ಹಳ್ಳಿಯೇ ಆಗಿರಲಿ ನಗರವೇ ಆಗಿರಲಿ ಜೀವನ ನಿರ್ವಹಣೆಗೆ ಆಹಾರ ಬಹಳ ಮುಖ್ಯವಾಗಿರುತ್ತದೆ, ಆದರೆ ಈ ಅಂಕಣದ ಪ್ರಸ್ತಾಪ ಆಹಾರದಲ್ಲಾ ಬದಲಿಗೆ ಬೇರೆಬೇರೆ ಪ್ರದೇಶಗಳಲ್ಲಿ ಜೀವನ ನಡೆಸುವಂತಹ ಚಿತ್ರಣದ ಗ್ರಹಿಕೆಯಾಗಿದೆ.
ನಗರದಲ್ಲಿ ಸಾಮಾನ್ಯವಾಗಿ ಕಾಣುವ ಒಂದು ಪುಟ್ಟ ಉದಾಹರಣೆಯ ಮೂಲಕ ಅಂಕಣವನ್ನು ಪ್ರಾರಂಭಿಸೋಣ, ದಂಪತಿಗಳಿಬ್ಬರು ನಗರದಲ್ಲಿ ಜೀವನವನ್ನು ನಡೆಸಲು ಪ್ರಾರಂಭಿಸಿದರು, ಗಂಡನಿಗೆ ಒಳ್ಳೆಯ ಕೇಂದ್ರ ಸರ್ಕಾರದ ನೌಕರಿಯಾಗಿದ್ದರಿಂದ ಬಹಳವೇನು ತಲೆಕೆಡಿಸಿಕೊಳ್ಳದೆ ಜೀವನ ಪ್ರಾರಂಭವಾಯಿತು,ವರ್ಷಗಳ ತರುವಾಯ ಮೂರು ಗಂಡು ಮಕ್ಕಳು ಜನಿಸಿದರು, ಇರುವ 4 ಜನ ಗಂಡು ಮಕ್ಕಳಿಗೆ ಯಾವುದೇ ರೀತಿಯ ಕೊರತೆಯಾಗಬಾರದೆಂದು ಆಸೆಯಿಂದ ಬಹಳ ಶ್ರೀಮಂತವಾಗಿ ಏನು ಅಲ್ಲದೆ ಹೋದರು ಎಲ್ಲರಂತೆ ಸಾಮಾನ್ಯವಾಗಿ ಬೆಳೆಸಲು ಪ್ರಯತ್ನಪಟ್ಟರು, ಚಿಕ್ಕವರಿಂದಲೇ ಒಳ್ಳೆ ಶಾಲಾ- ಕಾಲೇಜುಗಳಲ್ಲಿ ಓದಿಸಿದರು, ಸಹವಾಸದಂತೆ ಬುದ್ಧಿ ಎಂಬಂತೆ ಶ್ರೀಮಂತರ ಮನೆಯ ಹುಡುಗರ ಸಹವಾಸ ಸ್ವಲ್ಪ ಹಾದಿಯನ್ನು ತಪ್ಪಿಸಿತು, ಬೆಳೆದು ದೊಡ್ಡವರಾಗಿರುದನ್ನು ಕಂಡು ಮನೆಯವರೇ ನಿಂತು ಮದುವೆಯನ್ನು ಮಾಡಿ ಮುಗಿಸಿದರು, ಅಣ್ಣ-ತಮ್ಮಂದಿರ ಯಾವುದೇ ಸಮಸ್ಯೆ ಇಲ್ಲದೆ ಹೋದರೂ ಮದುವೆಯಾದ ಬಳಿಕ ಮನೆಗೆ ಸೊಸೆಯಂದಿರು ಸೇರುತ್ತಿದ್ದಂತೆ ನಿಧಾನವಾಗಿ ಜಗಳ ಪ್ರಾರಂಭವಾಗಿ, ಇಡೀ ಮನೆಯನ್ನು ಚಿದ್ರಗೊಳಿಸಿ, ಬಂದ ನಿವೃತ್ತಿ ಹಣವನ್ನು ಭಾಗ ಮಾಡಿಕೊಂಡು, ಅತ್ತೆ ಮಾವನವರನ್ನು old age home ಗೆ ಸೇರಿಸಲಾಯಿತು, ಅಲ್ಲಿ ಅವರು ಹೇಗೋ ಕೊರಗಿ ಕೊಂಡು ದಿನ ಕಲಿಯಲಾರಂಭಿಸಿದರು, ಇದು ನಗರದ ಚಿತ್ರಣವಾದರೆ ಹಳ್ಳಿಯ ಚಿತ್ರಣವೇ ಸಂಪೂರ್ಣವಾಗಿ ಸೌಮ್ಯವಾಗಿರುವಂತಹದ್ದು.
