Saturday, December 25, 2021

ಮರವಾಗಬೇಕು !!!!

                                   ಮರವಾಗಬೇಕು !!!!


 ಮರವಾಗಬೇಕು ಮನ ಮರೆವ ಮರವಾಗಬೇಕು

 ಮನದಾಳದಿಂದ ಮಮತೆಯ ಮನತಣಿಸುವ 

 ಮರವಾಗಬೇಕು


ಮಣ್ಣಲ್ಲಿ ಹುಟ್ಟಿ ಮಣ್ಣನ್ನು ತಿಂದು ಮರಳಿ ಮಣ್ಣಾಗುವ    ಮರವಾಗಬೇಕು


ಮಣ್ಣ ಮಗನ ಮನದಾಳದ ಮಾತುಗಳರಿಯಲು 

ಮರವಾಗಬೇಕು


ಮಂದಾರ ಪುಷ್ಪದಲ್ಲಿ ಮಧುತುಂಬಿ ಮಕರಂದ ಹೀರಲು ಮರುಕರೆವ ಮರವಾಗಬೇಕು


ಮೌನದ ಕಣಿವೆಯಲ್ಲಿ ಮೌನಿಯ ಮಾತನು ಮನನ ಮಾಡುವ ಮರವಾಗಬೇಕು


ಮಾನವನ ಮೌಲ್ಯಗಳ ನಡುವೆ ಮೌನಿಯಾದ ಮಗುವಿನಂತಹ ಮರವಾಗಬೇಕು


ಮಾತೃವಾತ್ಸಲ್ಯದಿ ಮೋಡಗಳ ಮೇಘನಾದನು ಮುದ್ದಿಸುವ ಮರವಾಗಬೇಕು


ಮೇರು ಪರ್ವತದ ಮೇಲೆ ಬೆಳೆದು ಮಣ್ಣುಮುಕ್ಕಿ ಮಣ್ಣ ಹಿಡಿದು ಮಹಾಕಾಯದಂತ ಮರವಾಗಬೇಕು


ಮರೆತರು ಮರೆಯಲಾಗದ, ಮೌನದೊಳಗೆ ಮಾತನಾಡುವ, ಮಾತುಗಳಲ್ಲಿ ಮುಗಿಯದ ಮರವಾಗಬೇಕು


ಮರಳಿ ಮರಳಿ ಮತ್ತೆ ಮತ್ತೆ ಮರೆಯಲಾಗದ ಮರವಾಗಬೇಕು


 ಎಸ್ ಪಿ ತೇಜರಾಜು.




Saturday, December 18, 2021

ಮಾನವನ ಯೋಗ್ಯತೆ.

   

                          - ಎಸ್ ಪಿ ತೇಜರಾಜು.


 ಮಾನವ ಮೊದಲಿನಿಂದಲೂ ಆವಿಷ್ಕಾರ ಜೀವಿ ಪ್ರತಿಭಾರಿಯೂ ತಾನೊಂದು ಹೊಸ ಪ್ರಯೋಗವನ್ನು ಮಾಡಬೇಕೆಂದು ಹಂಬಲಿಸುತ್ತಿರುತ್ತಾನೆ, ಇದು ಆದಿ ಮಾನವ ತನ್ನ ಆಹಾರ ಹಾಗೂ ರಕ್ಷಣೆಗೆಂದು ಕಲ್ಲಿನ ಆಯುಧಗಳನ್ನು ಸಿದ್ಧಪಡಿಸಿಕೊಳ್ಳುವುದರಿಂದ ಹಿಡಿದು ಮುಂದೆ ಹಸಿ ಮಾಂಸವನ್ನು ಬೆಂಕಿಯ ಸಹಾಯದಿಂದ ಬೇಯಿಸಿ ತಿನ್ನಲು ಪ್ರಾರಂಭಿಸಿದ, ಪೊಟರೆಯಿಂದ ಗೃಹ ನಿರ್ಮಾಣ ಮಾಡುವ ಕಲೆಯನ್ನು ಕಲಿತ, ಕಲ್ಲಿನ ಆಯುಧಗಳ ಬದಲಾಗಿ ಲೋಹದ ಆಯುಧಗಳನ್ನು ಬಳಸತೊಡಗಿದ ಹೀಗೆ ಅಲೆಮಾರಿಯಾಗಿದ್ದವ ಸಾಕುಪ್ರಾಣಿಗಳೊಂದಿಗೆ ಕೃಷಿ ಮಾಡಿಕೊಂಡು ಒಂದು ಕಡೆ ನೆಲೆಸುವುದನ್ನು ಕಲಿತ, ತಾನು ಮಾಡಿದ ಕೆಲಸಗಳನ್ನು ಕಲ್ಲಿನ ಮೇಲೆ ಚಿತ್ರಿಸುತ್ತಿದ್ದ, ನಿಧಾನವಾಗಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆಯನ್ನು ಬಳಸುವುದನ್ನು ಪ್ರಾರಂಭಿಸಿದ ಹೀಗೆ ಇದು ಮುಂದುವರೆದು ತನ್ನ ಬಳಗ ಸಮೂಹದ ಮುಖಾಂತರ ಸಂಘಜೀವಿಯಾದ ಇದು ಮುಂದುವರಿಯುತ್ತಾ ದೇಶ, ರಾಜರ ಆಳ್ವಿಕೆ, ಸಾಮ್ರಾಜ್ಯ ವಿಸ್ತರಣೆ, ಮಹಾಯುದ್ಧಗಳೆಲ್ಲವೂ ಆದ ಬಳಿಕ ಇಂದು ಪ್ರತಿಯೊಂದು ದೇಶವೂ ಅವರದ್ದೇ ಆದಂತಹ ರಾಜಧರ್ಮ ನೀತಿಯನ್ನು ಪಾಲಿಸಿಕೊಂಡು ವಿವಿಧ ರಾಷ್ಟ್ರಗಳಾಗಿ ಮುನ್ನಡೆಯುತ್ತಿದೆ.

ಇತಿಹಾಸತಜ್ಞರು ಮಾನವನ ಈ ಬೆಳವಣಿಗೆಯನ್ನು ಆಧರಿಸಿ ವಿವಿಧ ಸ್ತರಗಳಾಗಿ ವಿಂಗಡಿಸಿದ್ದಾರೆ ಹಾಗೂ ಇಂದಿನ 21ನೇ ಶತಮಾನವನ್ನು ಆವಿಷ್ಕಾರಗಳ ಯುಗ ಎಂತಲೇ ಗುರುತಿಸಲಾಗಿದೆ, ಇದರಂತೆಯೇ ದಿನದಿಂದ ದಿನಕ್ಕೆ ವಿಜ್ಞಾನಕ್ಕೆ ಸಂಬಂಧಪಟ್ಟ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಾ ಬಂದಿದೆ.

ಇಂದು ಮಾನವನಿಗೆ ಹೊಸ ಹೊಸ ಗೃಹಪಯೋಗಿ ಉಪಕರಣಗಳು, ಹೈ ಸ್ಪೀಡ್ ಕಂಪ್ಯೂಟರ್ ಗಳು, ರಾಸಾಯನಿಕ ಉತ್ಪನ್ನಗಳು, ನಭೋಮಂಡಲದಲ್ಲಿ ನಡೆಯುವಂತಹ ಅನೇಕ ವಿಸ್ಮಯಗಳನ್ನು ತಿಳಿದುಕೊಳ್ಳುಲು ಕೈಗೊಂಡಿರುವ ಚಂದ್ರಯಾನ ಮಂಗಳಯಾನ ಯೋಜನೆಗಳು, ಕೃಷಿ ಹಾಗೂ ಕಾರ್ಖಾನೆಗಳಿಗೆ ಬೇಕಾದಂತಹ ದೊಡ್ಡ ಉಪಕರಣಗಳು ಅಥವಾ ಸಲಕರಣೆಗಳು,ಅಣ್ವಸ್ತ್ರ ಕ್ಷಿಪಣಿ ಗಳು, ದೊಡ್ಡ ಅಣೆಕಟ್ಟುಗಳಿಂದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಕಲೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾನು ಉಳಿಯಬೇಕೆಂಬ ಹಠ, ಅತ್ಯಾಧುನಿಕ ನಗರೀಕರಣಕ್ಕೆ ಹೊಂದಿಕೊಂಡಂತಿರುವ ಜೀವನಶೈಲಿಯಲ್ಲಿ ಕುತೂಹಲ ಹೆಚ್ಚು.

ಭೂಮಿಯ ಮೇಲೆ ಬುದ್ಧಿವಂತ ಜೀವಿ ಎಂದು ತನಗೆ ತಾನೇ ಬಿರುದುಕೊಟ್ಟು ಕೊಂಡಿರುವ ಈ ಮಾನವ ಭೂಮಿಯ ಮೇಲೆ ಏನನ್ನಾದರೂ ಸೃಷ್ಟಿಸಿ ಪ್ರಯೋಗಿಸಿ ಯಶಸ್ವಿಯಾಗಬಲ್ಲ ಎಂದು ಭಾವಿಸಿದ್ದಾನೆ ಆದರೆ ನಿಸರ್ಗಸಹಜವಾಗಿ ದೊರೆತಂತಹ ನಿಸರ್ಗ ಸಂಪತ್ತನ್ನು ತಾನೆಂದು ಸೃಷ್ಟಿಸಲು ಸಾಧ್ಯವಿಲ್ಲ ಎಂಬುದನ್ನ ಒಂದುಕಡೆ ಮರೆತಿದ್ದಾನೆ. ಮಾನವ ಚಂದ್ರನ ಮೇಲೆ ತನ್ನ ಹೆಜ್ಜೆಯನ್ನು ಇಡುವ ಮೂಲಕ ಹೊಸ ಯುಗವನ್ನೇ ಸೃಷ್ಟಿಸಬಲ್ಲನು ಆದರೆ ಆತ ಅಲ್ಲಿಗೆ ತಲುಪಿದ ಮೇಲೂ ಕೂಡ ತನ್ನ ಉಳಿವಿಗಾಗಿ ಭೂಮಿಯ ಮೇಲೆ ನಿಸರ್ಗಸಹಜವಾಗಿ ದೊರೆತಂತಹ ಆಹಾರ, ನೀರು, ಗಾಳಿಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಬೇಕು ಹಾಗೂ ಅಲ್ಲಿಗೆ ತಲುಪಬೇಕಾದರೆ ಈ ಭೂಮಿಯೊಳಗೆ ದೊರಕುವಂತಹ ಇಂಧನವನ್ನು ಬಳಸಬೇಕು, ನಾವಿಂದು ಧರಿಸಿರುವ ಬಟ್ಟೆಗಾಗಿ ನಿಸರ್ಗಸಹಜವಾಗಿ ದೊರೆತ ಹತ್ತಿಯನ್ನು ಬಳಸಬೇಕು, ಬೆಟ್ಟಗುಡ್ಡಗಳನ್ನು ಧರೆಗುರುಳಿ ಗಣಿಗಾರಿಕೆಯ ಮುಖಾಂತರ ಬೆಲೆಬಾಳುವಂತಹ ಖನಿಜ ಸಂಪತ್ತನ್ನು ಹೊರತೆಗೆಯಬಲ್ಲ ಆದರೆ ಸೃಷ್ಟಿಸಲಾರ, ತನ್ನ ಸುತ್ತಮುತ್ತ ಇರುವ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳನ್ನು ಹಾಗೂ ಸಸ್ಯ ಕೋಟಿ ಜೀವಸಂಕುಲಗಳನ್ನು ನಾಶ ಪಡಿಸಬಲ್ಲ ಹೊರತು ಸೃಷ್ಟಿಸಲಾರ, ತಾನು ನಿಸರ್ಗಸಹಜವಾಗಿ ಅದರಲ್ಲಿಯೂ ಉಚಿತವಾಗಿ ಬಳಸಿಕೊಳ್ಳುತ್ತಿರುವಂತಹ ನೀರು, ಗಾಳಿ, ಆಹಾರ, ಖನಿಜಸಂಪನ್ಮೂಲಗಳು, ಇಂಧನವನ್ನು ಎಂದೆಂದಿಗೂ ತನ್ನ ಪ್ರಯೋಗಶಾಲೆಗಳಲ್ಲಿ ಸೃಷ್ಟಿಸಿಕೊಳ್ಳಲಾರ. ಮಾನದ ಇನ್ನಷ್ಟು ಮೊಬೈಲ್ ಟವರ್ ಗಳನ್ನು ಅಭಿವೃದ್ಧಿಪಡಿಸಬಹುದು ಒಂದು ಎರೆಹುಳು ನಿಸರ್ಗಕ್ಕೆ ಕೊಡುವ ಕೊಡುಗೆಯಾಗಲಿ ಅಥವಾ ಒಂದು ಜೇನು ಹುಳು ಮಾಡುವ ಕಾಯಕವನ್ನೇ ಆಗಲಿ, ಒಂದು ಬೆಟ್ಟದ ನೆಲ್ಲಿಕಾಯಿ ತಿನ್ನುವಾಗ ಆಗುವಂತಹ ಸಿಹಿ-ಹುಳಿ ಎರಡರ ಸಮ್ಮಿಲನವನ್ನಾಗಲಿ ಕೃತಕವಾಗಿ ಸೃಷ್ಟಿಸಲು ಸಾಧ್ಯವೇ? ಮಾನವ-ನಿಸರ್ಗಕ್ಕಾಗಿ ಕೊಡುತ್ತಿರುವ ಗ್ರಹಿಸುವ ಕೊಡುಗೆ ಎಂದರೆ 1 ಜನಸಂಖ್ಯೆ 2 ಬೇಡವಾದ ಕಸದ ಸೃಷ್ಟಿ.

ನಭೋಮಂಡಲದ ಆಚೆಗೆ ನಡೆಯುತ್ತಿರುವ ವಿಸ್ಮಯಗಳನ್ನು ತಿಳಿದುಕೊಳ್ಳುವ ಕುತೂಹಲಕ್ಕಿಂತಲೂ ಹೆಚ್ಚಿನ ಕುತೂಹಲ ನಮ್ಮ ಈ ಜೀವ ವೈವಿಧ್ಯ ತಾಣಗಳಲ್ಲಿ ನಡೆಯುತ್ತಿದೆ. ಸಸ್ಯ ಕೋಟಿ ಜೀವಸಂಕುಲಗಳು ಹಾಗೂ ಮಾನವನೂ ಕೂಡ ಈ ಭೂಮಿಯ ಮೇಲೆ ಜೀವಿಸುತ್ತಿರುವುದು. ಭೂಮಿಯ ಪ್ರತಿಶತ 71 ಭಾಗ ಸಮುದ್ರದ ಉಪ್ಪು ನೀರಿನಿಂದಲೇ ಆವೃತವಾಗಿದೆ, ನಾವು ಇಷ್ಟು ದಿನಗಳಲ್ಲಿ ತಿಳಿದಿರುವುದು ಕೇವಲ 10% ಜ್ಞಾನವನ್ನು ಮಾತ್ರ ಇನ್ನೂ ಉಳಿದ ಈ ಮುಂದಿನ ಅಭೇದ್ಯ ಕೋಟೆಯ ವಿಸ್ಮಯಗಳನ್ನು ಅರಿಯುವ / ಗ್ರಹಿಸುವ ಶಕ್ತಿ ಮಾನವನಿಗಿನ್ನು ಬಂದಿಲ್ಲ.

ನಮ್ಮ ಪೂರ್ವಜರಲ್ಲಿ ನಾವು ಇಂದು ಕಾಣಬಹುದಾದಂತಹ ಕೊಳ್ಳುಬಾಕತನವಿರಲಿಲ್ಲ, ಅವರು ನಿಸರ್ಗ ಸಹಜವಾಗಿಯೇ ಸಿಗುವಂತಹ ಸೀಗೆಪುಡಿ, ಹಲ್ಲಿನಪುಡಿಯನ್ನು ಉಪಯೋಗಿಸಿದ್ದರಿಂದ ಬಳಸಿ ಬಿಸಾಕುವಂತಹ ಮನೋವೃತ್ತಿ ಬೆಳೆದಿರಲಿಲ್ಲ, ನಿಸರ್ಗದಲ್ಲಿ ನಡೆಯುವಂತಹ ಅನೇಕ ವಿಸ್ಮಯಗಳನ್ನು ಗ್ರಹಿಸಲು ಪ್ರಯತ್ನಿಸಿ ಪರಿಸರಕ್ಕೆ ಪೂರಕವಾಗಿ ಜೀವನವನ್ನು ನಡೆಸುವುದರ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳುತಿದ್ದ.

ನಾವು ಹಿಂದೆ ಏನು ನಡೆದಿತ್ತು ಎಂದು ತಿಳಿದುಕೊಳ್ಳುವುದರಲ್ಲಿ ಜಾಗೃತವಾಗದೆ ಹೋದರೆ ಮುಂದಿನ ತಲೆಮಾರುಗಳು ಅಂಧಕಾರದಲ್ಲಿ ಮುಳುಗಿ ಹೋಗುತ್ತದೆ. ನೀವೊಮ್ಮೆ ಯೋಚಿಸಿ.

ನಿಸರ್ಗ ತನ್ನೊಳಗೆ ನಡೆಯುತ್ತಿರುವಂತಹ ಕೋಟ್ಯಂತರ ವಿಸ್ಮಯಗಳನ್ನು ಗ್ರಹಿಸುವ ಅಧಿಕಾರವನ್ನು ಮಾನವನಿಗೆ ನೀಡಿದೆಯೇ ಹೊರತು ನಿಸರ್ಗವನ್ನು ನಾಶಪಡಿಸುವ ಅಧಿಕಾರ ಅಥವಾ ಯೋಗ್ಯತೆ ಮಾನವಗಿನ್ನು ಕೊಟ್ಟಿಲ್ಲ.

ಡಾ. ರಹಮತ್ ತರೀಕೆರೆ ಅವರ ಒಂದು ಮಾತಿದೆ   "ದೈವವಿಲ್ಲದ ಹೊಸ ಧರ್ಮವೆಂದರೆ, ಪರಿಸರವಾದ ಅಲ್ಲಿ ಮನುಷ್ಯರಿರುತ್ತಾರೆ. ಅದರ ಜೊತೆಗೆ ಸಹಜವಾದ ಸಂಬಂಧವನ್ನು ಹೊಂದಿರುವ ಗಿಡ ಮರ ಕೀಟ ಪ್ರಾಣಿ ನೀರು ಆಗಸ ನೆಲೆಗಳಿರುತ್ತವೆ. ನಮ್ಮ ಕಾಲದ ಮಕ್ಕಳು ನಂಜೆರಿಸುವ ಧರ್ಮಗಳಿಗಿಂತ ಅಂತಃಕರಣ ಬೆಳಗುವ ಈ ಪರಿಸರ ಧರ್ಮದ ಅನುಯಾಯಿಗಳಾಗುವ ಅಗತ್ಯವಿದೆ".

