇರುತ್ತದೆ ? ಇತ್ಯಾದಿ,,

ಮೂರ್ತಿ ಕೆತ್ತನೆಯು ಒಂದು ಶಾಸ್ತ್ರವನ್ನು ಅನುಸರಿಸುತ್ತದೆ, ಶಾಸ್ತ್ರವಿಲ್ಲದೆ ಕೆತ್ತಲಾಗದು, ಏಕೆಂದರೆ ಒಬ್ಬ ಉತ್ತಮ ದೇಹದಾರ್ಢ್ಯ ಉಳ್ಳ ವ್ಯಕ್ತಿಯ ದೇಹ ರಚನೆ ಮೂರ್ತಿಗೆ ಅಳವಡಿಸಬೇಕು, ತಲೆಯ ಸುತ್ತಳತೆ ಕಣ್ಣುಗಳ ನಡುವಿನ ಅಂತರ, ಮೂಗು, ಹಣೆ, ಗಲ್ಲ, ಕಿವಿಯ ಸಮಾನ ಎತ್ತರ, ಎದೆ ಭಾಗದ ವಿಸ್ತಾರ, ಕೈಕಾಲುಗಳ ಹೊಂದಾಣಿಕೆ ಎಲ್ಲಿಯೂ ವ್ಯತ್ಯಾಸ ಉಂಟಾಗಬಾರದು, ಇಲ್ಲಿ ಯಾವುದು ಹೆಚ್ಚು ಕಡಿಮೆ ಆಗುವಂತಿಲ್ಲ ಹಾಗೇನಾದರೂ ಆದರೆ ಮೂರ್ತಿಯ ಅಂದ ಕೆಡುತ್ತದೆ, ಇದಕ್ಕಿಂತಲೂ ಕೆಲವು ಸೂಕ್ಷ್ಮ ಕೆತ್ತನೆಗಳಾದ ಕೈಕಾಲು ಉಗುರುಗಳ ಕೆತ್ತನೆ, ತಲೆಕೂದಲ, ಕಣ್ಣಿನ ಉಬ್ಬು, ಮೊಣಕಾಲು, ತುಟಿ ರಚನೆ ಕೆತ್ತನೆಯ ವೈಭವವನ್ನು ಎತ್ತಿಹಿಡಿಯುತ್ತದೆ.

ಬಾಹುಬಲಿ ಎಲ್ಲವನ್ನೂ ತ್ಯಜಿಸಿ ಲೋಕಕಲ್ಯಾಣಕ್ಕೆ ನಿಂತವನು ಎಂದು ಭಾವಿಸಬಹುದು, ಆದರೆ ಪ್ರಕೃತಿಯೊಳಗೆ ಮೂರ್ತಿಯು ಒಂದು ಎಂಬುದಕ್ಕೆ ಮೂರ್ತಿ ಸಾಕ್ಷಿಯಾಗಿ ನಿಂತಿದೆ, ಮೂರ್ತಿಯ ಕೆತ್ತನೆಯನ್ನು ಪಾದುಕೆಯಿಂದ ಗಮನಿಸಿ ಅಲ್ಲಿ ಯಾವುದು ಬೋಳಾದ ರಚನೆಯಿಂದ ಕೂಡಿಲ್ಲ, ಎಲ್ಲವನ್ನೂ ನಿಸರ್ಗಕ್ಕೆ ಪೂರಕವಾಗಿರುವಂತೆ ಕೆತ್ತಲಾಗಿದೆ, ಪಾದುಕೆಯಿಂದ ಮಂಡಿ ಹಿಂಬದಿಯ ತನಕ ಹುತ್ತ ಕೆತ್ತಲಾಗಿದೆ ಅದರಿಂದ ಹಾವುಗಳು ಹೊರಬಂದಂತೆ ಗೋಚರಿಸುತ್ತವೆ, ಮೊಣಕಾಲು ತೊಡೆ ಕೈಗಳು ಸೇರಿದಂತೆ ಸುಂದರವಾದ ಬಳ್ಳಿಯನ್ನು ಕತ್ತಲಾಗಿದೆ, ಈ ಎಲೆಗಳ ರಚನೆ ನೈಜ್ಯ ಎಲೆಯ ರೀತಿಯಂತೆ ಕಾಣುತ್ತದೆ. ಬೇರೆ ಕಡೆ ಕಾಣಿಸುವ ಕೆತ್ತಿರುವ ಮೂರ್ತಿಗಳಲ್ಲಿ ಕಲ್ಪವೃಕ್ಷ, ಹೂಗಳ ರಚನೆ, ಐರಾವತ, ಗೋವು, ಆಕಳು, ನವಿಲು, ನಾಗರಾಜ, ಜೇನುಗೂಡು, ನೃತ್ಯಗಾರ್ತಿಯರನ್ನು ಕೆತ್ತಲಾಗಿದೆ.


