Saturday, February 26, 2022

ದಯೆಯೇ ಧರ್ಮದ ಮೂಲ.

       

                        -  ಎಸ್ ಪಿ  ತೇಜರಾಜು

  ದೇಶದಲ್ಲಿ ಒಟ್ಟು 31 ಲಕ್ಷಕ್ಕಿಂತಲೂ ಅಧಿಕ NGO ಸಂಸ್ಥೆಗಳಿವೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಆಶ್ಚರ್ಯವಾಗಿದ್ದೇನೋ ನಿಜ ಏಕೆಂದರೆ ಈ ಸಂಖ್ಯೆ ಇಡೀ ದೇಶದ ಒಟ್ಟು ಶಾಲೆಗಳ ಎರಡುಪಟ್ಟು. ದೇಶದಲ್ಲಿ ವಿವಿಧ ಇಲಾಖೆಯ ಸರಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುವುದರ ಜೊತೆಯಲ್ಲಿ ಎಷ್ಟು ಪ್ರಮಾಣದ ಸರಕಾರೇತರ ಸೇವಾಸಂಸ್ಥೆಗಳು ಇರುವುದು ನಿಜಕ್ಕೂ ಶ್ಲಾಘನೀಯ ಏಕೆಂದರೆ ಈ NGOಗಳು ಸರಕಾರಿ ಸಂಸ್ಥೆಗಳಿಗಿಂತ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಿರುವುದೇ ಇದಕ್ಕೆ ಸಾಕ್ಷಿ.

NGO ಗಳು ಕೇವಲ ಒಂದೇ ಒಂದು ಸೇವಾ ಕ್ಷೇತ್ರಕ್ಕೆ ಸೀಮಿತಗೊಳ್ಳದೆ ವಿವಿಧ ಪ್ರಕಾರಗಳಾಗಿ ವಿಭಾಗಿಸಲಾಗಿದೆ. ಇದರಲ್ಲಿಯ ಕೆಲ ಸಂಸ್ಥೆಗಳು ಸರಕಾರಿ ಸಂಸ್ಥೆಗಳಿಗಿಂತಲೂ ಒಂದು ಹೆಜ್ಜೆ ಮುಂದಿಟ್ಟಿದ್ದು ಟೆಕ್ನಾಲಜಿಕಲ್ ಡೆವಲಪ್ಮೆಂಟ್ನಲ್ಲಾಗಲಿ ಸಮಾಜದ ಒಳಿತಿಗಾಗಿ ಬಹಳಷ್ಟು ಶ್ರಮಿಸಿದೆ. ಇದರಿಂದಾಗಿಯೇ ಈ ಸಂಸ್ಥೆಗಳು ಅಪರ ಜನಮನ್ನಣೆಯನ್ನು ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಹೆಸರುಗಳನ್ನುಗಳಿಸಿವೆ. ಸಮಾಜದ ಒಳಿತಿಗಾಗಿ ದುಡಿಯುತ್ತಿರುವಂತಹ NGOಗಳು ಬೆಳೆದು ಬಂದ ಹಾದಿಯನ್ನೊಮ್ಮೆ ನೋಡಿದರೆ ಅನೇಕ ಸ್ವಾರಸ್ಯಕರ ವಿಷಯಗಳು ಗೋಚರಿಸುತ್ತವೆ.

ಭರತಖಂಡವನ್ನು ಆಳಿದ ಅನೇಕ ರಾಜಮನೆತನಗಳು ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿವೆ, ಕೆಲ ಕ್ಷೇತ್ರಗಳಲ್ಲಂತೂ ಒಂದು ರಾಜಮನೆತನ ಮತ್ತೊಂದು ರಾಜಮನೆತನಗಳಿಗಿಂತಲೂ ಮೇಲುಗೈ ಸಾಧಿಸಿದೆ. ಈ ಎಲ್ಲಾ ಕ್ಷೇತ್ರಗಳಿಗಿಂತಲೂ ಸರ್ವಶ್ರೇಷ್ಠವಾದ ಸ್ಥಾನವನ್ನು ಪಡೆದಿರುವುದೆಂದರೆ ರಾಜಧರ್ಮ ನೀತಿ ಸಾಮ್ರಾಜ್ಯದೊಳಗೆ ನೆಲೆಸಿರುವ ಎಲ್ಲಾ ಪ್ರಜೆಗಳು ಕೂಡ ನಿಶ್ಚಿಂತೆ, ನಿರ್ಭಿತಿ, ಸುಖ, ಶಾಂತಿ, ನೆಮ್ಮದಿಇಂದಿರಬೇಕು ಎನ್ನುವುದೇ ಈ ರಾಜಧರ್ಮ ನೀತಿಯ ಉದ್ದೇಶವಾಗಿದೆ.

ಮೊದಲಿನಿಂದಲೂ ಭರತಖಂಡವು ಜಗತ್ತಿಗೆ ಅನೇಕ ವಿಧವಾದ ಕೊಡುಗೆಯನ್ನು ವಿವಿಧ ಕ್ಷೇತ್ರಗಳಲ್ಲಿ ನೀಡುತ್ತಾ ಬಂದಿದೆ. ಜ್ಞಾನ ದಾಸೋಹದಲ್ಲಂತೂ ಜಗತ್ತಿಗೆ ಮಾದರಿಯಾಗಿದೆ. ನಳಂದ ವಿಶ್ವವಿದ್ಯಾನಿಲಯ ಜಗತ್ತಿನ ಮೊದಲ ವಿಶ್ವವಿದ್ಯಾಲಯ ಎಂದೆನಿಸಿಕೊಂಡು, ಪ್ರತಿವರ್ಷವೂ 10 ಸಾವಿರಕ್ಕಿಂತಲೂ ಹೆಚ್ಚು ಜಗತ್ತಿನ ನಾನಾ ವಿದ್ಯಾರ್ಥಿಸಮೂಹವನ್ನು ಒಳಗೊಂಡ, ಸಾವಿರದ ಐನೂರಕ್ಕೂ ಹೆಚ್ಚು ಉಪನ್ಯಾಸಕರನ್ನೊಳಗೊಂಡ, ಉಚಿತ ಊಟ, ವಸತಿ, ವಿದ್ಯಾರ್ಜನೆಯನ್ನೊಳಗೊಂಡ, ಲಕ್ಷೋಪಲಕ್ಷ ತಾಳೆಗರಿಯ ಮೇಲೆ ಬರೆದಂತ  ಹಸ್ತಪ್ರತಿಗಳ ಧರ್ಮಕುಂಜಚ ಎಂಬ ಗ್ರಂಥಾಲಯವನ್ನುಳಗೊಂಡ, ಕಲೆ, ಧರ್ಮ ಸಾಹಿತ್ಯ,ವಿಜ್ಞಾನ, ಜ್ಯೋತಿಷ್ಯಶಾಸ್ತ್ರ ,ಗಣಿತಶಾಸ್ತ್ರ ಹೀಗೆ ನಾನಾ ಕ್ಷೇತ್ರಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಬೋಧಿಸುತ್ತಾ ಜಗತ್ತಿಗೆ ಮೇಧಾವಿಗಳನ್ನು ನೀಡಿರುವಂತಹದ್ದು ನಿಜಕ್ಕೂ ಶ್ಲಾಘನೀಯವೆನಿಸುತ್ತದೆ.

ರಾಜಾಶ್ರಯವೂ ಕೇವಲ ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಹೊರ ದೇಶಗಳಿಂದ ಬಂದಂತಹ ಪ್ರವಾಸಿಗರಿಗೂ ಕೂಡ ಉಚಿತ ಊಟ ವಸತಿಯನ್ನು ಕಲ್ಪಿಸಲಾಗಿತ್ತು. ಇಲ್ಲಿಯ ಪ್ರತಿಯೊಬ್ಬ ಪ್ರಜೆಗಳು ಕೂಡ ಅತಿಥಿ ದೇವೋಭವ ಎಂಬಂತೆ ಪ್ರವಾಸಿಗರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು.

ಇಲ್ಲಿಗೆ ಭೇಟಿ ನೀಡಿದ ಅನೇಕ ಪ್ರವಾಸಿಗರು ತಮ್ಮ ಅನುಭವದ ಪುಸ್ತಕಗಳಲ್ಲಿ ಇಲ್ಲಿಯ ವೈಭೋಗವನ್ನು ನೋಡಿ ಹಾಡಿ ಹೊಗಳಿ ಕೊಂಡಾಡಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯ ಸೈನ್ ಅಧಿಕಾರಿಯಾಗಿ ಭಾರತಕ್ಕೆ ಆಗಮಿಸಿದ್ದ

W H ಸ್ಲೀಮತ್  ತನ್ನ ಅನುಭವದ ಪುಸ್ತಕಗಳಲ್ಲಿ ಹೀಗೆ ಬರೆದಿದ್ದಾನೆ " ನಾವು ಆಗಾಗ ಉರಿಬಿಸಿಲಿನಲ್ಲಿ ಪ್ರವಾಸಕ್ಕೆ ಹೊರಗೆ ಹೋಗಲೇ ಬೇಕಾಗುತ್ತಿತ್ತು ಅಲ್ಲಲ್ಲಿ ಗಿಡಮರಗಳು ದಟ್ಟವಾಗಿಯೇ ಬೆಳೆಯಿಸಿದ ತಾಣದಲ್ಲಿ ಕೆರೆ ಬಾವಿಗಳನ್ನು ನೋಡಿದಲ್ಲಿ ನಮ್ಮ ಡೇರೆಗಳನ್ನು ನಿಲ್ಲಿಸುತ್ತಿದ್ದೆವು. ಇವೆಲ್ಲಾ ಭಾರತೀಯ ಪರೋಪಕಾರದ ವಿಶಾಲ ದೃಷ್ಟಿಯ ಫಲ. ಸೋತು ದಣಿದ ಪ್ರವಾಸಿಗರಿಗೆ ಯಾವ ಫಲಾಪೇಕ್ಷೆಯಿಲ್ಲದೆ ನೆರಳು ನೀರು ಹಣ್ಣುಗಳನ್ನು ಒದಗಿಸುವ ಈ ಮನೋವೃತ್ತಿಯ ಬಗ್ಗೆ ಪಟ್ಟಣಗಳಲ್ಲಿರುವ ತನ್ನ ದೇಶ ಬಾಂಧವರಿಗೆ ಹೇಗೆ ತಿಳಿ ಹೇಳುವುದು?" ಹೀಗೆ ಅನೇಕ ಮಂದಿ ಇಲ್ಲಿಯ ಸೊಬಗನ್ನು ಕೊಂಡಾಡಿದ್ದಾರೆ. 

ಕಾಲಾನಂತರ ಈ ಸಾಮ್ರಾಜ್ಯಗಳು ಕೊನೆಗೊಂಡು ನಾವಿಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ. ಸರಕಾರವು ಕೂಡ ಜನರ ಸರ್ವತೋಮುಖ ಬೆಳವಣಿಗೆಗೆಂದೇ ಅನೇಕ ರೀತಿಯ ನಿಯಮ, ಕಾನೂನು, ಯೋಜನೆಗಳನ್ನು ಜಾರಿಗೊಳಿಸುತ್ತಿಲಿದೆ. ಯಾವುದೇ ಯೋಜನೆಯಾಗಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎನ್ನುವುದು ಸರ್ಕಾರದ ಧೋರಣೆಯಾಗಿದೆ, ಆದರೆ ಸರಕಾರ ಯಾವ ಯಾವ ಯೋಜನೆಗಳನ್ನು ಜನಸಾಮಾನ್ಯರಿಗೆ ಹೊರತರುತ್ತಿದೆ ಎಂದು ಮಾಹಿತಿ ಜನಸಾಮಾನ್ಯರಿಗೆ ತಿಳಿಯದಿರುವುದೆ ಇಲ್ಲಿಯ ದುರ್ದೈವದ ಸಂಗತಿಯಾಗಿದೆ.ಇಂತಹ ಸಂದರ್ಭದಲ್ಲಿಯೇ ಮಠ-ಮಂದಿರಗಳು ಕೆಲವು NGOಗಳು ಜನರಿಗೆ ದಾರಿದೀಪವಾಗಿದೆ ಎಂದರೆ ತಪ್ಪಾಗಲಾರದು.

ಕನ್ನಡ ನಾಡಿನಲ್ಲಿರುವ ಬಹುಪಾಲು ಮಠ-ಮಂದಿರಗಳು ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡಿದೆ.[ ಸಿದ್ದಗಂಗಾ ಮಠ, ಪ್ರಭೋದಿನಿ ಗುರುಕುಲ, ಚಂಪಕ ಪುರ ಮಠ, ಉಡುಪಿ ಪೇಜಾವರ ಮಠ, ಬಾಲಗಂಗಾಧರ ಮಠ,ಗವಿಸಿದ್ದೇಶ್ವರ ಮಠ,JSS ಮಠ, ರಾಮಕೃಷ್ಣಾಶ್ರಮ, ಶೃಂಗೇರಿ ಶಾರದಾಪೀಠ,] ಈ ಮಠಗಳು ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮೀಸಲಾಗದೆ ಸಮಾಜದ ಒಳಿತಿಗಾಗಿ ಜನೋಪಕಾರಿ ಸೇವೆಗಳನ್ನು ಮಾಡಿದೆ ಕೆರೆಯ ಹೂಳನ್ನು ತೆಗೆಯುವುದು, ಪವಿತ್ರ ವನವನ್ನು ಸೃಷ್ಟಿಸುವುದು, ವೈದ್ಯಕೀಯ ನೆರವು ನೀಡುವುದು, ಪರಿಸರ ಜಾಗೃತಿ ಕಾರ್ಯಕ್ರಮಗಳು, ಸಭೆ-ಸಮಾರಂಭ ಜಾತ್ರೆಗಳು ಮೂಲಕ ಎಲ್ಲರನ್ನೂ ಒಂದುಗೂಡಿಸುವುದು ಎಲ್ಲರಲ್ಲಿ ಭಾತೃತ್ವವನ್ನು ಮೂಡಿಸುವುದು ಹೀಗೆ ಮೊದಲಾದವುಗಳಾಗಿವೆ.

