Saturday, July 25, 2020

ಇವರುಗಳಿಗೆ ಉತ್ತರಿಸುವವರಾರು?

                          ಎಸ್ ಪಿ ತೇಜರಾಜು.

 ಆಷಾಢ ಮಾಸ ಬಂತೆಂದರೆ ಸಾಕು ಎಲ್ಲಾ ಸಸ್ಯ ಕೋಟಿ ಜೀವಸಂಕುಲಗಳಿಗೆ ಸಂತಸದ ಕಾಲ, ತಂಪಾದ ಗಾಳಿ, ಸೋನೆಮಳೆ ಯಾವ ಸಮಯದಲ್ಲಾದರೂ ಸುರಿಯಬಹುದು,ಇದೆ ಮಾಸಕ್ಕೆ ಸಂಬಂಧಿಸಿದಂತೆ ಮೂರು ಮಳೆನಕ್ಷತ್ರಗಳು ಸಾಧಾರಣ ಆದ್ರಾ೯ ಮಳೆ ಸಂಪೂರ್ಣ ಪುನರ್ವಸು ಹಾಗೂ ಭಾಗಶಃ ಪುಷ್ಯ ಮಳೆ. ಈ ಆಷಾಢ ಮಾಸವು ಖಗ-ಮೃಗ, ಪಶು-ಪಕ್ಷಿ, ಕ್ರಿಮಿ-ಕೀಟ, ಸಸ್ಯಗಳೊಂದಿಗೆ ಮಾನವರಿಗೂ ಕೂಡ ಚೈತನ್ಯವನ್ನು ನೀಡುವಂತಹದ್ದು ಪ್ರತಿ ಶುಕ್ರವಾರ ತಾಯಿ ಚಾಮುಂಡೇಶ್ವರಿಯ ಆರಾಧನೆ, ಮೈಸೂರು ರಾಜಮನೆತನದವರಿಂದ ಚಾಮುಂಡಿಬೆಟ್ಟದಲ್ಲಿ ವೈಭವೋಪೇರಿತವಾದ ವರ್ಧಂತಿ ಉತ್ಸವ, ಪೂಜೆ ಪುನಸ್ಕಾರಗಳು ನಡೆಯುತ್ತದೆ, ನೂರಾರು ಭಕ್ತಮಂಡಳಿಗಳಿಂದ ಪ್ರಸಾದ, ಸಿಹಿ ವಿತರಣೆ ಸಾಮಾನ್ಯವಾಗಿ ಎಲ್ಲ ಕಡೆಯೂ ನಡೆಯುವಂತಹದ್ದು. ಈ ಎಲ್ಲ ಚಟುವಟಿಕೆಗಳು ಸುಖ, ಶಾಂತಿ, ಸಮೃದ್ಧಿಯ ಸಂಕೇತವಾಗಿದೆ.

 ಇಂದು ಆಷಾಢಮಾಸ ಕೃಷ್ಣಪಕ್ಷದ ತ್ರಯೋದಶಿ[ ಬರೆಯುತ್ತಿರುವ ದಿನದಂದು] ಎಂದಿನಂತೆ ಸೂರ್ಯ ಮುಳುಗಿ ಕತ್ತಲಾವರಿಸುತ್ತಿತ್ತು ಎಲ್ಲಾ ಪಕ್ಷಿಗಳು ಸುಶ್ರಾವ್ಯವನ್ನು ನಿಲ್ಲಿಸಿ ಗೂಡುಸೇರಿದ್ದವು, ಮೌನ ಹೆಚ್ಚಾಗಿ ಕತ್ತಲು ಗಾಢವಾಗುತ್ತಿತ್ತು, ಗೂಬೆ, ಬಾವಲಿಗಳು ಆಕಾಶದಲ್ಲಿ ಹಾರಾಡತೊಡಗಿದವು, ಹೆಗ್ಗಣ, ಹಂದಿ ಇನ್ನಿತರ ನಿಶಾಚರ ಪ್ರಾಣಿಗಳು ಆಹಾರವನ್ನು ಹುಡುಕುವ ಕಾಯಕದಲ್ಲಿ ಮಗ್ನವಾಗಿದ್ದವು.

  ಎಂದಿನಂತೆ ಸುತ್ತಮುತ್ತಲಿನ ಜನರು ದಿನನಿತ್ಯದ ಕಾಯಕವನ್ನು ಮುಗಿಸಿ ಊಟ ಮಾಡಿ ನಿದ್ದೆಯಲ್ಲಿ ಜಾರಿದ್ದರು. ನಡುರಾತ್ರಿ ಇರಬಹುದು ಆದರೆ ಸರಿಯಾಗಿ ಸಮಯ ತೋಚದು ಒಂದರ ಹಿಂದೆ ಮತ್ತೊಂದರಂತೆ 20ರಿಂದ 30 ನಾಯಿಗಳು ಬೊಗಳುತ್ತಿದ್ದವು. ಈ ನಿಶಬ್ದ ವಾತಾವರಣದಲ್ಲಿ ಇಷ್ಟು ಪ್ರಮಾಣದ ಶಬ್ದ ಒಮ್ಮೆಲೆ ಕಿವಿಯೊಳಗೆ ತೋರಿದ್ದರಿಂದ ನಿದ್ದೆ ಪಟ್ಟನೆ ಹಾರಿಹೋಯಿತು.  ಈ ಹಾಳು ಸುಡುಗಾಡು ನಾಯಿಗಳಿಗೆ ಏನು ಬಂದಿದೆಯೋ ತೋಚದು ಇಷ್ಟುಹೊತ್ತಿನಲ್ಲಿ ಇವುಗಳ ಕಣ್ಣಿಗೆ ಏನು ಗೋಚರಿಸಿತೋ ತಿಳಿಯದು ಅಮಾವಾಸ್ಯೆಯ ರಾತ್ರಿಗೆ ಕೇವಲ ಒಂದು ರಾತ್ರಿ ಉಳಿದಿರುವುದು ಅದಕ್ಕೇನಾದರೂ ಇವುಗಳು ಈ ರೀತಿ ಬೊಗಳುತ್ತಿವೆಯೇ? ಅಥವಾ ಯಾರಾದರೂ ಇಷ್ಟುಹೊತ್ತಿನಲ್ಲಿ ಓಡಾಡುತ್ತಿದ್ದಾರೆಯೇ? ಏನಾದರೂ ಕಳ್ಳಕಾಕರು ಇದ್ದಿರಬಹುದೇ? ನಿಜವಾಗಿಯೂ ಏನಾದರೂ ದೆವ್ವ ಭೂತಗಳು ಈ ನಾಯಿಗಳ ಕಣ್ಣಿಗೆ ಪ್ರತ್ಯಕ್ಷವಾಗಿಬಿಟ್ಟವೆ? ಹೀಗೆ ಹತ್ತಾರು ಪ್ರಶ್ನೆಗಳು ತಲೆಯನ್ನು ತೋರಿ ನಿದ್ದೆಯನ್ನು ಕೆಡಿಸುತ್ತಿದ್ದವು.