ಮೂರ್ತಿ ಕೇವಲ ವಿಜ್ಞಾನ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲ ಇದರ ಹಿಂದೆ ಬಹುದೊಡ್ಡ ಇತಿಹಾಸವು ಇದೆ. ಭರತ ಹಾಗೂ ಬಹುಬಲಿ ಇಬ್ಬರು ವೃಷಭದೇವನ ಮಕ್ಕಳು, ಚಕ್ರರತ್ನದ ಆಸೆಯಿಂದ ಭರತ ತನ್ನ ಅಣ್ಣನಾದ ಬಾಹುಬಲಿಯಮೇಲೆ ಯುದ್ಧವನ್ನು ಸಾರುತ್ತಾನೆ, ಅಣ್ಣ-ತಮ್ಮಂದಿರ ಯುದ್ಧಕ್ಕೆ ಸೈನಿಕರು ಹತರಾಗುವುದು ಬೇಡ ಎಂಬ ಕಾರಣಕ್ಕಾಗಿ ಕೇವಲ ಇಬ್ಬರ ನಡುವೆಯೇ ಗದಾಯುದ್ಧ, ಮಲ್ಲಯುದ್ಧ, ದೃಷ್ಟಿಯುದ್ಧ ಹೀಗೆ ನಾನಾ ಯುದ್ಧಗಳು ನಡೆಯುತ್ತವೆ, ಪರಾಕ್ರಮಿ ಬಲಶಾಲಿಯಾದ ಬಾಹುಬಲಿ ಯುದ್ಧದ ಕೊನೆಯ ದಿನ ರಣರಂಗದಲ್ಲಿ ಭರತನನ್ನು ನನ್ನ ಎರಡೂ ಕೈಯಿಂದ ಮೇಲಕ್ಕೆತ್ತಿ ಇನ್ನೇನು ನೆಲಕ್ಕೆ ಅಪ್ಪಳಿಸಿ ಪ್ರಾಣ ಪಕ್ಷಿ ಹಾರಿ ಹೋಗಬೇಕೆನ್ನುವ ಸಂದರ್ಭದಲ್ಲಿ ಬಾಹುಬಲಿಯ ಮನಸ್ಸಿನಲ್ಲಿ ಕೇವಲ  ರಾಜ್ಯಕ್ಕಾಗಿ ಇಂತಹ ಹೀನ ಕೃತ್ಯವನ್ನು ಮಾಡಬೇಕೆಂದು ಹಿಂದೆ ಸರಿದು ಎಲ್ಲವನ್ನು ತ್ಯಜಿಸಿ ಕಾಡಿಗೆ ತೆರಳುತ್ತಾನೆ, ಇಷ್ಟರಲ್ಲಾಗಲೇ ಇವರ ತಂದೆಯಾದ ವೃಷಭದೇವ ನಾಡಿನಲ್ಲಿ ಹೊಸಧರ್ಮವನ್ನು ಸೃಷ್ಟಿಸಬೇಕೆಂದು ಕಾಯಕಲ್ಪ ಮಾಡಿಕೊಂಡು ಜೈನಧರ್ಮವನ್ನು ಹುಟ್ಟುಹಾಕಿ ಮೊದಲ ತೀರ್ಥಂಕರರಾಗುತ್ತಾರೆ.

ಇದಾದ ಬಳಿಕ ಜೈನ ಧರ್ಮದ ತೀರ್ಥಂಕರ ಧರ್ಮ ಸಂಸ್ಥಾಪನೆಯ ಕಾರ್ಯವನ್ನು ಕೈಗೊಳ್ಳುತ್ತಾರೆ, ಒಟ್ಟು ಜೈನಧರ್ಮದಲ್ಲಿ 24 ತೀರ್ಥಂಕರರು ಇದ್ದಾರೆ ಅವರುಗಳೇ

1 ಆದಿನಾಥ/ ಋಷಭನಾಥ 2 ಅಜಿತನಾಥ 3 ಸಂಭವನಾಥ 4 ಅಭಿನಂದನ 5 ಸುಮತಿನಾಥ 6 ಪದ್ಮಪ್ರಭ 7 ಸೂಪರ್ಶ್ವನಾಥ 8 ಚಂದ್ರಪ್ರಭ 9 ಪುಷ್ಪದಂತ 10 ಶೀತಲನಾಥ 11 ಶ್ರೇಯಾಂಶನಾಥ 12 ವಾಸುಪುಜ್ಯ 13 ವಿಮಲನಾಥ 14 ಅನಂತನಾಥ 15 ಧರ್ಮನಾಥ 16 ಶಾಂತಿನಾಥ 17 ಕುಂತುನಾಥ 18 ಅರನಾಥ 19 ಮಲ್ಲಿನಾಥ 20 ಮುನಿವ್ರತ 21 ನಮಿನಾಥ 22 ನೇಮಿನಾಥ 23 ಪಾರ್ಶ್ವನಾಥ 24 ಮಹಾವೀರ

ಪ್ರತಿಯೊಬ್ಬ ತೀರ್ಥಂಕರರು ಅವರದೇ ಆದಂತಹ ಲಾಂಛನಗಳು, ಬಣ್ಣದ ಸಂಕೇತಗಳಿವೆ. ಋಷಭದೇವನ ಕಾಲದಿಂದಲೂ ಧರ್ಮ ಸಮ್ಮೇಳನಗಳು ನಡೆಯುತ್ತಾ ಬಂದಿದೆ, ತೀರ್ಥಂಕರರಲ್ಲಿ ಕೊನೆಯವರಾದ ಮಹಾವೀರ ಕ್ರಿಸ್ತಪೂರ್ವ 600 ಕಾಲವಧಿಯಲ್ಲಿ ತ್ರಿರತ್ನಗಳನ್ನು ಸಂಯುಕ್ತ ನಡತೆ, ಸಂಯುಕ್ತ ನಂಬಿಕೆ, ಸಂಯುಕ್ತ ಜ್ಞಾನ ನೀಡುತ್ತಾನೆ ಇದರೊಂದಿಗೆ ಧರ್ಮದ ಪಂಚತತ್ವಗಳಾದ ಅಹಿಂಸೆ, ಸತ್ಯ, ಆಸ್ತಿಯ, ಅಪರಿಗ್ರಹ, ಬ್ರಹ್ಮಚರ್ಯ ಹೆಚ್ಚು ಒತ್ತು ಕೊಟ್ಟು ಧರ್ಮವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಾನೆ.