ಮಠ ಪರಂಪರೆಗಳ ಕೊಡುಗೆ ಒಂದು ಕಡೆಯಾದರೆ ತಮ್ಮ ಸಮಾನ ಮನೋಭಾವದವರನ್ನೊಳಗೊಂಡ ಎಲ್ಲರೂ ಒಂದುಗೂಡಿ ಸಂಸ್ಥೆಯನ್ನು ಸ್ಥಾಪಿಸಿ ಜನರ ಸೇವೆಯಲ್ಲಿ ತೊಡಗಿಸಿಕೊಂಡ ಅನೇಕ ಸಂಸ್ಥೆಗಳಿವೆ, ಇವುಗಳನ್ನು ಹೊರತುಪಡಿಸಿಯೂ ಅನೇಕ ವ್ಯಕ್ತಿಗಳು ತಮ್ಮ ಖಾಸಗಿಯಾಗಿ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ದೇಶದಲ್ಲಿ ಒಟ್ಟು 31 ಲಕ್ಷಕ್ಕಿಂತಲೂ ಅಧಿಕNGO ಗಳಿವೆ ಎಂದು ಅಂದಾಜಿಸುವಾಗ ನಮ್ಮ ಸುತ್ತಮುತ್ತಲೇ ಸಾವಿರಾರು NGO ಗಳಿರುತ್ತವೆ. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್(SVYM) ಗುಡ್ಡಗಾಡು ಜನರಿಗೆ ಶಿಕ್ಷಣ ಹಾಗೂ ಆರೋಗ್ಯಸೇವೆಯನ್ನು ಸಲ್ಲಿಸುತ್ತಲಿದೆ, ಅಕ್ಷಯಪಾತ್ರೆ ಹಾಗೂ ಅದಮ್ಯ ಚೇತನ ಎಂಬ ಸಂಸ್ಥೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟವನ್ನು ತಯಾರಿಸಿ ಕೊಡುತ್ತಿದೆ, ಮಕ್ಕಳಕೂಟ ಮಕ್ಕಳ ಸರ್ವತೋಮುಖ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ, ಒಡನಾಡಿ ಸೇವಾ ಸಂಸ್ಥೆ ಹಾಗೂ ಶಕ್ತಿಧಾಮ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿಲಿದೆ, ಚಯದೇವಿ ಅನಾಥಶ್ರಮ ಅನೇಕರಿಗೆ ನೆಲೆಯನ್ನು ಕಲ್ಪಿಸಿದೆ, ನಿರಂತರ, ರಂಗಾಯಣ, ಬಹುರೂಪಿ ಅಂತಹ ಸಂಸ್ಥೆಗಳು ಹವ್ಯಾಸಿ ನಾಟಕಕಾರರನ್ನು ಒಳಗೊಂಡ ನಾಟಕಗಳನ್ನು ಪ್ರದರ್ಶಿಸುತ್ತಲಿದೆ, ಪಿಂಜರ್ಪೋಲ್,People for animal  ಎಂಬ ಸಂಸ್ಥೆ ಪ್ರಾಣಿಗಳು ಹಸುಗಳಿಗೆ ಆಶಯವನ್ನು ನೀಡಿದೆ, ಇನ್ಫೋಸಿಸ್ ಸಂಸ್ಥೆ ಬಹುಮುಖ ಕ್ಷೇತ್ರಗಳಲ್ಲಿ ತನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಲಿದೆ. ಯೂತ್ ಅಸೋಸಿಯೇಷನ್ ಆಫ್ ಇಂಡಿಯಾYHAI, ಇಂಡಿಯನ್ ಹೆರಿಟೇಜ್ ಸಿಟಿ ನೆಟ್ವರ್ಕ್ ಫೌಂಡೇಶನ್ ಪ್ರವಾಸಿಗರಿಗೆ ಕಡಿಮೆ ಬೆಲೆಯ ಊಟವಸತಿ ವ್ಯವಸ್ಥೆಯನ್ನು ಮಾಡಿಕೊಡುತ್ತದೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾಗೂ ಇನ್ನಿತರ ಸಂಸ್ಥೆಗಳು ಸಮಾಜದ ಒಳಿತಿಗಾಗಿ ದುಡಿಯುತ್ತಿರುವ, ದಿವ್ಯ ದೀಪ ಟ್ರಸ್ಟ್, ಗ್ರೀನ್ ಡಾಟ್ ಟ್ರಸ್ಟ್, ಪರಿವರ್ತನಾ ಫೌಂಡೇಶನ್, ಬುಗುರಿ ಫೌಂಡೇಶನ್, ಕಲಿಸು ಫೌಂಡೇಶನ್, ಚೇತನ ಟ್ರಸ್ಟ್, ಸಂಸ್ಕೃತಿ ಫೌಂಡೇಶನ್, ಬೆಳಕು ಚಾರಿಟಬಲ್ ಟ್ರಸ್ಟ್, ಮುಗಿಲು ಫೌಂಡೇಶನ್, ಹರಿವು, ನಮ್ಮ ಮೈಸೂರು ಫೌಂಡೇಶನ್, ಮಡಿಲು ಸೇವಾ ಟ್ರಸ್ಟ್, ನೇಚರೆ ಕನ್ಸರ್ವೇಶನ್ ಫೌಂಡೇಶನ್, ಎ ಟ್ರಿ ಫೌಂಡೇಶನ್ ಇವುಗಳೊಂದಿಗೆ ಕಾಳಿಂಗ ಸೆಂಟರ್ ಫಾರ್ ರೈನ್ಫೋರೆಸ್ಟ್ ಎಕಲಜಿ, ವೆಸ್ಟ್ರನ್ ಘಟ್ಸ್ ಅಂಡ್ ಈಸ್ಟರ್ನ್ ಗಾಡ್ಸ್ ವೈಲ್ಡ್ ಲೈಫ್ ಸೊಸೈಟಿ, ವೈಲೆಂಟ್ ಕನ್ಸರ್ವೇಷನ್ ಸೊಸೈಟಿ, ಇಂಡಿಯನ್ ಬರ್ಡ್ ಕನ್ಸರ್ವೇಶನ್ ನೆಟ್ವರ್ಕ್, 16000feet foundation, ಹೀಗೆ ಲಕ್ಷಾಂತರ ಸಂಸ್ಥೆಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತಾ ಜನರಿಗೆ ಏಳಿಗೆಗಾಗಿ ಶ್ರಮಿಸುತ್ತಲಿದೆ, ಕೆಲ ಸಂಸ್ಥೆಗಳು ತೋರ್ಪಡಿಕೆಗೆ ಕಾರ್ಯವನ್ನು ಮಾಡಿದರೆ ಇನ್ನೂ ಕೆಲ ಸಂಸ್ಥೆಗಳು ಎಲೆಮರೆಯ ಕಾಯಿಯ ಹಾಗೆ ಸೇವೆಯನ್ನು ಮಾಡುತ್ತಿದೆ. ಪ್ರತಿವರ್ಷದ ಫೆಬ್ರುವರಿ 27ರಂದು World NGO day ಎಂದು ಆಚರಿಸಲಾಗುತ್ತದೆ. ದಯೆಯೇ ಧರ್ಮದ ಮೂಲವೆಂಬಂತೆ ಸಮಾಜದ ಸ್ವಸ್ತ್ಯಕ್ಕಾಗಿಯೇ ದುಡಿಯುತ್ತಿರುವಂತಹ ಇಂತಹ ಸಂಸ್ಥೆಯನ್ನು ನಾವಿಂದು ನೆನೆಯಬೇಕಾಗಿದೆ.

 ಧನ್ಯವಾದಗಳು.


ಕಲ್ಪನೆಯ ವೃಕ್ಷ ಕಲ್ಪವೃಕ್ಷ.

 

                          - ಎಸ್ ಪಿ ತೇಜರಾಜು.

 ಕಲ್ಪನೆಗೆ ನಿಲುಕಿ ಮಾನವನಿಗೆ ಕಲ್ಪಿಸಿದ್ದನ್ನು ಕೊಡುವ ವೃಕ್ಷ ಕಲ್ಪವೃಕ್ಷವಾಗುತ್ತದೆ, ಪ್ರಪಂಚದ ನಾನಾ ಭಾಗಗಳಲ್ಲಿ ವಿವಿಧ ವೃಕ್ಷಗಳನ್ನು ಪೂಜ್ಯ ಭಾವನೆಯಲ್ಲಿ ಕಾಣಲಾಗುತ್ತದೆ, ಜಪಾನಿನಲ್ಲಿ Camphor ಮರವನ್ನು, ಅಮೆರಿಕದಲ್ಲಿ Oak, Pine medicine ಮರವನ್ನು, ಆಫ್ರಿಕಾ - ಮಡಗಾಸ್ಕರ್ ನಲ್ಲಿ Baobab ಮರವನ್ನು, ಭಾರತದಲ್ಲಿ ಆಲದ ಮರವನ್ನು, ಬೌದ್ಧರು ಬೋಧಿ ವೃಕ್ಷವನ್ನು, ಹೀಗೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ವೃಕ್ಷಗಳನ್ನು ಹಾಗೂ ಕೆಲವು ಪ್ರದೇಶಗಳನ್ನು ಪವಿತ್ರವನ ( Sacred groves ) ವೆಂದು ಸನಾತನ ಕಾಲದಿಂದ ಪೂಜಿಸಲಾಗುತ್ತಿದೆ.

ನಮ್ಮ ಭಾರತದಲ್ಲಿ ಕಲ್ಪವೃಕ್ಷಕ್ಕೆ ಬಹಳಷ್ಟು ಕಲ್ಪನೆ ಹಾಗೂ ಸ್ಪಷ್ಟರೂಪತೆ ಇಲ್ಲದ ಕಾರಣ ಬಹಳಷ್ಟು ವೃಕ್ಷಗಳನ್ನು ಪವಿತ್ರ ವೃಕ್ಷಗಳೆಂದು ಪೂಜಿಸಿಕೊಂಡು ಬರುತ್ತಿದ್ದೇವೆ, ಅವುಗಳೆಲ್ಲವೂ ಪರಿಸರ ಸುವ್ಯವಸ್ಥೆಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಈ ಸಸಿಗಳನ್ನು ವನಸ್ಪತಿಗಳು ಅಥವಾ Keystone species ಎಂದು ಕರೆಯಲಾಗುತ್ತದೆ ಅವುಗಳೇ ಅರಳಿ, ಅತ್ತಿ, ಆಲ, ಹಲಸು, ಅಶ್ವತ್ಥ etc,,( ಇಂತಹ ಪವಿತ್ರ ವೃಕ್ಷಗಳನ್ನು ಎಂದೆಂದೂ ಕಡಿಯಬಾರದೆಂದು ಜನರಲ್ಲಿ ನಂಬಿಕೆ ಇದೆ  - ಆದರೆ ಅಭಿವೃದ್ಧಿ ಎಂಬ ಹೆಸರಿನಲ್ಲಿ ಇವುಗಳನ್ನು ಕಡೆಯುತ್ತಿರುವುದು ದುರ್ದೈವವೇ ಸರಿ. )

ಒಂದು ತಲೆಮಾರಿನವರು ನೆಟ್ಟ ಯಾವುದೇ ವೃಕ್ಷವಾಗಿರಬಹುದು ಅದು 3 - 4 ತಲೆಮಾರುಗಳಿಗೆ ಆಹಾರವನ್ನು ಅನೇಕ ಪ್ರಾಣಿ-ಪಕ್ಷಿಗಳಿಗೆ ಗಾಳಿ, ನೆರಳು, ಆಸರೆಯನ್ನು ನೀಡುತ್ತದೆ, ಈ ಪಟ್ಟಿಯಲ್ಲಿ ಅನೇಕ ವೃಕ್ಷಗಳು ಬಂದರೂ ಸಹ ಒಂದು ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ನಿಭಾಯಿಸಬಲ್ಲ ಶಕ್ತಿ ಇರುವುದು ತೆಂಗಿಗೆ ಎಂಬ ನಂಬಿಕೆ ಪೂರ್ವಜರಲ್ಲಿ ಇದ್ದಿದ್ದರಿಂದ ನಾಡಿನ ಉದ್ದಗಲಕ್ಕೂ ತೆಂಗನ್ನು ಕಾಣಬಹುದು.