ಮನೆಯ ಹಿರಿಯರಿಗೆ ಮಕ್ಕಳೂ ಮೊಮ್ಮಕ್ಕಳೂ ಹಣ ಕೊಟ್ಟರೆ ಅದನ್ನು ಖರ್ಚು ಮಾಡಿದೆ ಪೆಟ್ಟಿಗೆಯಲ್ಲಿ ಇಟ್ಟುಕೊಂಡು, ಮನೆಗೆ ಕಷ್ಟ ಎಂದು ತಿಳಿದರೆ ಅದನ್ನು ಹಿಂದಿರುಗಿಸುತ್ತಾರೆ. ಅದರಲ್ಲಿಯೂ ಮನೆಯ ಹಿರಿಯ ಅಜ್ಜಿಯರ ಪಾತ್ರ ಬಹಳ ವಿಶಾಲವಾದದ್ದು, ಬೆಳಿಗ್ಗೆ ಸೂರ್ಯೋದಯವಾಗುವ ಮುನ್ನವೇ ಎದ್ದು ಹಾಲು ಕರೆದು ಎಲ್ಲರಿಗೂ ಕಾಫಿ ಮಾಡಿಕೊಟ್ಟು, ನೀರು ಕಾಯಿಸಿ ಮೊಮ್ಮಕ್ಕಳಿಗೆ ಸ್ನಾನ ಮಾಡಿಸಿ, ತಿಂಡಿ ಬಟ್ಟೆ ಪಾತ್ರೆ ಕೆಲಸಗಳಲ್ಲಿ ಮನೆಯವರೊಂದಿಗೆ ಕೈಜೋಡಿಸಿ, ತಮ್ಮ ಬಟ್ಟೆಯನ್ನು ತಾವೇ ಒಗೆದುಕೊಂಡು, ಶಿವಾ ಎಂದು ದೇವರಿಗೆ ಕೈಮುಗಿದು, ಮಕ್ಕಳು ಉಳುಮೆ ಕೆಲಸ ಮಾಡುತ್ತಿರುವ ಜಮೀನಿಗೆ ಹೋಗಿ ಕಾಳು, ಬೀಜವನ್ನು ಅಥವಾ ಕಳೆಯ ಕೆಲಸವನ್ನು ಮಾಡಿ, ಸಂಜೆ ಮನೆಗೆ ಹಿಂದಿರುಗುವಾಗ ತೋಟದ ಸುತ್ತ ಬೆಳೆದಿರುವಂತಹ ಸೊಪ್ಪು ತರಕಾರಿಗಳನ್ನು ಕಿತ್ತುತಂದು ಬಿಸಿಬಿಸಿ ಅಡುಗೆಯನ್ನು ಮಾಡಿ ಎಲ್ಲರಿಗೂ ಉಣಬಡಿಸುತ್ತಾರೆ, ಇಷ್ಟರಲ್ಲೇ ಅವರ ದಿನಚರಿ ಮುಗಿದುಹೋಗುತ್ತದೆ ಎಂದುಕೊಂಡರೆ ಅದು ನಮ್ಮ ತಪ್ಪುಗ್ರಹಿಕೆ ಆಗುತ್ತದೆ, ನಿಜಕ್ಕೂ ಮನೆಯ ಹಿರಿಯ ಅಜ್ಜಿಯವರು ಮಾಡುವ ಕೆಲಸಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ ಅವುಗಳಲ್ಲಿ ಕೆಲವೆಂದರೆ:
1 ಬೆಳೆ ಕಟಾವಾದ ಬಳಿಕ ಮುಂದಿನ ಬೆಳೆಗೆ ಬೇಕಾದಂತಹ ಉತ್ತಮ ಬೀಜಗಳನ್ನು ಸಂರಕ್ಷಿಸಿ ಇಡುತ್ತಾರೆ.