 ಹಾಸಿಗೆಯಿಂದ ಎದ್ದು ಮನೆಯ ಮುಖ್ಯದ್ವಾರದ ಪಕ್ಕದ ಕಿಟಕಿಯನ್ನು ತೆಗೆದು ಬೆಳಕು ಹತ್ತಿಸಿ ನೋಡಿದ್ದಾಯಿತು. ನಾಯಿಗಳು ಮತ್ತಷ್ಟು ಜೋರಾಗಿ ಬೋಗಳಲಾರಂಬಿಸಿದವು. ಒಂದೆರಡು ಬಾರಿ ಗದರಿಸಿದಾಗ ಸ್ವಲ್ಪ ಪ್ರಮಾಣದಲ್ಲಿ ನಾಯಿಗಳು ಕೂಗುವುದನ್ನು ನಿಲ್ಲಿಸಿದವು 15 ನಿಮಿಷಗಳ ಬಳಿಕ ಮತ್ತೆ ಕೂಗಲಾರಂಭಿಸಿದವು ಕೋಪ ನೆತ್ತಿಗೇರಿ ಬಾಗಿಲು ತೆಗೆದು ಅವುಗಳನ್ನು ಓಡಿಸಿ ಬರೋಣವೆಂದು ನಿರ್ಧರಿಸಿದೆ. ಬಾಗಿಲು ತೆಗೆಯುವ ಶಬ್ದಕ್ಕೆ ಮನೆಯವರು ಎಚ್ಚರವಾಗಿ ಅವರ ನಿದ್ದೆಯು ಹಾಳಾಗುತ್ತದೆ ಎಂದು ಭಾವಿಸಿ ಸುಮ್ಮನೆ ಹೋಗಿ ಮಲಗಿದೆ.

 ಒಂದೈದು ನಿಮಿಷ ನಾಯಿಗಳು ಬೊಗಳುವುದನ್ನು ಮುಂದುವರೆಸಿದವು ಮತ್ತೊಮ್ಮೆ ಗದರಿಸಿದಾಗ ಎಲ್ಲವೂ ಸುಮ್ಮನಾದವು ಇದಾದ ಬಳಿಕ ನಿಶಬ್ದ, ಮೌನ, ಬಳಿಕ ಕಪ್ಪೆಗಳ ಹಿಂಡು ವಟಗುಡಲಾರಂಭಿಸಿದವು, ಪಕ್ಕದ ಮನೆಯ ವಯಸ್ಸಾದ ಮುದುಕ ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ ಸತ್ತು ಹೋಗುವವನ ರೀತಿಯಲ್ಲಿ ಕೆಮ್ಮುತ್ತಿದ್ದ, ಇನ್ನೆಲ್ಲೋ ದೂರದಲ್ಲಿ ಬೆಕ್ಕುಗಳು ಅರಚುತ್ತಿದ್ದವು, ಇನ್ನಾರದೋ ಮನೆಯಲ್ಲಿ ನಲ್ಲಿಯ ನೀರು ಒಂದೇ ಸಮನೆ ಸೋರಿಹೋಗುತ್ತಿತ್ತು. ಬಾವಲಿಗಳು ಚಿರುತಿದ್ದವು. ಈ ಎಲ್ಲ ಶಬ್ದಗಳ ನಡುವೆ ನಿದ್ದೆ ಸಂಪೂರ್ಣವಾಗಿ ಭಗ್ನಗೊಂಡು ಹಾಸಿಗೆ ಮೇಲೆ ಹೊರಳಾಡುವಂತೆಮಾಡಿತು.