ತೆಂಗು ನಿತ್ಯಹರಿದ್ವರ್ಣ ಸಸ್ಯ, ವರ್ಷದ 365 ದಿನವೂ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ, ಐದರಿಂದ ಏಳು ವರ್ಷದಲ್ಲಿ ಮೊದಲಿಗೆ ಕಾಯಿ ಹಿಡಿಯಲು ಪ್ರಾರಂಭವಾಗುವ ವೃಕ್ಷ ಒಂದು ಗರಿಗೆ ಒಂದು ಹೊಂಬಾಳೆಯಂತೆ ಮುಂದಿನ 80ರಿಂದ 100 ವರ್ಷಗಳ ಕಾಲ ಕಾಯಿ ಬಿಡುತ್ತಲೇ ಇರುತ್ತದೆ. ಸಾಮಾನ್ಯವಾಗಿ ಇದು ಹೊಳೆದಂಡೆಯ ಪಕ್ಕದಲ್ಲಿ ಸಮುದ್ರದ ಕಿನಾರೆ, ದಡ, ದ್ವೀಪಗಳಲ್ಲಿ ಬೆಳೆದು ಉಪ್ಪು ನೀರನ್ನು ಕುಡಿದು ಸಿಹಿನೀರನ್ನು ಕಾಯಿ ಒಳಗೆ ತುಂಬುವ ಸಾಮರ್ಥ್ಯವನ್ನು ಹೊಂದಿದೆ. ಈ ವೃಕ್ಷಗಳ ಮೂಲ Central Indo Pacific - ಪ್ರದೇಶ ಎಂದು ತಿಳಿಯುತ್ತದೆ, ಈ ಸಾಲಿನಲ್ಲಿ ಭಾರತವು ಒಂದು. ಇವುಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅರೆಕೆಸಿಯಾ ಕುಟುಂಬಕ್ಕೆ ಸೇರಿದ್ದು, ತಾಳೆ ಮರ ಜಾತಿ ಎಂದು ವರ್ಗೀಕರಿಸಲಾಗಿದೆ, ಈ ಜಾತಿಗೆ ಸೇರಿದ ವೃಕ್ಷಗಳ ಲಕ್ಷಣಗಳೆಂದರೆ ಕಾಂಡದ ಮಧ್ಯದಲ್ಲೆಲ್ಲಿಯೂ ಕವಲೊಡೆದ, ದಪ್ಪ ಕಾಂಡದ, ನಾರಿನಿಂದ ಕೂಡಿದ, ದೊಡ್ಡ ಎಲೆಗಳುಳ್ಳ ಸಸ್ಯಗಳು.ಈ ವೃಕ್ಷವೊಂದು Angiosperm  ಎಂದರೆ ಹೂ ಹಿಡಿದು ನಂತರ ಕಾಯಿ ಆಗುತ್ತದೆ, ಎಳನೀರು ತುಂಬಿದಾಗ ಇದನ್ನು ಹಣ್ಣು ಎಂತಲೂ, ಬಲಿತಾಗ ಕಾಯಿ ಎಂತಲು ಪರಿಗಣಿಸಲಾಗುತ್ತದೆ.

ತೆಂಗಿನ ಮರದ ಪ್ರತಿಯೊಂದು ಭಾಗವು ಉಪಯೋಗಿಸಲ್ಪಡುವುದರಿಂದ ಈ ವೃಕ್ಷವನ್ನು ಕಲ್ಪವೃಕ್ಷದ ಸಾಲಿಗೆ ಸೇರಿಸಲಾಗಿದೆ, ಭಾರತೀಯರಿಗಂತೂ ಕಾಯಿ ಇರದೆ ಯಾವ ಕಾರ್ಯವೂ ಸಂಪೂರ್ಣವಾಗಲಾರದು. ತೆಂಗಿನ ಮರದ ಉಪಯೋಗಗಳನ್ನು ನೋಡುವುದಾದರೆ :

1 ತೆಂಗಿನ ಗರಿಯನ್ನು ಮದುವೆ ಮುಂಜಿ ಮುಂತಾದ ಶುಭ ಕಾರ್ಯಗಳಲ್ಲಿ ಚಪ್ಪರವಾಗಿ ಬಳಸಲಾಗುತ್ತದೆ,

* ಹಸಿರು ಎಲೆಯ ಮಕ್ಕಳ ಆಟಿಕೆಯಾಗಿ ( ಕೈಗಡಿಯಾರ, ಟೋಪಿಯಾಗಿ, ಗಿಳಿಯನ್ನು ತಯಾರಿಸಲಾಗುತ್ತದೆ )

* ಚಿಗುರು ಎಲೆಯನ್ನು ಭೂತಾರಾಧನೆಯ ಪೂಜೆಯಲ್ಲಿ ಬಳಸಿಕೊಳ್ಳಲಾಗುತ್ತದೆ.

* ಒಣಗಿದ ಕಡ್ಡಿಯಿಂದ ಪೊರಕೆ ತಯಾರಿಸುತ್ತಾರೆ,


2 ತೆಂಗಿನ ನಾರು ಉತ್ತಮ ಜೈವಿಕ ಗೊಬ್ಬರ. ಸಾವಯವ ಕೃಷಿಗೆ ನರ್ಸರಿಯಲ್ಲಿ ಗಿಡ ಬೆಳೆಸಲು ನಾರು ಬೇಕೇ ಬೇಕು. ಕೊಯರ್ ಇಂಡಸ್ಟ್ರಿಯಲ್ಲಿ ಇಂದು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ, ನಾರನ್ನ ಇಂದಿಗೂ ಹಳ್ಳಿಯಲ್ಲಿ ಪಾತ್ರೆ ತೊಳೆಯಲು ಉಪಯೋಗಿಸುತ್ತಾರೆ.

3 ತೆಂಗಿನ ಚಿಪ್ಪುಉಷ್ಣವಾಹಕ ಕಾರ್ಖಾನೆಗಳಲ್ಲಿ ಇವುಗಳ ಬೇಡಿಕೆ ಹೆಚ್ಚು. ( ಇದರ ಜ್ವಾಲೆಯ ಬೆಂಕಿ ರಾಕೆಟ್ ವೇಗದಲ್ಲಿ ಉರಿಯುತ್ತದೆ ಇದಕ್ಕೆ ಚಿಪ್ಪಿನಲ್ಲಿ ಅಡಕವಾಗಿರುವ ರಾಸಾಯನಿಕ ಸಮೀಕರಣ ಕಾರಣ)


4 ಇನ್ನು ಕಾಯಿಯ ಉಪಯೋಗ ಬಹು ಬಗೆಯದ್ದು:

* ಕಳಸಕ್ಕೆ, ಪೂಜೆಗೆ ಕಾಯಿ ಇರಲೇಬೇಕು.( ಫಲ ನೀಡಿ ಪಾಪ ಕಳೆದುಕೋ, ಕಾಯಿ ಒಡೆದು ಕಂಟಕ ಕಳೆದುಕೋ ಎಂಬ ನಾಣ್ಣುಡಿ ಪ್ರಸ್ತುತವಾಗಿಯೂ ಬಳಕೆಯಲ್ಲಿದೆ )

* ಪೂಜಾಫಲವಾದವರು 101 ಕೆಲವರು 1001 ಕಾಯಿಯನ್ನು ಓಡೆಸುವವರು ಇದ್ದಾರೆ.

* ಕಾಯಿ ಇಲ್ಲದೆ ಅಡುಗೆ ಆಗುತ್ತದೆಯೇ ?

ಪಲ್ಯಕ್ಕೆ, ಹುಳಿಗೆ, ಸಾರಿಗೆ, ಶಾವಿಗೆಯ ಕಾಯಿ ಹಾಲಿಗೆ, ಪಾಯಸಕ್ಕೆ, ಚಪ್ಪರಿಸಿ ತಿನ್ನುವ ಕಾಯಿ ಹೋಳಿಗೆಗೆ, ಹಲಸಿನ ಊರ್ಣಕ್ಕೆ ಕಾಯಿ ಬೇಕೇ ಬೇಕು.

5 ದೇವಸ್ಥಾನಗಳಲ್ಲಿ ವಿಗ್ರಹಗಳ ಮೂರ್ತಿ ಅಭಿಷೇಕಕ್ಕೆ, ತೀರ್ಥಕ್ಕೆ, ಬೇಸಿಗೆಯ ದಾಹವನ್ನು ನೀಗಿಸಲು ಎಳನೀರು ಬೇಕೇಬೇಕು. ಎಳನೀರು ದೇಹಕ್ಕೆ ಶಕ್ತಿಯನ್ನು, ರೋಗ ನಿರೋಧಕ ಶಕ್ತಿಯನ್ನು ಕೊಡುತ್ತದೆ ( ನಮ್ಮ ಪೂರ್ವಜರು ದೇವಸ್ಥಾನದ ಕಲ್ಲಿನ ಮೇಲೆ ತೆಂಗಿನ ವೃಕ್ಷಗಳನ್ನು, ಕೆಲವು ದೇವಸ್ಥಾನಗಳಲ್ಲಿ ಎಳನೀರು ಗೊಂಚಲನ್ನು ಗೋಪುರದ ಬದಿಗಳಲ್ಲಿ ತೋರಣಗಳಲ್ಲಿ ಕೆತ್ತಿರುವುದನ್ನು ಕಾಣಬಹುದು )

6 ಮರದಲ್ಲಿ ಬಲಿಯಲು ಬಿಟ್ಟ ಕಾಯಿ ಒಣಗಿ ಕೊಬ್ಬರಿ ಆಗುತ್ತದೆ, ಈ ಕೊಬ್ಬರಿಯಿಂದ ದಿನಬಳಕೆಗೆ ಎಣ್ಣೆ, ಸಂಕ್ರಾಂತಿಯ ಎಳ್ಳುನೊಂದಿಗೆ ಬೆರೆಸಿ ಕೊಡಲಾಗುತ್ತದೆ, ಕರ್ಜಿಕಾಯಿ, ಬೆಲ್ಲದ ಮಿಠಾಯಿ,ಕೊಬ್ಬರಿ ಮಿಠಾಯಿ ತಯಾರಿಸುತ್ತಾರೆ, ಇವೆಲ್ಲ ದೇಹಕ್ಕೆ ಎಣ್ಣೆ ಅಂಶವನ್ನು ಸೇರಿಸುತ್ತದೆ.

7 ಮರದಿಂದ ತಾನಾಗಿಯೇ ಉದುರಿದ ಕಾಯಿ ಮತ್ತೊಂದು ಗಿಡವಾಗಿ ಚಿಗುರೊಡೆಯುತ್ತದೆ.

8 ಮರ ಎತ್ತರಕ್ಕೆ ಹಾಗೂ ಬಲಿತಷ್ಟು ಕಾಂಡ ದಪ್ಪವಾಗುತ್ತಾ ಹೋಗುತ್ತದೆ. ಈ ಮರಕ್ಕೆ ಮತ್ತೊಂದು ವಾಣಿಜ್ಯ ಬೆಳೆಯಾದ ಮೆಣಸು ಬಳ್ಳಿಯನ್ನ ಹಬ್ಬಿಸಬಹುದು, ಮರಗಳ ಸಾಲುಗಳ ಮಧ್ಯದಲ್ಲಿ ಅಡಕೆ, ಬಾಳೆ, ಏಲಕ್ಕಿ  ಬೆಳೆಸಬಹುದು.

9 ನೇರವಾಗಿ ಬೆಳೆಯುವ ಮರಗಳ ತುದಿಯಲ್ಲಿ, ಎಲೆಗಳ ಮಧ್ಯದಲ್ಲಿ ಹತ್ತಾರು ಪ್ರಾಣಿ ಪಕ್ಷಿಗಳು ಗೂಡು ಕಟ್ಟಲು ಆಸರೆಯಾಗುತ್ತದೆ, ಕಾಗೆ ಗೂಬೆ ಹೋತಿಕೇತ ಅಳಿಲು ಇರುವುದನ್ನು ಕಂಡಿರಬಹುದು.

10 ನೂರು ವರ್ಷ ದಾಟಿದ ಮರದ ಕಾಂಡವನ್ನು ಹೆಂಚುಗಳ ಅಟ್ಟಣಿಗೆಯಾಗಿ, ತೊಲೆಗಳಾಗಿ, ದನಗಳು ನೀರು ಕುಡಿಯುವ ಬಾನಿಯಾಗಿ ಉಪಯೋಗಿಸುತ್ತಿದ್ದರು, ಇಂದು ತೆಂಗಿನ ಕಟ್ಟಿಗೆಯನ್ನು ಮೇಜು, ಕುರ್ಚಿ, ಕಟ್ಟಡ ನಿರ್ಮಾಣಗಳಲ್ಲಿ, ಹೀಗೆ ದಿನಬಳಕೆಯ ಹತ್ತಾರು ಆಯಾಮಗಳಲ್ಲಿ ತೆಂಗು ಬಹುಪಯೋಗಿಯಾಗಿದೆ.