ಮಹಾವೀರನ ಬಗ್ಗೆ ನಿಮಗೆ ಈಗಾಗಲೇ ತಿಳಿದಿರಬಹುದು ಈತ ರಾಜ ಕುಟುಂಬದಲ್ಲಿ ಸಿದ್ಧರ್ಥ ಮತ್ತು ತ್ರಿಶೂಲದೇವಿಗೆ ಹುಟ್ಟಿದ ಮಗ, ಮಹಾವೀರ ರಾಜಕುಟುಂಬದ ಸಂಪ್ರದಾಯದಂತೆ ಯಶೋದಾ ಕೈ ಹಿಡಿಯುತ್ತಾನೆ, ಇದಾದ ಬಳಿಕ ಆತನಿಗಾದ ಜ್ಞಾನೋದಯ ಸನ್ಯಾಸಿ ದೀಕ್ಷೆಯನ್ನು ಪಡೆದು 24ನೇ ತೀರ್ಥಂಕರನಾಗುತ್ತಾನೆ.

ಬುದ್ಧ ಹಾಗೂ ಮಹಾವೀರನ ಕಾಲವಧಿಯ ಹೆಚ್ಚುಕಡಿಮೆ ಸಮಾನವಾಗಿರುವುದರಿಂದ ಬುದ್ಧ ಮಹಾವೀರರಲ್ಲಿ ಗೊಂದಲವಾಗಬಹುದು,( ನನಗೂ ಮೊದಲು ಇಬ್ಬರನ್ನು ಒಂದೇ ಎಂದು ಭಾವಿಸಿದ್ದಿದೆ ) ತಿಳಿದಿರಬಹುದು ಗೌತಮ ಬುದ್ಧ ಬೌದ್ಧ ಧರ್ಮದ ಸ್ಥಾಪಕ.

ಇಷ್ಟೆಲ್ಲಾ ಘಟನೆಗಳು ನಡೆದ ಅನೇಕ ವರ್ಷಗಳ ತರುವಾಯ ಯುದ್ಧದಿಂದ ಮನನೊಂದ ಅಶೋಕ ಚಕ್ರವರ್ತಿಯ ಜೈನಧರ್ಮವನ್ನು ಸ್ವೀಕರಿಸುತ್ತಾನೆ, ತನ್ನ ಮಕ್ಕಳಿಬ್ಬರನ್ನು ಧರ್ಮಪ್ರಚಾರಕ್ಕೆ ಕಳಿಸಿಕೊಡುತ್ತಾನೆ, ಈ ಕಾಲಾವಧಿಯಲ್ಲಿಯೇ ಜೈನ ಧರ್ಮವು ಎರಡು ಭಾಗಗಳಾಗಿ ಮಾರ್ಪಾಡಾಗಿರುತ್ತದೆ 1 ಶ್ವೇತಂಬರ -  ಬಿಳಿಯ ವಸ್ತ್ರಧಾರಿಗಳು  2 ದಿಗಂಬರ - ವಸ್ತ್ರ ರಹಿತರಾದವರು.

ಇಷ್ಟೆಲ್ಲಾ ಬೆಳವಣಿಗೆಯಿಂದಾಗಿ ಪ್ರಪಂಚದ ನಾನಾ ಮೂಲೆಗಳಿಗೆ ಜೈನ ಧರ್ಮ ಪ್ರಚಾರವಾಗ ತೊಡಗುತ್ತದೆ, ಇದರೊಂದಿಗೆ ಭಾರತದಲ್ಲಿಯ ಜನ್ಮಪಡೆದ ಬೌದ್ಧ ಧರ್ಮ, ಸಿಖ್ ಧರ್ಮ, ಪ್ರಪಂಚದ ಮೂಲೆಗಳಲ್ಲಿ ಹರಡುತ್ತದೆ, ಅನೇಕ ಧರ್ಮಗಳು ಹುಟ್ಟಿದ ಈ ಹಿಂದೂಸ್ತಾನವನ್ನು ಅನೇಕ ಧರ್ಮಗಳ ತೊಟ್ಟಿಲು/ ಅನೇಕ ಧರ್ಮಗಳು ಉಗಮ ಸ್ಥಾನ ಎಂದು ಬಿರುದು ಪಡೆಯುತ್ತದೆ.

ಶ್ರವಣಬೆಳಗೊಳದಲ್ಲಿ ಒಟ್ಟು 2 ಪರ್ವತಗಳಿವೆ, ಚಂದ್ರಗಿರಿ ಹಾಗೂ ವಿಂಧ್ಯಗಿರಿ ಎರಡು ಪರ್ವತಗಳ ನಡುವೆ ಒಂದು ಪುಷ್ಕರಣಿ ಇದೆ, ವಿಂಧ್ಯಗಿರಿ ಪರ್ವತದ ಮೇಲೆ ಕ್ರಿಸ್ತಶಕ 10ನೇ ಶತಮಾನದಲ್ಲಿ ಗಂಗ ರಾಜವಂಶದ ಮಂತ್ರಿಯ ಚಾವುಂಡರಾಯ 58 ಅಡಿ ಎತ್ತರದ ಏಕಶಿಲಾ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿದ್ದಾನೆಂದು ಶಾಸನಗಳಿಂದ ತಿಳಿಯುತ್ತದೆ. ಗೊಮ್ಮಟೇಶ್ವರನ ವಿಗ್ರಹವಾದಮೇಲೆ ಈ ಕ್ಷೇತ್ರ ಜೈನರ ಕಾಶಿ ಎಂದು ಹೆಸರನ್ನು ಪಡೆಯಿತು ( 2011 ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 44.50 ಲಕ್ಷ ಜೈನ ಧರ್ಮದವರಿದ್ದು, ಹೇಗೆ ಹಿಂದೂಗಳು ಜೀವನದಲ್ಲೊಮ್ಮೆ ಕಾಶಿ ಯಾತ್ರೆಯನ್ನು ಕೈಗೊಳ್ಳುತ್ತಾರೋ ಹಾಗೆಯೇ ಪ್ರಪಂಚದ ಮೂಲೆಮೂಲೆಗಳಲ್ಲಿರುವ ಜೈನ ಧರ್ಮೀಯರ ಬಹುಪಾಲು ಮಂದಿ ಮಹಾಮಸ್ತಕಾಭಿಷೇಕಕ್ಕೆ ಬಂದು ಸೇರುತ್ತಾರೆ ) ಕ್ರಿಸ್ತಶಕ 981 ರಂದು ಮೊದಲ ಮಹಾಮಸ್ತಕಾಭಿಷೇಕ ನೆರವೇರಿತು ಇದಾದ ಪ್ರತಿ 12 ವರ್ಷಗಳಿಗೊಮ್ಮೆ ಜೈನ ಧರ್ಮದ ಪಂಚಾಗದ ಪ್ರಕಾರ ಮಹಾಮಸ್ತಕಾಭಿಷೇಕವನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ, 2018 ರಲ್ಲಿ ನಡೆದ ಮಹಾಮಸ್ತಕಾಭಿಷೇಕ 88ನೇ ಯದಾಗಿದ್ದು ಇದು 21ನೇ ಶತಮಾನದ ಎರಡನೆಯ ಮಹಾಮಸ್ತಕಾಭಿಷೇಕವಾಗಿದೆ.