 ಧನ್ಯವಾದಗಳು. 

Saturday, December 11, 2021

ಹಿನ್ನೀರ ಕಥೆ - 2.

 


 ಅಂದು ಭಾನುವಾರ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಶಿಬಿರದ ಆಯೋಜಕರಿಗೂ ಕೆಲವು ಬಿರುಸಿನ ಕೆಲಸಗಳು ನಡೆಯುತ್ತಿದ್ದವು ಮಧ್ಯಾಹ್ನದ ಊಟವಾಗುವುದರೊಳಗಾಗಿ ಮೈಸೂರು ಆಕಾಶವಾಣಿಯಲ್ಲಿ ಕರ್ತವ್ಯ ನಿರತರಾಗಿರುವ ಶ್ರೀಯುತ ಉಮೇಶ್ ಅವರು ಬುಡಕಟ್ಟು ಸಂಸ್ಕೃತಿ ಮತ್ತು ಸಮೂಹ ಮಾಧ್ಯಮಗಳು ಎಂಬ ವಿಷಯದ ಮೇಲೆ ಬೆಳಕು ಚೆಲ್ಲುತ್ತಾ ದೇಶದಲ್ಲಿ ಬುಡಕಟ್ಟು ಜನರಿಗೆಂದೇ ಇರುವ ಸಮೂಹ ಮಾಧ್ಯಮಗಳ ಪರಿಚಯವನ್ನು ಮಾಡಿಕೊಟ್ಟರು. ನಂತರ SVYM ಸಂಸ್ಥೆಯ ಡಾ ಎಂ ಆರ್ ಸೀತಾರಾಮ ಅವರು ಬುಡಕಟ್ಟು ಜನರ ಜೀವನ ಮೌಲ್ಯಗಳು ಎಂಬ ವಿಷಯದ ಮೇಲೆ ಮಾತನಾಡಿ ಸುಮಾರು 37 ವರ್ಷಗಳ ಹಿಂದೆ ಬುಡಕಟ್ಟು ಜನರ ಅಭಿವೃದ್ಧಿಗೆದ್ದು ನಾವು ಇಲ್ಲಿಗೆ ಬಂದಾಗ ಇಲ್ಲಿಯ ಜನತೆಯಿಂದ ಕಲಿತದ್ದೆ ಹೆಚ್ಚು ಅದು ಇಲ್ಲಿಯ ಸಂಸ್ಕೃತಿ ಆಗಿರಲಿ, ಆಚರ ವಿಚಾರವೇ ಆಗಿರಲಿ ಎಲ್ಲವೂ ನೈಜತೆಯಿಂದ ಕೂಡಿತ್ತು, ಆದಿವಾಸಿಗಳಲ್ಲಿ ವೈದ್ಯಕೀಯ ಪದ್ಧತಿಯು ಸನಾತನ ಕಾಲದಿಂದಲೂ ಗಿಡಮೂಲಿಕಾ ಔಷಧೀಯಗಳಿಂದ ಕೂಡಿದ್ದು ಹಾಗೂ ಅವರಿಂದ ಕಲಿತದ್ದನ್ನು ಗಿರಿ ಮದ್ದು ಎಂಬ ಪುಸ್ತಕದ ಮೂಲಕ  ಈ ಹಿಂದೆ ಹೊರತರಲಾಯಿತು ಎಂಬ ಮಾಹಿತಿಯನ್ನು ತಿಳಿಸಿದರು. ನಂತರ ಸಂತೋಷ್ ತಮ್ಮಯ್ಯ ಅವರು ಸ್ವತಂತ್ರ ಹೋರಾಟ ಮತ್ತು ಬುಡಕಟ್ಟು ಸಮುದಾಯ ಎಂಬ ವಿಷಯದ ಬಗ್ಗೆಯೂ ಹಾಗೂ ಶ್ರೀಯುತ ವಾದಿರಾಜರು ಬುಡಕಟ್ಟು ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯ ಎಂಬ ವಿಷಯದ ಬಗ್ಗೆ ಚರ್ಚಿಸಿ. ಮಧ್ಯಾಹ್ನ ಊಟ ಮುಗಿಸಿಕೊಂಡು ಸುರಿಯುತ್ತಿದ್ದ ಮಳೆಯ ನಡುವೆಯೇ ಬಸ್ಸನ್ನೇರಿ ಬುಡಕಟ್ಟು ಹಾಡಿ ಭೇಟಿ ಹಾಗೂ ಸಮೀಕ್ಷೆಗೆಂದು ಹೊರಟೆವು.


ಶಿಬಿರಾರ್ಥಿಗಳಲ್ಲಿ ಉತ್ಸಾಹ ಹೆಚ್ಚಾಗಿಯೇ ಇತ್ತು ಬಸ್ ನಿಧಾನವಾಗಿ ಹಳ್ಳ ಕೊಳ್ಳದ ದಾರಿಯಲ್ಲಿ ಚಲಿಸುತ್ತಾ ಸ್ವಲ್ಪ ಹೊತ್ತಾದ ಬಳಿಕ ಹಾಡಿಯ ಮುಖ್ಯರಸ್ತೆಯನ್ನು ಬಂದು ಸೇರಿತು. ಸ್ವಲ್ಪ ಮಳೆ ಕಡಿಮೆಯಾದರೆ ಮೇಲೆ ಕೆಳಗೆ ಇಳಿದು ಹೋಗೋಣ ಎಂಬುವರು ಕೆಲವರು, ಮಳೆ ನಿಲ್ಲುವುದಿಲ್ಲ ಎನ್ನುವುದು ಇನ್ನು ಕೆಲವರ ವಾದ, ಸ್ವಲ್ಪ ಹೊತ್ತು ಕಾದರೂ ಯಾರೂ ಛತ್ರಿಯನ್ನು ತೆಗೆದುಕೊಂಡು ಬರದೇ ಇರುವ ಕಾರಣ ಮಳೆಯಲ್ಲಿಯೇ ನಿಧಾನವಾಗಿ ಒಬ್ಬೊಬ್ಬರೇ ಬಸ್ಸಿನಿಂದ ಇಳಿದು ಹಾಡಿಯ ಕೆಸರು ರಸ್ತೆ ಹಿಡಿದರು.ಮಳೆ ಸುರಿಯುತ್ತಲೇ ಇತ್ತು ನಿಶಬ್ದವಾಗಿದ್ದ ಹಾಡಿಯ ವಾತಾವರಣ ಜನದಟ್ಟಣೆಯಿಂದಾಗಿ ಶಬ್ದಮಯಗೊಂಡು ಹಾಡಿಯ ಮನೆ ಒಳಗೆ ಇದ್ದ ಜನರು ಪಿಳಪಿಳನೆ ಕಣ್ಣುಬಿಡುತ್ತಾ ನಮ್ಮನ್ನು ನೋಡುತ್ತಾ ನಿಂತರು ಪಾಪ ಇವರು ಎಷ್ಟು ಮುಗ್ಧರು ಎಂದರೆ ತಾವು ಮಳೆಯಲಿ ನಿಂತಿದ್ದರೂ ಸಹ ಹೊರಗಿನಿಂದ ಬಂದವರಿಗೆ ತಮ್ಮ ಮನೆಯಲ್ಲಿದ್ದ ಛತ್ರಿಗಳನ್ನು ನೀಡುತ್ತಿದ್ದರು. ನಂತರ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರನ್ನು ಕರೆಸಿ ಅವರ ಕುಂದುಕೊರತೆಗಳನ್ನು ಕೇಳಲಾಯಿತು, ಸಾಮಾನ್ಯವಾಗಿ ಹೊರಗಿನವರನ್ನು ಕಂಡರೆ ನಾಚುವ ಸ್ವಭಾವದವರು ಇವರು ತಮಗೆ ಎಷ್ಟೇ ಕಷ್ಟ ಇದ್ದರೂ ಕೂಡ ಪ್ರೀತಿಯಿಂದ ಎಲ್ಲರನ್ನು ಮಾತನಾಡುತ್ತಿದ್ದರು. ನಮ್ಮ ಮೇಲೆ ಇವರಿಗಿರುವ ಒಂದು ಸಂಶಯವೆಂದರೆ ನಮ್ಮ ಕುಂದುಕೊರತೆಯನ್ನು ನಿಗಿಸುವುದಾಗಿ ಅನೇಕ ಮಂದಿ ಬಂದು ಫೋಟೋ ತೆಗೆದುಕೊಂಡು ಹೋಗುತ್ತಾರೆ ಆದರೆ ಪ್ರಯೋಜನಗಳೇನು ಆಗುವುದಿಲ್ಲ, ಅದರೊಂದಿಗೆ ಹೀಗೆ ಭೇಟಿ ನೀಡುವವರು ಫೋಟೋಗಳನ್ನು ತೆಗೆದುಕೊಂಡು ಮತ್ತೊಬ್ಬರಿಂದ ಹಣಗಳಿಸುವ ಮಾರ್ಗವನ್ನು ಮಾಡಿಕೊಂಡಿದ್ದಾರೆ ಎಂಬುದು ಇವರ ನಿಲುವಾಗಿತ್ತು. ಇದರ ನಡುವೆ ನಾವು ಹೋದ ವಿಷಯವನೆಲ್ಲವನ್ನು ಅವರಿಗೆ ತಿಳಿಯಪಡಿಸಿದ ಮೇಲೆ ಮುಕ್ತವಾಗಿ ಮಾತನಾಡಲಾರಂಭಿಸಿದರು.


ನಮ್ಮ (ಬುಡಕಟ್ಟು ಜನರ) ಪೂರ್ವಜರೆಲ್ಲರೂ ಮೂಲವಾಗಿ ಇಲ್ಲಿಯೇ ನೆಲೆ ಕಂಡುಕೊಂಡವರು ಕಾಡುಕುರುಬ, ಜೇನು ಕುರುಬ ಜನಾಂಗಕ್ಕೆ ಸೇರಿರುವ ನಾವು ನಿಸರ್ಗಕ್ಕೆ ಪೂರಕವಾಗಿ ಬದುಕಿ ಬಾಳಿದವರು ಇಂದು ಅನೇಕ ಒತ್ತಡಗಳಿಗೆ ಸಿಲುಕಿ ನಮ್ಮ ಮೂಲ ನೆಲೆಗಳಾದ ಕಾಡಿನಿಂದ ಒಕ್ಕಲೆಬ್ಬಿಸಿ ಇನ್ನೆಲ್ಲಿಗೂ ತಂದು ನಮ್ಮನ್ನು ಹಾಕಿದ್ದಾರೆ, ಸ್ವಾತಂತ್ರ್ಯ ವಿರದ ಪರಿಸ್ಥಿತಿಯಲ್ಲಿ ನಾವು ಇಂದು ಬಾಳುತ್ತಿದ್ದೇವೆ ಅರಣ್ಯ ಇಲಾಖೆಯವರು ನಮ್ಮನ್ನು ಕಂಡರೆ ಬಹಳ ನಿಷ್ಠುರವಾಗಿ ಕಾಣುತ್ತಾರೆ.ಇತ್ತ ನಮಗೆ ಸರಕಾರ ಕಟ್ಟಿಕೊಟ್ಟಿರುವ ಅವ್ಯವಸ್ಥೆ ಮನೆ ಮಳೆಗಾಲದಲ್ಲಿ ಮಳೆ ನೀರು ಸೋರುತ್ತದೆ ಬೇಸಿಗೆಯಲ್ಲಿ ಬಿಸಿಲು ಮನೆಯೊಳಗೆ ನುಗ್ಗುತ್ತದೆ. ಸರಿಯಾದ ಯಾವುದೇ ವ್ಯವಸ್ಥೆಗಳು ನಮ್ಮಲ್ಲಿಗೆ ತಲುಪುವ ಮುನ್ನ ಪೋಲಾಗಿ ಹೋಗಿರುತ್ತದೆ. ಅಪೌಷ್ಟಿಕತೆ, ಅನಕ್ಷರತೆ, ದುಶ್ಚಟಗಳಿಗೆ ದಾಸರಾಗಿ ಎಲ್ಲೂ ಸರಿಯಾಗಿ ನೆಲೆಯೂರಿದ ಪರಿಸ್ಥಿತಿ ಬಂದೊದಗಿದೆ. 


ಇಷ್ಟೆಲ್ಲಾ ಬುಡಕಟ್ಟು ಸಮುದಾಯದ ಕಷ್ಟ ಕಾರ್ಪಣ್ಯಗಳನ್ನು ಕೇಳುತ್ತಿದ್ದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮರುಕವೂ ಹುಟ್ಟಿದಂತಾಗಿ ತಾವು ನೆರವಾಗಬಹುದಾದ ಮಾರ್ಗೋಪಾಯವನ್ನು ಗುರುತು ಮಾಡಿಕೊಂಡರು ನಂತರ ಕೊನೆಯಲ್ಲಿ ಚಿಕ್ಕಮಕ್ಕಳಿಂದ ಬುಡಕಟ್ಟು ಜನಾಂಗದ ಹಾಡನ್ನು, ನೃತ್ಯವನ್ನು ನೋಡಿಕೊಂಡು ಬಂದ ಮಾರ್ಗದಲ್ಲಿ ಹಿಂತಿರುಗಿದೆವು.

Tribal song

ನಂತರ ಅದೇ ಬಸ್ನಲ್ಲೇ ಸ್ವಲ್ಪ ದೂರದಲ್ಲಿದ್ದ ಮಲೆಮಹದೇಶ್ವರ ಸಂಬಂಧಪಟ್ಟ ಪೌರಾಣಿಕ ಹಿನ್ನೆಲೆಯುಳ್ಳ ರಮ್ಯ ರಮಣೀಯ ಭೀಮನಕೊಲ್ಲಿ ಎಂಬ ದೇವಸ್ಥಾನಕ್ಕೆ ಬಿಟಿ ನೀಡಿದೆವು. ಈ ಪ್ರದೇಶದ ಭೌಗೋಳಿಕ ವೈಶಿಷ್ಟವೆಂದರೆ ಹೇಗೆ ಭಾರತದ ಮೂರು ದಿಕ್ಕುಗಳಲ್ಲಿ ನೀರಿನಿಂದ ಆವೃತವಾಗಿದೆಯೋ ಅದೇ ರೀತಿ ಈ ಪ್ರದೇಶವು  ಕಬಿನಿ ಹಿನ್ನೀರಿನಿಂದ ಆವೃತಗೊಂಡಿದೆ. ಇಲ್ಲಿ ಹರಿಯುವ ಕಪಿಲಾನದಿಯ ಮತ್ತೊಂದು ವಿಶೇಷತೆಯೆಂದರೆ ಬಲಭಾಗದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಎಡಬದಿಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ತನ್ನೊಳಗೆ ಅಡಗಿಸಿಕೊಂಡಿದೆ. ಒಂದಾನೊಂದು ಕಾಲಕ್ಕೆ ಗೊಂಡಾರಣ್ಯ ವಾಗಿದ್ದ ಈ ಭೀಮನಕೊಲ್ಲಿ ಇಂದು ತಾಳೆ ಸಂಶೋಧನಾ ಕೇಂದ್ರದ ತಾಳೆಗಿಡಗಳಿಂದಲೂ ಜಮೀನಿನವರ ತೆಂಗಿನ ತೋಟಗಳಾಗಿ ಮಾರ್ಪಾಡಾಗಿದೆ. ಹೀಗೆ ಈ ಸುತ್ತಲ ನಿಸರ್ಗದ ಸೌಂದರ್ಯವನ್ನು ಸವಿಯುತ್ತ ಚಳಿಗೆ ಪುರಿ ಕಾರವನ್ನು ತಿಂದು ಎಲ್ಲರೊಟ್ಟಿಗೆ ಒಂದು ಗ್ರೂಪ್ ಫೋಟೋ ತೆಗೆದುಕೊಂಡು ನಾಳೆಯೇ ಶಿಬಿರದ ಕೊನೆಯ ದಿನ ಎಂದುಕೊಳ್ಳುತ್ತ ನಾಲ್ಕುದಿನಗಳ ಶಿಬಿರದ ನೆನಪುಗಳನ್ನು ಮರುಕಳಿಸುತ್ತಾ ಬಸ್ನಲ್ಲಿ ಹಾಡು ಹೇಳಿಕೊಂಡು ಶಾಲೆಗೆ ಹಿಂದಿರುಗಿದೆವು.