ತೆಂಗಿನ ಗುಣಧರ್ಮ ಆ ಪ್ರದೇಶದ ಮಣ್ಣಿನ ಆಧಾರದ ಮೇಲೆ ನಿಂತಿರುತ್ತದೆ, ಒಂದೊಂದು ಪ್ರದೇಶದ ಎಳನೀರು ಒಂದೊಂದು ರುಚಿಯನ್ನು ಹೊಂದಿರುತ್ತದೆ, ಗದ್ದೆಯ ಎಳನೀರಿಗೂ ತೋಟದ ಎಳನೀರು ವ್ಯತ್ಯಾಸವಿದೆ, ಕೆಂದೆಳನೀರನ್ನು ಕುಡಿದಿರಬಹುದು,ಮರದ ಸೋಗೆ ಉರಿದು ಬಂದ ಬೂದಿ ಒಂದು ಉತ್ತಮ ಕೀಟನಾಶಕ, ಕೃಷಿಯಲ್ಲಿ ಇಂದಿಗೂ ಬಳಕೆಯಲ್ಲಿದೆ, ತೆಂಗಿನ ಕೃಷಿ ಇಂದು ಏಕ ಜಾತಿಯ ನೀಡುತೋಪಾಗಿ ಮಾರ್ಪಾಡಾಗುತ್ತಿದೆ, ಕೆಲವು ಕಡೆ ತೆಂಗಿನಕಾಯಿ ತಲೆಯ ಮೇಲೆ ಬಿದ್ದು ಸಾವು ಸಂಭವಿಸಿರುವ ಪ್ರಕರಣಗಳು ನಡೆದಿವೆ, ವರ್ಷಕ್ಕೆ ಸರಾಸರಿ ಪ್ರಪಂಚದಲ್ಲಿ 170 ಜನ ಸಾಯುತ್ತಾರೆ ಎಂಬ ಮಾಹಿತಿಯೂ ಇದೆ.

ಸಹಜವಾಗಿ ಹೊಳೆದಂಡೆ, ಸಮುದ್ರಗಳ ತೀರಗಳಲ್ಲಿ, ಕಾಡಿನಲ್ಲಿ ಬೆಳೆಯುವ ತೆಂಗಿನ ಮರ ಮಾನವನ ಕೃಷಿಯಲ್ಲಿ ಪಳಗುತ್ತಾ ಹೋದಂತೆ ವೈವಿಧ್ಯಮಯವಾದ ತೊಡಗಿತು, ಅದರಲ್ಲಿಯೂ ಹೈಬ್ರಿಡ್ ತಳಿಗಳ ಉತ್ಪಾದನೆಯಾದ ಬಳಿಕವಂತೂ ನೆಟ್ಟ ಎರಡೇ ವರ್ಷಗಳಲ್ಲಿ ಮರ ಕಾಯಿ ಹಿಡಿಯಲು ಪ್ರಾರಂಭವಾಗುತ್ತದೆ, ಆದರೆ ಇಂಥ ಮರಗಳ ಎಳನೀರ ರುಚಿ, ಕಾಯಿಯ ಪರಿಮಳ ಕಡಿಮೆ ಹಾಗೂ ಜೀವಿತಾವಧಿ ಅವಧಿಯೂ ತೀರಾ ಕಡಿಮೆ, ಅದೇ ನಾಟಿ ಮರ ನೂರಾರು ವರ್ಷ ಹಣ್ಣು ಕಾಯಿ ಬಿಡುತ್ತಲೇ ಇರುತ್ತದೆ.

ಇಂತಹ ಅಭೂತಪೂರ್ವ ಮರವನ್ನು ನಮ್ಮ ಪೂರ್ವಜರು ದೇವಸ್ಥಾನದಲ್ಲಿ ತಮ್ಮ ಜಮೀನಿನಲ್ಲಿ ನೆಟ್ಟು ಬೆಳೆಸಿದ್ದಾರೆ, ಮರವು ಅವರ ಪೀಳಿಗೆಯನ್ನೇ ಕೈ ಹಿಡಿದು ನಡೆಸಿದೆ, ದೇವರ ನಾಡೆಂದು ಪ್ರಖ್ಯಾತವಾಗಿರುವ ನಮ್ಮ ನೆರೆ ರಾಜ್ಯ ಕೇರಳ ಈ ಮರವನ್ನು Kerala tree of life ಎಂದು ಗುರುತಿಸಿದೆ. ಇಂದು ಪ್ರಪಂಚದ ಎಲ್ಲಾ ಭಾಗಗಳಲ್ಲಿಯೂ ಈ ಮರವನ್ನು ಕಾಣಬಹುದು,ಇದರ ಮಾರುಕಟ್ಟೆಯೂ ಬಹಳ ವಿಸ್ತಾರವಾಗಿ ಹರಡಿಕೊಂಡಿದ್ದು ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಕೆಲವು  ತೆಂಗಿನಮರಗಳ ರಚನೆ ಸ್ವಾಮ್ಯ / Copyrigt  ಪಡೆದುಕೊಂಡಿದೆ, ರಾಷ್ಟ್ರದ ಧ್ವಜಗಳಲ್ಲಿ ಸ್ಥಾನವನ್ನು ಪಡೆದಿದೆ, ದೇಶದ ಮರವೆಂಬ ಸ್ಥಾನವನ್ನು ಪಡೆದಿದೆ.

ಅಂದಹಾಗೆ ಕಲ್ಪವೃಕ್ಷಕ್ಕೆ ಸಂಬಂಧಿಸಿದ ಮತ್ತಷ್ಟು ರೋಚಕ ವಿಷಯ ಚರ್ಚಿಸುವುದನ್ನು ಮರೆತೇಬಿಟ್ಟಿದ್ದೇವೆ, ತೆಂಗು ಬುಡದ ಮಧ್ಯದಲ್ಲಿ ಏಕೆ ಕವಲೊಡೆಯುವುದಿಲ್ಲ ? ಇದಕ್ಕೇನಾದರೂ ಕಾರಣ ಇದಿಯಾ ? ಕವಲೊಡೆದರೂ ಎಷ್ಟು ಕವನಗಳನ್ನು ಹೊಡೆಯಬಹುದು ? 

ಕೆಂದೆಳನೀರನ್ನ ಕುಡಿದಿರುತ್ತವೆ, ರುಚಿಯಾಗಿಯೂ ಇರುತ್ತದೆ ಅಲ್ಲವೇ ? ಎಲ್ಲಿಯಾದರೂ Pink ಬಣ್ಣದ ಎಳನೀರಿನ ಕಾಯಿಯನ್ನು ನೋಡಿದ್ದೀರಾ ? ನನಗೂ ಮೊದಲು ಅನುಮಾನ ಎನಿಸಿದರು ವಾಸ್ತವದಲ್ಲಿ ನಿಜವೇ ಆಗಿತ್ತು.

ತೆಂಗಿನಕಾಯಿಯನ್ನು ಹಿಡಿದು ಜಲದ ಮೂಲವನ್ನ ಕೆಲವು ಪರಿಣಿತರು ಕಂಡುಹಿಡಿಯುತ್ತಾರೆ ಎಂದು ಕೆಲವರಲ್ಲಿ ನಂಬಿಕೆಯಿದೆ ಇದು ಎಷ್ಟರಮಟ್ಟಿಗೆ ಸತ್ಯ ಹಾಗೂ ಮಿತ್ಯ ?

ಅದೇನೇ ಇರಲಿ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ವೃಕ್ಷಗಳು ಕಲ್ಪವೃಕ್ಷ ಆಗಿರಬಹುದು, ಆದರೆ ನಮ್ಮ ದೇಶದ ಮಟ್ಟಕ್ಕೆ ಜನರ ಕಲ್ಪನೆಗೆ ಹತ್ತಿರವಾಗಿರುವ ವೃಕ್ಷವಾಗಿ ತೆಂಗು ಹೆಸರುವಾಸಿಯಾಗಿದೆ, ಒಂದು ಮರ ಒಂದು ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಮೂರು ನಾಲ್ಕು ತಲೆಮಾರುಗಳನ್ನು ಸಾಕಿ ಸಲಹುತ್ತಿದೆ.


ಧನ್ಯವಾದಗಳು.





Saturday, February 19, 2022

ಮಾಯಲೋಕ ವಿ ಮತ್ಸ್ಯಲೋಕ.

                      
                        - ಎಸ್ ಪಿ ತೇಜರಾಜು.

 ಚಿಕ್ಕವರೇ ಆಗಿರಬೇಕು ಅಂತೇನೂ ಇಲ್ಲ, ಎಷ್ಟೇ ದೊಡ್ಡವರಾಗಿದ್ದರು ಕೂಡ ಶೃಂಗೇರಿಗೆ ಹೋದಾಗಲೂ ಅಥವಾ ಮಂಗಳೂರಿನ ಕಡಲ ತೀರಕ್ಕೆ ಹೋದಾಗಲೂ ಅಲ್ಲಿ ಕಾಣಸಿಗುವ ಬಣ್ಣಬಣ್ಣದ ವಿಶಿಷ್ಟ ಗಾತ್ರ, ಆಕಾರ, ರಚನೆ, ಬಣ್ಣ ಬಣ್ಣದ ಮತ್ಸ್ಯ ಗಳನ್ನು ನೋಡಿ ಮರುಳಾಗದವರು ಬಹಳ ಕಡಿಮೆಯೇ ( ಮತ್ಸ್ಯಗಳ ವೈವಿಧ್ಯತೆಯನ್ನು ತಿಳಿದುಕೊಳ್ಳಲು ಮಾಂಸಾಹಾರಿಗಳೇ ಆಗಿರಬೇಕು ಎಂದೇನೂ ಇಲ್ಲ ) ಮೀನುಗಳ ಚಲನವಲನಗಳನ್ನು ನೋಡುತ್ತಿದ್ದರೆ ಸಮಯ ಹೋಗಿದ್ದೆ ತಿಳಿದಿರುವುದಿಲ್ಲ.

ಬಾಲ್ಯದಲ್ಲಿ ಹಣವನ್ನು ಕೂಡಿಟ್ಟು ಮೀನುಗಳನ್ನು ತಂದು ಅಕ್ವೇರಿಯಂನಲ್ಲಿ ಸಾಕಿದವರು ನೀವು ಆಗಿರಬಹುದು, ಪ್ರತಿ ಬಾರಿ ಮೀನನ್ನು ತಂದು ಅಕ್ವೇರಿಯಂನಲ್ಲಿ ಸಾಕಿದಾಗ ಏನೋ ಒಂದು ರೀತಿಯ ಕುತೂಹಲ, ಬೆಳಿಗ್ಗೆಯಿಂದ ಸಂಜೆವರೆಗೂ ಅವುಗಳ ಮುಂದೆ ಕುಳಿತಿದ್ದು ಇರಬಹುದು, ಕೆಲವೊಮ್ಮೆ ಅವುಗಳೊಂದಿಗೆ ಮಾತನಾಡುವುದಕ್ಕೆ ಪ್ರಯತ್ನ ಪಟ್ಟಿರಬಹುದು, ಇದಕ್ಕಿಂತಲೂ ಇನ್ನು ಕುತೂಹಲಕರ ವಿಷಯವೆಂದರೆ ಅವು ಆಹಾರವನ್ನು ಹೇಗೆ ತಿಂತಾವೆ ? ಹೇಗೆ ಈಜುತ್ತವೆ ? ಹೇಗೆ ಆಟ ಆಡುತ್ತವೆ ? ಕಣ್ಣುನಾ ಹೇಗೆ ಮಿಟುಕಿಸುತ್ತವೇ ? ಹೇಗೆ ಉಸಿರಾಡುತ್ತವೆ ? ನಿದ್ದೆ ಹೇಗೆ ಮಾಡುತ್ತವೆ ? ಅವು ತುಂಬಾದಿನ ಬದುಕಲಿ ಎಂದು ವಾರಕ್ಕೆ ಒಮ್ಮೆಯೋ ಅಥವಾ ಹದಿನೈದು ದಿನಕ್ಕೆ ಒಮ್ಮೆಯೂ ಅಕ್ವೇರಿಯಂ ತೊಳೆದಿರಬಹುದು, Extra care ಮಾಡುತ್ತೇವೆ ಎಂದು ಬಹಳಷ್ಟು ಸಲಕರಣೆಗಳನ್ನು ತಂದು ಜೋಡಿಸಿರಬಹುದು, ಇಷ್ಟೆಲ್ಲಾ ಮಾಡಿಯೂ ಕೂಡ ಕೊನೆಗೆ ಹಸುನೀಗಿದಾಗ ಅತ್ತು ಗೋಳಾಡಿ ಅಂತ್ಯಕ್ರಿಯೆಯನ್ನು ಮುಗಿಸಿ, ಮತ್ತದೇ ಸ್ಪಿರಿಟ್ ನಲ್ಲಿ ಮತ್ತಷ್ಟು ಮೀನುಗಳನ್ನು ತಂದು ಹಾಕಿರಬಹುದು. ಮುಂದೆ ಬೆಳೆಯುತ್ತ Career  ಎಂಬ ವಿಷಯದಲ್ಲಿ ಮುಳುಗುತ್ತಾ ಇವುಗಳ ಸಂಪರ್ಕದಿಂದ ದೂರವಾಗಿರಲೂಬಹುದು.

ವಿಕಸನ ಹಾದಿಯಲ್ಲಿ ಜಲಚರಗಳೇ ಮೊದಲನೆಯವು ಇವುಗಳೇ ಕಾಲಕ್ರಮೇಣ ನೀರಿನಿಂದ ಹೊರಗೆ ಬಂದು ಪ್ರಾಣಿ-ಪಕ್ಷಿಗಳಾಗಿ ಮಾರ್ಪಾಡಾಗಿ ಮುಂದೆ ಮಾನವನ ವಿಕಸನದಲ್ಲಿ ಪಾತ್ರವನ್ನು ವಹಿಸಿದ್ದರಿಂದ ಜಲಚರಗಳು ಮಾನವನಿಗೆ ಮೊದಲಿಂದಲೂ ಪರಿಚಿತ.