 ಸಾಮಾನ್ಯವಾಗಿ ರಾತ್ರಿ ಹೊತ್ತು ನಾಯಿಗಳು ಬೊಗಳುತ್ತಿದ್ದವು ಆದರೆ ಎಂದೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ ಆದರೆ ಇಂದು ಬೊಗಳಿದ ನಾಯಿ ನಮ್ಮ ರಸ್ತೆಯದ್ದೆ ಆಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಂದಲೂ ಕೂಡ ಪ್ರೀತಿಯನ್ನು ಸಂಪಾದಿಸಿತ್ತು. ಇದಕ್ಕೊಂದು ನಿಯತ್ತಿನ ಬುದ್ಧಿ ಇತ್ತು ಅದರ ಊಟದ ಬಟ್ಟಲಿಗೆ ಹಾಕಿದರೆ ಮಾತ್ರವೇ ಅದು ಊಟ ಮಾಡುತ್ತಿತೆ ಹೊರತು ಯಾವ ಮಕ್ಕಳ ಕೈಯಿಂದ ಎಂದೂ ಬಿಸ್ಕೆಟ್ ಆಗಲಿ ಮತ್ತೊಂದನ್ನೇ ಆಗಲಿ ಕಿತ್ತು ತಿಂದಿರುವುದನ್ನು ಯಾರೂ ನೋಡಿರಲಿಲ್ಲ. ಮಕ್ಕಳಿಗೂ ಈ ನಾಯಿಯನ್ನು ಕಂಡರೆ ಅಷ್ಟೇ ಅಕ್ಕರೆ. ಮಕ್ಕಳು ಆಟವಾಡುತ್ತಿರುವಾಗ ಅವರ ಬಳಿ ಹೋಗುತ್ತಿತ್ತು ಮಕ್ಕಳೆಲ್ಲರೂ ಸೇರಿ ಅದಕ್ಕೆ ಕುಂಕುಮ ಬಳಿದು ಕೂದಲು ಬಾಚಿ ಕಳಿಸುತ್ತಿದ್ದರು. ಯಾರಾದರೂ ದೊಡ್ಡವರನ್ನು ಕಂಡರೆ ಬಾಲಮುದುಡಿಕೊಂಡು ಅವರ ಹಿಂದೆ ನಡೆದುಕೊಂಡು ಹೋಗುತ್ತಿತ್ತು.

 ಈ ಹೆಣ್ಣು ನಾಯಿ ಮೂಲತಃ ನಮ್ಮ ನಗರದೇನಲ್ಲ. ಯಾರದೋ ಶ್ರೀಮಂತರ ಮನೆಯವರದಾಗಿರಬೇಕೆಂದೆನಿಸುತ್ತದೆ. ಈಗ ಇದಕ್ಕೆ ಒಂದು ಹತ್ತು ವರ್ಷದ ಆಜುಬಾಜಿನ ವಯಸ್ಸಾಗಿರಬಹುದು. ಎಂದೋ ತಪ್ಪಿಸಿಕೊಂಡು ನಮ್ಮ ರಸ್ತೆಗೆ ಸೇರಿ ಅದು ಸುಮಾರು ಏಳು ವರ್ಷಗಳನ್ನೇ ಕಳೆದಿತ್ತು. ಆಯಾಸಗೊಂಡ ನಾಯಿಯನ್ನು ಕಂಡು ಯಾರೋ ಎರಡು ಮೂರು ದಿನ ಹಾಲು ನೀಡಿದ್ದರಿಂದ ಈ ರಸ್ತೆಯ ಸ್ವಂತ ನಾಯಿಯಾಗಿ ಉಳಿಯಿತು. ದೀಪಾವಳಿಯ ಪಟಾಕಿ ಶಬ್ದವೆಂದರೆ ಇದಕ್ಕೆ ಬಹಳ ಹೆದರಿಕೆ ಕೆಲವು ವರ್ಷಗಳ ಹಿಂದೆ ಪಟಾಕಿಯ ಶಬ್ದ ಮಿತಿಮೀರಿದಾಗ ಎಲ್ಲೋ ಕಾಣೆಯಾಗಿತ್ತು. ಮೂರ್ನಾಲ್ಕು ದಿನ ಯಾರ ಕಣ್ಣಿಗೂ ಬಿದ್ದಿರಲಿಲ್ಲ, ಮಕ್ಕಳೆಲ್ಲರೂ ಹುಡುಕಲಾರಂಭಿಸಿದರು ಯಾರೋ ದಾರಿಹೋಕರ ಕಣ್ಣಿಗೆ ರಾಜಕಾಲುವೆಗಳ ಕೆಸರಿನಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು ಕಂಡರು. ಇದಾದಬಳಿಕ ಕೆಸರಿನಲ್ಲಿ ಸಿಲುಕಿದ ಈ ನಾಯಿಗೆ ಬಿಸಿನೀರಿನ ಸ್ನಾನ ಹಾಲು, ಬನ್ನು, ಬಿಸ್ಕೆಟ್ಟು ಎಲ್ಲವನ್ನೂ ನೀಡಿದ್ದರಿಂದ ಮಾರನೆದಿನ ಎದ್ದು ನಡೆಯಲಾರಂಭಿಸಿತು. ಇಂತಹ ಅನೇಕ ಘಟನೆಗಳಿಂದಾಗಿ ಈ ನಾಯಿ ಎಲ್ಲರಿಗೂ ಚಿರಪರಿಚಿತ. ಇಷ್ಟೆಲ್ಲಾ ಪ್ರೀತಿಪಾತ್ರವಾದ ನಾಯಿಗೆ ಎಲ್ಲರೂ ಮುದ್ದಾಗಿ ಅವಲಕ್ಕಿ ಎಂದು ಕರೆಯುತ್ತಿದ್ದರು.