12 ವರ್ಷಗಳಿಗೆ ಒಮ್ಮೆ ಮಾತ್ರ ಕೈಗೊಳ್ಳುವ ಬಾಹುಬಲಿಯ ಮಜ್ಜನವ ಎಂದ ಮೇಲೆ ಅದು ಸಾಮಾನ್ಯ ಮಜ್ಜನವಾಗಿರಲು ಸಾಧ್ಯವೇ, ಮೂರ್ತಿಗೆ ಈ ಅಭಿಷೇಕದ ಸಂದರ್ಭದಲ್ಲಿ ಹಾಲು, ಸುಗಂಧದ್ರವ್ಯ, ಕಬ್ಬಿನಹಾಲು, ಕುಂಕುಮ, ಗಂಧದ ದ್ರವ್ಯಗಳಿಂದ ಅಭಿಷೇಕ ಮಾಡಲಾಗುತ್ತದೆ, 58 ಅಡಿ ಎತ್ತರದ ಏಕಶಿಲಾ ವಿಗ್ರಹ ನೆನೆಯಬೇಕಾದದಲ್ಲಿ ಎಷ್ಟು ಪ್ರಮಾಣದ ನೀರು ಬೇಕೆಂದು ನೀವೊಮ್ಮೆ ಯೋಚಿಸಿ, ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಪ್ರತಿದಿನ 8000 ಲೀಟರ್ ಮೂರ್ತಿಯನ್ನು  ಸೇರುತ್ತದೆ, ಇಷ್ಟು ಪ್ರಮಾಣದ ನೀರು ಮೂರ್ತಿಯ ಮೇಲೆ ಬಿದ್ದರೂ ನೀರು ಎಲ್ಲಿಗೆ ಹೋಗಿ ಸೇರುತ್ತದೆ ಎಂಬ ವಿಷಯ ವಿಜ್ಞಾನಕ್ಕೆ ಸವಾಲನ್ನು ಒಡ್ಡಿದೆ.

ಮೂರ್ತಿಗೆ ಸಿಂಪಡಿಸುವ ಮೊದಲ ಕಳಸಕ್ಕೆ ಭಾರಿ ಬೇಡಿಕೆ ಇದ್ದು 2018 ರಲ್ಲಿ ನಡೆದ ಮಹಾಮಸ್ತಕಾಭಿಷೇಕದ ಮೊದಲ ಕಳಸವನ್ನು ರಾಜಸ್ಥಾನದ ಉದ್ಯಮಿ ಅಶೋಕ್ ಎಂಬುವರು 11.6 ಕೋಟಿ ಹಣವನ್ನು ಕೊಟ್ಟು ಖರೀದಿಸಿದ್ದರು, ಈ ಹಿಂದೆ ನಡೆದ ಮಹಾಮಸ್ತಕಾಭಿಷೇಕಕ್ಕೆ ಕರ್ನಾಟಕ ಸರ್ಕಾರ ವಿನಿಯೋಗಿಸಿದ ಹಣದ ಮೊತ್ತ ಬರೋಬ್ಬರಿ 263 ಕೋಟಿ ರೂಪಾಯಿಗಳು, ಇಷ್ಟು ದೊಡ್ಡ ಕರ್ಚು ಎಂದಮೇಲೆ ಕಾರ್ಯಕ್ರಮದ ಸಿದ್ಧತೆ ಕಡಿಮೆ ದಿನಗಳಲ್ಲಿ ನಡೆಯಲು ಸಾಧ್ಯವೇ ?