ಇಂತಹ ವಿಕಸನ ಆದಿಯಲ್ಲಿಯೇ ಮೀನುಗಳು ಕೂಡ ವೈವಿಧ್ಯಮಯವಾಗಿ ಬೆಳವಣಿಗೆ ಹೊಂದಿದವು, ಇಂದು ಈ ರೀತಿಯಾದಂತಹ ಮೀನುಗಳು ಇಲ್ಲ ಎಂಬ ಹಂತಕ್ಕೆ ಮೀನುಗಳು ವಿಕಸನ ಹೊಂದಿವೆ. ಪ್ರಪಂಚದ ಅತಿ ಪುಟ್ಟ ಮೀನು Paedocypris progenetica, ಅತ್ಯಂತ ದೊಡ್ಡ ಗಾತ್ರದ ತಿಮಿಂಗಳ / Blue whale, ಬುದ್ಧಿವಂತ ಮೀನು Dolphin,  ವಿದ್ಯುತ್ತನ್ನು ಹೊರಸೂಸುವ ಎಲೆಕ್ಟ್ರಿಕ್ ಫಿಶ್, ಎಂದೂ ಸಾಯದ Jelly fish, ಕುದುರೆ ಮೀನು, ಸಮುದ್ರದ ಉಪ್ಪು ನೀರಿನಲ್ಲಿ ಬೆಳೆದು ತಾನು ಹುಟ್ಟಿದ ಸಿಹಿನೀರಿನ ಜಾಗಕ್ಕೆ ಹಿಂತಿರುಗುವ Salman fish, ನಕ್ಷತ್ರಮೀನು, ಮುತ್ತು ರತ್ನ ಹವಳಗಳು ಕೂಡ ಜಲಚರಗಳೇ, ಇವುಗಳೊಂದಿಗೆ ಉಭಯಚರಗಳಾದ ಮೊಸಳೆ, ಏಡಿ, ಕಪ್ಪೆ, ಸುದೀರ್ಘ ಜೀವನ ನಡೆಸುವ ಆಮೆ ಹೀಗೆ ಅಗಾಧವಾದ ಜೀವವೈವಿಧ್ಯವನ್ನು ಒಳಗೊಂಡಿದೆ. ಇಷ್ಟೆಲ್ಲಾ ವೈವಿಧ್ಯಗಳ ನಡುವೆ ಸಮುದ್ರದಲ್ಲಿ ಜೀವಿಸುವ ಮೀನುಗಳೇ ಎತ್ತಿದ ಕೈ ಏಕೆಂದರೆ ಸಮುದ್ರ ವಿಸ್ತೀರ್ಣ ಬಹಳ ವಿಶಾಲವಾಗಿದೆ ಅಲ್ಲವೇ ?

ವೈವಿಧ್ಯಮಯವಾದ ಈ ಮತ್ಸ್ಯಗಳ ಲೋಕದಲ್ಲಿ ಪ್ರತಿಶತ 90 ಭಾಗ ಮೊಟ್ಟೆ ಇಡುವ ಮೀನುಗಳೇ, ಇನ್ನ ಉಳಿದ ಹತ್ತು ಪರ್ಸೆಂಟ್ ನೇರವಾಗಿ ಮರಿಗಳಿಗೆ ಜನ್ಮವನ್ನು ನೀಡುತ್ತವೆ ಇವುಗಳನ್ನು ಸಸ್ತನಿಗಳು ಅಥವಾ Mammals( ನೇರವಾಗಿ ಮರಿಗಳಿಗೆ ಜನ್ಮವನ್ನು ನೀಡುವ, ಹಾಲು ಉಣಿಸುವ ) ಎಂದು ಕರೆಯಲಾಗುತ್ತದೆ ( ಮಾನವರು ಕೂಡ ಸಸ್ತನಿಗಳ ಗುಂಪಿಗೆ ಸೇರುವುದು ) ( Exa - Dolphin, Blue whale etc, ) ಕೆಲವು ಮೀನುಗಳು ಸಮುದ್ರದಲ್ಲಿ ಮಾತ್ರ ಬದುಕುತ್ತವೆ, ಇನ್ನು ಕೆಲವು ಸಿಹಿ ನೀರಿನಲ್ಲಿ ಮಾತ್ರ, ಗಮನಿಸಬೇಕಾದ ಅಂಶವೆಂದರೆ ಈ ಸಮುದ್ರದಲ್ಲಿ ವಾಸಿಸುವ ಮೀನುಗಳು ಸಮುದ್ರದ ಕೆಲವು ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತವೆ, ಆ ಪ್ರದೇಶ ಮಾಂಗ್ರೋ ಗಿಡಗಳಿಂದ ಕೂಡಿರಬಹುದು, ಹವಳ ದಿಣ್ಣೆಗಳು ಆಗಿರಬಹುದು, ಕೆಲವು ನದಿ ಮುಖಜ ಭೂಮಿಯಲ್ಲಿ, ಕಲ್ಲಿನ ಪೊಟರೆಗಳಲ್ಲಿ ಜೀವನ ನಡೆಸುತ್ತವೆ, ಸಣ್ಣ ಮೀನುಗಳೇ ದೊಡ್ಡ ಮೀನುಗಳಿಗೆ ಆಹಾರ, ಈ ಸಣ್ಣ ಮೀನುಗಳು ಹುಳಗಳನ್ನು ಅಥವಾ ತರಗೆಲೆಯ ಕಸವನ್ನು ತಿಂದು ಬದುಕುತ್ತವೆ. ಇವುಗಳ ದೇಹರಚನೆಯ ಮೈಮೇಲಿನ ಲೋಳೆ ಅಂಶ ನೀರಿನಲ್ಲಿ ಸರಾಗವಾಗಿ ಚಲಿಸಲು, ಕಿವಿರುಗಳು ಉಸಿರಾಡಲು, ಬಾಲಾ ರೆಕ್ಕೆಗಳು ಮುಂದೆ ಚಲಿಸಲು ಅನುವು ಮಾಡಿಕೊಡುತ್ತದೆ. ಉಭಯಚರಗಳಲ್ಲಿ ಒಂದಾದ ಕಪ್ಪೆ ನೀರಿನಲ್ಲಿದ್ದಾಗ ಚರ್ಮದಿಂದಲೂ, ಆಮೆ, ಪೆಂಗ್ವಿನ್, ನೀರು ನಾಯಿ ನೀರಿನಿಂದ ಹೊರಗೆ ಇದ್ದಾಗ ಮೂಗಿನ ಸಹಾಯದಿಂದ ಉಸಿರಾಡುತ್ತವೆ. ಇನ್ನು ಕಣ್ಣಿನ ವಿಷಯಕ್ಕೆ ಬರುವುದಾದರೆ ಬಹಳಷ್ಟು ಸ್ವಾರಸ್ಯವಾಗಿಯೇ ಉಳಿದಿದೆ, ಕೆಲವಕ್ಕೆ ಮಾನವನಂತೆ ಕಣ್ಣಿನ ರೆಪ್ಪೆ ಇದ್ದು ಕಣ್ಣನ್ನ ಮಿಟುಕಿಸುತ್ತವೆ,Gold fish ನಂತಹ ಕಣ್ಣಿನ ರೆಪ್ಪೆ ಇರದ ಮೀನುಗಳು ಇವೆ, ಇದೆರಡೂ ಬಗೆಯಾದ ಮೀನುಗಳು ನಿದ್ರಿಸುವುದು, ಸುದೀರ್ಘ ಜೀವನ ನಡೆಸುವ ಆಮೆ ಸಸ್ಯಾಹಾರಿಯಾಗಿರುವುದು, ಕೇರಳದ ದೇವಸ್ಥಾನವೊಂದರಲ್ಲಿ ಸಸ್ಯಹಾರಿ ಮೊಸಳೆ, ಬುದ್ಧಿವಂತಿಕೆಯನ್ನು ಪ್ರದರ್ಶಿಸಿ ಮಾನವನ ಮಾತುಗಳನ್ನು ಅರ್ಥಮಾಡಿಕೊಂಡು ಅಕ್ವೇರಿಯಂನಲ್ಲಿ ಆಟವಾಡುವುದನ್ನು ಕಲಿತ Dolphin fish, ಇರುವುದೆಲ್ಲವೂ ಮತ್ಸ್ಯ ಲೋಕದ ಸ್ವಾರಸ್ಯಮಯ ವಿಷಯವೇ.


ಪ್ರಪಂಚದಲ್ಲಿ ಒಟ್ಟು 33600 ಬಗೆಯಾದ ಮೀನು ಜಾತಿಗಳಿವೆ ಎಂದು ಗುರುತಿಸಲಾಗಿದೆ ಅವುಗಳಲ್ಲಿ 30000 ಸಮುದ್ರದಲ್ಲಿ ವಾಸಿಸಿದರೆ 4000 ಜಾತಿ ಮೀನುಗಳು ಸಿಹಿನೀರಿನಲ್ಲಿ ವಾಸಿಸುತ್ತವೆ, 2000 ಬಗೆಯಾದ ಉಭಯಚರ ಜೀವಿಗಳಿವೆ, ಮಾನವನ ದುರಾಸೆಯಿಂದಾಗಿ / Fishing, 1100 ಅಧಿಕ ಮೀನುಜಾತಿಗಳು ಅಳಿವಿನಂಚಿಗೆ ತಲುಪಿವೆ.

ಪಂಚಭೂತಗಳನ್ನು ಪೂಜಿಸಿದ ಭಾರತೀಯರು ಮೀನುಗಳನ್ನು ಪೂಜಾ ಭಾವನೆಯಿಂದಲೇ ಕಂಡವರು, ವಿಷ್ಣುವಿನ ಅವತಾರಗಳಲ್ಲಿ ಮತ್ಸ್ಯಾವತಾರ, ಸಮುದ್ರ ಮಂಥನದಲ್ಲಿ ನಡೆಯುವ ಪೌರಾಣಿಕ ಹಿನ್ನೆಲೆ, ಮತ್ಸ್ಯಾವತಾರದಲ್ಲಿ ಅಭೂತಪೂರ್ವವಾಗಿ ವಿವರಿಸಲಾಗಿದೆ. ಧರ್ಮಿಕ ಆಚರಣೆಗಳಲ್ಲಿಯೂ ಮೀನುಗಳು ಹಾಸುಹೊಕ್ಕಾಗಿ ನಮ್ಮೆಲ್ಲಾ ಪುಣ್ಯಕ್ಷೇತ್ರಗಳ ನದಿತಟದಲ್ಲಿ ಪೂಜಿಸಲಾಗುತ್ತದೆ. ಇನ್ನು ಕೆಲವು ಕಥೆಗಳಲ್ಲಿ ಒಡಮೂಡುವ ಮತ್ಸ್ಯಕನ್ಯೆಯ ಪ್ರಸಂಗ ಮಕ್ಕಳಲ್ಲಿ ಸಂತಸವನ್ನು ಮೂಡಿಸುತ್ತದೆ. ನಿಮಗೆ ತಿಳಿದಿರಬಹುದು ಮೀನುಗಳ ಚಲನವಲನಗಳನ್ನು ನೋಡುವುದರಿಂದ ಹೃದಯಾಘಾತವಾಗುವುದನ್ನು ತಪ್ಪಿಸಬಹುದು ಎಂದು ಸಂಶೋಧನೆಗಳು ಹೇಳುತ್ತದೆ.

ರಾಜರ ಆಳ್ವಿಕೆಯಲ್ಲಿ ನೋಡುವುದಾದರೆ ರಾಣಿಯರಿಗಾಗಿ ನಿರ್ಮಿಸುತ್ತಿದ್ದ ಪುಷ್ಪ ವನಗಳ ಕೊಳಗಳಲ್ಲಿ ವೈವಿಧ್ಯಮಯವಾದ ಮೀನುಗಳನ್ನು ಕಾಣಬಹುದಾಗಿತ್ತು, ಇದು ಪ್ರಪಂಚದ ನಾನಾ ಭಾಗಗಳ ರಾಜರ ಆಳ್ವಿಕೆಯ ಕಾಲದಲ್ಲಿ ಉಲ್ಲೇಖವಾಗಿದೆ. ಇದೇ ಕಾಲದಲ್ಲಿ ಸಂಸ್ಥಾನಕ್ಕೆ ದ್ರೋಹ ಬಗೆಯುವವರನ್ನು, ಗೂಢಚಾರಿಗಳನ್ನು ವಿಷಕಾರಿ ಮೀನು ಹಾವುಗಳಿಂದ ಕೂಡಿದ್ದ ಹಳ್ಳಕ್ಕೆ ತಳ್ಳಲಾಗುತ್ತಿತ್ತು ಎಂಬುದು ತಿಳಿಯುತ್ತದೆ. ಹೀಗಾಗಿಯೇ ಇಂದಿಗೂ ಅನೇಕ ದೇಶಗಳ ರಾಷ್ಟ್ರ ಲಾಂಛನಗಳಲ್ಲಿ ಮೀನುಗಳು ಸಾರ್ವಭೌಮತ್ವವನ್ನು ಸಾಧಿಸಿಕೊಂಡಿದೆ.

ಸುಮಾರು ಐದುನೇ ಶತಮಾನದಲ್ಲಿ ಇದ್ದಂತಹ ಅಮರಸಿಂಹ ತನ್ನ ನಾಗಲಿಂಗ ಶಾಸನದಲ್ಲಿ ಕೆಲವು ಮತ್ಸ್ಯ ಜಾತಿಗಳ ಬಗ್ಗೆ ತಿಳಿಸಿದ್ದಾನೆ, ಇದು ಅಮರಕೋಶ ಪುಸ್ತಕದ, ಪ್ರಥಮ ಕಾಂಡದ, ವಾರಿ ವರ್ಗ ಅಧ್ಯಾಯದ 39ನೇ ಪುಟದಲ್ಲಿದೆ.