 ಈ ನಾಯಿ ಬೊಗಳಿದ್ದರಿಂದಲೇ ನನಗೆ ಸಂಶಯವಿನಿಸಿತೆ ಹೊರತು ಮತ್ತೇನಲ್ಲ. ಹೇಗೋ ರಾತ್ರಿ ಕಳೆದು ಬೆಳಕರೆಯಲಾರಂಭಿಸಿತು ಸುಮಾರು 5.30 ಬೆಳಗಿನ ಜಾವ ಒಂದು ಕಡೆ ಕೋಳಿಗಳು ಕೂಗುತ್ತಿದ್ದವು ಇನ್ನೊಂದು ಕಡೆ ನವಿಲು, ಪಕ್ಷಿಗಳು ಇoಪಾದ ಗಾನವನ್ನು ಮೊಳಗಿಸುತ್ತಿದ್ದವು. ಹಸುಗಳು ಅಂಬಾ ಎಂದು ಕೂಗುತ್ತಿದ್ದವು ಅಲ್ಲಲ್ಲಿ ನಾಯಿಗಳು ನಗರದ ಪ್ರದಕ್ಷಿಣೆ ಮಾಡುತ್ತಿದ್ದವು. ಈ ಹಸುಗಳನ್ನು ಸಾಕಿದವರು ಒಂದು ಹಸಿವಿಗೆ ಒಂದು ನಾಯಿಯಂತೆ ಹಸುಗಳು ಮೇಯಲು ಹೋದಾಗ ಅವುಗಳನ್ನು ಕಾಯುವಂತೆ ನಾಯಿಗಳನ್ನು ಪಳಗಿಸಿದ್ದರು ಈ ರೀತಿಯ ನಾಯಿಗಳೇ 15ರಿಂದ 20ರ ಮೇಲಿತ್ತು.

 ದನಕಾಯುವ ಕಾಯಕದಲ್ಲಿ ಪಳಗಿದ್ದ ನಾಯಿಗಳ ಪೂರ್ವಜರೆಲ್ಲರೂ ಇಲ್ಲಿಯ ಗದ್ದೆ ತೋಟಗಳಲ್ಲಿ ಹಾರಿ, ನೆಗೆದು, ನುಸುಳಿ ಬೆಳೆದಿದ್ದವು ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಗೆದ್ದು ಬರುತ್ತಿದ್ದವು. ಇಲ್ಲಿಯ ಹಾವು-ಮುಂಗುಸಿ, ತೋಳಗಳು ಜೊತೆ ಸೆಣೆಸಾಡಿ ಜಯಶಾಲಿಯಾಗಿದ್ದವು. ಎಲ್ಲಾ ಸೂಕ್ಷ್ಮತೆಯನ್ನು ಗ್ರಹಿಸುವಂತಹ ಪ್ರಾಣಿಗಳಾಗಿದ್ದವು.

 15 ರಿಂದ 20 ವರ್ಷಗಳ ಹಿಂದೆ ಈ ಪ್ರದೇಶದ ಒಂದು ಭಾಗದಲ್ಲಿ ಭತ್ತ, ಕಬ್ಬನ್ನು ಬೆಳೆಯುತ್ತಿದ್ದರು. ಮತ್ತೊಂದು ಕಡೆ ಪುದಿನಾ, ಮೂಲಂಗಿ, ಸೊಪ್ಪು, ತರಕಾರಿಗಳನ್ನು ಕೂಡ ಬೆಳೆಯುತ್ತಿದ್ದರು. ಇದರ ಪಕ್ಕದಲ್ಲಿಯೇ ಮರಗಳು ಒತ್ತೊತ್ತಾಗಿ ಬೆಳೆದು ಕಾಡಿನಂತೆ ಗೋಚರಿಸುತ್ತಿತ್ತು ನೂರಾರು ವರ್ಷಗಳ ದೈತ್ಯ ಮರಗಳು ಇಲ್ಲಿದ್ದವು. ಇನ್ನ ಸುತ್ತಮುತ್ತಲು ತೆಂಗು, ಬಾಳೆ, ಅಡಿಕೆ, ವೀಳ್ಯ, ಮಾವು, ಹಲಸು, ಸೀಬೆ, ಹೇರಳಿ, ಬ್ಯಾಲ, ಬಿದಿರಿನ ಜೊತೆಗೆ ಅರಳಿ, ಹತ್ತಿ,ಆಲದ ಮರಗಳನ್ನೊಳಗೊಂಡ ತೋಟಗಳನ್ನು ಮಾಡಿಕೊಂಡಿದ್ದರು. ನವಿಲು, ಜಿಂಕೆ, ಹಾವು-ಮುಂಗುಸಿ, ತೋಳ, ಮೊಲ ಇನ್ನಿತರ ಪ್ರಾಣಿಗಳು ಇಲ್ಲಿಯ ಸಾಮಾನ್ಯ ಪ್ರಾಣಿಗಳಾಗಿದ್ದು. ಮೂವತ್ತರಿಂದ ನಲವತ್ತು ಬಗೆಯ ಪಕ್ಷಿಗಳು ಇಲ್ಲಿದ್ದವು. ಇದರ ಪಕ್ಕದಲ್ಲಿಯೇ ಒಂದು ವಿಶಾಲ ಕೆರೆಯುಇತ್ತು  ಏಡಿ, ಮೀನು, ಆಮೆ, ನೀರುಹಾವು ಹೀಗೆ ಇನ್ನಿತರ ಹತ್ತಾರು ಜಲಚರಗಳು ವಾಸಿಸುತ್ತಿದ್ದವು. ವರ್ಷವಿಡಿ ಈ ಕೆರೆ ಸುತ್ತಮುತ್ತಲ ಪ್ರದೇಶಕ್ಕೆ ಜೀವಜಲವನ್ನು ಸರಬರಾಜು ಮಾಡುತ್ತಿತ್ತು.