ಮರುದಿನ ಸೋಮವಾರ, ಶಿಬಿರದ ಕೊನೆಯ ದಿನ ಶಿಬಿರಾರ್ಥಿಗಳೆಲ್ಲರೂ ಶಿಸ್ತಿನ ಸಿಪಾಯಿಗಳಾಗಿ ಸಮಯಪಾಲನೆ ಮಾಡುತ್ತಿದ್ದರು ಬೆಳಿಗ್ಗೆ ಮುಂಚಿತವಾಗಿಯೇ ಎದ್ದು ಯೋಗಾಸನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮಗಿದ್ದ ಸಂಶಯಗಳನ್ನು ಬಗೆಹರಿಸಿಕೊಂಡಿರು ನಂತರ ಯೋಗಾಸನವನ್ನು ಹೇಳಿಕೊಟ್ಟ ಗುರುಗಳಿಗೆ ವಂದನಾರ್ಪಣೆಯನ್ನು ನಡೆಸಿಕೊಡಲಾಯಿತು. ಆನಂತರ ಎಲ್ಲರೂ ಫ್ರೆಶ್ ಅಪ್ ಆಗಿ ಉಪಾಹಾರವನ್ನು ಸೇವಿಸಿ ಮೊದಲಿಗೆ ಶಿಬಿರಾರ್ಥಿಗಳಿಂದ ಕವಿಗೋಷ್ಠಿ ಮತ್ತು ಕಥಾ ಓದನ್ನು ನಡೆಸಿಕೊಡಲಾಯಿತು ಇದರಲ್ಲಿ ಶಿಬಿರಾರ್ಥಿಗಳು ತಾವು ಸ್ವತಃ ಬರೆದಂತಹ ಕವಿತೆಗಳನ್ನು ಓದಿದರು, ನಂತರ ಸಾಧಕರೊಂದಿಗೆ ಸಂವಾದದಲ್ಲಿ ವಿಧಾನಪರಿಷತ್ ಸದಸ್ಯರಾದ ಹಾಗೂ ಸಿದ್ದಿ ಜನಾಂಗಕ್ಕೆ ಸೇರಿದ ಶಾಂತರಾಮ್ ಸಿದ್ಧಿ ಅವರು ತಮ್ಮ ಜೀವನದಲ್ಲಿ ವನವಾಸಿ ಕಲ್ಯಾಣದ ಮೂಲಕ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ ಯಶೋಗಾಥೆಯನ್ನು ಹಂಚಿಕೊಂಡರು ನಂತರ ಕುಲಪತಿಗಳು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯ ಬೆಂಗಳೂರು ಡಾಕ್ಟರ್ ಗೋಮತಿದೇವಿಯವರು ವಿದ್ಯಾರ್ಥಿಗಳೊಂದಿಗೆ ಬುಡಕಟ್ಟು ಸಮುದಾಯ ಮತ್ತು ಶಿಕ್ಷಣ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಸದಾ ಸರಕಾರವನ್ನು ದೂರುತ್ತಾ ನಿರಾಶಾವಾದಿಗಳಾಗುವುದಕ್ಕಿಂತ ನಮ್ಮಿಂದ ಬದಲಾವಣೆ ಸಾಧ್ಯವಾಗುವುದಾದರೆ ನಾವೇಕೆ ಮಾಡಬಾರದು ? ಬುಡಕಟ್ಟು ಜನರ ಹೇಳಿಕೆಗಾಗಿ ನಾವೇನು ಮಾಡಬಹುದೆಂದು ಆಲೋಚಿಸಿ ಪಟ್ಟಿ ಮಾಡಿಕೊಂಡು ಕಾರ್ಯಕ್ರಮ ಅನುಷ್ಠಾನಕ್ಕೆ ಇರುವ ಅಡೆತಡೆಗಳನ್ನು ದೂರ ಮಾಡೋಣ ಹಾಗೂ ಈ ಬುಡಕಟ್ಟು ಜನಾಂಗದ ಮಕ್ಕಳಿಗೆ ದೊರಕುತ್ತಿರುವ ಶಿಕ್ಷಣದ ಬಗ್ಗೆ ವಿಸ್ತಾರವಾಗಿ ವಿವರಿಸುತ್ತಾ ಶಿಬಿರಾರ್ಥಿಗಳಿಗೆ ಆಶಾವಾದದ ಭರವಸೆಯನ್ನು ನೀಡಿದರು. ನಂತರ ಶಿಬಿರದ ಕೊನೆಯ ಪಾಯಸದ ಭೋಜನವಾಗಿ ಕಾರ್ಯಕ್ರಮದ ಕೊನೆಯ ಘಟ್ಟವಾದ ಸಮಾರೋಪ ಸಮಾರಂಭಕ್ಕೆ ಎಲ್ಲರೂ ಬಂದು ಸೇರಿದರು.

ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನು ಹೇಳಿದರು ಶ್ರೀ ಶಾಂತರಾಮ್ ಸಿದ್ಧಿಯವರು ಸಮುದಾಯದ ಅಭಿವೃದ್ಧಿ ಎಂಬುದು ಸಮಾಜದ ಒಂದು ದೊಡ್ಡ ಒಳಿತಿನ ಕಾಯಕ. ಸಮಾಜದಲ್ಲಿ ಸಮಗ್ರವಾಗಿ ಎಲ್ಲರೂ ಕೈ ಜೋಡಿಸಿ ಮುಂದೆ ಬರುವುದರಿಂದ ಮಾತ್ರ ದೇಶದ ಹೇಳಿಗೆ ಸಾಧ್ಯವೆಂದು ಸಾರುವ ಗೀತೆಯನ್ನು ಎಲ್ಲರಿಗೂ ಹೇಳಿಕೊಟ್ಟು ಹಾಡುತ್ತಾ ಸಮರೂಪ ನುಡಿಗಳನ್ನಾಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾಕ್ಟರ್ ಗೋಮತಿದೇವಿಯವರು ಬುಡಕಟ್ಟು ಸಮುದಾಯದ ಅಭಿವೃದ್ಧಿಯ ದೂರದೃಷ್ಟಿ ಬಗ್ಗೆ ಬೆಳಕು ಚೆಲ್ಲುತ್ತಾ ಮುಖ್ಯ ಅತಿಥಿಗಳ ಭಾಷಣವನ್ನು ಮಾಡಿದ್ದರು.

ಕಮ್ಮಟದ ನಿರ್ದೇಶಕರಾಗಿದ್ದ ಪ್ರೊ ನೀಲಗಿರಿ ತಳವಾರರು ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಆಯೋಜಕರು ಒಂದು ಕಡೆಯಾದರೆ ಇದಕ್ಕಿಂತಲೂ ಮೂಲ ಮುಖ್ಯ ಕಾರಣಕರ್ತರು ಶಿಬಿರಾರ್ಥಿಗಳು ನಿಮ್ಮ ಸಕ್ರಿಯ ಭಾಗವಹಿಸುವಿಕೆಯಿಂದಾಗಿಯೇ ಕಾರ್ಯಕ್ರಮ ಇಷ್ಟು ಯಶಸ್ವಿಯಾಗಲು ಕಾರಣವಾಯಿತು ನೀವುಗಳೆಲ್ಲವೂ ಯೋಜನೆಗಳು ಹಾಗೂ ಬುಡಕಟ್ಟು ಜನರ ನಡುವೆ ಇರುವ ಅಂತರದ ಕೊಂಡಿಗಳು ನೀವಾಗಬೇಕು ಎಂದು ಹೇಳಿದರು.

SVYM  ಸಂಸ್ಥೆಯ CEO ಅವರಾದ ಡಾ ಕುಮಾರ್ ಅವರು ಬುಡಕಟ್ಟು ಸಮಾಜದ ಅಭಿವೃದ್ಧಿ ಎಂದರೆ ಸಮುದಾಯದ ಜನರಲ್ಲಿ ಬೆರೆತು ಕಲಿತು ಅವರಿಗೆ ಎಲ್ಲಾ ಆಯಾಮಗಳಲ್ಲಿ ಅನುಕೂಲವಾಗುವಂತೆ ಹಾಗೂ ಅವರ ಮೂಲ ಸಂಸ್ಕೃತಿಗೆ ಧಕ್ಕೆಯಾಗದಂತೆ ಮಾಡುವುದೇ ಬುಡಕಟ್ಟು ಜನಾಂಗದ ಸರ್ವಂಗಿನ ಅಭಿವೃದ್ಧಿ ಎಂದರು.

ಇದಾದ ಬಳಿಕ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ವಿತರಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾಕ್ಟರ್ ಬಿ ವಸಂತ್ ಕುಮಾರ್ ಅವರು ಬೆಳಿಗ್ಗೆ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಯನ್ನು  ನೆನಪಿನಲ್ಲಿಟ್ಟುಕೊಂಡು ಉತ್ತರಿಸಿ ಐದು ದಿನಗಳ ಶಿಬಿರದ ಕಾರ್ಯಕ್ರಮಗಳೆಲ್ಲವನ್ನೂ ಮೆಲುಕುಹಾಕುತ್ತಾ ಶಿಬಿರವನ್ನು ನೀವೆಲ್ಲರೂ ಯಶಸ್ವಿಯಾಗಿ ಮುಗಿಸಿದ್ದೀರಿ, ನಿನ್ನೆ ಹಾಡಿಯ ಭೇಟಿಯಲ್ಲಿ ನೀವೆಲ್ಲರೂ ಬುಡಕಟ್ಟು ಸಮುದಾಯದ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೀರಿ ಅವರ ಕಣ್ಣುಗಳಲ್ಲಿ ನಿಮ್ಮ ಭೇಟಿ ಆಶಾಭಾವನೆಯನ್ನು ಮೂಡಿಸಿದೆ, ಜವಾಬ್ದಾರಿಯುತವಾಗಿ ಅವರ ಕಷ್ಟಕಾರ್ಪಣ್ಯಗಳನ್ನು ದೂರಗೊಳಿಸಿದರೆ ಶಿಬಿರ ನಡೆದದ್ದು ಸಾರ್ಥಕವಾಗುತ್ತದೆ ಎನ್ನುತ್ತಾ ಶಿಬಿರ ಯಶಸ್ವಿಯಾಗಲಿಕ್ಕೆ  ಕಾರಣೀಭೂತರಾದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾಯಕ ವೃಂದದವರಿಗೂ, ಶಿಬಿರಾರ್ಥಿಗಳಿಗೂ, ಕಾರ್ಯಕ್ರಮ ಇದೇ ಸ್ಥಳದಲ್ಲಿ ನಡೆಯಲಿಕ್ಕೆ ಅವಕಾಶ ಮಾಡಿಕೊಟ್ಟ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನ ವಿವೇಕಾನಂದ ಭಾರತೀಯ ಅಧ್ಯಯನ ಕೇಂದ್ರದ ನಿರ್ದೇಶಕರಾದ  ಡಾಕ್ಟರ್ ರೇಖಾ ಶಣ್ಮುಖ ಹಾಗೂ ಅವರ ಸಿಬ್ಬಂದಿ ವರ್ಗದವರಿಗೂ, ವಿವೇಕ ಶೈಕ್ಷಣಿಕ ಗಿರಿಜನ ಕೇಂದ್ರ ಸಿಬ್ಬಂದಿ ವರ್ಗದವರಿಗೂ ಐದು ದಿನವೂ ರುಚಿಯಾದ ಊಟವನ್ನು ಬಡಿಸಿದ ಅಡಿಗೆಯವರಿಗೆ, ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಕಾರ್ಯಕ್ರಮ ಯಶಸ್ವಿಯಾಗಲು ನೆರವು ಮಾಡಿಕೊಟ್ಟ ಎಲ್ಲರಿಗೂ ನಮಿಸುತ್ತಾ, ಬಹುದೂರದಿಂದ ಬಂದಂತಹ ವಿದ್ಯಾರ್ಥಿಗಳ ಪಯಣವನ್ನು ನೆನಪಿನಲ್ಲಿಟ್ಟುಕೊಂಡು ಮೈಸೂರು ನಗರದ ರೈಲ್ವೆ ಸ್ಟೇಷನ್ ವರೆಗೂ ವಾಹನ ವ್ಯವಸ್ಥೆ ಆಗಿದೆ ಎಂದು ಹೇಳಿ ಕೊನೆಗೆ ಎಲ್ಲರೂ ಒಟ್ಟಿಗೂಡಿ ಒಂದು ಗ್ರೂಪ್ ಫೋಟೋ ತೆಗೆದುಕೊಂಡು ಕೊನೆಗೆ ಚಹಾ ಹಿರಿ ಮೊದಲೇ ರೆಡಿ ಇಟ್ಟುಕೊಂಡಿದ್ದ ಲಗೇಜ್ ಗಳನ್ನು ಬಸ್ ನಲ್ಲಿ ಹಾಕಿ, ಎಲ್ಲರೂ ಮತ್ತೊಮ್ಮೆ ಸಿಗೋಣವೆಂದು ಶಿಬಿರದ ನೆನಪುಗಳನ್ನು ಮೆಲುಕುಹಾಕುತ್ತಾ ಶಿಬಿರ ಕೊನೆಗೊಂಡಿತು.

ವಿದ್ಯಾರ್ಥಿಗಳೆಲ್ಲ ಹೊರಟ ನಂತರ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತೊಮ್ಮೆ ಸಂಸ್ಥೆಯ ಸಿಬ್ಬಂದಿ ವರ್ಗದವರನ್ನು ನೇರವಾಗಿ ಭೇಟಿಯಾಗಿ ಧನ್ಯವಾದಗಳನ್ನು ಹೇಳುತ್ತಾ ಹಿಂತಿರುಗಿದರು. ಇತ್ತ ಐದು ದಿನಗಳು ಶಿಬಿರಾರ್ಥಿಗಳು ನಲಿದಾಡುತ್ತಿದಂತಹ ಕ್ಯಾಂಪಸ್ ಸಣ್ಣಗೆ ಬಿಕೋ ಎನ್ನುವ ಪ್ರಾರಂಭವಾಯಿತು ನಮ್ಮ ಪಯಣ ಹಿಂದಿರುಗಿ ನಗರಕ್ಕೂ ಶಿಬಿರಾರ್ಥಿಗಳ ಪಯಣ ಬುಡಕಟ್ಟು ಜನರ ಅಭಿವೃದ್ಧಿಯೆಡೆಗೆ ಹೊರಟಿತು.


 ಧನ್ಯವಾದಗಳು.

Saturday, December 4, 2021

ಹಿನ್ನೀರ ಕಥೆ - 1.

                    - ಎಸ್ ಪಿ ತೇಜರಾಜು.

 ವಿದ್ಯಾರ್ಥಿಗಳಾಗಿದ್ದಾಗ ಶಾಲೆ ಅಥವಾ ಕಾಲೇಜು ದಿನಗಳಲ್ಲಿ ನೀವು ಯಾವುದಾದರೂ ಶಿಬಿರಗಳಲ್ಲಿ ಭಾಗವಹಿಸಿರಬಹುದು ಅದು NSS  ಆಗಿರಬಹುದು ಅಥವಾ NCC ಆಗಿರಬಹುದು, ಕೆಲವು ಶಿಬಿರಗಳು ಒಂದೆರಡು ದಿನಗಳಲ್ಲಿ ಮುಗಿದರೆ ಇನ್ನೂ ಕೆಲವು ಒಂದು ವಾರ ಅಥವಾ 10-15 ದಿನ ಹೀಗೆ ನಡೆಯುವುದುಂಟು ಅದರಲ್ಲಿಯೂ ವಿದ್ಯಾರ್ಥಿ ಜೀವನದಲ್ಲಿ ಭಾಗವಹಿಸಿದ ಪ್ರಪ್ರಥಮ ಶಿಬಿರದ ನೆನಪುಗಳು ಸದಾ ನಮ್ಮ ಸ್ಮೃತಿಪಟಲದಲ್ಲಿ ಚಿರಸ್ಥಾಯಿಯಾಗಿ ಉಳಿದಿರುತ್ತದೆ.

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಇವರ ಸಹಯೋಗದಲ್ಲಿ ನಡೆದ ಐದು ದಿನಗಳು ( ದಿನಾಂಕ 2-9-2021 ರಿಂದ 6-9-2021 ) ಬುಡಕಟ್ಟು ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಬಂದೊದಗಿತು. ಕಾಲೇಜಿನ ದಿನಗಳಲ್ಲಿ ವಿವಿಧ ರಂಗದ ಶಿಬಿರಗಳಲ್ಲಿ ಭಾಗವಹಿಸಿದ್ದ ನನಗೆ ಈ ಶಿಬಿರ ವಿಶಿಷ್ಟವಾಗಿ ಕೂಡಿತ್ತು ಏಕೆಂದರೆ ಇಲ್ಲಿ ನಾನು ಕೇವಲ ಶಿಬಿರಾರ್ಥಿಯಾಗಿರದೆ ಆಯೋಜಕರ ತಂಡದಲ್ಲಿ ಒಬ್ಬನಾಗಿದ್ದೆ.

ಶಿಬಿರವು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯ ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರ ಹೊಸಹಳ್ಳಿಯಲ್ಲಿಯೇ ನಡೆಯಲು ಒಂದು ಬಲವಾದ ಕಾರಣವಿದೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಅಂಟಿಕೊಂಡಂತಿರುವ ಈ ಪ್ರದೇಶ ಸುತ್ತಮುತ್ತಲು ಬೆಟ್ಟಗಳಿಂದ ಕೂಡಿದ್ದು ಮಳೆಗಾಲದಲ್ಲಿ ಹಚ್ಚ ಹಸಿರ ಹೊದಿಕೆಯನ್ನುದ್ದು ಜನರ ಕಣ್ಮನ ಸೆಳೆಯುತ್ತದೆ. ಸನಾತನ ಕಾಲದಿಂದಲೂ ಈ ಕಾಡೊಳಗೆ ಕಾಡಿಗೆ ಪೂರಕವಾಗಿ ಜೀವಿಸಿದವರು ಈ ಜೇನುಕುರುಬ, ಕಾಡುಕುರುಬ ಜನಾಂಗದವರ ಇಂದು ಅನೇಕ ಒತ್ತಡಗಳಿಗೆ ಸಿಲುಕಿ ಕಾಡಿನಿಂದ ಹೊರದೂಡಲ್ಪಟ್ಟು ಕಷ್ಟ ಕಾರ್ಪಣ್ಯಗಳ ನಡುವೆಯೇ ಕಪಿಲಾ ಜಲಾಶಯದ ಹಿನ್ನೀರ, ಬಂಡೀಪುರ ರಾಷ್ಟ್ರೀಯ ಉದ್ಯಾನದ ಮುಂಭಾಗದ ಮಧ್ಯದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಪ್ರದೇಶವೇ ಶಿಬಿರಕ್ಕೆ ಸೂಕ್ತವಾದ ತಾಣ ಎಂಬುದು ಆಯೋಜಕರ ಅಭಿಪ್ರಾಯ.

ನಗರದಲ್ಲಿರುವ ರಸ್ತೆಗಳ ಪರಿಸ್ಥಿತಿಗಳು ನಮಗೆಲ್ಲಾ ತಿಳಿದಿರುವ ವಿಚಾರವೇ, ಹಾಗಾದರೆ ಇಂತಹ ರಿಮೋಟ್ ಪ್ಲೇಸ್ ಗೆ ತಲುಪುವ ಮಾರ್ಗ ಎಷ್ಟು ಹೊತ್ತು ಆಗುತ್ತದೆ ಎಂಬುದನ್ನು ನೀವೊಮ್ಮೆ ಯೋಚಿಸಿ? ಮೈಸೂರಿನಿಂದ ಎರಡೂವರೆಗಂಟೆ ಹಾಗೂ ಬೆಂಗಳೂರಿಂದ 5:00 ಗಂಟೆ ಪಯಣ, ಆದ್ದರಿಂದಲೇ ಉತ್ತರ ಕರ್ನಾಟಕದಿಂದ ಆಗಮಿಸುವ ಶಿಬಿರಾರ್ಥಿಗಳೆಲ್ಲರೂ ಎರಡು ದಿನಗಳ ಮುಂಚಿತವಾಗಿಯೇ ತಮ್ಮ ಊರುಗಳಿಂದ ಹೊರಟಿದ್ದರು.