2 ಹರಳಿನ ಗಿಡ ಬೀಜವಿಡಿಯುವ ಕಾಲದಲ್ಲಿ, ಎಲ್ಲವನ್ನು ಒಣಗಿಸಿ ವರ್ಷಕ್ಕೆ ಬೇಕಾಗುವಷ್ಟು ಎಣ್ಣೆ ತೆಗೆಯುತ್ತಾರೆ.
3 ಮನೆಯ ಸುತ್ತ ನಾಲ್ಕಾರು ಬಗೆಯ ಹೂವು, ಹಣ್ಣಿನ ಗಿಡಗಳನ್ನು ಬೆಳೆಸಿ ದೇವರ ಪೂಜೆಗೆ ಸಮರ್ಪಿಸುತ್ತಾರೆ.
4 ಮನೆಗೆ ಬೇಕಾದಂತಹ ಅಂಚಿನ ಕಡ್ಡಿ ಪುರಕೆಯನ್ನು ತೆಂಗಿನಗರಿಯಲ್ಲಿ ಮಾಡಿಕೊಳ್ಳುತ್ತಾರೆ.
5 ಕಾಲು ಹೊರೆಸುವ ಮ್ಯಾಟ್, ಚಾಪೆ ಹಾಗೂ ಕೆಲವು ಬಾರಿ ಮಕ್ಕಳಿಗೆ ಸ್ವೆಟರು, ಬಿದುರಿನ ಬುಟ್ಟಿ ಮಾಡುತ್ತಾರೆ.
6 ಚಳಿಗಾಲಕ್ಕೆ ಬೇಕಾದಂತಹ ದಟ್ಟವನ್ನು ಒಲಿಯುತ್ತಾರೆ.
7 ಒಗೆದ ಬಟ್ಟೆಗಳನ್ನು ಇಸ್ತ್ರಿ ಮಾಡಿದ ರೀತಿಯಲ್ಲಿ ಮಡಚಿ ಇಡುತ್ತಾರೆ.
8 ಕಾಳುಗಳಲ್ಲಿ ಸೇರಿರುವಂತಹ ಕಸ ಕಡ್ಡಿಯನ್ನು ಹೆಕ್ಕಿ ಶುಚಿಗೊಳಿಸುತ್ತಾರೆ.
9 ಮನೆಗೆ ಬರುವಂತಹ ಗುಬ್ಬಿಗಳಿಗೆ ಅಕ್ಕಿಕಾಳು ಹಾಕುತ್ತಾರೆ.
10 ಕೋಳಿ, ಆಡು, ಮೇಕೆ, ಹಸು, ದನಕರುಗಳನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾರೆ.
11 ದೇವರ ಪೂಜೆಗೆ ಬೇಕಾದಂತಹ ಗೆಜ್ಜೇವಸ್ತ್ರ ದೀಪದ ಬತ್ತಿಯನ್ನು ಜಮೀನಿನಲ್ಲಿ ಬೆಳೆದ ಹತ್ತಿಯನ್ನು ಕಿತ್ತುತಂದು ತಯಾರಿಸುತ್ತಾರೆ.