 ಒಂದಾನೊಂದು ಕಾಲಕ್ಕೆ ಮೈಸೂರು ನಗರದ ಹೊರವಲಯವೆನಿಸಿಕೊಂಡಿದ್ದ ಈ ಪ್ರದೇಶ ಇಂದು ನಗರದ ಪರಿಧಿಯೊಳಗೆ ಸೇರಿಕೊಂಡಿದೆ. ಬಹಳ ಹಿಂದೆ ಹತ್ತಿಪ್ಪತ್ತು ಮನೆಗಳು ಮಾತ್ರ ಎಲ್ಲಿದ್ದವು. ಸುಣ್ಣ ತಯಾರಿಸುವುದು ಇಲ್ಲಿಯವರ ಕಾಯಕವಾಗಿತ್ತು. ಪ್ಲೇಗ್ ಮಹಾಮಾರಿಯ ಹೊಡೆತದಿಂದಾಗಿ ಇಲ್ಲಿಯ ಜನ ಸ್ಥಳಾಂತರಿಸಿದರು. ಇಂದಿಗೂ ಅವರು ವಾಸಿಸಿದಂತಹದ ಮನೆ, ಸುಣ್ಣ ಸುಟ್ಟ ಜಾಗ ಎಲ್ಲವೂ ಪಾಳುಬಿದ್ದ ಸ್ಥಿತಿಯಲ್ಲಿ ಇದೆ. ಸ್ಟೀಮ್ ಎಂಜಿನ್ ಬೂದಿಯನ್ನು ತಂದು ಈ ಪ್ರದೇಶಕ್ಕೆ ಸುರಿಯುತ್ತಿದ್ದರಿಂದ ಬೂದಿಗುಂಡಿ ಎಂದು ಈ ಪ್ರದೇಶಕ್ಕೆ ಕರೆಯುತ್ತಾರೆ.

 ನಗರ ಬೆಳೆಯತೊಡಗಿತು, ಜನದಟ್ಟಣೆ ಹೆಚ್ಚಾಗತೊಡಗಿತು, ಇದರ ಸಲುವಾಗಿ ಮನೆಗಳು ಹೆಚ್ಚಾದವು, ಮನೆಗಳು ಹೆಚ್ಚಾದ್ದರಿಂದ ವಾಹನಗಳು ಕೂಡ ಹೆಚ್ಚಾದವು, ಇಷ್ಟೆಲ್ಲಾ ಪ್ರದೇಶಕ್ಕೆ ಇದ್ದಿದ್ದು ಎರಡೇ ಎರಡು ಕೊಳವೆ ಬಾವಿಗಳು ನಂತರ ರಸ್ತೆಗೊಂದು ನಲ್ಲಿಯಂತೆ, ಇಂದು ಪ್ರತಿಯೊಂದು ಮನೆಗೂ ನೀರು ಸರಬರಾಜಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಎಲ್ಲರ ಮನೆಯಲ್ಲಿಯೂ ಟಿವಿ, ಪ್ರಿಡ್ಜ್, ವಾಷಿಂಗ್ ಮಷೀನ್ಗಳು ರಾರಾಜಿಸುತ್ತಲಿವೆ.

 ನಟ್ಟನಡು ಬೇಸಿಗೆಯಲ್ಲಿಯೂ ಭೂಮಿಗೆ ಬೆಳಕು ಸ್ಪರ್ಶಿಸಲಾಗದ್ದಂತಿದ್ದ ತೆಂಗು, ಬಾಳೆ, ಅಡಕೆ, ಪ್ರದೇಶ ಇಂದು ಅನೇಕ ಬಡಾವಣೆಗಳಾಗಿ ಮಾರ್ಪಾಡುಗೊಂಡಿದೆ[ ಹೆಸರುಗಳು ಬೇಡ]. ಇನ್ನು ಕೆಲ ಭಾಗದ ಜಾಗ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳಿಗಾಗಿ ಛಿದ್ರಗೊಂಡಿದೆ. ಕೆರೆಗೆ ನೀರು ಹರಿದು ಬರುತ್ತಿದ್ದ ಜಾಗದಲ್ಲಿ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ಗಳು ತಲೆಯೆತ್ತಿದೆ. ಇದರಿಂದ ಕೆರೆಯ ಕುರುಹೇ ಇಲ್ಲದಂತೆ ಆಗಿದೆ. ಒತ್ತೊತ್ತಾಗಿ ಕಾಡಿನಂತೆ ಗೋಚರಿಸುತ್ತಿದ್ದ ವೃಕ್ಷಗಳನ್ನು ನಾನಾ ಕಾರಣಗಳಿಂದ ಕಡಿಯಲಾಗಿದೆ. ಮೂರರಿಂದ ನಾಲ್ಕು ಅಡಿ ಬೆಳೆಯುತ್ತಿದಂತಹ  ಹುತ್ತಗಳು ಸಂಪೂರ್ಣವಾಗಿ ಮರೆಮಾಚಿದೆ. ಮನೆಗೊಂದು ಬೋರ್ವೆಲ್ಗಳು ಬಂದು ಅಂತರ್ಜಲ ಬತ್ತಲಾರಂಭಿಸಿದೆ. ಡಾಂಬರು ರಸ್ತೆ ಎಲ್ಲ ಪ್ರದೇಶಕ್ಕೂ ವಿಸ್ತರಿಸಿದೆ. ಬಿದ್ದ ಒಂದು ಹನಿ ಮಳೆ ನೀರು ಕೂಡ ಎಲ್ಲಿಯೂ ಇಂಗದ ಹಾಗೆ ಮೋರಿ ಸೇರುವ ಯೋಜನೆ ನಡೆಯುತ್ತಿದೆ. ಮರಗಳಿದ್ದ ಜಾಗದಲ್ಲಿ ಲೈಟ್ ಕಂಬಗಳು ರಾರಾಜಿಸುತ್ತಿವೆ.