ಮಹಾಮಸ್ತಕಾಭಿಷೇಕ ಆಗುವ 1 ವರ್ಷದ ಹಿಂದೆಯೇ ಆಯವ್ಯಯವನ್ನು ನಿಗದಿಪಡಿಸಲಾಗುತ್ತದೆ, ಈ ಕಾರ್ಯಕ್ರಮದ ಒಂದು ವರ್ಷದ ಹಿಂದಿನಿಂದಲೇ ಸರಕಾರ ವಿಂದ್ಯಗಿರಿ ಪರ್ವತದ ಸುತ್ತಮುತ್ತಲಿರುವ ಗ್ರಾಮದ ರೈತರ ಜಮೀನುಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ, ಈ ಪ್ರದೇಶದಲ್ಲಿ ಪ್ರಪಂಚದ ಮೂಲೆಮೂಲೆಗಳಿಂದ ಅಭಿಷೇಕಕ್ಕೆ ಆಗಮಿಸುವಂತಹ ಜನರಿಗೆ ಉಳಿದುಕೊಳ್ಳುವ ಸೌಕರ್ಯವನ್ನು ಸ್ವಾಮೀಜಿಗಳಿಗೆ ಆಶ್ರಮವನ್ನು ಮಾಡಿಕೊಡಲಾಗುತ್ತದೆ, 4 ತಿಂಗಳ ಹಿಂದಿನಿಂದಲೇ ವಿಗ್ರಹದ ಸುತ್ತ ಭದ್ರವಾಗಿ ಅಟ್ಟಣಿಗೆಯನ್ನು ಕಟ್ಟಲಾಗುತ್ತದೆ, ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ವರ್ಷಾನುಗಟ್ಟಲೆ ಹಿಂದಿನಿಂದಲೇ ಪಾದಯಾತ್ರೆಯನ್ನು ಕೈಗೊಳ್ಳುವವರಿದ್ದಾರೆ. ಕಾರ್ಯಕ್ರಮದ ಒಂದು ತಿಂಗಳಿಂದ ಅಂತೆಯೇ ವ್ಯಾಪಾರ ವಹಿವಾಟುಗಳು ಅಂಗಡಿ-ಮುಂಗಟ್ಟುಗಳು ತೆರೆದುಕೊಳ್ಳುತ್ತವೆ, ಮಹಾಮಸ್ತಕಾಭಿಷೇಕ ಪ್ರಾರಂಭದ ವಿಜೃಂಭಣೆಯ ಕಾರ್ಯಕ್ರಮದಿಂದ ನಡೆಯುತ್ತದೆ. ಅಧಿಕೃತವಾಗಿ ಮಹಾಮಸ್ತಕಾಭಿಷೇಕ ಒಂದು ವಾರ ಇದ್ದರೂ ಒಂದು ತಿಂಗಳ ತನಕ ಹೊರಗಿನವರು ಬಂದು ಬೇಟಿ ಕೊಡುತ್ತಿರುತ್ತಾರೆ. ಇದಾದ ಬಳಿಕ ಅಟ್ಟಣೆಯನ್ನು ಬಿಚ್ಚುವ ಕಾರ್ಯ 2 ತಿಂಗಳಲ್ಲಿ ಮುಕ್ತಾಯವಾಗುತ್ತಾ ಮತ್ತದೇ ಹನ್ನೆರಡು ವರ್ಷಗಳಿಗೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ನಾಂದಿ ಹಾಡುತ್ತದೆ.

ಸತತವಾಗಿ 12 ವರ್ಷ, ಗಾಳಿ ಮಳೆ ಬಿಸಿಲಿಗೆ ಮೈಯೊಡ್ಡಿ ನಿಂತಿದ್ದ ಬಾಹುಬಲಿ ಮೂರ್ತಿ ಈ ಮಹಾಮಜ್ಜನದಿಂದ ಚೇತನವನ್ನ ಪಡೆಯುತ್ತದೆ, ಮಹಾಮಜ್ಜನ ಮೂರ್ತಿ ಹಾಳಾಗದಂತೆ ರಕ್ಷಣೆಯನ್ನು ನೀಡುತ್ತದೆ. ಇದರ ಸಂರಕ್ಷಣೆಯ ಹಾಗೂ ಮೇಲುಸ್ತುವಾರಿಯನ್ನು ರಾಜ್ಯದ ಪುರತತ್ವ ಇಲಾಖೆ ಮೂರ್ತಿ ಹಾಳಾಗದಂತೆ ಕಾಲಕಾಲಕ್ಕೆ ಆಗಬೇಕಾದದ್ದು ಸಂರಕ್ಷಣಾ ವಿಧಾನಗಳನ್ನು ಅನುಸರಿಸುತ್ತದೆ.

ದೇಶದ ಉದ್ದಗಲಕ್ಕೂ ಶಿವನ ದೇವಾಲಯಗಳಿದ್ದರೂ ಸಹ ಹಿಂದುಗಳು ಹೇಗೆ ವಾರಣಾಶಿಯ ಕಾಶಿ ದೇವಾಲಯಕ್ಕೆ ಹೋಗುತ್ತಾರೆಯೇ ಅದೇ ರೀತಿ ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ಬಾಹುಬಲಿ ಮೂರ್ತಿಯಿದ್ದು ಮಹಾಮಸ್ತಕಾಭಿಷೇಕ ನಡೆದರೂ ಸಹ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ತನ್ನದೇ ಆದಂತಹ ಪ್ರಾಮುಖ್ಯತೆಯನ್ನು ಹೊಂದಿದೆ, ನಮ್ಮ ದೇಶದ ಉದ್ದಗಲಕ್ಕೂ ಗೊಮ್ಮಟೇಶ್ವರನ ವಿಗ್ರಹಗಳಿವೆ ಕರ್ನಾಟಕದ 5 ಕಡೆ ಇದೆ ಶ್ರವಣಬೆಳಗೊಳ, ಕಾರ್ಕಳ, ಧರ್ಮಸ್ಥಳ, ವೇನೂರ್, ಗೊಮ್ಮಟಗಿರಿ ಸೇರಿದಂತೆ ಒಟ್ಟು ಐದು ಮೂರ್ತಿಗಳಿವೆ ಕರ್ನಾಟಕದಲ್ಲಿಯೇ ಇಷ್ಟು ಕಡೆ ಮೂರ್ತಿಗಳು ಕಾಣಸಿಗುತ್ತವೆ ಎಂದರೆ ರಾಜ್ಯದ ಉದ್ದಗಲಕ್ಕೂ ಜೈನಧರ್ಮ ಬೆಳೆಸಲು ನಮ್ಮ ಪೂರ್ವಜರು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬುದನ್ನು ನಾವು ಸ್ಮರಿಸಬೇಕಾಗುತ್ತದೆ.