12 ಹಬ್ಬಗಳಿಗೆ ಸರಿಹೊಂದುವ ಅಡುಗೆಯನ್ನು ಹೇಳಿಕೊಡುತ್ತಾರೆ.
13 ಚಿಕ್ಕಮಕ್ಕಳಿಗೆ ಪ್ರೊಟೀನ್ ಅಂಶ ಒದಗಿಸುವಂತಹ ರಾಗಿ ಅಂಬಲಿ, ಕಾಳು ಪಲ್ಯಗಳನ್ನು ಮಾಡಿಕೊಡುತ್ತಾರೆ.
14 ಮನೆಯಲ್ಲಿ ಯಾರಿಗಾದರೂ ಹುಷಾರು ಇಲ್ಲದೆ ಹೋದರೆ ಪ್ರಥಮ ಚಿಕಿತ್ಸೆ ಮಾಡುತ್ತಾರೆ.
15 ಮೊಸರು ಕಡೆದು, ಬೆಣ್ಣೆ ತೆಗೆದು, ತುಪ್ಪ ತಯಾರಿಸುತ್ತಾರೆ.
16 ಮಳೆಗಾಲಕ್ಕೆ ಬೇಕಾದಂತಹ ಕಾರದಪುಡಿ, ಸಂಡಿಗೆ ಅನ್ನ ಬೇಸಿಗೆಯಲ್ಲಿ ಮಾಡಿಟ್ಟುಕೊಳ್ಳುತ್ತಾರೆ.
17 ಮದುವೆ, ಹಬ್ಬಹರಿದಿನಗಳಲ್ಲಿ ಮನೆಗೆ ಬರುವಂತಹ ಅತಿಥಿಗಳನ್ನು ಆದರದಿಂದ ಯೋಗಕ್ಷೇಮ ವಿಚಾರಿಸುತ್ತಾರೆ, ಹಾಗೂ ಮನೆಗೆ ಬಂದ ಪ್ರತಿಯೊಬ್ಬರಿಗೂ ಏನಾರು ಕೊಟ್ಟು ಕಳಿಸುತ್ತಾರೆ.
18 ಗಣಪತಿ ಹಬ್ಬಕ್ಕೆ ಬೇಕಾದಂತಹ ಎಳ್ಳು, ಸಂಕ್ರಾಂತಿ ಹಬ್ಬಕ್ಕೆ ಬೇಕಾದಂತಹ ಕೊಬ್ಬರಿ ಬೆಲ್ಲ, ನಾಗರಪಂಚಮಿಗೆ ಬೇಕಾದಂತಹ ತಂಬಿಟ್ಟನ್ನು ತಯಾರಿಸುತ್ತಾರೆ.
19 ಮನೆಯಲ್ಲಿ ಜನಿಸುವಂತಹ ಮಗುವಿನ ಆರೈಕೆ ಕಾಳಜಿ ಪೋಷಣೆ ಎಲ್ಲವನ್ನು ನೋಡಿಕೊಳ್ಳುತ್ತಾರೆ.
20 ಮೊಮ್ಮಕ್ಕಳುಗಳಿಗೆ ಆಟಿಕೆಯನ್ನು ತಯಾರಿಸಿಕೊಡುತ್ತಾರೆ.
21 ಮಕ್ಕಳು ಪೀಡಿಸಿದಾಗ ಕಥೆ ಹೇಳುತ್ತಾರೆ.
22 ಬೇಸಿಗೆ ಸಮಯದಲ್ಲಿ ಮೊಮ್ಮಕ್ಕಳೊಂದಿಗೆ ಪ್ರಾಂಗಣದಲ್ಲಿ ಮಲಗುತ್ತಾರೆ.
23 ತಮಗೆ ಆರೋಗ್ಯ ಸರಿ ಇಲ್ಲದೆ ಹೋದರೆ ಊಟ ತಿಂಡಿಗಳಲ್ಲಿಯೇ ಸರಿಪಡಿಸಿಕೊಳ್ಳುತ್ತಾರೆ.