 ನಗರೀಕರಣದಿಂದಾಗಿ ಸಂಪೂರ್ಣ ಹಸಿರು ಹೊಂದಿದ ಪ್ರದೇಶ ಛಿದ್ರಗೊಂಡಿದೆ. 40ಕ್ಕೂ ಹೆಚ್ಚು ಬಗೆಯ ಪಕ್ಷಿಗಳು ಇದ್ದಂತಹ ಈ ಪ್ರದೇಶ ಅವುಗಳ ಆಹಾರ ವಸತಿಯ ಕೊರತೆಯಿಂದಾಗಿ ಇಪ್ಪತ್ತಕ್ಕೆ ಇಳಿದಿದೆ ಪ್ರತಿದಿನದ ಕೂಳಿಗಾಗಿ ಕಾಯುತ್ತಿರುವ ಈ ಪಕ್ಷಿಗಳಿಗೆ ಉತ್ತರಿಸುವವರಾರು? ಮೊಲ, ಜಿಂಕೆ, ತೋಳ, ಮುಂಗುಸಿಗಳು ಇಂದು ಕುರುಹಿಲ್ಲದಾಗಿವೆ ಇವುಗಳಿಗೆ ಉತ್ತರಿಸುವವರಾರು? ನಾಲ್ಕು ಅಡಿಯವರೆಗೆ ಬಹಳ ಸುಂದರವಾಗಿ ಹುತ್ತವನ್ನು ಕಟ್ಟುತ್ತಿದಂತಹ ಗೆದ್ದಲು ಹುಳುಗಳು ರಾಸಾಯನಿಕಗಳ ಬಳಕೆಯಿಂದ ಸಾವನ್ನಪ್ಪಿದೆ ಇವುಗಳಿಗೆ ಉತ್ತರಿಸುವವರಾರು? ಸದಾ ನೀರಿನಲ್ಲಿ ಆಟವಾಡಿಕೊಂಡಿದಂತಹ ಕಪ್ಪೆ, ನೀರುಹಾವು, ಮೀನು, ಆಮೇಗಳು ಕೆರೆ ಬತ್ತಿದ್ದರಿಂದ ಕಣ್ಮರೆಯಾಗಿದೆಯಲ್ಲಾ ಇವುಗಳಿಗೆ ಉತ್ತರಿಸುವವರಾರು? ಸದಾ ಪರೋಪಕಾರಿಯಾಗಿ ಪರಿಸರಕ್ಕೆ ಪ್ರಾಣಿ ಪಕ್ಷಿಗಳಿಗೂ ಮಾನವರಿಗೂ ಹಣ್ಣು, ಶುದ್ಧಗಾಳಿ, ನೆರಳು ನೀಡುತ್ತಿದ್ದ ಅಜಾನುಬಾಹು ಮರಗಳು ಧರೆಗುರುಳಿತಲ್ಲ ಅವುಗಳಿಗೆ ಉತ್ತರಿಸುವವರಾರು? ಇಂದಿಗೂ ಪ್ರತಿದಿನವೂ ವಾಹನಗಳಿಗೆ ಸಿಲುಕಿ ಕಪ್ಪೆ, ಹಾವುಗಳು ಸಾಯುತ್ತಿವೆಯಲ್ಲ ಇವುಗಳಿಗೆ ಉತ್ತರಿಸುವವರಾರು?


 ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವವರು ಇಂದು ಯಾರು ಇಲ್ಲ ಆದರೂ ಸಹ ಕರ್ನಾಟಕ ಅರಣ್ಯ ಇಲಾಖೆಯವರು ಸಣ್ಣ ಪ್ರಮಾಣದಲ್ಲಿ ಸಣ್ಣ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನವನವನ್ನು ಮಾಡಿದ್ದಾರೆ ಇದು ನಿಜಕ್ಕೂ ಶ್ಲಾಘನೀಯ. ಇದರಿಂದ ವಿವಿಧ ರೀತಿಯ ಪಕ್ಷಿಗಳು ಮತ್ತೆ ಬರಲಾರಂಭಿಸಿವೆ. ಕಣ್ಮರೆಯಾಗಿದ್ದ ನವಿಲುಗಳು ಮತ್ತೆ ಬರಲಾರಂಭಿಸಿದೆ.ಈ ಮಾದರಿಯನ್ನು ಸುತ್ತಮುತ್ತಲೂ ಛಿದ್ರಗೊಂಡಿರುವ ಪ್ರದೇಶಕ್ಕೆ ವಿಸ್ತರಿಸಿದ್ದೆಆದಲ್ಲಿ ಕುರುಹು ಇಲ್ಲದೆ ಬತ್ತಿರುವ ಕೆರೆಯಲ್ಲಿ ನೀರು ತುಂಬಬಹುದು, ಕಣ್ಮರೆಯಾದ ಪ್ರಾಣಿಗಳು ಮತ್ತೆ ತಮ್ಮ ಪ್ರದೇಶಕ್ಕೆ ಹಿಂದಿರುಗಬಹುದು. ಆಹಾರ ಸರಪಳಿ ಸರಿಹೊಂದದೆ ಜೀವ ವೈವಿಧ್ಯ ಸುಭಿಕ್ಷವಾಗಿರುವುದು. ಇದರಿಂದ ನಗರದ ಜನರಿಗೆ ಶುದ್ಧ ಗಾಳಿಯೂ ದೊರಕಿದಂತಾಗುತ್ತದೆ. ನಿಧಾನವಾಗಿ ಅಂತರ್ಜಲ ಮಟ್ಟವು ಹೆಚ್ಚಗಬಹುದು. ಜೀವವೈವಿಧ್ಯವೆಂದರೆ ಏನು ಎಂದು ತಿಳಿಯದ ಜನರಿಗೆ ಜ್ಞಾನಾಭಿವೃದ್ಧಿಯ ಪ್ರದೇಶವಾಗಬಹುದು. ಸಮಯ ಓಡುತ್ತಲಿದೆ ನಗರದ ಬೆಳವಣಿಗೆಯ ದಿನೇ ದಿನೇ ಹೆಚ್ಚಾಗುತ್ತಲಿದೆ. ಇಂದು ಪರಿಸರಾಸಕ್ತರು ಅರಣ್ಯ ಇಲಾಖೆಯವರು ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ತಲೆಮಾರುಗಳಿಗೆ ಮಾದರಿಯಾಗಬಹುದು. ಈ ಪ್ರಯೋಗವನ್ನು ಕೈಗೊಳ್ಳಲು ಇದೇ ಸರಿಯಾದ ಸಮಯ. ಸಾಮೂಹಿಕವಾಗಿ ಸಾರ್ವಜನಿಕರು,ಪರಿಸರಾಸಕ್ತರು ಹಾಗೂ ಅರಣ್ಯ ಇಲಾಖೆಯವರು ಕೈ ಜೋಡಿಸಿ ಈ ಮಾದರಿಯನ್ನು ಮಾಡಿದ್ದೆ ಆದಲ್ಲಿ ದೇಶಕ್ಕೆ ಮಾದರಿಯಾಗಬಹುದು ಒಮ್ಮೆ ಯೋಚಿಸಿ.