ಪೂರ್ವದಲ್ಲಿ ಸಮುದ್ರದ ದಡದಲ್ಲಿ ವಾಸಿಸಿದ ಮಾನವ  ಮೀನನ್ನು ಆಹಾರವಾಗಿಸಿಕೊಂಡ ಪುಟ್ಟ ದೋಣಿಯನ್ನು ಮಾಡುವುದನ್ನು ಕಲಿತು ಬಲೆ ಹೆಣೆಯುವುದನ್ನು ಕಲಿತವ ಸಣ್ಣಪ್ರಮಾಣದಲ್ಲಿ ಮೀನುಗಳನ್ನು ಹಿಡಿಯುತ್ತಾ ನನ್ನ ಕುಟುಂಬದವರಿಗೆ ಆಹಾರವನ್ನು ದೊರಕಿಸಿ ಕೊಡುವುದನ್ನು ಕಲಿತ, ಇಂದಿಗೂ ಪುಟ್ಟ ಕೈ ದೋಣಿಯನ್ನಿಡಿದು ಸಮುದ್ರಕ್ಕೆ ಧುಮುಕುವ ಮೀನುಗಾರರು ಮೀನುಗಳಿಗೆ ನಮಿಸಿಯೆ ದಿನ ಪ್ರಾರಂಭಿಸುವುದು. ಎಂದು ಮೀನುಗಾರಿಕೆ ಕಮರ್ಷಿಯಲ್ ಆಗತೊಡಗಿತೋ ಅಂದಿನಿಂದ ದೊಡ್ಡ ದೊಡ್ಡ ಹಡಗುಗಳ ಮೂಲಕ ಆಳವಾದ ಸಮುದ್ರಗಳಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಮೀನನ್ನು ಹಿಡಿಯುತ್ತಾ ಅವುಗಳ ಸಂತತಿ ಕ್ಷೀಣಿಸುವ ಹಾಗೆ ಮೀನುಗಾರಿಕೆಯನ್ನು ಮಾಡಿದ. ( ಗುಲಾಬಿ ಟಾಕೀಸ್, Life of pi movie, Blue whale documentory  ಒಮ್ಮೆ ನೋಡಿ )

ಇಂದು ಪ್ರಪಂಚದ ಒಟ್ಟು ಮತ್ಸ್ಯ ವ್ಯಾಪಾರ 285,359.7 million US $ ಗಳಲ್ಲಿ ನಡೆಯುತ್ತಿದೆ. ಭಾರತದ ಒಟ್ಟು ಜಿಡಿಪಿಯ ಪ್ರತಿಶತ 2% ಮತ್ಸ್ಯ ವ್ಯಾಪಾರದಿಂದಲೇ ಬರುತ್ತಿದೆ. ಮತ್ಸ್ಯಗಳ ಅಧ್ಯಯನ, ಸಂಶೋಧನೆಗೆಂದೇ ಪ್ರತ್ಯೇಕ ಸಂಸ್ಥೆಗಳಿವೆ, ಸಾವಿರಾರು ಸಂಶೋಧನೆಗಳು ನಡೆದಿದೆ. ನಗರದ ಜಂಜಾಟದ ಜೀವನದಲ್ಲಿ ಸಿಲುಕಿರುವ ಮಾನವನಿಗೆ ಮತ್ಸ್ಯಲೋಕ ಮಾನವರಿಗೆ ಸಂತೋಷವನ್ನು  ನೀಡುವುದರಿಂದ ಇದರ ಹಿಂದೆ ದೊಡ್ಡ ವ್ಯಾಪಾರವೂ ಇದೆ, ಲಕ್ಷಾಂತರ ಜನ ಭಾರತದಲ್ಲಿ ಅಕ್ವೇರಿಯಂ ಮಳಿಗೆಗಳನ್ನು ಇಟ್ಟಿದ್ದಾರೆ, ಕೊಳ್ಳುವವರ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಲೇ ಇದೆ, Dolphin ಗಳ ಪಳಗಿಸಿ ಜಲಕ್ರೀಡೆಯೊಳಗೆ ಮನೋರಂಜನೆಗಾಗಿ ಬಳಸುವುದರಿಂದ ಇದನ್ನು ನಡೆಸುವ ಸಂಸ್ಥೆಗೆ ಲಕ್ಷಾಂತರ ರೂಪಾಯಿ ವ್ಯವಹಾರವಾಗುತ್ತದೆ. ಮರುಭೂಮಿಯಾದ ದುಬೈನಲ್ಲಿ ಪಂಚದ ಅತಿ ದೊಡ್ಡ ಅಕ್ವೇರಿಯಂ ಇರುವುದು ( ಮಾನವ ಮೀನುಗಳನ್ನು  ಬೆಳೆಸಲು ಕಲಿತ ವಿದ್ಯೆ ) ಅಚ್ಚರಿಯ ಸಂಗತಿಯೇ.

ನಮ್ಮ ದೇಶ ರಾಜ್ಯಗಳಲ್ಲಿಯೂ ವೈವಿಧ್ಯಮಯವಾದ ಪ್ರಾಣಿ-ಪಕ್ಷಿಗಳಿಂದ ಕೂಡಿದೆ. ರಾಜ್ಯ ಪ್ರಾಣಿ ಆನೆಎಂತಲೂ, ರಾಜ್ಯ ಮರ ಶ್ರೀಗಂಧವೆಂತಲೂ, ರಾಜ್ಯ ಪಕ್ಷಿ ನೀಲಕಂಠ ವೆಂತಲೂ,ರಾಜ್ಯ ಚಿಟ್ಟೆ Southern birdwing ಎಂತಲೂ ಗುರುತಿಸಲಾಗಿದೆ, ಹಾಗಾದರೆ ರಾಜ್ಯ ಮೀನು / ಮತ್ಸ್ಯ ಯಾವುದೆಂದು ಊಹಿಸಬಹುದೇ ?  ಅದುವೇ ಮಹಶೀರ್ Mahasheer ಅದ್ಭುತವಾದಂತಹ ಮೈ ಹೊಳಪು, ನೀಳ ದೇಹ, ಯಾರನ್ನಾದರೂ ಆಕರ್ಷಿಸದೆ ಇರುವುದಿಲ್ಲ, ಚಿನ್ನ ಹಾಗೂ ಬೆಳ್ಳಿಯ ಹೊಳಪು ಎರಡು ಬಗೆಯಾಗಿ ಕಾಣಸಿಗುತ್ತವೆ, ಭೂತಾನ್ ದೇಶ ಈ ಮೀನನ್ನು Tiger fish, Tiger of water ಎಂದು ಪೂಜ್ಯ ಭಾವನೆಯಲ್ಲಿ ಕಾಣುತ್ತದೆ. ಶುದ್ಧ ಸಿಹಿನೀರಿನಲ್ಲಿ ಮಾತ್ರ ಕಂಡುಬರುವುದು ಈ ಮೀನಿನ ವಿಶೇಷ, ಸ್ವಲ್ಪ ನೀರು ಕಲುಷಿತವಾದರೂ ಈ ಮೀನು ಅಲ್ಲಿಂದ ಕಾಲ್ ಕೀಳುತ್ತದೆ.

ಕರ್ನಾಟಕದ ಜೀವನದಿಯಾದ ಕಾವೇರಿ ಉಗಮ ಸ್ಥಾನ, ಉಪನದಿಗಳ ಮೂಲಗಳಲ್ಲಿ, ಕಾವೇರಿ ವನ್ಯಜೀವಿಧಾಮಗಳಲ್ಲಿಯೂ ಇವು ಕಂಡುಬರುತ್ತವೆ, ಮಾನವನ ದುರಾಸೆಯಿಂದ Dam construction, industrialization, ಮರಳುಗಾರಿಕೆ, ಕಲ್ಲಿನ ಕ್ವಾರಿ, ನಗರದ ತ್ಯಾಜ್ಯವನ್ನು, ಕೊಳಚೆ ನೀರನ್ನು ಬಿಟ್ಟಿದ್ದರಿಂದ, ನೀರು ಕಲುಷಿತವಾಗುತ್ತಲೂ, ಅತಿಯಾದ ಮೀನುಗಾರಿಕೆಯಿಂದಲೂ ಭಾರತದ ಸ್ವಾತಂತ್ರ ಸಮಯದಲ್ಲಿಯೇ ಇವುಗಳು ಅವನತಿಯ ಹಾದಿಯನ್ನು ಹಿಡಿದು Red list ನಲ್ಲಿ ಇವುಗಳು ಸೇರಿದವು. ಇವುಗಳ ಬೇಟೆ ಇಂದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 1985  ರಲ್ಲಿ  ಪೊನ್ನಪ್ಪ ಎಂಬುವವರು ಹಿಡಿದ ಮಹಶೀರ್ ಮೀನು ಬರೋ ಬರಿಯ 44 ಕೆಜಿ ಅನ್ನು ತೂಗಿತ್ತು, ಈ ಮೀನು 100ಕೆಜಿ ಯವರಿಗೂ ಬೆಳೆಯುವ ಸಾಮರ್ಥ್ಯವಿದೆ.

ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲಿಕ್ಕಾಗಿ ಅನೇಕ ಸೇವ ಸಂಘ-ಸಂಸ್ಥೆಗಳು ಶ್ರಮಿಸುತ್ತಲಿವೆ,  ನೋಡಿದರೆ ಮನಸ್ಸಿಗೆ ಮುದ ನೀಡುವ ಇಂತಹ ಅದ್ಭುತವಾದ ಮೀನುಗಳ ಉಳಿವಿಗಾಗಿ ನಮ್ಮ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ, ನೀರನ್ನು ಕಲುಷಿತಗೊಳಿಸುವ ದನ್ನು, ನಿರುಪಯುಕ್ತ ವಸ್ತುಗಳನ್ನು ಕೊಂಡು ಎಸೆಯುವ ಸಂಸ್ಕೃತಿಯನ್ನು, ಇಂತಹ ಮೀನುಗಳ ಬಗ್ಗೆ ಮಕ್ಕಳಲ್ಲಿ ಅರಿವು ಹಾಗೂ ಜಾಗೃತಿಯನ್ನು ಮೂಡಿಸಬೇಕಾಗುತ್ತದೆ. ಪರಿಸರ ಹಾಳು ಮಾಡುವುದನ್ನು ನಾವು ಹೀಗೆ ಮುಂದುವರಿಸುತ್ತಾ ಹೋದಲ್ಲಿ ಇಂತಹ ಅದ್ಭುತ ಜೀವಿಗಳು ಕಣ್ಮರೆಯಾಗಿ, ಒಂದು ಜೀವ ವೈವಿಧ್ಯದ ಕೊಂಡಿ ಸಂಪೂರ್ಣವಾಗಿ ನಾಶವಾಗುತ್ತದೆ.

ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Coorg Wildlife  Society ಸಂಪರ್ಕಿಸಬಹುದಾಗಿದೆ. ಸಮಯ ಮಾಡಿಕೊಂಡು ಇಂತಹ ವಿಷಯಗಳ ಬಗ್ಗೆ ಮಾಹಿತಿಯನ್ನು ಕಲೆಹಾಕುವಾಗ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ.

ಮಾಯಲೋಕ ವಿ ಮತ್ಸ್ಯಲೋಕ ಎಂದೆಂದೂ ಮರೆಯಾಗದಿರಲಿ / ಮಾಯವಾಗದಿರಲಿ.

ಧನ್ಯವಾದಗಳು.






Saturday, February 12, 2022

ಜೀವವಿಲ್ಲ ಆದರೆ ಜೀವಂತಿಕೆಯಿದೆ.


      
                          - ಎಸ್ ಪಿ ತೇಜರಾಜು.


ಜೀವಂತಿಕೆ ಎಂಬ ವಿಷಯ ಮಾನವ / ಪ್ರಾಣಿ ಕೇವಲ ಬದುಕಿದ್ದಾಗಷ್ಟಕ್ಕೆ ಮಾತ್ರವೇ ಸೀಮಿತವಾಗಿದೆಯೇ ? ಅಥವಾ ಆತ ಮರಣ ಹೊಂದಿದ ನಂತರ ಜೀವಂತಿಕೆ ಕಳೆದುಹೋಗುತ್ತದೆಯೇ ? ಹೌದು ಅಥವಾ ಇಲ್ಲ ಎನ್ನುವುದಕ್ಕೆ ಬಲವಾದ ಕಾರಣಗಳನ್ನು ಕೊಡಬಹುದು. ನೆಚ್ಚಿನ ಪುಸ್ತಕ ಓದುವಾಗ ಪುಸ್ತಕದ ಬರಹಗಾರ ಈ ಮೊದಲೇ ಅಸುನಿಗಿರಬಹುದು ಆದರೆ ಪುಸ್ತಕ ಓದುವಾಗ ಅವರ Journey ಒಳಗೆ ನಾವು ಮುಳುಗಿ ಹೋಗಿರುತ್ತೇವೆ ಅಲ್ಲವೇ ? ಇಂದು ಅಜ್ಜಿ-ತಾತ ನಮ್ಮೊಂದಿಗೆ ಇಲ್ಲದೆ ಇದ್ದರೂ ಅವರೊಂದಿಗಿದ್ದ ನೆನಪುಗಳು, ಬಾಲ್ಯದಲ್ಲಿ ಪ್ರೀತಿಯಿಂದ ಸಾಕಿ ಬೆಳೆಸಿದ ಸಾಕು ಪ್ರಾಣಿಗಳ [  ನಾಯಿ, ಬೆಕ್ಕು, ಬಾತುಕೋಳಿ, ಹಸು ] ನೆನಪುಗಳು ಇಂದಿಗೂ ಹಸಿಯಾಗಿಯೇ ಇದ್ದರೆ ಅಲ್ಲವೇ ?  ಹಗದ್ರೆ ಈ ವಿಷಯವನ್ನು ಜೀವಂತಿಕೆ ಎನ್ನಬಹುದೇ ?