ಕಾರ್ಯಕ್ರಮ ಪ್ರಾರಂಭವಾಗುವ ದಿನದವರೆಗೂ ನಾನು ಕನ್ನಡದ ಸಾಹಿತ್ಯ ಅಕಾಡೆಮಿಯ ವ್ಯಕ್ತಿಗಳನ್ನು ನೇರವಾಗಿ ಬೇಟೆ ಆಗದೆ ಹೋದರು ಸಹ ಒಂದೆರಡುಬಾರಿ ಗೂಗಲ್ ಮೇಟ್ ನಲ್ಲೆ ಪರಿಚಯವಾಗಿತ್ತು. ಅಂದು ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ್ಯಂತ ಶಿಬಿರಾರ್ಥಿಗಳು, ಕಾರ್ಯಕ್ರಮದ ಅತಿಥಿಗಳೊಂದಿಗೆ ಉದ್ಘಾಟನಾ ಸಮಾರಂಭ ಆರಂಭವಾಯಿತು, ಮುಖ್ಯವೇದಿಕೆಯಲ್ಲಿ ಡಾ ಬಾಲಸುಬ್ರಹ್ಮಣ್ಯಂ, ಸಾಮರ್ಥ್ಯ ಅಭಿವೃದ್ಧಿ ಆಯೋಗ ಮಾನವ ಸಂಪನ್ಮೂಲ, ಭಾರತ ಸರ್ಕಾರ, ನವದೆಹಲಿ ಇವರು ಹಾಗೂ ಮುಖ್ಯ ಅತಿಥಿಗಳು ಡಾ ಈ ಚಿ ಬೋರಲಿಂಗಯ್ಯ ವಿಶ್ರಾಂತ ಕುಲಪತಿಗಳು ಕನ್ನಡ ವಿಶ್ವವಿದ್ಯಾಲಯ ಹಂಪಿ, ಕಮ್ಮಟದ ನಿರ್ದೇಶಕರಾಗಿದ್ದಂತಹ ಪ್ರೊ ನೀಲಗಿರಿ ತಳವಾರ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಆದಂತಹ ಶ್ರೀ ಕರಿಯಪ್ಪ ಎಸ್, ವಿವೇಕನಂದ ಭಾರತೀಯ ಅಧ್ಯಯನ ಸಂಸ್ಥೆಯ ನಿರ್ದೇಶಕರು ಡಾಕ್ಟರ್ ರೇಖಾ ಷಣ್ಮುಖ, ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದಂತಹ ಡಾ ಬಿ ವಿ ವಸಂತಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಗಿಡ ನೆಡುವುದರೊಂದಿಗೆ ಹಾಗೂ ಬುಡಕಟ್ಟು ಜನರ ಜಾನಪದ ಗೀತೆಯನ್ನು ಮಕ್ಕಳಿಂದ ಹಾಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ ಬಾಲಸುಬ್ರಹ್ಮಮಣ್ಯಂ ಅವರು ಇಂದು ಜನಸಾಮಾನ್ಯರಲ್ಲಿ ಬುಡಕಟ್ಟು ಜನರ ಅಭಿವೃದ್ಧಿ ಎಂದರೆ ಅವರನ್ನು ಕಾಡಿನಿಂದ ಹೊರಗೆ ತಂದು ನಗರದ ಜೀವನಕ್ಕೆ ಒಂದು ಕೊಳ್ಳುವಂತೆ ಒತ್ತಾಯಪೂರ್ವಕವಾಗಿ ಮಾಡುವುದೇ ಎಂಬುದು ಎಲ್ಲರ ನಂಬಿಕೆಯಾಗಿದೆ ಆದರೆ ನಿಜವಾಗಿಯೂ ಬುಡಕಟ್ಟು ಜನರ ಏಳಿಗೆ ಎಂದರೆ ಏನು ? ತಾವು ಮೂವತ್ತೇಳು ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಬಂದಾಗ ಇಲ್ಲಿಯ ಮೂಲನಿವಾಸಿಗಳಿಂದ ಕಲಿತ ಅಭಿವೃದ್ಧಿಯ ದೃಷ್ಟಿಕೋನ ಹಾಗೂ ಜೇನುಕುರುಬ ಹಾಗೂ ಕಾಡುಕುರುಬರ ಹಿಂದಿರುವ ಸ್ವಾರಸ್ಯಕರವಾದಂತಹ ಮಾಹಿತಿಯನ್ನು ಎಳೆಯಾಗಿ ಶಿಬಿರಾರ್ಥಿಗಳಿಗೆ ವಿವರಿಸಿದರು ನಂತರ ವೇದಿಕೆಯ ಮೇಲೆ ಇದ್ದಂತಹ ಅತಿಥಿಗಳೆಲ್ಲರೂ ಮಾತನಾಡಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳುವುದಾಗಿ ಹೇಳಿ ಊಟವಾದನಂತರ ಶಿಬಿರಾರ್ಥಿಗಳ ಪರಿಚಯ ಹಾಗೂ ಶಿಬಿರಕ್ಕೆ ಆಗಮಿಸಿರುವ ಉದ್ದೇಶವನ್ನು ತಿಳಿಯುವುದರ ಮೂಲಕ ಗೋಷ್ಠಿಗಳು ಪ್ರಾರಂಭವಾಗತೊಡಗಿದವು.

ಅಂದಿನ ದಿನ ಕುತೂಹಲ ಕೆರಳಿಸಿದ ಬಹಳ ಅದ್ಭುತವಾದಂತಹ ಗೋಷ್ಠಿ ಎಂದರೆ ಬುಡಕಟ್ಟು ಅಧ್ಯಯನ ಮತ್ತು ಸಂಶೋಧನೆ ಎಂಬ ವಿಷಯ, ಮಾತನಾಡಿದವರು ಡಾ. ನಾಗ ಎಚ್. ಬೆಳಿಗ್ಗೆಯಿಂದ ನಮ್ಮೊಂದಿಗೆ ಇದ್ದರೂ ಸಹ ಯಾರಿಗೂ ತಿಳಿಯದ ರೀತಿ ಕಾರ್ಯಕ್ರಮ ಆಲಿಸುತ್ತಿದ್ದರು.

ಬಹಳ ಸಾಧಾರಣರಂತೆ ನಮ್ಮೊಂದಿಗೆ ಕುಳಿತಿದ್ದ ಅವರು ಗೋಷ್ಠಿಯನ್ನು ಮೆಲುದನಿಯಲ್ಲಿ ಪ್ರಾರಂಭಿಸುತ್ತಾ ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಸಂಶೋಧನೆಯನ್ನು ಮಾಡಿಬಿಟ್ಟರೆ ನಮಗೆ ತಲೆಯ ಮೇಲೆ ಕಿರೀಟ ಇಟ್ಟಿರುವ ಹಾಗೆ ಹಾಡುತೇವೆ, ಇದು ನನಗೂ ಕೂಡ ಬಿಟ್ಟಿರಲಿಲ್ಲ, ಎಂದು ಕೆಲಸದ ನಿಮಿತ್ತ ಜಾರ್ಖಂಡ್ ನಾ ರಾಂಚಿಗೆ ತಲುಪಿದೆನು ಅಂದಿನಿಂದ ನಿಜವಾದ ಸಂಶೋಧನೆಯ ಅರ್ಥ ಅರಿವಾಗತೊಡಗಿತು, ಶೈಕ್ಷಣಿಕವಾಗಿ ಬಹಳ ಇಂದೇ ಉಳಿದಿರುವ ರಾಜ್ಯಗಳಾದಂತಹ ಜಾರ್ಖಂಡ್ನಲ್ಲಿ ಪಾಠ ಮಾಡುವುದು ಸವಾಲಿನ ವಿಷಯವೇ, ಅದರಲ್ಲಿಯೂ ಸಂಶೋಧನೆ ಎಂಬುದು ಮತ್ತೊಂದು ಆಯಾಮವೇ, ಎಲ್ಲೆಲ್ಲೂ ಚದುರಿದಂತೆ ದೂರದಲ್ಲಿ ಬೆರಳೆಣಿಕೆಗೆ ಸಿಗಲಾರದಷ್ಟು ಸ್ನಾತಕೋತ್ತರ ವ್ಯಾಸಂಗ ಮಾಡಿದವರು ಸಿಗುತ್ತಾರೆ.

ತಾನು ವಿದ್ಯಾರ್ಥಿ ಜೀವನದ ನಾಲ್ಕು ಗೋಡೆಗಳ ಮಧ್ಯದಲ್ಲಿ ಸಂಶೋಧನೆಯ ಬಗ್ಗೆ ಕಲಿತ ವಿಷಯಗಳಿಗಿಂತ ಸ್ವತಹ ಸಂಶೋಧನೆಗೊಂದು ಕ್ಷೇತ್ರದಲ್ಲಿ ಇಳಿದಾಗ ಕಲಿತದ್ದೆ ಬಹಳ ಇದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಪ್ರಾರಂಭಿಸ ತೊಡಗಿದರು, ರಾಂಚಿಯ ಎಲೆಮರೆ ಕಾಯಿಗಳಂತೆ ಕಾಡಿನೊಳಗೆ ಜೀವಿಸುತ್ತಿರುವ ಬುಡಕಟ್ಟು ಜನರ ಬಗ್ಗೆ ಅಧ್ಯಯನ ಮಾಡುವುದು ಇವರ ಆಸಕ್ತಿದಾಯಕ ವಿಷಯವಾಗಿತ್ತು ಆದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ, ಇಲ್ಲಿಯ ಬುಡಕಟ್ಟಿನವರು ನಿಜವಾಗಿಯೂ ಅಂಡಮಾನ್-ನಿಕೋಬಾರ್ ಗಳಲ್ಲಿ ಕಾಣಸಿಗುವ ಬುಡಕಟ್ಟು ಜನರಂತೆ ಹೊರಗಿನವರನ್ನು ಕಂಡರೆ ವಿಷದ ಬಾಣವನ್ನು ಹೂಡಿ ಸಾಯಿಸಿ ಬಿಡುತ್ತಾರೆ, ಈ ರೀತಿ ಅವರು ನಡೆದುಕೊಳ್ಳಲು ಅನೇಕ ಬಲವಾದ ಕಾರಣಗಳಿವೆ.

ಇವುಗಳ ಹೊರತಾಗಿಯೂ ಒಮ್ಮೆ ಇವರನ್ನು ಭೇಟಿಯಾಗಬೇಕೆಂದು ದೃಢನಿರ್ಧಾರವನ್ನು ಮಾಡಿ ಬಹಳ ಕಷ್ಟಪಟ್ಟು ಬುಡಕಟ್ಟು ವ್ಯಕ್ತಿಯೊಬ್ಬನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿಸಿ ಅಧ್ಯಯನಕ್ಕೆಂದು ನಿಮ್ಮ ಕಾಡಿಗೆ ಕರೆದುಕೊಂಡು ಹೋಗುವೆಯ ಎಂದು ಹೇಳಿದ್ದಾಯ್ತು ಆದರೆ ಇವರಿಂದ ಯಾವುದೇ ಪ್ರತಿಕ್ರಿಯೆ ದೊರಕದೆ ಬಹಳಷ್ಟು ದಿನ ಕಾದು ಕೊನೆಗೊಂದು ದಿನ ಅವರ ಸಮುದಾಯದ ಹಿರಿಯ ಮುಖಂಡರ ಅಪ್ಪಣೆಯಾದ ಬಳಿಕ ಕಾಡಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ, ಬಹಳ ದಿನಗಳ ನಂತರ ತಾನು ಹೇಳಿದ ಮಾರ್ಗಕ್ಕೆ ಬರುವಂತೆ ಹೇಳಿದ ಬಳಿಕ ಆ ಪ್ರದೇಶಕ್ಕೆ ಹೋಗಲು ಕಾಡು ದಾರಿಯಲ್ಲಿ ನಡೆದುಕೊಂಡು ನದಿಯ ಸಮೀಪಕ್ಕೆ ಹೋಗಿ ನಿಂತರು, ಇಲ್ಲಿ ಹೆಣದ ರಾಶಿ ಕಾಣಸಿಗುವುದು ತೀರಾ ಸಾಮಾನ್ಯ ವಿಷಯವೇ ಆದರೂ ಒಮ್ಮೆ ಭಯವಾಗಿದಂತೂ ಸತ್ಯ ನಂತರ ದೂರದಲ್ಲಿಯೇ ಬುಡಕಟ್ಟು ಜನರು ಇವನನ್ನು ಗುರುತಿಸಿ ಬಾಣವನ್ನು ಬಿಡಲು ಹೊರಟರು ಆದರೆ ಇವರು ತಮ್ಮ ಕೈಯಲ್ಲಿ ಹಿಡಿದು ನಿಂತಿದ್ದ ಒಂದು ಪ್ರಾಣಿ ಚರ್ಮದ ಬಿಲ್ಲೆಯನ್ನು ಕಂಡು ಇವನು ನಮ್ಮನ್ನು ಭೇಟಿ ಮಾಡಲು ಬಂದಿರುವುದೆಂದು ತಿಳಿದು ಕಾಡಿನ ಆ ಬದಿಯಿಂದ ಒಂದೆರಡು ಬಿದಿರುಗಳನ್ನು ಕಟ್ಟಿದ್ದ ತೆಪ್ಪವೂ ಅಲ್ಲದ ತೆಪ್ಪದಲ್ಲಿ ಇವರನ್ನು ಕೂರಿಸಿಕೊಂಡು ಕಾಡಿನ ಮತ್ತೊಂದು ಬದಿಗೆ ಕರೆದುಕೊಂಡುಹೋದರು ಅಲ್ಲಿ ಇವರನ್ನು ತಪಾಸಣೆಗೆ ಒಳಪಡಿಸಿ ತಮ್ಮ ಸನ್ನೆ ಭಾಷೆಯಲ್ಲಿ ಏನನ್ನೋ ಕೂಗಿ ದೂರದವರೆಗೆ ವಿಷಯ ಮುಟ್ಟುವಂತೆ ಹೇಳಿದರು ನಂತರ ನಾಲ್ಕು ಜನ ಬಾಂಬ್ ಹಿಡಿದುಕೊಂಡಿದ್ದವರ ಸುತ್ತುವರೆದು ಚಟ್ಟದ ರೀತಿ ತಯಾರಿಸಿದ್ದ ಬಿದಿರ ಮೇಲೆ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಐದು ಜನ ಹೊತ್ತು ಬಹಳ ಹೊತ್ತು ನಡೆದರು, ಯಾವಾಗ ಈ ರೀತಿ ಆಗತೊಡಗಿತು ನಾನು ಹಿಂದಕ್ಕೆ ಬರುವುದಿಲ್ಲ ಎಂದು ಮನಸ್ಸಿನಲ್ಲಿಯೇ ದೃಢ ಸಂಕಲ್ಪವನ್ನು ಮಾಡಿಕೊಂಡಿದ್ದೆ.

ಕೊನೆಗೆ ಬಹಳಷ್ಟು ದೂರ ನಡೆದ ನಂತರ ಎಲ್ಲಿಯೋ ತಂದು ನಿಲ್ಲಿಸಿ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಸಡಿಲಿಸಿದರು ನಿಧಾನವಾಗಿ ಕಣ್ಣುಗಳನ್ನು ತೆರೆದು ಸುತ್ತಮುತ್ತಲ ಬೆಟ್ಟಗುಡ್ಡಗಳ ಹಸಿರು ಹೊದಿಕೆಯನ್ನು ಕಂಡು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಭಾಸವಾದರೂ ಪಕ್ಕದಲ್ಲಿ ನಿಂತಿದ್ದ ಆದಿವಾಸಿಗಳನ್ನು ಕಂಡು ನರಕ ದರ್ಶನವಾಯಿತು. ಸುತ್ತಲು ಕಾಣಿಸುತ್ತಿದ್ದ ಬೆಟ್ಟಗುಡ್ಡಗಳಲ್ಲಿ ಹಸಿರು ನಳನಳಿಸುತ್ತಿತ್ತು ಇನ್ನು ಸ್ವಲ್ಪ ದೂರ ನಡೆದು ಕೊನೆಗೆ ಒಂದು ಸಾಧಾರಣ ತರಗೆಲೆಗಳಿಂದ ಹೊದಿಸಿದ್ದ  ಮಣ್ಣಗೋಡೆಯ ಮನೆ ಕಾಣಿಸಿತು, ಮನೆಯೊಳಗೆ ಪ್ರವೇಶಿಸಲು ಪುಟ್ಟದಾದ ಒಂದು ದ್ವಾರ, ಬಗ್ಗಿ ಒಳಗೆ ಹೋದರೆ ಯಾರು ಕಾಣುತ್ತಿಲ್ಲ, ಪಕ್ಕದಲ್ಲಿದ್ದ ಸೇನಕರ ಜೊತೆ ಒಂದೆರಡು ನಿಮಿಷ ಕಳೆದು ಮನೆಯ ತಗರು ಹೊದಿಕೆಯ ಸಂಧಿಯಲ್ಲಿ ಬರುತ್ತಿದ್ದಾ ಬೆಳಕು ಮುಸುಕು ಮಸುಕಾಗಿತ್ತು, ಆ ಮುಸುಕು ಬೆಳಕಿನಲ್ಲಿ ಎಂದೂ ಕೈಯಾಡಿಸಿದ ತಲೆಯ ಕೂದಲು, ಗಡ್ಡ, ಸುಕ್ಕುಗಟ್ಟಿದ ಕಪ್ಪು ಮೈಬಣ್ಣ ಇಳಿ ವಯಸನ್ನು ಎದ್ದು ತೋರುತ್ತಿದ್ದ ವ್ಯಕ್ತಿಯು ಬಂದು ಮುಂದೆ ಕುಳಿತುಕೊಳ್ಳುತ್ತಿದ್ದಂತೆ ಎದೆಬಡಿತ ಇನ್ನಷ್ಟು ವೇಗವನ್ನು ಪಡೆಯಿತು. ನನ್ನ ಪ್ರಾಣ ಹೋಯಿತು ಎಂದು ಎಂದುಕೊಳ್ಳುತ್ತಿದ್ದಂತೆ ಮಾತಿಗಿಳಿದ ಆ ಬುಡಕಟ್ಟು ಜನರ ಹಿರಿಯ ವ್ಯಕ್ತಿ ಬಂದಿರುವ ಉದ್ದೇಶವನ್ನು ಕೇಳಿ ತಿಳಿದುಕೊಂಡರು, ಆಗಲೇ ಅನಿಸಿದ್ದು ಈತನೇ ಬುಡಕಟ್ಟು ಜನರಿಗೆ ಎಲ್ಲರಿಗೂ ಸ್ವಲ್ಪ ತಿಳಿದವ ಎಂದು ಕಾಣುತ್ತದೆ ಏಕೆಂದರೆ ಹೊರಗಿನವರ ಮಾತನ್ನು ಕೇಳುವ ಸಮಾಧಾನವಾದರೂ ಸ್ವಲ್ಪ ಇದೆ. ಹೇಗೋ ಮಾತನಾಡಿಸಿ ವಿಶ್ವಾಸವನ್ನುಗಳಿಸಿದ ನಂತರ ಈ ಹೊರಗಿನ ವ್ಯಕ್ತಿಯ ಮೇಲೆ ನಂಬಿಕೆ ಬಂದು ಇವರ ಸುತ್ತಮುತ್ತಲ ಪ್ರದೇಶವನ್ನು ತೋರಿಸಿ ಬರುವುದಾಗಿ ತನ್ನ ಸೇವಕರಿಗೆ ಹೇಳಿದನು, ಅದರಂತೆ ಇವರನ್ನು ಸುತ್ತಮುತ್ತಲೂ ಇರುವ ಜಾಗಗಳನ್ನು ತೋರಿಸುತ್ತಾ ಸಂಜೆಯಾಗುತ್ತಾ ಹಿಂತಿರುಗೆ ಹೋಗೋಣವೆಂದು ನಾಯಕ ಬಳಿ ಮಾತನಾಡಿದಾಗ ಅವರ ವಿಶ್ವಾಸವನ್ನು ಗಳಿಸಿದ ಕಾರಣ ಅವರನ್ನು ಅಂದು ಅಲ್ಲಿಯೇ ಉಳಿಸಿಕೊಂಡಿರು, ಒಂದೆರಡು ಗಂಟೆಯೊಳಗೆ ಭೇಟಿಯನ್ನು ಮುಗಿಸಿಕೊಂಡು ಬರಬೇಕು ಎಂದುಕೊಂಡಿದ್ದ ಇವರ ಯೋಚನೆ ಅವರ ವಿಶ್ವಾಸಕ್ಕೆ ಭಜನವಾಗಿ ಎರಡು ದಿನ ಅಲ್ಲಿಯೇ ಉಳಿವ ಸುವರ್ಣಾವಕಾಶ ಜೀವನದಲ್ಲಿ ಬಂದಿತಲ್ಲಾ ಎಂದು ಆನಂದವಾಯಿತು. ಆ ಎರಡು ದಿನಗಳಲ್ಲಿ ಜೀವನದಲ್ಲಿ ಎಂದೂ ತಿನ್ನದ ಹತ್ತಾರು ಬಗೆಯ ಕಾಡು ಹಣ್ಣುಗಳನ್ನು ಸವಿಯುತ್ತ ಅವರ ಗುರುಕುಲದ ಬಗ್ಗೆ ಮಾಹಿತಿ ತಿಳಿದುಕೊಳ್ಳುವಂತಾಯಿತು ನಮ್ಮಲ್ಲಿ ಶಾಲೆ ಇರುವಾಗ ಹಾಗೆ ಅವರಲ್ಲಿ 5 ವಯಸ್ಸಿನಿಂದ 25 ವಯಸ್ಸಿನವರೆಗೂ ಎಲ್ಲಾ ಹುಡುಗ ಹುಡುಗಿಯರನ್ನು ಒಂದೇ ಜಗದಲ್ಲಿ ಇರಿಸಲಾಗುತ್ತದೆ ಇಲ್ಲಿ ಪ್ರತಿಯೊಬ್ಬರೂ ಅನ್ಯೋನ್ಯವಾಗಿ ಸೋದರ-ಸೋದರಿಯರು ಸಂಬಂಧಿಕರಂತೆ ಬಾಳುತ್ತಾರೆ. ಯಾವುದೇ ತಾರತಮ್ಯ ಭೇದ