ಹೀಗೆ ಗೊಮ್ಮಟೇಶ್ವರನ ವಿಗ್ರಹ ಕೇವಲ ಕಲ್ಲಿನ ಮೂರ್ತಿಯಾಗಿ ಉಳಿಯದೆ ನೈಸರ್ಗಿಕ, ಧಾರ್ಮಿಕ, ಭೌಗೋಳಿಕ, ವೈಜ್ಞಾನಿಕ, ಕಲೆ ಹಾಗೂ ರಾಜಕೀಯ ಹೀಗೆ ಹತ್ತಾರು ಆಯಾಮಗಳ ಆಗರವಾಗಿದೆ. 88ನೇ ಮಹಾಮಸ್ತಕಾಭಿಷೇಕ 2018 ರಲ್ಲಿ ನಡೆದಾಗಿದೆ, ಮುಂದೆ ನಡೆಯುವುದು 89ನೇ ಮಹಾಮಸ್ತಕಾಭಿಷೇಕ ಅದು 2030 ಯಂದು ನಡೆಯುತ್ತದೆ, ಅಷ್ಟೊತ್ತಿಗಾಗಲೇ ನಮ್ಮ ವಯಸ್ಸು ಬಹಳವು ಆಗಿರುತ್ತದೆ, ಆಗಲು ನೋಡುವ ಒಂದು ಅವಕಾಶ ಒದಗುತ್ತದೆ ಸಮಯ ಮಾಡಿಕೊಂಡು ಭೇಟಿನೀಡಿ, ಉತ್ತರಭಾರತದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳಕ್ಕೆ ಭೇಟಿ ನೀಡಲಾಗತ್ತದೆಯೋ ಇಲ್ಲವೋ ನಮಗಂತೂ ತಿಳಿಯದು, ಆದರೆ ಜೀವನದಲ್ಲಿ ಒಮ್ಮೆಯಾದರೂ ಶ್ರವಣಬೆಳಗೊಳಕ್ಕೆ ಭೇಟಿ ನೀಡಬಹುದು. ನಾವು ಭೇಟಿ ನೀಡದೇ ಹೋದರು ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ವಿಜೃಂಭಣೆಯಿಂದ ನಡೆಯುತ್ತಲೇ ಇರುತ್ತದೆ, ಇದು ಎಂದೂ ಅಳಿಯದ ಮಾಸದ ಕಾಲಚಕ್ರದಲ್ಲಿ ಒಂದಾದ ನಿಸರ್ಗದ ಆಚರಣೆಯಾಗಿದೆ, ಇಂದಿಗೂ ನಡೆಯುತ್ತಿದೆ, ಮುಂದೆಯೂ ನಡೆಯುತ್ತಲೇ ಇರುತ್ತದೆ, ಎಲ್ಲಿಯತನಕ ನಿಸರ್ಗ ಉಳಿಯುತ್ತದೆ ಅಲ್ಲಿಯತನಕ ಆಚರಣೆಗಳು ನಡೆಯುತ್ತಲೇ ಇರುತ್ತದೆ, ಇದು ಭಾರತೀಯರು ಪ್ರಪಂಚಕ್ಕೆ ತೋರಿಸಿಕೊಟ್ಟ ಸತ್ಯದರ್ಶನದ ಮಾರ್ಗ.

ಶ್ರವಣ ಬೆಳಗೊಳದ ಬಾಹುಬಲಿ ಏಕಶಿಲಾ ಮೂರ್ತಿ ಕರ್ನಾಟಕದ ಬಹುದೊಡ್ಡ ಹಿರಿಮೆಯಾಗಿರುವುದರಿಂದ 2005 ಭಾರತ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಬಾಹುಬಲಿಯ ಸ್ತಬ್ಧಚಿತ್ರವನ್ನು ರಾಜಪಥದ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ಇಷ್ಟೆಲ್ಲಾ ವಿಷಯ ನಾವಿಂದು ಚರ್ಚಿಸಬೇಕಾದಲ್ಲಿ ಪ್ರಕೃತಿಯ ಒಂದಂಶವಾದ ಶಿಲೆಗಳು ಬೇಕಾಗಿದ್ದವು, ಮಾನವನ ದುರಾಸೆಯಿಂದಾಗಿ ಭೂಮಿಯ ಮೇಲೆ ತಲೆಯೆತ್ತಿದ್ದಂತಹ ಅನೇಕ ಶಿಲೆಗಳು ವಿವಿಧ ಉದ್ದೇಶಗಳಿಂದ ಕಣ್ಮರೆಯಾಗಿದೆ, ಅನೇಕ ಖನಿಜ ಸಂಪನ್ಮೂಲಗಳಿಗೆ ಭೂಗರ್ಭವನ್ನು ಬರಿದು ಮಾಡಲಾಗುತ್ತದೆ, ಶಿಲೆಗಳನ್ನು ಮುಂದಿನ ಭವಿಷ್ಯಕ್ಕಾಗಿ ಉಳಿಸಬೇಕೆಂದು ಪ್ರತಿವರ್ಷ ಡಿಸೆಂಬರ್ 11 ನೇ ತಾರೀಕನ್ನು ವಿಶ್ವ ಪರ್ವತಗಳ ದಿನವೆಂದು ಆಚರಿಸಲಾಗುತ್ತದೆ, ಇಷ್ಟೆಲ್ಲ ಇದ್ದರೂ ಬೆಟ್ಟಗಳು ದಿನದಿನ ನೆಲಸಮವಾಗುತ್ತಿರುವುದು ದುರ್ದೈವವೇ ಸರಿ.