 ಧನ್ಯವಾದಗಳು.

Sunday, July 12, 2020

ಭಾವನೆಗಳಿಗೆ ಬೆಲೆ ಕಟ್ಟಲು ಸಾಧ್ಯವೇ?

                          
                                -ಎಸ್ ಪಿ ತೇಜರಾಜು.

 ಮನಸ್ಸಿನ ಮನೆಯೆಂಬ
 ಕನಸಿನ ಕಟ್ಟಡ ಇನ್ಯಾರದೋ
 ಮನೆಯಲ್ಲಿ ಮನೆಮಾಡಿದೆ.

 ಆಸೆಯ ಎರಡಕ್ಷರವು
 ಹಣವೆಂಬ ವಾಸ್ತವ ಸೇರಿ 
 ನಿರಾಸೆಯ ದ್ಯೋತಕವಾಗಿ 
 ನನ್ನ ಮನಸೇರಿದೆ.

  ಕೂಸಿನ ನಗುವು
  ಬೆಳೆಸಿದವರ ನೋವು 
  ಅಜ್ಜಿಯರ ಹಾಡು 
  ಬಂಧುಮಿತ್ರರ ಬಂಧನದ ಬೇಡಿ
  ಅಳಿಸಿಹೋಗಿದೆ
  ನನ್ನ ಮನವ ಅಳಿಸಿಹೋಗಿದೆ.

  ಮಳೆ ಹನಿಯ ಸದ್ದು 
  ಕಾಲ್ಗೆಜ್ಜೆ ನಾದ 
  ಒರಳು ಕಲ್ಲಿನ ಗುಡುಗುಡು 
  ಮಾತು ಮೆದುವಾಗಿದೆ 
  ನನ್ನ ಮನಸ್ಸನ್ನು ಹಸಿ ಮಾಡಿದೆ.

  ಪಶುವಿನ ಮೊರೆತ 
  ಬೆರಣಿ ಒಲೆಯ ಹೊಗೆಯ ಕಾಟ
  ತೊಲೆಯ ನಡುವೆ ಹಾಕಿದ 
  ಜೋಗುಳದ ಮಾಟ ಮಂಕಾಗಿದೆ
  ಚಿಮಣಿ ದೀಪದ ಜೊತೆಗೆ ಹಾರಿಹೋಗಿದೆ

  ಮತ್ತೊಂದು ಮದುವೆಗೆ 
  ಸಿಂಗಾರಗೊಂಡು ತನ್ನ 
  ಕೊಳ್ಳುವವರಿಗೆ ಕಾಯುತ್ತಾ ನಿಂತಿದ್ದೆ...

                          -ದಶಾನನ.

 ಭಾವ ಸಂಯೋಜಿತ ಜೀವನವನ್ನು ನಡೆಸುವುದೇ ಮಾನವನ ಒಂದು ಅದ್ಭುತ ಜೀವನಶೈಲಿಯಾಗಿದೆ. ಹುಟ್ಟುತ್ತಾ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂದು ಪ್ರಾರಂಭಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಯು ತಾನು ಮುಂದೆ ಓದಲಿಚ್ಚಿಸುವ ಕ್ಷೇತ್ರಗಳಲ್ಲಿ ಗುರುಗಳನ್ನು ಕಾಣುತ್ತಾರೆ. ಇಲ್ಲಿ ಗುರುಗಳು ಕೇವಲ ಬೋಧಕರಾಗಿರದೆ ಆದರ್ಶ ವ್ಯಕ್ತಿಗಳು ಕೂಡ ಆಗಿರುತ್ತಾರೆ. ಗುರುಗಳ ಸಹಾಯದಿಂದ ನಮ್ಮ ಜ್ಞಾನಭಂಡಾರವನ್ನು ಹೆಚ್ಚಿಸುವುದರ ಜೊತೆಗೆ ನಾವು ಮುಂದೆ ಕೆಲಸ ಮಾಡುವಂತಹ ಕಾರ್ಯಕ್ಷೇತ್ರಕ್ಕೆ ಬೇಗ ಹೊಂದಿಕೊಳ್ಳಲು ಸಹಾಯವಾಗುತ್ತದೆ. ಒಟ್ಟಿನಲ್ಲಿ ದೊಡ್ಡಮಟ್ಟದ ಸ್ಥಾನದಲ್ಲಿ ಹೊರಹೊಮ್ಮಿದ ವ್ಯಕ್ತಿಯೂ ಕೂಡ ತನ್ನ ಜೀವಿತಾವಧಿಯ ಕೊನೆಯವರೆಗೂ ತಾನು ಓದಿದಂತಹ ಸಂಸ್ಥೆ ಹಾಗೂ ಗುರುಗಳನ್ನು ಸ್ಮರಿಸುತ್ತಲೇ ಇರುತ್ತಾರೆ.