ಭಾವಗಳಿಲ್ಲದೆ ಇವರನ್ನು ಸಮುದಾಯದ ವಿಧವೆಯರು ನೋಡಿಕೊಳ್ಳುತ್ತಾರೆ. ಮುಂದೆ ಈ ಮಕ್ಕಳು ಬೆಳೆದು ತಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಭೂಮಿಯನ್ನು ಉಳುಮೆ ಮಾಡಿ ಅದುವೆ ವರ್ಷಕ್ಕೆ ಬೇಕಾಗುವಷ್ಟು ಮಾತ್ರ ಆಹಾರ ಪದಾರ್ಥವನ್ನು ಬೆಳೆದುಕೊಂಡು ಪ್ರತಿದಿನವೂ ಸಂಜೆ ಎಲ್ಲರೊಟ್ಟಿಗೆ ಹಾಡಿಕೊಂಡು ನೃತ್ಯಮಾಡಿ ದಿನ ಕಳೆಯುತ್ತಾರೆ. ಹೀಗೆ ಸಂಶೋಧನೆಯಲ್ಲಿ ನನ್ನನ್ನು ತೊಡಗಿಸಿಕೊಂಡಾಗ ಇಂತಹ ಮಜಲುಗಳೆಲ್ಲವೂ ಕಾಣಸಿಗುತ್ತವೆ. ಇವರಲ್ಲಿರುವ ಸಾಮರಸ್ಯ ಜೀವನ ನಮ್ಮೆಲ್ಲರಿಗೆ ಮಾರ್ಗದರ್ಶನವಾಗಬೇಕು. ಇವರಲ್ಲಿ ಅಡಗಿರುವ ಅಪಾರವಾದಂತಹ ಜ್ಞಾನ ಪರಂಪರೆಯ ಬಗ್ಗೆ ಎಂದೂ ಬರೆದಿಡುವ ಪ್ರಯತ್ನಗಳು ನಡೆದಿಲ್ಲ ಬರೆಯಲು ಇವರ್ಯಾರಿಗೂ ಬರುವುದಿಲ್ಲ ಬರೆದು ಕೊಡುವುದಾದರೆ ಅವರಿಗೆ ತಿಳಿಯುವುದು ಇಲ್ಲ ಅಷ್ಟು ಮುಗ್ಧರು ಇವರು, ಹೀಗೆ ನನಗಾದ ಅನುಭವವನ್ನು  ಜಾರ್ಖಂಡ್ ಆದಿವಾಸಿ ಬದುಕು ಎಂಬ ಪುಸ್ತಕದಲ್ಲಿ 


                                                                                        ತಿಳಿಸಿದ್ದೇನೆ ಹಾಗೂ ಆ ಪುಸ್ತಕದಲ್ಲಿ ಬುಡಕಟ್ಟು ಸಮುದಾಯದ ಭಾಷೆಯ ಕೆಲವು ಪದಗಳ ಅರ್ಥವನ್ನು ಕನ್ನಡದಲ್ಲಿಯೂ ನೀಡಲಾಗಿದೆ ಎನ್ನುತ್ತಾ ಈ ಬುಡಕಟ್ಟು ಅಧ್ಯಯನ ಮತ್ತು ಸಂಶೋಧನೆ ಎಂದು ಮುಗಿಯದ ವಿಷಯವಸ್ತುಗಳು ಆದುದರಿಂದಲೇ ನೀವೆಲ್ಲರೂ ಇನ್ನೂ ಹೆಚ್ಚೆಚ್ಚು ಕ್ಷೇತ್ರಕಾರ್ಯದಲ್ಲಿ ಮುಳುಗಿ ಇನ್ನಷ್ಟು ಜ್ಞಾನ ಸಂಪಾದನೆಯನ್ನು ಮಾಡಿಕೊಳ್ಳಿ. ಬಹಳಷ್ಟು ಅದ್ಭುತವಾದಂತಹ ಪುಸ್ತಕಗಳು ನಮ್ಮಲ್ಲಿವೆ ಅವುಗಳನ್ನು ಓದುವ ಪ್ರಯತ್ನವನ್ನು ಮಾಡಿ. ನಾನು ಕೂಡ ತಿಳಿದುಕೊಂಡಿರುವುದು ಏನೇನು ಅಲ್ಲ ಪ್ರತಿದಿನವೂ ಹೊಸ ಕಲಿಕೆ ಆಗುತ್ತಿದೆ ಎಂಬುದರ ಮೂಲಕ ನಗುಮುಖದಲ್ಲ ವಿದ್ಯಾರ್ಥಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕಾಫಿಯನ್ನು ಶಿಬಿರಾರ್ಥಿಗಳೊಂದಿಗೆ ಕುಡಿದು ಹೊರಟರು.

ನಂತರ ಶ್ರೀ ಎಸ್ ಪ್ರವೀಣ್ ಕುಮಾರ್ ಅವರ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನಡೆದು ಬಂದ ಹಾದಿಯ ಬಗ್ಗೆ ಸವಿಸ್ತಾರವಾಗಿ ಪಿಪಿಟಿ ಪ್ರೆಸೆಂಟೇಶನ್ ನ ಮೂಲಕ ವಿವರಿಸುತ್ತ, ಇವತ್ತಿನ ಪರಿಸ್ಥಿತಿಗೂ ಸುಮಾರು 37 ವರ್ಷಗಳಿಂದ ಇಲ್ಲಿದ್ದ ಪರಿಸ್ಥಿತಿಗಳನ್ನು ವಿವರಿಸುತ್ತಾ, ಸಂಸ್ಥಾಪಕರು ಸಮುದಾಯದ ಅಭಿವೃದ್ಧಿಗೆಂದು ಇಲ್ಲಿಗೆ ಬಂದಾಗ ಇಲ್ಲಿಯ ಜನರಿಂದ ಕಲಿತದ್ದೇ ಹೆಚ್ಚು, ವರ್ಷಗಳು ಕಳೆಯುತ್ತಿದ್ದಂತೆ ಹೇಗೆಲ್ಲಾ ಸಂಸ್ಥೆಯು ವಿವಿಧ ಮಜಲುಗಳು ತೆರೆದುಕೊಂಡವು, ಬಹುಬಗೆಯ ಪ್ರಶಸ್ತಿಗಳು ಬರಲಿಕ್ಕೆ ಕಾರಣಗಳು, ಹೊಸ ಹೊಸ ಪ್ರಯೋಗಗಳ ಮೂಲಕ ಸಮುದಾಯದ ಹೇಳಿಗೆಗೆ ಪ್ರಾಪ್ತವಾಗಿದ್ದು ಹೇಗೆ ಎಂಬಿತ್ಯಾದಿ ಹತ್ತಾರು ಬಗೆಯ ಮಾಹಿತಿಯನ್ನು, ಶಿಬಿರಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡುವುದರ ಮೂಲಕ ಮೊದಲ ದಿನದ ಕಾರ್ಯಕ್ರಮಗಳು ಮುಕ್ತಾಯಗೊಂಡವು.

ಮರುದಿನ ಮುಂಜಾನೆ ಶಿಬಿರದ ಮೊದಲ ದಿನದ ಯೋಗಸನ ತರಗತಿ ಪ್ರಾರಂಭವಾಯಿತು ಯೋಗಾಸನವನ್ನು ಹೇಳಿಕೊಡುತ್ತಿದ್ದ ತಿಮ್ಮಯ್ಯನವರು ನಮ್ಮ ನಮ್ಮ ಯೋಗ್ಯತ ಅನುಸಾರ ಮಾಡುವುದೇ ಯೋಗ ಅದು ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಇಲ್ಲಿಯ ಕೆಲವರು ಮೊದಲಿಂದಲೂ ಯೋಗಾಸನವನ್ನು ಮಾಡಿರಬಹುದು ಆದರೆ ಇನ್ನು ಕೆಲವರಿಗೆ ಇದೇ ಮೊದಲ ಬಾರಿಗೆ ಯೋಗಾಸನ ಮಾಡುತ್ತಿರಬಹುದು ಅಡ್ಡಿ ಇಲ್ಲ ಆದರೆ ಪಕ್ಕದವರು ಹೇಗೆ ಮಾಡುತ್ತಿದ್ದಾರೆ ಎಂಬುದನ್ನು ನೋಡುವುದನ್ನು ಬಿಟ್ಟು ತಮಗೆ ಎಷ್ಟು ಸಾಧ್ಯವೋ ಅಷ್ಟನ್ನೇ ಮಾಡಿ. ಯೋಗಾಸನದಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾಗಿರುವುದು ಉಸಿರಾಟ ಇದೊಂದನ್ನು ಗಮನಿಸಿ ಬಿಟ್ಟರೆ ಸಾಕು ನೂರು ವರ್ಷ ಆರಾಮವಾಗಿ ಬದುಕುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾ ಪ್ರಾಣಾಯಾಮವನ್ನು, ಆಸನಗಳನ್ನು, ಮನುಷ್ಯನ ಆಹಾರಕ್ರಮ ಹೇಗಿರಬೇಕೆಂದು ಹೇಳಿಕೊಡುವುದರ ಮೂಲಕ ಅಂದಿನ ಯೋಗಸನ ತರಗತಿ ಮುಕ್ತಾಯಗೊಂಡು ಸ್ನಾನ ತಿಂಡಿ ಮುಗಿಸಿ ಕೊಂಡು ಗೋಷ್ಠಿಗಾಗಿ ಎಲ್ಲರೂ ಬಂದು ಕ್ಲಾಸ್ ರೂಂ ಸೇರಿದರು. 

ಅಂದು ಮೊದಲೇ ನಿಯೋಜನೆಯಾದ ಶೆಡ್ಯೂಲ್ ನ ಪ್ರಕಾರದಂತೆ ತರಗತಿಗಳು ಪ್ರಾರಂಭವಾದವು. ಅಂದಿನ ಒಂದೆರಡು ಗೋಷ್ಠಿಗಳು ಅದರಲ್ಲಿಯೂ ಬುಡಕಟ್ಟು ಸಾಹಿತ್ಯ ಹಾಗೂ ಜ್ಞಾನ-ಪರಂಪರೆ ವಿಷಯ ನನ್ನ ಮನಸ್ಸಿನ ಮೇಲೆ ಆಳವಾದ ಪ್ರಭಾವವನ್ನು ಬೀರಿ ಆಲೋಚನೆಯ ಪಥವನ್ನೇ ಬದಲಾಯಿಸಿತು.

ಕುವೆಂಪು ಅವರು ಹಾಕಿಕೊಟ್ಟ ವಿಶ್ವಮಾನವನ ಕಲ್ಪನೆಯ ಪಥದಲ್ಲಿ ಜೀವನ ನಡೆಸುವುದು ನನ್ನ ಆಶಯ ಹಾಗೂ ಆಚರಣೆಯು ಕೂಡ. ಹೀಗೆ ಒಮ್ಮೆ ಆಲೋಚಿಸುವುದಾದರೆ ನಮ್ಮ ಹತ್ತರಿಂದ ಹದಿನೈದು ತಲೆಮಾರಿನ ಇಂದಿನವರು ವಿಶ್ವಮಾನವನ ರೀತಿಯಲ್ಲಿಯೇ ಬದುಕಿ ಬಾಳಿದವರು ಆದರೆ ಅನೇಕ ಕಾರಣಗಳಿಂದ ಧರ್ಮದ ಪರಧಿಯೊಳಗೆ ಜೋತು, ವರ್ಣವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾ ಮುಂದೆ ಅದು ಜಾತಿ ಮನೆತನಕ್ಕೆ ಒಳಪಟ್ಟು, ಉಪಪಂಗಡಗಳಾಗಿ ಸೀಳುತ್ತಾ, ಮತ್ತದರೊಳಗೆ ಬಗೆಬಗೆಯ ಗೋತ್ರ ಶಾಸ್ತ್ರಗಳನ್ನು ಪಾಲಿಸುತ್ತಾ ಒಂದು ಕಡೆಯಿಂದ ಚಿದ್ರವು ಮತ್ತೊಂದು ಕಡೆಯಿಂದ ಭದ್ರವು ಆಗುತ್ತಾ ಪೂಜೆ-ಪುನಸ್ಕಾರ, ಸಂಸ್ಕೃತಿ, ಆಚರಣೆಗಳನ್ನು ಮೈಗೂಡಿಸಿಕೊಂಡಂತಹದ್ದು. ಈ ಪ್ರಸ್ತಾವನೆ  ಏಕೆಂಬುದನ್ನು ಒಂದು ಉದಾಹರಣೆಯ ಮೂಲಕ ತಿಳಿಸುತ್ತೇನೆ, ಪ್ರತಿಯೊಂದು ರಾಜಮನೆತನಗಳ ಮೂಲ ನೆಲೆಗಳು ನಮ್ಮ ಪೂರ್ವಜರ ರೀತಿಯಂತೆ ಇದ್ದವರೆ ಆದರೆ ಅವರು ಕಾಲಕ್ರಮೇಣ ರಾಜಾಡಳಿತ ಪಥಕ್ಕೆ ಹೊರಳುತ್ತಾ ಅವರದ್ದೇ ಆದಂತಹ ರಾಷ್ಟ್ರಲಾಂಛನ, ರಾಷ್ಟ್ರಗೀತೆ, ರಾಷ್ಟ್ರ ದೇವತೆ,  ರಾಷ್ಟ್ರಪ್ರಾಣಿ, ಪಕ್ಷಿ, ಮರ, ಹೂ, ಹಣ್ಣು ಹೀಗೆ ನಾನಾ ವಿಧವಾಗಿ ಮಾಡಿಕೊಂಡಿದ್ದಲ್ಲವೇ ?

ಈ ರೀತಿಯ ನಮ್ಮೊಳಗೆ ಪಂಗಡಗಳು ಚಿದ್ರಗೊಳ್ಳುವಾಗ ಪ್ರತಿಯೊಂದು ಮನೆತನಕ್ಕೂ ಅದರದೇ ಆದಂತಹ ರಾಷ್ಟ್ರಲಾಂಛನ, ರಾಷ್ಟ್ರಗೀತೆ, ರಾಷ್ಟ್ರ ದೇವತೆ,  ರಾಷ್ಟ್ರಪ್ರಾಣಿ, ಪಕ್ಷಿ, ಮರ, ಹೂ, ಹಣ್ಣು ಇತ್ತು ಎಂದೆನಿಸುತ್ತದೆ, ಹಾಗಾದರೆ ಈ ರೀತಿ ಚಿದ್ರಗೊಳ್ಳಲು ಕಾರಣ ಹುಡುಕುವ ಗೋಜಿಗೆ ಹಾಗೂ ಮರೆಮಾಚಿರುವ ನನ್ನ ಮೂಲ ನಿವಾಸಿಗಳ ತಿಳಿಯುವ ಕುತೂಹಲ ಮೂಡಿದರೂ ಸಹ ಇದು ಅಷ್ಟು ಸುಲಭದ ಕಾಯಕವಲ್ಲ ಎಂಬುದು ಮನಸ್ಸಿನಲ್ಲಿ ಕಾಡಲು ಪ್ರಾರಂಭವಾಯಿತು.