ಪ್ರಕೃತಿಯ ಒಂದು ಅಂಶವಾದ ಶಿಲೆಗಳು ಇರದೆ ಹೋಗಿದ್ದರೆ ವಿಶ್ವದ ಅತ್ಯಂತ ಎತ್ತರವಾದ ಪರ್ವತ ಮೌಂಟ್ ಎವರೆಸ್ಟ್ ನಮಗೆ ತಿಳಿಯುತ್ತಿರಲಿಲ್ಲ, 

ಅತಿ ವಿರಳ, ಬೆಲೆಬಾಳುವ, ಬಣ್ಣ ಬಣ್ಣದ ಶಿಲೆಗಳು ದೊರೆಯುತ್ತಿರಲಿಲ್ಲ, 

ಇನ್ನು ಕೆಲವು ಶಿಲೆಗಳಿವೆ ಅವು ನೋಡಲಿಕ್ಕೆ ಮರಗಳ ಆಕೃತಿಯನ್ನೇ ಹೋಲುತ್ತದೆ, ಇವುಗಳ ಮೇಲೆ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ ಹಾಗೂ ವಿಜ್ಞಾನಿಗಳ ತಲೆಯನ್ನು ಕೆಡಿಸಿದೆ. 

ಓಡಾಡುವ ಕಲ್ಲುಗಳೆಂದೇ ಪ್ರಖ್ಯಾತವಾಗಿರುವ Nazla ರೇಖೆಗಳು ಸೃಷ್ಟಿಯಾಗುತ್ತಿರಲಿಲ್ಲ, 

ಶಿಲೆಗಳು ಇದ್ದರಿಂದ ತಾನೇ ಗುಹೆಗಳಲ್ಲಿ ಆದಿಮಾನವ ಚಿತ್ರಗಳನ್ನು ಬಿಡಿಸಿದ್ದು, ಕೋಟೆ ಕೊತ್ತಲಗಳನ್ನು ಕಟ್ಟಿಸಿದ್ದು, ಶಾಸನಗಳನ್ನು ಕೆತ್ತಿಸಿದ್ದು.

ರಾಮಾಯಣದಲ್ಲಿ ಲಂಕೆಗೆ ಕಟ್ಟಲಾದ ಸೇತುವೆಗೆ ತೇಲುವ ಕಲ್ಲುಗಳು ಬಳಕೆಗೆ ಬರುತ್ತಿರಲಿಲ್ಲ. 

ಶಿಲೆಗಳು ಇಲ್ಲದೇ ಹೋಗಿದ್ದರೆ ಪುರಾಣಗಳಲ್ಲಿ ಕೃಷ್ಣ ಲೋಕಕಲ್ಯಾಣಕ್ಕಾಗಿ ಎತ್ತಿದ ಗೋವರ್ಧನ ಗಿರಿ ಬೆಟ್ಟ ಇರುತ್ತಿರಲಿಲ್ಲ. 

ತಮಿಳುನಾಡಿನ ಮಹಾಬಲಿಪುರಂ ನಲ್ಲಿರುವ ಬೆಟ್ಟದಿಂದ ಬೀಳದೆ ನಿಂತಿರುವ ಒರೆಗಲ್ಲಿನಲ್ಲಿನ ಬಗ್ಗೆ ಜನರಿಗೆ ತಿಳಿಯುತ್ತಿರಲಿಲ್ಲ. 

ಹಿಮದಿಂದ ಲಿಂಗದ ರೂಪ ಪಡೆಯುವ ಕೈಲಾಸ ಶಿಖರ ಇಷ್ಟೊಂದು ಹೆಸರನ್ನು ಪಡೆಯುತ್ತಿರಲಿಲ್ಲ 

ಶಿಲೆಗಳ ರಚನೆ ಇರದೆ ಹೋಗಿದ್ದರೆ ಪ್ರಪಂಚದ ಅತ್ಯಂತ ಎತ್ತರದಿಂದ ಧುಮುಕುವ ಏಂಜಲ್ಸ್ ಜಲಪಾತ, ಏಷ್ಯಾ ಖಂಡದಲ್ಲಿಯೇ ಅತ್ಯಂತ ಎತ್ತರದಿಂದ ಧುಮುಕುವ ಜೋಕ್ಸ್ ಫಾಲ್ಸ್ ಇರುತ್ತಿರಲಿಲ್ಲ. 

ಶಿಲೆಗಳು ಇಲ್ಲದೆ ಹೋಗದ್ದರೆ ಹಿಮಾಲಯದ ಶಿಲೆಗಳು ಒಳಗೆ ಸಿಗುವ ಕೆಂಪು ಉಪ್ಪು ಬಹಳ ಮನ್ನಣೆಯನ್ನು ಪಡೆಯುತ್ತಿರಲಿಲ್ಲ. 

ಶಿಲೆಗಳು ಇಲ್ಲದೆ ಹೋಗಿದ್ದರೆ ವೈಜ್ಞಾನಿಕ ಯುಗದ ಅದ್ಭುತಗಳಾದಂತಹ ಅಂಡರ್ ಗ್ರೌಂಡ್ ಸುರಂಗಗಳು ಸೃಷ್ಟಿಯಾಗುತ್ತಿರಲಿಲ್ಲ.

ಶಿಲೆಗಳು ಇಲ್ಲದೆ ಹೋಗಿದ್ದರೆ ಹಂಪಿಯ ಕಲ್ಲಿನ ರಥ, ಸಂಗೀತ ಸ್ವರ ಹೊಮ್ಮುವ ಶಿಲೆಗಳು ಇರುತ್ತಿರಲಿಲ್ಲ 

ಶಿಲೆಗಳು ಇರದೇ ಹೋಗಿದ್ದರೆ ಚೈನಾದ Leshan giant Budda  ವಿಗ್ರಹವು ತಯಾರಾಗುತ್ತಿರಲಿಲ್ಲ.