ಆಫ್ರಿಕಾದ ಕೆಲವು ದೇಶಗಳು ಇಂದಿಗೂ ನಡೆಸಿಕೊಂಡು ಬಂದಿರುವ ಕೆಲವು ಆಚರಣೆಗಳಲ್ಲಿ ಒಂದಾದ ಮೃತದೇಹವನ್ನು ಮಮ್ಮಿಯ ರೂಪದಲ್ಲಿ ಇಡುವುದು, ಇಂಡೋನೇಷ್ಯಾದ ಆಚರಣೆಗಳಲ್ಲಿ ವರ್ಷಕ್ಕೆ ಒಮ್ಮೆ ಮೃತದೇಹಗಳನ್ನು ಹೊರಗೆತೆಗೆದು ಅವುಗಳಿಗೆ ಹೊಸ  ಹುಡುಗೆಯನ್ನು ತೊಡಿಸಿ ಪೂಜೆ ಮಾಡುವುದು ಇಂದಿಗೂ ನಡೆದುಕೊಂಡು ಬಂದಿದೆ ಈ ಆಚರಣೆಗಳ ಮೂಲಕ ಅಲ್ಲಿಯ ಜನರು ತಮ್ಮ ಪೂರ್ವಜರ ಜೀವಂತಿಕೆಯನ್ನು ಕಂಡುಕೊಂಡಿದ್ದಾರೆ. ಮೃತದೇಹಗಳನ್ನು ಕೆಡದಂತೆ ಇಟ್ಟುಕೊಳ್ಳುವ ಕಲೆಯನ್ನೇ ಚರ್ಮ ಪ್ರಸಾಧನ ಇಂಗ್ಲಿಷ್ ನಲ್ಲಿ Taxidermy ಎಂದು ಕರೆಯುತ್ತಾರೆ. ಈ ಕಲೆಯು ಸುಮಾರು ಹನ್ನೆರಡನೇ ಶತಮಾನಗಳಿಂದಲೂ ಮಾನವನಿಗೆ ಕರಗತವಾಗಿದೆ.

ಮೊದಲಿಗೆ ಈಜಿಪ್ಟ್ನಲ್ಲಿ Taxidermy ಕಲೆಯು ಪ್ರಾರಂಭವಾಯಿತೆಂದು ಮೂಲಗಳು ತಿಳಿಸುತ್ತವೆ. ಮುಂದೆ ಅದು ಧರ್ಮ ಗುರುಗಳ ದೇಹವನ್ನು ಕಾಪಾಡಿಕೊಳ್ಳಲಿಕ್ಕೆ, 13ನೇ ಶತಮಾನದಲ್ಲಿ ರೋಮನ್ ದೊರೆ ಫ್ರೆಡ್ರಿಕ್ - 2  ತಾನು ಬೇಟೆಯಾಡಿದಂತಹ ಪ್ರಾಣಿ-ಪಕ್ಷಿಗಳ ದೇಹ ಕೆಡದಂತೆ ಇಟ್ಟುಕೊಂಡ ಎಂಬುದಾಗಿ ಆರ್ಟ್ ಆಫ್ ಹಂಟಿಂಗ್ ಎಂಬ ಪುಸ್ತಕದಲ್ಲಿ ಮಾಹಿತಿ ಸಿಗುತ್ತದೆ. ಆಗಿನ್ನೂ ಆವಿಷ್ಕಾರದ  ಹಂತದಲ್ಲಿದ್ದ ಈ ಚರ್ಮ ಪ್ರಸಾದನ ಕಲೆಯು ಆದಷ್ಟು ಬೇಗ ಕೆಟ್ಟುಹೋಗುತ್ತಿತ್ತು, ಕಾಲಕಳೆದಂತೆ 17ನೇ ಶತಮಾನದ ಆದಿಭಾಗದಲ್ಲಿ ವೈಜ್ಞಾನಿಕ ಆವಿಷ್ಕಾರಗಳು  ನಡೆದು, ಹೊಸ ವಿಧಾನ ಸಲಕರಣೆಗಳ ಮೂಲಕ ಚರ್ಮ ಪ್ರಸಾಧನ ಕಲೆಯ ಸುಧಾರಿಸಲಪಟ್ಟು ಅದೇ ಶತಮಾನದ ಅಂತ್ಯಭಾಗದಲ್ಲಿ ಉತ್ಕೃಷ್ಟ ಹಂತವನ್ನು ತಲುಪಿತು. 

18ನೇ ಶತಮಾನದ ಆದಿಭಾಗದಲ್ಲಿಯೇ ಬ್ರಿಟಿಷರ ವಸಾಹತುಶಾಹಿಗಳ ಒಳಗೆ ಇದ್ದಂತಹ ದೇಶಗಳಲ್ಲಿ ಹೇಳಹೆಸರಿಲ್ಲದಂತೆ ಪ್ರಾಣಿವಧೆ ಅದರಲ್ಲಿಯೂ ಕಾಡುಪ್ರಾಣಿಗಳ ವಧೆ ಉತ್ಕೃಷ್ಟ ಹಂತವನ್ನು ತಲುಪಿತು. ಈ ಕಾಡು ಪ್ರಾಣಿಗಳ ವಧೆಯಲ್ಲಿ ದೇಶಿ ರಾಜರ ಪಾಲು ಅರ್ಧಭಾಗದಷ್ಟಿತ್ತು. ಚರ್ಮ ಪ್ರಸಾದನ ಕಲೆ ಉತ್ಕೃಷ್ಟ ಹಂತದಲ್ಲಿದ್ದ ಈ ಸಮಯದಲ್ಲಿ ಪ್ರಾಣಿಗಳ ವಧೆಯು ಹೆಚ್ಚಾದ್ದರಿಂದ ಹೊಸ ಹೊಸ ವಾಣಿಜ್ಯ-ವ್ಯಾಪಾರ ಗಳೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ತೆರೆದುಕೊಂಡಿತು. ಮನುಷ್ಯನ ದುರಾಸೆಯಿಂದಾಗಿ ಭೂಮಿಯ ಮೇಲೆ ಅನೇಕ ಜೀವಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲು ಪ್ರಾರಂಭಿಸಿದವು, ಕೆಲವಂತೂ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡವು[ Dodo, Passanger pigeon, Great Auk, Heath hen, Pink headed duck, etc,, ] ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಕೂಡ ಈ ಕೃತ್ಯ ನಿಂತಿರಲಿಲ್ಲ 1972 Wildlife protection act ನಂತರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು, ಬೇಟೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಚರ್ಮ ಪ್ರಸಾದನ ಕಲೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು.

ನೀವು ಕೆಲವೊಮ್ಮೆ ಗಮನಿಸಿರಬಹುದು ದೊಡ್ಡ ದೊಡ್ಡ ಕ್ಲಬ್ ಹೌಸ್ ಗಳಿಗೆ ಹೋದಾಗಲೂ, ಎಸ್ಟೇಟ್ ಗಳ ದೊಡ್ಡ ಬಂಗಲೆಯಲ್ಲಿಯೋ, ಮಿಲಿಟರಿ ಆಫೀಸ್ಗಳಲ್ಲಿಯೂ, ಅರಮನೆಗಳಲ್ಲಿಯೋ ಪ್ರಾಣಿಗಳು ಯಥಾಸ್ಥಿತಿಯಲ್ಲಿ ನೈಜವಾಗಿ ಇರುವಂತೆಯೇ ಜೋಡಿಸಿರುತ್ತಾರೆ. ಮಠ-ಮಂದಿರಗಳ ಫೋಟೋ ಫ್ರೇಮ್ಗಳಲ್ಲಿ ಗುರುಗಳು ಹುಲಿ ಅಥವಾ ಜಿಂಕೆಯ ಚರ್ಮದ ಮೇಲೆ ಕುಳಿತಿರುವುದನ್ನು ನೋಡಿರಬಹುದು. ಇಂದು ಪ್ರಾಣಿಗಳ ಹಿತದೃಷ್ಟಿಯಿಂದ ಚರ್ಮ ಪ್ರಸಾದನ ಕಲೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಒಂದಾನೊಂದು ಕಾಲಕ್ಕೆ  ಪ್ರಪಂಚಕ್ಕೆ ಪ್ರಖ್ಯಾತವಾದ ಪ್ರಾಣಿ ಚರ್ಮ ಪ್ರಸಾಧನ ವ್ಯಾಪಾರ ವಹಿವಾಟು ನಡೆಸಿದವರು ಕರ್ನಾಟಕದಲ್ಲಿ ಅದರಲ್ಲಿಯೂ ಮೈಸೂರಿನಲ್ಲಿಯೇ ನೆಲೆಸಿ Van ingen company ಯನ್ನು ನಡೆಸಿದಂತಹ Edward Joubert van ingen. ಕಾಡು ಪ್ರಾಣಿಗಳ ವಧೆ ಉತ್ಕೃಷ್ಟ ಹಂತ ತಲುಪಿದ ಸಂದರ್ಭದಲ್ಲಿ ಇವರಿಗೆ ದೊರಕಿದಂತಹ ಪ್ರಾಣಿಗಳ ದೇಹದಿಂದಾಗಿ ( ಬಹುತೇಕ ಪ್ರಾಣಿಗಳು ನಮ್ಮ ನಾಗರಹೊಳೆ ಮತ್ತು ಬಂಡಿಪುರ, ಕಾಕನ ಕೋಟೆಯ ಸುತ್ತಮುತ್ತಲಿನವೆ ) ಇವರ ಹೆಸರು ಪ್ರಪಂಚದಾದ್ಯಂತ ಪ್ರಖ್ಯಾತಿಯನ್ನು ಪಡೆಯಿತು. ಇವರ ಕಂಪನಿ ಆಗಿನ ಕಾಲದಲ್ಲಿಯೇ ನೂರು ಜನರಿಗೆ ಉದ್ಯೋಗವನ್ನು ನೀಡಿತ್ತು. 



ಇಂದು ಈ ಕಲೆಯ ಬಗ್ಗೆ ತಿಳಿದುಕೊಳ್ಳೋ ಬೇಕೆಂದಾದಲ್ಲಿ ಆಂಗ್ಲ ಭಾಷೆಯನ್ನು ಅಥವಾ ನೆರೆ ರಾಷ್ಟ್ರಗಳನ್ನು ಅವಲಂಬಿಸಬೇಕು ಎನ್ನುವ ಮಾಹಿತಿ ಬಹಳ ಬೇಸರ ತರಿಸಿತು, ಹೋಗಲಿ Edward ಅವರ ಬಳಿಯೇ ತಿಳಿದುಕೊಳ್ಳೋಣವೆಂದರೆ 2013 ನೇ ಇಸವಿಯಲ್ಲಿ ತಮ್ಮ 101 ವರ್ಷದ ಜೀವನವನ್ನು ನಡೆಸಿ ಅಸುನೀಗಿದ್ದರು.

ಕೊನೆಗೆ ಬಹಳಷ್ಟು ದಿನ ಇಂಗ್ಲಿಷ್ ನಲ್ಲಿ ಮಾಹಿತಿಯನ್ನು ಕಲೆ ಹಾಕಿದ್ದಾಯಿತು, ಅಚ್ಚರಿಯ ವಿಷಯವೆಂದರೆ ಅಚಾನಕ್ಕಾಗಿ ಯಾವುದೋ ಒಂದು ಮಾಹಿತಿಯನ್ನು ಕಲೆಹಾಕುವಗ Indian only taxidermist - Dr. Santosh gaikwad, Mumbai Vertanary college  ಪ್ರಾಧ್ಯಾಪಕರು ಎಂಬ ವಿಷಯ ತಿಳಿಯಿತು, ವಿಷಯ ಸಮಾಧಾನ ತರಿಸಿತು ಏಕೆಂದರೆ ಅವರನ್ನು ಭಾರತದ ಏಕೈಕ Taxidermist ಎಂದಲ್ಲವೇ ? ಇದಾದ ಕೆಲವು ತಿಂಗಳ ನಂತರ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪ್ರಾಣಿ ವಸ್ತುಸಂಗ್ರಹಾಲಯದಲ್ಲಿ 2500 ಕ್ಕೂ ಮಿಗಿಲಾದ ಸತ್ತ ಪ್ರಾಣಿಗಳ ದೇಹವನ್ನು ನೈಜವಾಗಿ ಇರುವಂತೆ ಇಟ್ಟುಕೊಳ್ಳಲಾಗಿದೆ, ಇದು ದೇಶದ ಅತಿ ಹಳೆಯ ಸಂಗ್ರಹಾಲಯದೊಂದಿಗೆ, ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಸಂಗ್ರಹಾಲಯ ಎಂಬ ಮಾಹಿತಿಯೂ ತಿಳಿಯಿತು ಈ ನಿಟ್ಟಿನಲ್ಲಿ ಮ್ಯೂಸಿಯಂನ ಇಂಚಾರ್ಜ್ ಆಗದಂತಹ ನವೀನ್ ಅವರ ಸಂಪರ್ಕವುಆಯಿತು.ಫೋನ್ ಕರೆಯ ಮೂಲಕ ಮಾತನಾಡಿ ಮತ್ತಷ್ಟು ವಿಷಯ ತಿಳಿಯುವಂತಾಯಿತು. ಹೀಗೆ ಒಮ್ಮೆ ಫೋನ್ ಕರೆಯಲ್ಲಿ ಮಾತನಾಡುವಾಗ ಮೈಸೂರಿನಲ್ಲಿ ನೆಲೆಸಿರುವ ಮಂಜುಳಾ ಅವರನ್ನು ಭೇಟಿ ಮಾಡಿ ಎಂದು ಸಲಹೆಯನ್ನು ನೀಡಿದರು. ಕೊನೆಗೊಂದು ದಿನ ಸಮಯ ನಿಗದಿಪಡಿಸಿಕೊಂಡು ಮೇಡಮ್ ಅವರನ್ನು ಭೇಟಿ ಮಾಡಿದ್ದಾಯಿತು. ಈ ಭೇಟಿ ನನಗೆ ಎಷ್ಟು ಸಂತೋಷವನ್ನು ನೀಡಿತು ಎಂದರೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ನಮ್ಮ ಕನ್ನಡಿಗರಿದ್ದಾರೆಂದು ಸಂತೋಷ ತರಿಸಿತು.