ಸಂಜೆ ಗೋಷ್ಠಿಯಾಲ್ಲಾ ಮುಗಿದು ಚಹಾ ಹೀರುತ್ತಿದ್ದಂತೆ ಶಿಬಿರಾರ್ಥಿಗಳನ್ನು ಕೈಬೀಸಿ ಕರೆದದ್ದು ಬುಡಕಟ್ಟು ಜನರ ನೃತ್ಯ ಶೈಲಿ, ಶಿಬಿರಾರ್ಥಿಗಳಿಗೆ ಈ ಬುಡಕಟ್ಟು ಜನಾಂಗದ ಜಾನಪದ ನೃತ್ಯ ಶೈಲಿಯನ್ನು ಹೇಳಿಕೊಡುತ್ತಿದ್ದವರು ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆಸಿರುವ ಸೋಲಿಗ ಜನಾಂಗದ ಶ್ರೀ ಬಸವರಾಜು ಅವರು, ತಮಟೆ ಹಾಗು ಇನ್ನಿತರ ವಾದ್ಯಗಳೊಂದಿಗೆ ಹಾಡನ್ನು ಹೇಳಿ ನೃತ್ಯವನ್ನು ಹೇಳಿಕೊಡುತ್ತಿದ್ದರು ಶಿಬಿರಾರ್ಥಿಗಳು ಖುಷಿ ಖುಷಿಯಿಂದಲೇ ಬಸವರಾಜು ಅವರು ಹೇಳಿಕೊಡುತ್ತಿದ್ದ ಮಾರಿ ಕುಣಿತ, ಪೂಜಾ ಕುಣಿತ ಕಲಿತು ಕೊಳ್ಳುವುದರ ಮೂಲಕ ಶಿಬಿರದ ಎರಡನೇ ದಿನ ಮುಕ್ತಾಯವಾಯಿತು.

ಮರುದಿನ ಬೆಳಿಗ್ಗೆ ಯೋಗಸನ ತರಗತಿ ಶಿಬಿರಾರ್ಥಿಗಳಿಗೆ ವಿಶೇಷತೆಯಿಂದ ಕೂಡಿತ್ತು, ಯೋಗ ಎಂದಿನಂತೆ ಪ್ರಾರಂಭವಾಗಿ ಮುಗಿಯುವ ಹಂತವನ್ನು ತಲುಪಿತ್ತು  ಯೋಗಸನವನ್ನು ಹೇಳಿಕೊಡುತ್ತಿದ್ದ ತಿಮ್ಮಯ್ಯನವರು ಮಲ್ಲಾಡಿಹಳ್ಳಿ ಗುರುಗಳ ನೇರ ಹಾಗೂ ಪರಮ ಶಿಷ್ಯರು ತಮ್ಮ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಜನರಿಗೆ ಉಚಿತವಾಗಿ ಯೋಗಾಸನವನ್ನು ಹೇಳಿ ಕೊಡುವುದರ ಮೂಲಕ ಪ್ರತಿಯೊಬ್ಬರ ಆರೋಗ್ಯವನ್ನು ವೃದ್ಧಿಸಬೇಕು ಎಂಬ ಗುರುಗಳ ಮಾರ್ಗದಲ್ಲಿ ನಡೆದುಕೊಂಡು ಬಂದಿರುವವರು. ಅಂದು ಜಲ್ ನೀತಿಯ ಒಂದು ಉಪಕರಣದ ಮೂಲಕ ಹೇಗೆ ಮೂಗಿನ ಒಂದು ಹೊಳ್ಳೆಯಿಂದ ನೀರನ್ನು ತೆಗೆದುಕೊಂಡು ಮತ್ತೊಂದು ಹೊಳ್ಳೆಯಲ್ಲಿ ನೀರನ್ನು ಹೊರಗೆ ತರಿಸಬಹುದು ಎಂಬುದನ್ನು ಪ್ರಾತಃಕ್ಷತೆಯ ಮೂಲಕ ತೋರಿಸಿಕೊಟ್ಟ, ಇದನ್ನು ಮಾಡುವುದರಿಂದ ಮೂಗಿನಲ್ಲಿ ಬೆಳೆಯುವ ದುರ್ಮಾಂಸ ಬೆಳೆಯದಂತೆಯು ಹಾಗೂ ಮೂಗನ್ನು ಹೇಗೆ ಶುಭ್ರವಾಗಿ ಇಟ್ಟುಕೊಳ್ಳಬಹುದು ಎಂಬುದನ್ನೂ ಹೇಳುತ್ತಾ, ಈಗ ನಿಮ್ಮಲ್ಲಾರಾದರೂ ಒಬ್ಬರು ಮುಂದೆ ಬಂದು ಈ ಪ್ರಯೋಗವನ್ನು ಮಾಡುವಿರಾ ಎಂದು ಹೇಳಿದರು. ಎಲ್ಲರೂ ಒಮ್ಮೆ ಮನಸ್ಸಿನಲ್ಲಿಯೇ ಊಟ ಮಾಡುವಾಗ ಒಂದು ಕಾಳು ಹಕ್ಕಿಯೋ ಅಥವಾ ಒಂದು ಹನಿ ನೀರೋ ನೆತ್ತಿಗೇರಿದರೆ ಪ್ರಾಣ ಹೋದಂತೆ ಆಗುತ್ತದೆ ಅದರಲ್ಲಿ  ನೀರನ್ನು ಮುಗಿನಲ್ಲಿ ಹಾಕಿಕೊಂಡರೆ ಏನಪ್ಪಾ ಕಥೆ ಎಂದು ಯೋಚಿಸಲಾರಂಭಿಸಿದರು, ಇದನ್ನು ಎಲ್ಲರಿಗಿಂತಲೂ ಮೊದಲೇ ಗ್ರಹಿಸಿದ ಗುರುಗಳು ಯಾರು ಹೆದರುವ ಅವಶ್ಯಕತೆ ಇಲ್ಲ ನಾನು ಹೇಳುವುದನ್ನು ಪಾಲಿಸಿ ಸಾಕು ಎಂದು ಆತ್ಮವಿಶ್ವಾಸವನ್ನು ತುಂಬಿದರು, ಆದರೂ ಒಂದಿಬ್ಬರು ಮನಸ್ಸಿಲ್ಲದ ಮನಸ್ಥಿತಿಯಲ್ಲಿ ಧೈರ್ಯ ಮಾಡಿ  


ಮುಂದೆ ಒಂದು ನಿಂತುಕೊಂಡರು, ಇವರುಗಳು ಗುರುಗಳು ಹೇಳಿದ ರೀತಿಯಲ್ಲಿಯೇ ಮಾಡಿದ ಕಾರಣದಿಂದಾಗಿ ನೀರು ಮೂಗಿನ ಈ ಬದಿಯಿಂದ ಹೋಗಿ ಆ ಬದಿಯಲ್ಲಿ ಹೊರಬಂದಿತು ಎಲ್ಲರಿಗೂ ಆಶ್ಚರ್ಯದ ಜೊತೆಗೆ ಕುತೂಹಲವೂ ಮೂಡಿತು ನಂತರ ಯಾರು ಬರುವುದಾಗಿ ಹೇಳಿದರು ಈಗ ಇನ್ನಷ್ಟು ಜನ ಧೈರ್ಯಮಾಡಿ ಮುಂದೆ ನಿಂತರು. ಗುರುಗಳು ಹೀಗೆ ಹೇಳಿದರು ಮೊದಲು ನೀರಿನ ಉಪಕರಣವನ್ನು ಸರಿಯಾದ ರೀತಿಯಲ್ಲಿ ಹಿಡಿದುಕೊಳ್ಳಬೇಕು ನಂತರ ನೇರವಾಗಿ ನಿಂತು ಉಪಕರಣವನ್ನು ಮೂಗಿಗೆ ಸೇರಿಸಿಕೊಂಡು ಮುಂದೆ ಬಗ್ಗಿ ಎಡಕ್ಕೆ ಬಾಗಬೇಕು ಈ ಸಂದರ್ಭದಲ್ಲಿ ಉಸಿರಾಡದೇ ಇರುವುದು ಒಳಿತು, ಹೀಗೆ ಮಾಡುತ್ತಿದ್ದಂತೆಯೇ ಬಲಭಾಗದಲ್ಲಿ ಉಗುರು ಬೆಚ್ಚಗಿನ ಉಪ್ಪು ನೀರು ಈ ಬದಿಯಿಂದ ಆ ಬದಿಗೆ ಸರಾಗವಾಗಿ ಸಂಚರಿಸಿದ ನಂತರ ಧೈರ್ಯವು ಮೂಡಲಾರಂಭಿಸಿತು ನಂತರ ಇದೇ ಕ್ರಮದಲ್ಲಿ ಎಡ ಹೊಳ್ಳೆಯಲ್ಲಿ ನೀರನ್ನು ಸುರಿದು ಬಲ ಹೊಳ್ಳೆಯಲ್ಲಿ ನೀರು ಬಂದನಂತರ ಯೋಗಾಸನದ ಸಾಧನೆ ಮಾಡಿದೆವು  ಅನ್ನಿಸಲಾರಂಭಿಸಿತು. ನೀರನ್ನು ಸರಿಯಾದ ಕ್ರಮದಲ್ಲಿ ಹಾಕಿಕೊಳ್ಳದೆ ಮಧ್ಯದಲ್ಲಿ ಉಸಿರಾಡಿದವರಿಗೆ ಸ್ವಲ್ಪ ನೆತ್ತಿಗೆ ಹತ್ತಿ ಕುಳಿತು ಚಿತ್ರವಿಚಿತ್ರವಾಗಿ ಕೆಮ್ಮಲು ಆರಂಭಿಸಿದರು. ಒಟ್ಟಿನಲ್ಲಿ ಅಂದಿನ ದಿನದ ಯೋಗಸನ ಎಲ್ಲರ ಮುಖದಲ್ಲಿ ಖುಷಿಯ ಅನುಭವ ನೀಡಿತು.

ಸಮಯಕ್ಕೆ ಸರಿಯಾಗಿ ಗೋಷ್ಠಿಗಳು ಪ್ರಾರಂಭವಾಗತೊಡಗಿದವು. ಬುಡಕಟ್ಟು ಸಮುದಾಯಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಎಂಬ ಗೋಷ್ಠಿಯಲ್ಲಿ ಉಪನ್ಯಾಸವನ್ನು ನೀಡಿದಂತಹ ಪ್ರೊ ಟಿ ಟಿ ಬಸವನಗೌಡ ಅವರೊಂದಿಗೆ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಇರುವ ಯೋಜನೆಗಳು ಹಾಗೂ ಅದನ್ನು ಉಪಯೋಗಿಸಕೊಳ್ಳಲಾಗದ ಪರಿಸ್ಥಿತಿಯ ಮಧ್ಯದಲ್ಲಿರುವ ಅಂತರವನ್ನು ಸ್ಥೂಲವಾಗಿ ಗ್ರಹಿಸಿ ಅಂತರವನ್ನು ಕಡಿಮೆಗೊಳಿಸುವ ಕೆಲವು ಮಾರ್ಗೋಪಾಯಗಳನ್ನು ಟಿಪ್ಪಣಿ ಮಾಡಿದರು. ನಂತರ ಬುಡುಕಟ್ಟು ಮಹಾಕಾವ್ಯ ಸಂಸ್ಕೃತಿ ನಾಯಕರು ಎಂಬ ವಿಷಯದ ಮೇಲೆ ಮೀರಸಾಬಿಹಳ್ಳಿ ಶಿವಣ್ಣ ಅವರು ಬಹು ಬಗೆಯಾಗಿ ವಿವರಣೆಯೊಂದಿಗೆ ಇದೇ ವಿಷಯಕ್ಕೆ ಸಂಬಂಧಪಟ್ಟ ಪುಸ್ತಕಗಳ ಮಾಹಿತಿಯನ್ನು ಹಂಚಿಕೊಂಡರು. ಸಂಜೆ ಶಿಬಿರದ ನಿರ್ದೇಶಕರಾದ ಪ್ರೊ ನೀಲಗಿರಿ ತಳವಾರರು ಬುಡಕಟ್ಟು ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಸವಿಸ್ತಾರವಗಿ ವಿವರಣೆಯನ್ನು ನೀಡುವುದರೊಂದಿಗೆ ಶಿಬಿರದ 3ನೇ ದಿನ ಬುಡಕಟ್ಟು ಜನರ ಜಾನಪದೀಯ ನೃತ್ಯಕಲೆಯನ್ನು ಕಲಿಯುವುದರೊಂದಿಗೆ ಮುಕ್ತಾಯವಾಯಿತು.


ಮುಂದುವರಿಯುತ್ತದೆ.



Saturday, November 20, 2021

ಹೂ ಕಥೆ

                                             


- ತೇಜರಾಜು. 

     ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು, ಕಾನನದಿ ಮಲ್ಲಿಗೆಯು ಮೌನದಿಂಬಿರಿದು ನಿಜ ಸೌರಭವ ಸೂಸಿ ನಲವಿಂ ಪಿಂತಿರ್ದು, ಡಿವಿಜಿಯವರ ಸಾಲುಗಳು,ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು ಎಂಬ ಬಾಲ್ಯದಲ್ಲಿ ಕಲಿತ ಪದ್ಯದ ಸಾಲುಗಳು, ಪ್ರತಿದಿನ ಹೂವಿನ ವ್ಯಾಪಾರಿಗಳು ಮನೆ ಮುಂದೆ ಬಂದಾಗ ನೆನಪಾಗುತ್ತದೆ. ಸಾಲುಗಳ  ಪ್ರಸ್ತಾಪ ಈಗ ಏಕೆ ಬಂದಿತು ಎಂದು ನೀವೇನಾದ್ರೂ ಯೋಚಿಸುತ್ತಿದ್ದರೆ ಅಂಕಣದ ಆಶಯ ಸಂಪೂರ್ಣವಾಗಿ ಹೂಗಳ ಮೇಲೆಯೇ ನಿಂತಿದೆ ಅಂದರೆ ಸರಳವಾಗಿ ಹೇಳುವುದಾದರೆ ಇದೊಂದು ಹೂವಿನ ಕಥೆಯಾಗಿದೆ .

ನಗರದ ವ್ಯಾಪಾರೀ ಮನೋಧರ್ಮದ ಒಳಗೆ ಕರಗಿ ಹೋಗಿರುವ ನಮಗೆ 20ರಿಂದ 30 ಬಗೆಯಾದ ಹೂವುಗಳ ಹೆಸರು ಹಾಗೂ ಅವುಗಳ ಬೆಲೆಯನ್ನು ನೆನಪಿರುವುದೇ ಹೆಚ್ಚು, ಇಂತಹ ಸಂಧಿಗ್ಧ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವುದು ನಮ್ಮ ದುರ್ದೈವವೇ ಸರಿ. ಕೆಲವು ದೇವರಿಗೆ ಇಂತಹದ್ದೇ ಆದಂತಹ ಹೂಗಳು ಬೇಕೆಂದು ಕೊಂಡು ಮುಡಿಸುವುದೇನೋ ಸರಿ ಆದರೆ ಅದು ಮರುದಿನ ಬಾಡುತ್ತದೆ ಅದು ನಿಸರ್ಗದ ಸಹಜ ಧರ್ಮ ಹಾಗೆಂದ ಮಾತ್ರಕ್ಕೆ ಅದು ನಿಜವಾಗಿಯೂ ಬೆಲೆಯನ್ನು ಕಳೆದುಕೊಂಡಿತೇ ? ಹಗದ್ರೆ ನಾವು ಯಾಕೆ ದೇವರಿಗೆ ಹೂವನ್ನು ಮುಡಿಸಬೇಕು ? ಹೂವನ್ನು ಬೆಳೆಸಲಿಕ್ಕೆ ಗಿಡ ಎಷ್ಟು ಎನರ್ಜಿ ಹಾಗೂ ಸಮಯವನ್ನು ವಿನಿಯೋಗಿಸುತ್ತದೆ ? ಹೂ ಹೇಗೆ ಬೆಳೆಯುತ್ತದೆ ಅದು ಯಾಕೆ ಬಿಡುತ್ತದೆ ? ಹೂ ಬೆಳೆಯಲು ಮುಖ್ಯ ಕಾರಣವಾದರೂ ಏನು ? ಹಾಗಾದರೆ ಪ್ರಪಂಚದಲ್ಲಿ ಅರಳಿದ ಮೊದಲ ಪುಷ್ಪ ಯಾವುದು ? ಎಂದು ಕಾಡಿಸಿದ ಪ್ರಶ್ನೆಗಳೇ ಅಂಕಣಕ್ಕೆ ನಾಂದಿಯಾಯಿತು.  

ಮೊದಲಿಗೆ ಆಶ್ಚರ್ಯವಾಗುವ ಸಂಗತಿಯೆಂದರೆ ಹೂವು ಬೆಳೆಯದ ಜಾಗವೇ ಇಲ್ಲ, ಅಂದರೆ ಪಶ್ಚಿಮ ಘಟ್ಟದ ಸಾಲುಗಳಲ್ಲಿಯೂ,ನದಿ ತೊರೆ ಕಿನಾರೆ, ಬೆಟ್ಟ, ಬಯಲು, ಸಮುದ್ರ, ಹಿಮಾಪಾತವಾಗುವ ಜಾಗದಲ್ಲಿಯೂ, ಬಿರುಬಿಸಿಲಿನ ಮರುಭೂಮಿಯಲ್ಲಿ ಹೂವು ಅರಳಿ ನಿಲ್ಲುತ್ತದೆ. ಘಟ್ಟಗಳಲ್ಲಿ ಬೆಳೆಯುವ ಕೆಲವು ಹೂಗಳು ಬಯಲು ಸೀಮೆಯಲ್ಲಿಯೂ ಬೆಳೆಯಬಹುದು ಆದರೆ ತಮ್ಮಲ್ಲಿಯೇ ಅನೇಕ ಮಾರ್ಪಾಡುಗಳನ್ನು ಮಾಡಿಕೊಂಡಿರುತ್ತವೆ. ಪಶ್ಚಿಮ ಘಟ್ಟಗಳಲ್ಲಿ ಕಾಣ ಸಿಗುವ ಅಭೂತಪೂರ್ವ ಹೂವುಗಳ ವೈವಿಧ್ಯತೆಯನ್ನು ಕಂಡು ಆನಂದಿಸಬೇಕು.