ಶಿಲೆಗಳು ಇರದಿದ್ದರೆ ಇಂಡೋನೇಷ್ಯಾದಲ್ಲಿ ಕಂಡುಬರುವ ಪ್ರಪಂಚದ ಅತ್ಯಂತ ದೊಡ್ಡ ದೇವಾಲಯಗಳು ಕಾಣಿಸುತ್ತಿರಲಿಲ್ಲ. 

ಭೂಮಿಯ ಮೇಲೆ ವೈವಿಧ್ಯಮಯವಾದ ಶಿಲೆಗಳು ಮೂಡಿದ್ದರಿಂದಲೇ ಕರ್ನಾಟಕದ ಯಾಣ ಚೈನಾದ ಸ್ಟೋನ್ ಫಾರೆಸ್ಟ್ / stone forest  ಜನಮನ್ನಣೆಯನ್ನು ಪಡೆಯುತ್ತಿರಲಿಲ್ಲ.

ಕಟ್ಟಿಗೆ ಉರಿಯುತ್ತದೆ ಎಂದರೆ ನಂಬೋಣ ಆದರೆ ಕಲ್ಲು ಎಲ್ಲಿಯಾದರೂ ಉರಿಯುತ್ತದ ? ನನಗೂ ಮೊದಲು ಗಾಬರಿಎನಿಸಿತು, ಆಸ್ಟ್ರೇಲಿಯಾದಲ್ಲಿರುವ ಕೆಲವು ಪರ್ವತದ ಸಾಲುಗಳು ಕಟ್ಟಿಗೆಯಂತೆ ಉರಿಯುತ್ತದೆ.

ಶಿಲೆಗಳು ಇದ್ದಿದ್ದರಿಂದಲೇ ಪ್ರಪಂಚದಾದ್ಯಂತ ಗುಹಂತರ ಕೆತ್ತನೆಗಳು ಕಂಡು ಬಂದದ್ದು Petra, Peru , ಅಜಂತಾ ದೇವಾಲಯಗಳು. 

ಶಿಲೆಗಳು ಇದ್ದಿದ್ದರಿಂದಲೇ ಪ್ರಪಂಚದ ಅದ್ಭುತಗಳಾದ ಪಿರಮಿಡ್, ಸೂಕ್ಷ್ಮ ಕೆತ್ತನೆ ಉಳ್ಳ ತಾಜ್ಮಹಲ್ ನಿರ್ಮಾಣವಾದದ್ದು. 

[ ಶಿಲೆಗಳು ಕೇವಲ ಬೆಟ್ಟ ಗುಡ್ಡಗಳಿಗೆ ಸೀಮಿತವಾಗಿರದೆ ಬಹಳಷ್ಟು ವಿಷಯಗಳಲ್ಲಿ ಹಾಸುಹೊಕ್ಕಾಗಿದೆ,

ಲಾವಾರಸ ಸಮುದ್ರ ಸೇರುವ ಜಾಗದಲ್ಲಿ ಯಾವ ಪ್ರಾಣಿಗಳೂ ಬದುಕಲು ಸಾಧ್ಯ ಎಂದು ನಾವು ಭಾವಿಸುತ್ತೇವೆ ಅಲ್ಲವೇ ? ಇಂತಹ ಪ್ರದೇಶದಲ್ಲಿಯೂ ಒಂದು ಮೀನು ಬದುಕುತ್ತದೆ, ಇದು ಎಷ್ಟು ಅಪಾಯಕಾರಿ ಎಂದರೆ ಅಪ್ಪಿತಪ್ಪಿ ಇದರ ಚರ್ಮವನ್ನೇನಾದರೂ ಮಾನವ ಸ್ಪರ್ಶಿಸಿದರೆ ಸ್ವಲ್ಪ ಹೊತ್ತಿನಲ್ಲಿಯೇ ಅಸುನೀಗುತ್ತಾನೆ ಅಷ್ಟು ವಿಷಕಾರಿಯಾಗಿದೆ, ಅಂದಹಾಗೆ ಈ ಮೀನಿನ ಹೆಸರು ಏನು ಗೊತ್ತೇ ? -  "ಕಲ್ಲು ಮೀನು"

ಕಲ್ಲು ಹೂವನ್ನೇನಾದರೂ ಒಮ್ಮೆ ತಿಂದಿದ್ದೀರಾ ಇದೇನಪ್ಪಾ ಹೆಸರು ಕೇಳಲಿಕ್ಕೆ ವಿಚಿತ್ರ ಎನಿಸುತ್ತಿದೆಯೇ ? ಹೌದು ಇದು ಒಂದು ಕಲ್ಲಿನ ಮೇಲೆ ಬೆಳೆಯುವ Lichens ಆಗಿದೆ, ಇದರ ಸೇವನೆಯಿಂದ ಮೂತ್ರಪಿಂಡದ ಸಮಸ್ಯೆ ಗುಣವಾಗುತ್ತದೆ.

]


ಶಿಲೆಗಳು ಇಲ್ಲದೆ ಹೋಗಿದ್ದರೆ ಇವುಗಳ ಮೇಲೆ ಸಂಶೋಧನೆಗಳು ನೆಡೆಯುತ್ತಿರಲಿಲ್ಲ. ಚರ್ಚಾವಿಷಯಗಳು ಆಗುತ್ತಿರಲಿಲ್ಲ. ಪ್ರಕೃತಿಯ ಅವಿಭಾಜ್ಯ ಅಂಗವಾದ ಶಿಲೆಗಳು ಮುಂದಿನ ಪೀಳಿಗೆಗಾಗಿ ಉಳಿಯಲಿ. ಎಲ್ಲೆಡೆಯೂ ಹಸಿರು ಕಿಚ್ಚು ಹೆಚ್ಚುಲಿ.

ಧನ್ಯವಾದಗಳು.