ಹೀಗೆ ಮನೆಯ ಹಿರಿಯ ಅಜ್ಜಿಯಂದಿರು ತಮ್ಮ ಕೆಲಸವನ್ನು ತಾವೇ ಮಾಡಿಕೊಂಡು ಯಾರಿಗೂ ಹೊರೆಯಾಗದೆ ಮರೆಯಾಗುತ್ತಾರೆ. ಇದೆ ಅಲ್ಲವೆ ಸ್ವಾವಲಂಬಿ ಜೀವನ ಎಂದರೆ.
ನಮ್ಮಲ್ಲಿ ಪೋಷಕರು ಕಾರಣಾಂತರಗಳಿಂದ ನಗರಕ್ಕೆ ವಲಸೆ ಬಂದರೂ ಕೂಡ ಅಜ್ಜಿ-ತಾತನವರೊಂದಿಗೆ ಬೆಳೆಸಿದ್ದಾರೆ ಹಾಗೂ ಅವರು ನಮ್ಮನ್ನು ಪ್ರೀತಿಯಿಂದ ಸಾಕಿ ಸಲಹಿದ್ದಾರೆ, ಆದರೆ ಇಂದು ನಗರದಲ್ಲಿ ದಿನೇದಿನೇ ಚಿತ್ರಣ ಬದಲಾಗುತ್ತಲಿದೆ, ಹಿರಿಯರೆಲ್ಲರೂ ಇಂದು old age home ಹಾಗೂ ಮಕ್ಕಳಿಗೆಲ್ಲರಿಗೂ Mobile ನಾಜಮಾನವಾಗಿಬಿಟ್ಟಿದೆ, ಎಂದು ಮೊಮ್ಮಕ್ಕಳ ಪ್ರೀತಿ ಹಿರಿಯರಿಗೆ ಹಾಗೂ ಹಿರಿಯರು ಪ್ರೀತಿಯ ಮೊಮ್ಮಕ್ಕಳಿಗೆ ದೊರಕುವುದಿಲ್ಲವೋ ಅಂದು ಜನರು ಮಾನಸಿಕ ಕಾಯಿಲೆಗೆ ಬಲಿಯಾಗುತ್ತಾರೆ, ಇಂತಹ ಅನೇಕ ಪ್ರೀತಿಗಳಿಂದ ಮುಕ್ತವಾಗಿರುವಂತಹ ಇಂದಿನ ಪೀಳಿಗೆ ಭವಿಷ್ಯದ ಅರಿವಿಲ್ಲದೆ, ಮುಂದೊಂದು ದಿನದ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಲು ಸಜ್ಜಾಗುತ್ತಲಿದ್ದಾರೆ, ಆ ಭವಿಷ್ಯದ ರಾಷ್ಟ್ರ ನಿರ್ಮಾಣದ ದಿನಗಳಿಗೆ ಇಂದಿನಿಂದಲೇ ದಿನಗಣನೆ ಪ್ರಾರಂಭವಾಗಿದೆ.
ಅಜ್ಜಿ-ತಾತ ಸಂಬಂಧಿಕರ ಪ್ರೀತಿ ಎಂಬುವುದು ಒಂದು ರೀತಿಯ ಪರಿಸರದ ವ್ಯವಸ್ಥೆ ಇದ್ದ ಹಾಗೆ, ಇದನ್ನ ಅಳಿಸಿ ನಾವೇನನ್ನು ಸಾಧನೆ ಮಾಡಲು ಹೊರಟಿದ್ದೇವೆ ಎನ್ನುವುದಂತೂ ತಿಳಿಯದು, ನೀವೊಮ್ಮೆ ಯೋಚಿಸಿ.
ಧನ್ಯವಾದಗಳು.
ಎಸ್ ಪಿ ತೇಜರಾಜು.
ಸಾವಿರದಮರ ಪರಿಸರಾಸಕ್ತ ಯುವಜನತೆ.