ತಜ್ಞರ ಪ್ರಕಾರ ಪ್ರಪಂಚದಲ್ಲಿ ಒಟ್ಟು 4,00,000 ಕ್ಕಿಂತಲೂ ಮಿಗಿಲಾದ ಹೂ ಬಿಡುವ ಸಸ್ಯ ಜಾತಿಗಳಿವೆ,ಭಾರತದಲ್ಲಿಯೇ ಒಟ್ಟು 18,000 ಹೂ ಬಿಡುವ ಸಸ್ಯ ಜಾತಿಗಳು ಪ್ರಪಂಚದ ಒಟ್ಟು 6 ರಿಂದ 7 ಪ್ರತಿಶತ ಜಾತಿಗಳನ್ನು ಪ್ರತಿನಿಧಿಸುತ್ತದೆ.ಪ್ರಪಂಚದ ಅನೇಕ ಭಾಗಗಳಲ್ಲಿ ಕೆಲವು ಹೂಗಳು ತನ್ನ ಪ್ರಾಬಲ್ಯವನ್ನು ಸವಿಸ್ತಾರವಾಗಿ ಹೆಚ್ಚಿಸಿಕೊಂಡಿದೆ, ಸಾಲಿನಲ್ಲಿ ಮೊದಲಿಗೆ ನಿಲ್ಲುವುದೇ ಗುಲಾಬಿ ಹೂಗಳು ಇಂತಹ ಗುಲಾಬಿ ಹೂಗಳು 300 ಹೆಚ್ಚು ಪ್ರಾಥಮಿಕ ಹಂತದ ಬಣ್ಣಗಳೊಂದಿಗೆ 10,000ಕ್ಕಿಂತಲೂ ಮಿಗಿಲಾದ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ, ಮತ್ತೊಂದು ಡೇರೆ ಹೂವು 100 ಹೆಚ್ಚು ಪ್ರಾಥಮಿಕ ಹಂತದ ಬಣ್ಣಗಳೊಂದಿಗೆ 1000ಕ್ಕಿಂತಲೂ ಮಿಗಿಲಾದ ತಳಿಗಳನ್ನು ಕಾಣುವುದಾಗಿದೆ. ಸುವಾಸನೆ ಇಲ್ಲದ ಮುಳ್ಳಿನ ಗಿಡದಲ್ಲಿ ಬೆಳೆಯುವ ಗುಲಾಬಿ ಹೂಗಳು ಪ್ರಪಂಚದಲ್ಲಿ ತನ್ನ ಪ್ರಾಬಲ್ಯವನ್ನು ಹೇಗೆ ಹೆಚ್ಚಿಸಿಕೊಂಡಿತು ಎಂಬುವುದು ಕುತೂಹಲ ಮೂಡಿಸುವಂತಹ ಪ್ರಶ್ನೆಯಾಗಿದೆ.


ಬಣ್ಣವಿಲ್ಲದ ಹೂವುಗಳೇ ಇಲ್ಲ, ಕೆಲವು ಚಂದ್ರನ ಶ್ವೇತ ವರ್ಣದಿಂದ ಕಂಗೊಳಿಸಿದರೆ ( ಬ್ರಹ್ಮ ಕಮಲ ) ಇನ್ನು ಕೆಲವು ಗಾಢ ಕಪ್ಪು ಬಣ್ಣವನ್ನು ಹೊಂದಿರುತ್ತದೆ, ಕೆಲವು ಸುಗಂಧಭರಿತವಾಗಿದ್ದರೆ ( ಮಲ್ಲಿಗೆ, ಸಂಪಿಗೆ ) ಇನ್ನು ಕೆಲವು ದುರ್ಗಂಧವನ್ನು ಬೀರುತ್ತದೆ ( ಕಾಫ್  ಫ್ಲವರ್ ) ಪರಿಮಳವಿಲ್ಲದ ಕೆಲವು ಹೂಗಳು ಕಣ್ಣಿಗೆ ಆನಂದವನ್ನು ನೀಡುತ್ತದೆ ( ಡೇರೆ ಹೂವು ), ವರ್ಷಕ್ಕೆ ಒಂದು ಬಾರಿ ಮಾತ್ರ ಹೂಬಿಡುವ ( ಮೇ ಫ್ಲವರ್ ), ಇವುಗಳಿಗೆ ತದ್ವಿರುದ್ಧವಾಗಿ ವರ್ಷಕೂಡ ಹೂಬಿಡುವ ಸಸಿಗಳಿವೆ ( ನಿತ್ಯ ಪುಷ್ಪ ), 12 ವರ್ಷಗಳಿಗೊಮ್ಮೆ ಹೂ ಬಿಡುವ ನೀಲಕುರಂಜಿ ಸಸ್ಯಗಳು ನಮ್ಮ ಪಶ್ಚಿಮಘಟ್ಟಗಳಲ್ಲಿವೆ. ಮರದಲ್ಲಿ ಬೆಳೆಯುವ ಹೂಗಳಿವೆ, ಬಳ್ಳಿಗಳಲ್ಲಿ ಬೆಳೆಯುವ ಹೂಗಳಿವೆ, ಮುಳ್ಳಿನ ಗಿಡಗಳಲ್ಲಿ ಬೆಳೆಯುವ ಹೂಗಳಿವೆ, ಪಾಚಿಯಲ್ಲಿ ಬೆಳೆಯುವ ಹೂಗಳಿವೆ, ರಾತ್ರಿಯಲ್ಲಾ ಹರಳಿ ಸುವಾಸನೆಯನ್ನು ಬೀರಿ ಹಗಲು ಮಾಡುವುದರೊಳಗೆ ಬಾಡುವ ರಾತ್ರಿರಾಣಿಯತಹ ಪುಷ್ಪಗಳಿವೆ. ದವಸ ಧಾನ್ಯಗಳ ಸಸಿಗಳಲ್ಲಿಯ ಬೆಳೆಯುವ ಹೂಗಳಿವೆ, ಕೆಲವು ದುಂಬಿಯನ್ನು ಮಾತ್ರ, ಕೆಲವು ಚಿಟ್ಟೆಯನ್ನು ಮಾತ್ರ, ಕೆಲವು ಜೇನುನೊಣಗಳನ್ನು ಮಾತ್ರ ಆಕರ್ಷಿಸುವಂತಹ ಹೂಗಳಿವೆ, ಮುಳ್ಳಿನ ಹೂಗಿಡಗಳಲ್ಲಿ ಹರಳುವ ಪಾಪಸ್ಕಳ್ಳಿ, ಡ್ರಾಗನ್ ಫ್ರೂಟ್ ಗಳಿವೆ. ಸಮುದ್ರದ ಉಪ್ಪು ನೀರಿನಲ್ಲಿಯೂ ಚಂದವಾಗಿ ಹೂ ಅರಳಿ ನಿಲ್ಲುವ ಹವಳದಂಡೆಗಳಿವೆ ಒಟ್ಟಿನಲ್ಲಿ ಹೂಬಿಡದ ಸಸ್ಯವನ್ನು ಹುಡುಕುವುದೇ ಕಷ್ಟವಾಗುತ್ತದೆ. ಮಾನವನ ದುರಾಸೆಗೆ ಅನೇಕ ಹೂ ಗಿಡಗಳು ಅಳಿವಿನಂಚಿಗೆ ಬಂದಿದೆ, ಕೆಲವು ಸಂಸ್ಥೆಗಳಂತೂ ಸುಂದರ ಹೂತೋಟಗಳನ್ನು ನಿರ್ಮಿಸಿ ಹಣಗಳಿಸುವ ಕಲೆಯನ್ನು ಕರಗತ ಮಾಡಿಕೊಂಡಿವೆ.

ಹೂಗಳು ಇಂತಿಷ್ಟೇ ವರ್ಷಕಾಲದಲ್ಲಿ ಭೂಮಿಯಲ್ಲಿ ಬೆಳೆಯಿತು ಎಂಬ ಮಾಹಿತಿ ಸಿಗುವುದು ಕಷ್ಟಸಾಧ್ಯವಾಗುತ್ತದೆ ಏಕೆಂದರೆ ಹೂಬಿಡುವ ಸಸ್ಯಗಳು ಭೂಮಿಗೆ 13 ಕೋಟಿ ವರ್ಷಗಳ ಹಿಂದೆಯೇ ಬಂದರೆ ಮಾನವ 70 ಲಕ್ಷ ವರ್ಷಗಳ ಹಿಂದೆ ಬಂದಿರುವವನಾಗಿದ್ದಾನೆ. ಪ್ರಪಂಚದ ವಿವಿಧೆಡೆಗಳಲ್ಲಾದ ಮಾನವನ ಬೆಳವಣಿಗೆ ಅದರಲ್ಲಿಯೂ ಆತ ಒಂದು ಕಡೆ ನೆಲೆಯೂರಿ ಕೃಷಿ ಪ್ರಾರಂಭಿಸಿದ ಬಳಿಕ ಇವನ ಜೀವನದೊಂದಿಗೆ ಕೃಷಿಯ ಧವಸಧಾನ್ಯಗಳಲ್ಲಿಯೂ ಅನೇಕ ಬದಲಾವಣೆಗಳಾಗಿವೆ. ಸುತ್ತಲೂ ಚಂದದಿಂದ ಬೆಳೆಯುತ್ತಿದ್ದ ಹೂ ಸಸಿಗಳು ಮಹಿಳೆಯರಿಗೆ ಇಷ್ಟವಾಗಿ ಮುಂದೆ ಅದು ದೇವರಿಗೂ ಸಮರ್ಪಣೆಯಾಯಿತು ಎಂಬುದು ಸಾಮಾನ್ಯ ನಂಬಿಕೆಯಾಗಿದೆ.


ನಮ್ಮ ಸನಾತನ ನಾಗರಿಕತೆಯನ್ನು ನೋಡುವುದಾದರೆ ಹೂಗಳು ಮಾನವ ಜೀವನದ ಹಾಸುಹೊಕ್ಕಾಗಿ ಬೆಳೆದುನಿಂತಿದೆ. ಮನೆಯ ಅಲಂಕಾರಕ್ಕೂ, ದೇವರಪೂಜೆಗೂ, ಶಿಲಾಶಾಸನಗಳ ಕೆತ್ತನೆಯಲ್ಲಿಯೂ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಪೌರಾಣಿಕ, ರಾಜರ ಅರಮನೆಯ ಸುತ್ತ ಉದ್ಯಾನವನದ ಅಲಂಕಾರಕ್ಕಾಗಿ ಹೂ ಸಸಿಗಳನ್ನು ಬೆಳೆಸುವುದರೊಂದಿಗೆ, ಮೂಲ ದಕ್ಷಿಣ ಭಾರತವನ್ನು ನೋಡುವುದಾದರೆ 8ನೇ ಶತಮಾನದ ಕಾಲದಲ್ಲಿಯೇ ನಂದನವನ ಎಂಬ ಹೂತೋಟವನ್ನು ಬೆಳೆಸಲಿಕ್ಕೆ ರಾಜರು ಭೂಮಿಯೊಂದಿಗೆ ಹಣವನ್ನು ದತ್ತಿ ಕೊಡುತ್ತಿದ್ದರು, ನಂದನವನದಲ್ಲಿ ಬೆಳೆಯುವ ಪತ್ರ ಪುಷ್ಪಗಳನ್ನು, ಹೂವು ಹಣ್ಣುಗಳನ್ನು ಇಂತಹದ್ದೆ ದೇವಸ್ಥಾನಕ್ಕೆ ಮುಡುಪಾಗಿಡಬೇಕೆಂಬ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ನಂದನವನದಲ್ಲಿ ಇಂತಹದ್ದೇ ಪತ್ರ ಪುಷ್ಪವನ್ನು ಬೆಳೆಸಬೇಕೆಂಬ ಕಟ್ಟುನಿಟ್ಟಿನ ಕ್ರಮಗಳು ಇದ್ದು, ಕಿಡಿಗೇಡಿಗಳು ನಂದನವನ್ನು ಹಾಳು ಮಾಡಿದರೆ ಅವರಿಂದ ದಂಡದೊಂದಿಗೆ  ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ.

ಮೂಲ ರಾಮಾಯಣದ ಸುಂದರಕಾಂಡದಲ್ಲಿ ಬರುವ ದಂಡಕಾರಣ್ಯ, ಗಜಾರಣ್ಯಗಳಲ್ಲಿ ಸೀತೆ ಆಕರ್ಷಿತರಾದ ಹೂ ಸಸಿಗಳನ್ನು,ಶಬರಿ ರಾಮನಿಗಾಗಿ ನೀಡಿದ ಹೂ ಹಣ್ಣುಗಳನ್ನು, ಆಂಜನೇಯ ಹೊತ್ತು ತಂದ ವಿಂಧ್ಯಗಿರಿ ಪರ್ವತದ ಗಿಡಮೂಲಿಕಾ ಸಸಿಗಳನ್ನು,ರಾವಣನ ಆಸ್ಥಾನದಲ್ಲಿ ಅಚ್ಚುಕಟ್ಟಾಗಿ ಬೆಳೆಸಿದ್ದಂತಹ ಅಶೋಕವನದ ಸಸ್ಯಗಳನ್ನು, ಮಠ, ಗುರುಕುಲಗಳ ಸುತ್ತ ಬಿಡಿಸುತ್ತಿದ್ದ ಹೂವು ಗಿಡಗಳನ್ನು, ಆಯುರ್ವೇದದಲ್ಲಿ ಬಳಕೆಯಾದ ಹೂಗಳ ಮಾಹಿತಿ ದೊರಕುತ್ತದೆ.

ರಾಜರ ಆಳ್ವಿಕೆಯಕಾಲದಲ್ಲಿ ಯುದ್ಧದಲ್ಲಿ ಗೆದ್ದು ಬಂದಾಗ ರಾಜನಿಗೆ ಇಂತಹ ಹೂವಿನ ಹಾರವನ್ನ್ನೇಹಾಕಬೇಕೆಂಬ ಪ್ರತೀತಿ, ತಮ್ಮ ರಾಷ್ಟ್ರ ಲಾಂಛನಗಳಲ್ಲಿ ಬಳಕೆಯಾದ ಹೂಗಳು, ಚಿತ್ರಪಟಗಳಲ್ಲಿ ಕಂಡುಬಂದ ಹೂಗಳ ವರ್ಣಚಿತ್ರ, ಅರಮನೆಯ ಸುತ್ತ ವನವಿಹಾರಕ್ಕೆ ನಿರ್ಮಿಸಿಕೊಂಡ ಹೂ ಗಿಡಗಳು, ರಾಣಿಯರಿಗಾಗೆಂದೇ ನಿರ್ಮಿಸಿದ ಪ್ರತ್ಯೇಕ ಹೂದೋಟಗಳು ಇದ್ದವು. ಇಂತಹ ತೋಟಗಳನ್ನು ಪ್ರಪಂಚದ ನಾನಾ ಅರಮನೆಗಳಲ್ಲಿ ನೋಡಲು ಇಂದಿಗೂ ಕಾಣಸಿಗುತ್ತದೆ, ಇದೇ ಕಾಲಘಟ್ಟದಲ್ಲಿ ಜನಸಾಮಾನ್ಯರು ರಾಶಿವನ, ನಕ್ಷತ್ರವನ, ನವಗ್ರಹ ವನ, ಎಂಬ ಕಲ್ಪನೆಗಳಲ್ಲಿ ಅನೇಕ ಹೂಗಿಡಗಳನ್ನು ಸಂಪ್ರದಾಯದ ಹೆಸರಿನಲ್ಲಿ ಸಂರಕ್ಷಿಸುವ ಕಾರ್ಯಗಳು ನಡೆದಿದ್ದವು.

ಆಯುರ್ವೇದ ಸಂಬಂಧಿ ಚರಕ, ಶುಶೃಷ, ಧನ್ವಂತರಿಯ ಗ್ರಂಥಗಳಲ್ಲಿಯೂ ಹೂವಿನ ಶಲಾಕೆ, ದಳ, ಮೊಗ್ಗು, ಬಳಕೆಯ ಉಲ್ಲೇಖಗಳಿವೆ. ಧಾರ್ಮಿಕವಾಗಿ ಇಂತಹ ದೇವರಿಗೆ ಇಂತಹ ಪುಷ್ಪವನ್ನು ಸಮರ್ಪಿಸುವುದರರೊಂದಿಗೆ ( ಶಿವನಿಗೆ ತುಂಬೆ ಹೂವು ) ದೇವಸ್ಥಾನದ ಸುತ್ತಲ ಕೆತ್ತನೆಗಳಲ್ಲಿ ಅಪ್ಸರೆಯರು ಮುಡಿದ ಹೂಗಳನ್ನು, ಅಜಂತ ಎಲ್ಲೋರ ಬೇಲೂರು ಹಳೆಬೀಡಿನಂತಹ ದೇವಸ್ಥಾನದ ಕಲ್ಲಿನ ಕೆತ್ತನೆಗಳಲ್ಲಿ ಹೂವನ್ನು ಅರಳಿಸಿದ್ದಾರೆ. ಇಂದು ನಾವು ಕಾಣುವ ರಾಜಕೀಯ ಪಕ್ಷಗಳಲ್ಲಿಯೂ ಹೂಗಳ ಚಿಹ್ನೆಯನ್ನು ಬಳಸಲಾಗಿದೆ, ಇದರೊಂದಿಗೆ ರಾಷ್ಟ್ರದ ಹೂವನ್ನು ಇಂತಹದ್ದೇ ಎಂದು ಗುರುತಿಸಿಕೊಂಡಿದ್ದೇವೆ. ಆರ್ಥಿಕ ದೃಷ್ಟಿಕೋನದಲ್ಲಿ ನೋಡಿದರೆ ಐಷಾರಾಮಿ ವಿಲ್ಲಾಗಳ ಸುತ್ತ ಬೆಲೆಬಾಳುವ ಹೂ ಗಿಡಗಳಿಂದ ಲಕ್ಷಾಂತರ ರೂಪಾಯಿ ವ್ಯಾಪಾರವಾಗುತ್ತದೆ, ಹೂ ಬಳಸಲಾಗದ ಮದುವೆಯನ್ನೇ ನಾವು ಕಾಣಲು ಸಾಧ್ಯವೇ ಇಲ್ಲ ಇದರಲ್ಲಿ ಲಕ್ಷಾಂತರ ರೂಪಾಯಿಯ ವ್ಯಾಪಾರ ನಡೆಯುತ್ತದೆ. ಪ್ರಪಂಚದಲ್ಲಿ ಪ್ರತಿವರ್ಷ 15 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚಿನದಾಗಿ ಹೂಗಳ ವ್ಯಾಪಾರ ನಡೆಯುತ್ತದೆ. ಹೂವಿನ ಮಕರಂದದಿಂದ ಜೇನುಹುಳುಗಳು ಸಂಗ್ರಹಿಸಿದ ಜೇನುತುಪ್ಪದ ವ್ಯಾಪಾರವೇ ಪ್ರತಿವರ್ಷ ಪ್ರಪಂಚದಲ್ಲಿ 7.8 ಬಿಲಿಯನ್ ಡಾಲರ್ ಗಳು ಮೀರುತ್ತದೆ. ಖಾಸಗಿ ಕಂಪನಿಗಳು ಟುಲಿಪ್ ನಂತಹ ಹೂ ತೋಟಗಳ ನಿರ್ಮಿಸಿ. ಪ್ರಪಂಚದ ನಾನಾ ಮೂಲಗಳಿಂದ ಜನರು ಆಗಮಿಸುವ ರೀತಿ ಜಾಹೀರಾತು ನೀಡಿ ಕೋಟ್ಯಾನುಕೋಟಿ ಎಕ್ಸಿಬಿಷನ್ ನಿಂದ ಹಣ ಗಳಿಸುತ್ತಾರೆ. ಪ್ರಪಂಚದ ಒಟ್ಟು ಕೇಸರಿ ವ್ಯಾಪಾರ 374.6 ಮಿಲಿಯನ್ ಯುಎಸ್ ಡಾಲರ್ ಆಗಿದೆ.ಹೂವಿನ ಪರ್ಫ್ಯೂಮ್ ತಯಾರಿಕೆಯಲ್ಲಿಯೂ ಮಿಲಿಯನ್ ಗಟ್ಟಲೆ ವ್ಯಾಪಾರ ನಡೆಯುತ್ತದೆ. ಪ್ರದೇಶವಾರು ಬಟಾನಿಕಲ್ ಗಾರ್ಡನ್ಗಳಿಂದ ಬಹಳಷ್ಟು ಹಣ ಸರ್ಕಾರವನ್ನು ಸೇರುತ್ತದೆ.