ಮೂಲತಹ ಇವರ ತಾತನವರು ಮೈಸೂರು ಮಹಾರಾಜರ  ಶಿಕಾರಿಯ ಸಂದರ್ಭದಲ್ಲಿ ನೆರವಾಗುತ್ತಿದ್ದವರು, ಪ್ರಖ್ಯಾತರು, ಹಾಗೂ ಮಹಾರಾಜರಿಂದ ಬಿರುದನ್ನು ಪಡೆದವರು. ಇವರ ತಂದೆಯವರು Van ingen company ಯಲ್ಲಿ ಕೆಲಸವನ್ನು ನಿರ್ವಹಿಸಿದವರು. ಮಂಜುಳಾ ಮೇಡಮ್ ಅವರ ಬಾಲ್ಯವೆಲ್ಲವೋ ಈ ಕಂಪನಿಯಲ್ಲಿಯೇ ನಡೆದಿತ್ತು.ತಾತ ತಂದೆಯವರ ಕುಶಲಕಲೆಯಂತೆ ತಾವು ಚರ್ಮ ಪ್ರಸದನ ಕಲೆಯನ್ನು [ ಹೊಸ ಪ್ರಾಣಿಗಳಿಗೆ ಈ ಕಲೆಯನ್ನು ಮಾಡುವಂತಿಲ್ಲ  ಇಂದು ಅದು ಶಿಕ್ಷಾರ್ಹ ಅಪರಾಧ, ಈ ಮೊದಲೇ ಇರುವ ಪ್ರಾಣಿಗಳನ್ನು ಹಾಳಾಗದಂತೆ ಸಂರಕ್ಷಿಸಿಕೊಳ್ಳುವುದನ್ನು ] ಕರಗತ ಮಾಡಿಕೊಂಡರು. ಇವರು ದೇಶದ ನಾನಾ ಮೂಲೆಗಳಲ್ಲಿ ಕಲೆಯನ್ನು ಉಳಿಸಲಿಕ್ಕೆ ಕೆಲಸವನ್ನು ಮಾಡಿದವರು, ಎಷ್ಟೋ ಕಡೆ ಉಚಿತವಾಗಿಯೇ ಕೆಲಸವನ್ನು ಕಲೆ ಉಳಿಸಲಿಕ್ಕೋಸ್ಕರ ಮಾಡಿದರು. ಜೀವನವನ್ನೇ ಕಲೆ ಗೋಸ್ಕರ ಮೂಡುಪಾಗಿ ಇಟ್ಟಿರುವವರು. ಆದರೆ ಇವರ ಕೆಲಸ ಅಷ್ಟು ಸುಲಭದ್ದಾಗಿರಲಿಲ್ಲ, ಬಹಳಷ್ಟು ಕಡೆ ವಿರೋಧವನ್ನು ಎದುರಿಸಬೇಕಾಯಿತು, ತಮ್ಮ ತಾತನವರಿಗೆ ಬಳುವಳಿಯಾಗಿ ಬಂದಿದಂತಹ ಟ್ರೋಫಿಗಳನ್ನು ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಮುಟ್ಟುಗೋಲು ಮಾಡಿಕೊಂಡಿರು, ಕಲೆಯನ್ನು ಮುಂದುವರಿಸಬೇಕೆಂದರೆ ಲಂಚವನ್ನು ಕೊಡಬೇಕೆಂದು ಎಚ್ಚರಿಕೆಯನ್ನು ನೀಡಿದ್ದರು, ಬಹಳಷ್ಟು ದಿನ ಪೊಲೀಸ್ ಸ್ಟೇಷನ್, ಕೋರ್ಟು ಕಚೇರಿಯ ಮೆಟ್ಟಿಲು ಏರಬೇಕಾಯಿತು, ಇವರ ಹಾದಿ ಬಲು ಕಠಿಣವಾಗಿ ಕೆಲಸವನ್ನೇ ಬಿಟ್ಟುಬಿಡಬೇಕೆಂದು ನಿರ್ಧರಿಸಿದ್ದರು.

ಕಲೆ ಮುಂದಿನ ಪೀಳಿಗೆಗೆ ಉಳಿಯಬೇಕು, ಚರ್ಮ ಪ್ರಸಾದನ ಕಲೆಯ ಬಗ್ಗೆ ಜನರಿಗೆ ಅರ್ಥವಾಗಬೇಕು ಎಂದು ಕನ್ನಡದ ಕಟ್ಟಕಡೆಯ ಟ್ಯಾಕ್ಸಿಡಾರ್ನಿಸ್ಟ್ ಆದಂತಹ ಮಂಜುಳಾ ಅವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಇವರು ಮಾಡುವ ಕೆಲಸದ ಎಷ್ಟು ನೈಪುಣ್ಯತೆ ಹಾಗೂ ನೈಜತೆಯಿಂದ ಕೂಡಿರುತ್ತದೆ ಎಂದರೆ ಅವರ ಕೆಲಸವನ್ನು ನೋಡಬೇಕು ಅಷ್ಟು ಸೃಜನಶೀಲತೆಯಿಂದ ಕೆಲಸವನ್ನು ನಿರ್ವಹಿಸುತ್ತಾರೆ. ಒಂದು ಕಡೆ ಸರ್ಕಾರ ಇವರಿಗೆ ಕಲೆಯನ್ನು ಮಾಡಬಹುದು ಎಂದು ರಹದಾರಿಯನ್ನು ನೀಡಿದ್ದರೂ ಸಹ, ಮತ್ತೊಂದು ಇಲಾಖೆಯಿಂದ ಕಿರುಕುಳವನ್ನು ನೀಡಿದೆ. ಇಂದು ಅರಣ್ಯ ಇಲಾಖೆಯಲ್ಲಿಯೇ ಸಾವಿರಾರು ಸಂಖ್ಯೆಯ ಪ್ರಾಣಿಗಳ ಟ್ರೋಫಿಗಳು ಗೆದ್ದಲು ಹಿಡಿದು ಹಾಳಾಗುತ್ತಿದೆ, ಕನಿಷ್ಠ ಪಕ್ಷ ಅವುಗಳನ್ನುದರೂ ಸ್ವಚ್ಛಗೊಳಿಸಿ ಒಂದು ಮ್ಯೂಸಿಯಂಮಾಡಿ, fee collect ಮಾಡುವುದರೊಂದಿಗೆ, ಪ್ರವಾಸಿಗರಿಗೆ ಕಲೆಯ ಬಗ್ಗೆ ಮಾಹಿತಿಯ ತಿಳಿಯುತ್ತದೆ, ಸರ್ಕಾರದ ಬೊಕ್ಕಸಕ್ಕೆ ಆದಾಯ ಬಂದು ಸೇರುತ್ತದೆ ಎಂದು ಬಹಳಷ್ಟು ದಿನಗಳಿಂದ ಹೋರಾಡುತ್ತಿದ್ದಾರೆ ಆದರೆ ಯಾವುದೇ ಪಾಸಿಟಿವ್ ಮೂವ್ ಇದುವರೆಗೆ ಕಂಡುಬಂದಿಲ್ಲ. ಇವರಿಗೆ ಇಂದು ಬೇಕಾಗಿರುವುದು ಯಾವುದೇ ರಾಜಕಾರಣಿಗಳ ಆಶ್ವಾಸಗಳು ಅಲ್ಲ, ಯಾರೊಬ್ಬರ ಹಣಕಾಸಿನ ನೆರವು ಅಲ್ಲ ಬದಲಿಗೆ ಮೇಲೆ ತಿಳಿಸಿದ ಮ್ಯೂಸಿಯಂ ಕೆಲಸ ಆಗಿಬಿಟ್ಟರೆ ಮತ್ತೊಂದು ಮಜಲಿಗೆ ಕಲೆ ತಾನಾಗಿಯೇ ಹೋಗುತ್ತದೆ ಎನ್ನುತ್ತಾರೆ, ಇವರು ಕಲೆಯ ಮೇಲಿಟ್ಟಿರುವ ಗೌರವ, ಅಭಿಮಾನ ಅದಕ್ಕಿಂತ ಮಿಗಿಲಾಗಿ ಜ್ಞಾನಭಂಡಾರ ಅಪಾರವಾದದ್ದು. ಮಹಾರಾಜರ ಬೇಟೆಯಲ್ಲಿ ಇವರ ತಾತನವರು ನೆರವಾಗಿ ಬಿರುದನ್ನು ಪಡೆದದ್ದು,ಇವರ ತಂದೆಯವರ ಕಾಲದಲ್ಲಿ ಕಾಕನಕೋಟೆಯ ಕಾಡನ್ನು ಬಿಟ್ಟು ಮೈಸೂರಿಗೆ ಬಂದು ಸೇರಿದ್ದು, Edward ಅವರ Van ingen company ಯಲ್ಲಿ ಕೆಲಸಕ್ಕೆ ಸೇರಿದ್ದು, ಕಂಪನಿ ನಡೆಸುತ್ತಿದ್ದ ಜಾಗದ ಇಂದಿನ ಪರಿಸ್ಥಿತಿ, ಇದೆ ಕಂಪನಿಯಲ್ಲಿ ಮಂಜುಳಾ ಅವರು ತಮ್ಮ ಬಾಲ್ಯವನ್ನು ಕಳೆದ ನೆನಪುಗಳು, ಸ್ವತಂತ್ರ ಪೂರ್ವದಲ್ಲಿ ಕಂಪನಿಯನ್ನು ನಡೆಸುತ್ತಿದ್ದ ಬ್ರಿಟಿಷರು ತಮ್ಮ ಕೆಲಸಗಾರರನ್ನು ನೋಡಿಕೊಳ್ಳುತ್ತಿದ್ದಂತಹ ರೀತಿ, ಆಗಿನ ಕಾಲಕ್ಕೆ ಬ್ರಿಟಿಷರ ಧೋರಣೆ ನಿಲುವುಗಳು, ಸಾಕಿದರೆ ವಿದೇಶಿ ಜಾತಿಯ ಪ್ರಾಣಿಗಳನ್ನು ಸಾಕಬೇಕು ಎಂದು ವಿದೇಶಿ ಜಾತಿಯ ನಾಯಿ-ಬೆಕ್ಕು ಕುದುರೆ ಪ್ರಾಣಿಗಳನ್ನು ವೈಭವಯುತವಾಗಿ ನೋಡಿಕೊಳ್ಳುತ್ತಿದ್ದ ರೀತಿ, ತಮ್ಮ ದೇಶದವರು ಬಂದಾಗಲೂ ಹೊರಗಿನವರು ಬಂದಾಗಲೂ ಅವರು ನೋಡಿಕೊಳ್ಳುತ್ತಿದ್ದಂತಹ ರೀತಿ,Edward ಅವರ ಕುಟುಂಬ - ಮನೆತನ - ಜೀವನ, ಸ್ವಾತಂತ್ರಾನಂತರದ ಅವರ ಪರಿಸ್ಥಿತಿಗಳು, ಹೀಗೆ ಹತ್ತು ಹಲವು ಮಾಹಿತಿಯ ಬಗ್ಗೆ ಕೇವಲ ಒಂದು ಅಂಕಣ ಅಲ್ಲ ಒಂದು ಪುಸ್ತಕದ ಇವರ ಮನೆತನ ಹಾಗೂ ಕಲೆಯ ಬಗ್ಗೆ ಆಗುತ್ತದೆ ಎಂಬುದು ನನ್ನ ಭಾವನೆ.

ಪ್ರಾಣಿಗಳ ಮೃತದೇಹಗಳಿಗೆ ಜೀವಂತಿಕೆ ನೀಡುವಂತಹ ಇವರ ಕಲೆ ಉಳಿಸಲಿಕ್ಕೆ ಸರಕಾರ ಜೀವಂತಿಕೆಯನ್ನು ನೀಡಬೇಕಾಗಿದೆ.

ಧನ್ಯವಾದಗಳು.