ಇಷ್ಟೆಲ್ಲಾ ವಿಷಯಗಳನ್ನು ತಿಳಿದುಕೊಂಡೆವಲ್ಲವೇ ಹಾಗಾದರೆ ಈಗ ಸ್ವಲ್ಪ ಹಿಂದಕ್ಕೆ ಹೋಗೋಣ ಅಂದರೆ ಪ್ರಪಂಚದ ಮೊಟ್ಟಮೊದಲು ಅರಳಿದ ಪುಷ್ಪ ಯಾವುದೆಂಬ ಮಾಹಿತಿಯನ್ನು ಹುಡುಕುತ್ತಾ - ಪ್ರಪಂಚದ ನಾನಾ ಮೂಲೆಗಳಲ್ಲಿ ಅನೇಕ ವಿಜ್ಞಾನಿಗಳು ವಿಷಯವಾಗಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪುರಾತನ ಪುಸ್ತಕಗಳಲ್ಲಿ ನಮೂದಿಸಲಾದ ಹೂಗಳ ಹೆಸರುಗಳನ್ನು ಹುಡುಕಿ, ಶಾಸನಗಳ ಬೆನ್ನುಹತ್ತಿ ಬಹಳಷ್ಟು ಸುದೀರ್ಘ ಅಧ್ಯಯನಗಳು ನಡೆದಿವೆ ಇದರ ಸಲುವಾಗಿ ಕೆಲವು ಮಾಹಿತಿಗಳು ಲಭ್ಯವಿದೆ. ಸಸ್ಯ ವಿಜ್ಞಾನಕ್ಕೆ ಭರತಖಂಡದ ಕೊಡುಗೆ ಅಪಾರವಾಗಿದೆ ಉಪನಿಷತ್ತಿನಲ್ಲಿಯೂ, ಸುರಪಾಲನ  ವೃಕ್ಷಾಯುರ್ವೇದಲ್ಲಿಯೂ, ಸಸಿಗಳಿಗೆ ಜೀವವಿದೆ ಎಂದು ಪ್ರತಿಪಾದಿಸಿದ ಜಗದೀಶ ಚಂದ್ರ ಬೋಸರು, ಬಿಜಿಎಲ್ ಸ್ವಾಮಿ ಅಂತಹ ಸಸ್ಯವಿಜ್ಞಾನಿಗಳು ನಮ್ಮವರೇ

ಪ್ರಸ್ತುತವಾಗಿ ಮೊಟ್ಟಮೊದಲ ಪುಷ್ಪ ಯಾವುದು ಎಂಬ ಹುಡುಕಾಟದಲ್ಲಿ ಪ್ರಪಂಚದ ನಾನಾ ವಿಜ್ಞಾನಿಗಳ ಪಟ್ಟಿಯೇ ತೆರೆದುಕೊಳ್ಳುತ್ತದೆ. UNESCO ರೆಕಾಗ್ನಿಸ್ ಮಾಡಿರುವ 218 ನ್ಯಾಚುರಲ್ ಹೆರಿಟೇಜ್ ಸೈಟ್ ಗಳಲ್ಲಿ ನಡೆದಂತಹ ಪ್ರಯತ್ನ ಕೆಲವು ಮಾಹಿತಿಗಳನ್ನು ಕೊಡುತ್ತಾ ಹೋಗುತ್ತದೆ, ಇಂತಹ 218 ನ್ಯಾಚುರಲ್ ಹೆರಿಟೇಜ್ ಗಳಲ್ಲಿ ಒಂದಾದ ಹಿಮಾಲಯ ಮೌಂಟನ್ಸ ಸರಣಿಯಲ್ಲಿ ಕಂಡುಬರುವಂತಹ ಒಂದು ಅಭೂತಪೂರ್ವ ಸ್ಥಳವೇ HENGDUAN MOUNTAINS ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 14,000 ಅಡಿಗಳಷ್ಟು ಎತ್ತರದಲ್ಲಿದೆ ಇಲ್ಲಿಯ ವಾತಾವರಣ ವೈವಿಧ್ಯಮಯವಾಗಿದೆ ಇದೇ ಸರಣಿಯಲ್ಲಿ ಹರಿಯುವಂತಹ 3 ನದಿಗಳು ಪ್ರಪಂಚದ ಮೂರನೇ ಒಂದು ಭಾಗದ ಜನಕ್ಕೆ ನೀರನ್ನು ಒದಗಿಸುತ್ತದೆ.


ಭಾರತ ಉತ್ತರ ಭಾಗಕ್ಕೆ ಮತ್ತಷ್ಟು ಮ್ಯಾಗ್ನೆಟಿಕ್ ಬಲವಿರುವುದರಿಂದ ಪ್ರದೇಶ ಮತ್ತಷ್ಟು ಎತ್ತರವಾಗಿ ಬೆಳೆಯುತ್ತಲೇ ಇದೆ, ಅದಲ್ಲದೆ ಪ್ರದೇಶದ ಒಂದು ಗುಡ್ಡ ಸಂಪೂರ್ಣವಾಗಿ ಯಾವಾಗಲೂ ಹಿಮದಿಂದ ಆವೃತವಾಗಿ ಮೈನಸ್ ತಾಪಮಾನವಿದ್ದರೆ ಕೆಳಗಿನ ಪ್ರದೇಶ ಬಿರುಬೇಸಿಗೆಯಂತೆ ಗೋಚರಿಸುತ್ತದೆ. ಇಷ್ಟೆಲ್ಲಾ ವೈವಿಧ್ಯತೆ ಇರುವುದರಿಂದಲೇ ಇಲ್ಲಿಯ ಹೂಬಿಡುವ ಸಸ್ಯ ಜಾತಿಗಳ ಸಂಪತ್ತು ಕೂಡ ವೈವಿಧ್ಯಮಯವಾಗಿದೆ ಇಲ್ಲಿ ಒಟ್ಟು 10,000 ಕ್ಕೂ ಹೆಚ್ಚು ಬಗೆಯ ಹೂ ಬಿಡುವ ಸಸ್ಯ ಜಾತಿಗಳು ಕಾಣಸಿಗುತ್ತದೆ.

ಒಂದು ಜಾತಿಗೆ ಸೇರಿದ ಹೂವೆ ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ಬಣ್ಣಗಳಿಂದ ಕೂಡಿರುತ್ತದೆ. ಒಂದು ಬಣ್ಣ ಇರುವ ಹಾಗೆ ಮತ್ತೊಂದು ಇಲ್ಲ ಮತ್ತೊಂದು ಇರುವಾಗ ಮಗದೊಂದು ಇರುವುದಿಲ್ಲ,ನೂರಾರು ಬಣ್ಣದ ಹೂವುಗಳು ಕಾಣಸಿಗುತ್ತವೆ. ಇಂತಹ ಪ್ರದೇಶದಲ್ಲಿ ನಡೆದ ಒಂದು ವೈಜ್ಞಾನಿಕ ವರದಿ ಶಿಲೆಯೊಳಗೆ ಹುದುಗಿಹೋಗಿದ್ದಂತಹ ಒಂದು ಪಳೆಯುಳಿಕೆಯ ಸಹಾಯದ ಮೂಲಕ ಇದೇ ಪ್ರಪಂಚದ ಮೊದಲ ಹೂವೆಂದು ಸಧ್ಯಕ್ಕೆ ತಿಳಿಯಲಾಗಿದೆ. ಮೊದಲ ಹೂ ಎಂದು ಸಾಬೀತಾದರೂ ಹೂವಿನ ಹೆಸರು ARCHAEFRUCTUS ಸುಂಗ್ ರವರು ನಡೆಸಿದ ಅಧ್ಯಯನ ಪ್ರಕಾರ ಸಸ್ಯವು ಸುಮಾರು 125 ಮಿಲಿಯನ್ ವರ್ಷಗಳ ಹಿಂದೆ ಇತ್ತು ಎಂದು ತಿಳಿಸಲಾಗಿದೆ



ಸಸ್ಯದ ಬಗ್ಗೆ ತಿಳಿಯುವಾಗ ಬಹಳಷ್ಟು ಮಹತ್ವಪೂರ್ಣ ವಿಷಗಳು ಗಮನಕ್ಕೆ ಬಂದವು ಸಸಿಗಳು ಭೂಮಿಗೆ ಬಂದಕಾಲಘಟ್ಟದಲ್ಲಿ ಯಾವುದಕ್ಕೂ ಹೂಗಳು ಇರಲಿಲ್ಲ, ಕಾಲಕ್ರಮೇಣ ಹೂಗಳು ಬಿಡಲು ಪ್ರಾರಂಭವಾದವು, ಕಾಲಘಟ್ಟಕ್ಕೆ ಹೂ ಗಳನ್ನು ಸೇರುವಂತಹ ಯಾವ ಜಂತುಹುಳುಗಳು ಇರಲಿಲ್ಲ, ಗಿಡ ಹೂ ಬಿಡಲು ಪ್ರಾರಂಭವಾಗಿದ್ದೆ ಒಂದು ರೋಚಕದ ಪಯಣ ಅದರಲ್ಲಿಯೂ ಹೂ ಬಿಟ್ಟ ಬಳಿಕ ನಡೆದಂತಹ ಪರಾಗಸ್ಪರ್ಶ (ಪಾಲಿನೇಷನ್) ಪ್ರಕ್ರಿಯೆ ಎಲ್ಲವೂ ಗಾಳಿಯ ಸಹಾಯದಿಂದಲೇ ನಡೆದದ್ದು,ಇದು ಕಾಲಕ್ರಮೇಣ ಹೂವು ಮೊಗ್ಗಾಗಿ, ಮುಗ್ಗು ಹಣ್ಣಾಗಿ, ಹಣ್ಣಿನೊಳಗೆ ಬೀಜ ಸೇರಿ ತನ್ನ ಮುಂದಿನ ಪೀಳಿಗೆಯನ್ನು ಸದೃಢವಾಗಿ ಇಡುವಂತಹ ಒಂದು ಸುಭದ್ರ ಕವಚ. ( ಪರಾಗಸ್ಪರ್ಶ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಮಾಹಿತಿ ನಾವು ಬಾಲ್ಯದಲ್ಲಿ ಶಾಲಾ ದಿನಗಳಲ್ಲಿಯೇ ಓದಿರುತ್ತೇವೆ ಆದರೆ ಅರ್ಥವಾಗಿರುವುದಿಲ್ಲ ನಮ್ಮ ಗುರುಗಳು ಇವುಗಳನ್ನು ದಾಸವಾಳದ ಹೂವಿನ ಚಿತ್ರವನ್ನು ಬರೆದು ತೋರಿಸಿದ್ದರು ಎಲ್ಲರಿಗೂ ನೆನಪಿರಬಹುದು.) ಇಂತಹ ಕಾಲಘಟ್ಟದಲ್ಲಿಯೇ ಅನೇಕ ಹವಾಮಾನ ವೈಪರೀತ್ಯಗಳ ಉದಾಹರಣೆಗಳನ್ನು ತಮ್ಮ ಸ್ಮೃತಿಪಟಲದಲ್ಲಿ ಇಟ್ಟುಕೊಂಡ ಮರಗಳು ಬೀಜ ಹಾಳಾಗದ ರೀತಿ, ಎಂದು ಚಿಗುರೊಡೆಯಬೇಕೆಂಬ ಸ್ಪಷ್ಟ ಮಾಹಿತಿಯ ಬಳಿಕವೇ ಬೀಜ ಮರದಿಂದ ಮುಂದೆ ಸಾಗುತ್ತಿತ್ತು, ಇವೆಲ್ಲವೂ ಮರಗಳಲ್ಲಿಯೂ ಬುದ್ಧಿಶಕ್ತಿಯ ಇದೇ ಎಂಬ ಸ್ಪಷ್ಟ ನಿದರ್ಶನ.

ನಾನೇ ಶ್ರೇಷ್ಠ ಎಂದು ಬೀಗುವ ಮಾನವ ಕೋಟ್ಯಾನುಕೋಟಿ ವರ್ಷಗಳ ಮಾಹಿತಿಯನ್ನು ತಮ್ಮ ಸ್ಮೃತಿಪಟಲದಲ್ಲಿ ಇಟ್ಟುಹೊಂದಿರುವಂತಹ ಮರಗಳಿಂದ ಕಲಿಯಬೇಕಾಗಿರುವುದು ಬಹಳ ಇದೆ. ಅಡ್ವಾನ್ಸ್ ಟೆಕ್ನಾಲಜಿಯಲ್ಲಿ ಬೀಗುತ್ತಿರುವ ನಮಗೆ 300 ವಿವಿಧ ಬಣ್ಣಗಳ ಗುಲಾಬಿ ಹೇಗೆ ಬೆಳೆಯಿತು ಎಂಬ ಸೃಷ್ಟಿಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಬಹಳಷ್ಟು ಹೊತ್ತಿನಿಂದ ಅಂಕಣವನ್ನು ಓದುತ್ತಿದ್ದೀರಾ ಹಾಗಾದರೆ ಈಗ ಹೇಳಿ ಅಂಕಣ ಮುಂದುವರೆಸಲೆ ? ಅಂಕಣ ಇನ್ನು ಮುಗಿದಿಲ್ಲ ಆದರೆ ಇನ್ನಷ್ಟು ಕುತೂಹಲ ಕೆರಳಿಸುವ ಪ್ರಶ್ನೆಗಳ ಮೂಲಕ ಮತ್ತಷ್ಟು ವಿಷಯಗಳನ್ನು ನಾವು ತಿಳಿಯಪಟ್ಟರೆ ಅಂಕಣ ಸಾರ್ಥಕತೆಯನ್ನು ಪಡೆಯುತ್ತದೆ.

ಎಲ್ಲಾ ದೇವರಿಗೂ ಪದ್ಮ ( ಕಮಲ ) ಪೀಠವೇಬೇಕು ಎಂಬುವುದು ಏತಕ್ಕೆ ? ಇದರ ಹಿಂದಿನ ರಹಸ್ಯವಾದರೂ ಏನು ? ಏಕೆ ಗುಲಾಬಿ ಬಹು ಜನರ ಪರಿಚಿತ ಹೂವಾಗಿ ಗಮನಸೆಳೆಯಿತು ? ಪ್ರಪಂಚದಲ್ಲಿ ಅತ್ಯಂತ ಬೆಲೆಬಾಳುವ ಪುಷ್ಪ ಯಾವುದು ? ಹೂಬಿಡಲು ಗಿಡ ಎಷ್ಟು ಎನರ್ಜಿಯನ್ನು ಉಪಯೋಗಿಸುತ್ತದೆ ? ಮಠದ ಸುತ್ತ ಏಕೆ ಹೂಗಿಡಗಳನ್ನು ಬೆಳೆಸುತ್ತಾರೆ ? ನಮ್ಮ ಭಾರತದಲ್ಲಿಯ ಹೂವಿಗೆ ಸಂಬಂಧಿ ಚಿತ್ರ ತೆರೆಗೆ ಬಂದಿದೆ ಅದು ಯಾವುದು ? ಹಾಗಾದರೆ ಈಗ ಹೇಳಿ ದೇವರಿಗೆ ಹೂವನ್ನು ಮೂಡಿಸಬೇಕು ? ಒಣಗಿದ ಬಳಿಕ ಅದನ್ನು ತೆಗೆಯಬೇಕ ? ಹೂವಿಗೆ ಬೆಲೆಕೊಟ್ಟು ಖರೀದಿಸಲು ನಿಜವಾಗಿಯೂ ಸಾಧ್ಯವೇ ? HENGDUAN MOUNTAINSಗಳಿಗಿಂತಲೂ ಅತಿ ಹಳೆಯದು ನಮ್ಮ ಪಶ್ಚಿಮಘಟ್ಟ ಇಲ್ಲಿ ಏನಾದ್ರೂ ನಿಜವಾಗಿಯೂ ಪ್ರಪಂಚದ ಮೊಟ್ಟ ಮೊದಲ ಹೂವಿನ ಕುರುಹು ಸಿಗುತ್ತದೆಯೇ

( Western Ghats )

HENGDUAN MOUNTAINS ಸರಣಿಯ ಹಿಮಾಲಯದ ತಪ್ಪಲಿನಲ್ಲಿ ಇರುವುದರಿಂದ ಜೀವನದಲ್ಲಿ ಒಮ್ಮೆಯಾದರೂ ಹೋಗಿ ನೋಡಬೇಕೆಂದು ಆಸೆ ಇದೆ ಇದು ನಮ್ಮ ಭಾರತದ ಅರುಣಾಚಲ ಪ್ರದೇಶದಿಂದ ಬಹಳ ಹತ್ತಿರವಾಗಿಯೇ ಏನೋ ಇದೆ ಆದರೆ ಜಾಗ ಪ್ರಸ್ತುತ ಚೀನಾದವರ ಸುಪರ್ದಿಯಲ್ಲಿದೆ ರಾಜಕೀಯ ದೃಷ್ಟಿಕೋನದಿಂದ ಅವರೇನೂ ನಮ್ಮ ವಿರೋಧಿಗಳೆ ಸರಿ ಆದರೆ ನಿಸರ್ಗ ಅಥವಾ ಪರಿಸರ ಪ್ರಿಯರಿಗೆ ಯಾವ ಬಾರ್ಡರ್ ಗಳ ಅಡೆತಡೆಗಳಿವೆ ? ಆದರೆ ಜೀವನದಲ್ಲಿ ಪ್ರದೇಶಕ್ಕೆ ಹೋಗಲಿಕ್ಕೆ ಆಗುತ್ತದೆಯೋ ಇಲ್ಲವೋ ತಿಳಿಯದು ಆದರೆ ನಮ್ಮ ಮಗ್ಗುಲಲ್ಲೇ ಇರುವ ಹಿಮಾಲಯ ಶಿಖರ ಕ್ಕಿಂತಲೂ ಅತ್ಯಂತ ಹಳೆಯದಾದ ಪಶ್ಚಿಮ ಘಟ್ಟವನ್ನು ಸಂಪೂರ್ಣ ಸುತ್ತಿ ಅದನ್ನೇ ಆನಂದಿಸಬೇಕೆಂಬು ಆಸೆ ಇದೆ.

ಧನ್ಯವಾದಗಳು.