 ಪ್ರತಿಯೊಬ್ಬರೂ ಕೂಡ ತಾವು ಬೆಳೆದಂತಹ ಮನೆ, ಓದಿದಂತಹ ಸಂಸ್ಥೆ, ಕೆಲಸ ಮಾಡಿದ ಸ್ಥಳಗಳಲ್ಲಿ ಒಂದು ರೀತಿಯ ಭಾವನೆಗಳು ಬೆರೆತುಕೊಂಡಿರುತ್ತವೆ. ಅಜ್ಜಿಗೆ ಅವರ ಅಜ್ಜಿಯವರು ಕೊಟ್ಟಂತಹ ಕೆಲವು ಅಮೂಲ್ಯ ಕಾಣಿಕೆಗಳನ್ನು ಇಂದಿಗೂ ಹೇಗೆ ಕಾಪಾಡಿಕೊಂಡು ಬಂದಿದ್ದಾರೆಯೋ, ತಾತನಿಗೆ ಅವರ ತಲೆಮಾರುಗಳಿಂದ ಬಂದಂತಹ ಮನೆ, ಜಮೀನುಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿರಲು ಮೂಲ ಕಾರಣ ಇದೆ ಭಾವಸಂಯೋಜಿತ ಜೀವನಶೈಲಿಯೇ ಆಗಿದೆ.


 ಇಷ್ಟೆಲ್ಲಾ ಭಾವನೆಗಳು ಇರುವುದರಿಂದಲೇ ಪ್ರತಿಯೊಬ್ಬರೂ ಕೂಡ ತಾನೊಂದು ಸೂರು ಕಟ್ಟಬೇಕೆಂದು ಹಂಬಲಿಸುವುದೇನೋ. ಅವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ಅವರವರ ಕನಸಿನ ಸೂರು ವಿನ್ಯಾಸಗೊಳ್ಳುತ್ತಾ ಹೋಗುತ್ತದೆ. ಅವರು ಆಸ್ತಿಕರೇ ಆಗಿರಲಿ ನಾಸ್ತಿಕರೇ ಆಗಿರಲಿ, ವಾಸ್ತುವನ್ನು ನಂಬುವರೆ ಆಗಿರಲಿ ಅಥವಾ ನಂಬದವರೇ ಆಗಿರಲಿ, ಗೃಹಪ್ರವೇಶ ಮಾಡಿದ ಬಳಿಕವೇ ಮನೆಯಲ್ಲಿ ವಾಸಿಸುವವರಾಗಲಿ ಅಥವಾ ಹಾಗೆಯೇ ವಾಸಿಸುವವರಾಗಲಿ ಒಟ್ಟಿನಲ್ಲಿ ಸೂರು ನೆಲೆಗೊಳ್ಳುತ್ತದೆ.

 ಒಂದು ಪ್ರದೇಶ ಮತ್ತೊಂದು ಪ್ರದೇಶಕ್ಕೆ ಹೇಗೆ ಭೌಗೋಳಿಕವಾಗಿ ವಿಭಿನ್ನವಾಗಿರುತ್ತದೆ ಅದೇ ರೀತಿ ಮನೆಗಳ ವಿನ್ಯಾಸವು ಕೂಡ ವಿಭಿನ್ನವಾಗಿರುತ್ತದೆ. ಮಲೆನಾಡಿನ ಬೆಟ್ಟಗುಡ್ಡಗಳ ನಡುವೆ ಅಡಕೆ, ಬಾಳೆ, ಏಲಕ್ಕಿ, ಕಾಫಿ ತೋಟಗಳ ಮಧ್ಯದಲ್ಲಿ ವಿಶಾಲ ಪ್ರಾಂಗಣಉಳ್ಳ ಎರಡು ಮೂರು ಅಂತಸ್ತಿನ ಮನೆಗಳೇ ಆಗಿರಲಿ, ಕರಾವಳಿ ತೀರದ ತೆಂಗಿನತೋಟದ ಮಧ್ಯದ ವಿಶಾಲ ಮನೆಯೇ ಆಗಿರಲಿ, ಬಯಲುಸೀಮೆಯ ಜಗಲಿಕಟ್ಟೆ ಮನೆಗಳೇ ಆಗಿರಲಿ, ಉತ್ತರ ಕರ್ನಾಟಕದ ಕಲ್ಲಿನಕೋಟೆ ಮನೆಗಳೇ ಆಗಿರಲಿ, ಕಾಕನಕೋಟೆ ಸುತ್ತಮುತ್ತಲಿನ ಹಾಡಿ ರೀತಿಯ ಮನೆ ನಿರ್ಮಾಣ ವಿಭಿನ್ನವಾಗಿರುತ್ತದೆ.

 ಮನೆಗಳ ವಾಸ್ತುವಿನ್ಯಾಸ ಪ್ರದೇಶದಿಂದ ಪ್ರದೇಶಕ್ಕೆ ಹೇಗೆ ವಿಭಿನ್ನವಾಗಿರುತ್ತದೆ ಅದೇ ರೀತಿ ದೇವಾಲಯಗಳ ವಾಸ್ತು ವಿನ್ಯಾಸವು ಕೂಡ ವಿಭಿನ್ನವಾಗಿರುತ್ತದೆ. ಐಹೊಳೆ ಪಟ್ಟದಕಲ್ಲಿನ ದೇವಾಲಯಗಳ ವಾಸ್ತು ವಿನ್ಯಾಸವೇ ಆಗಿರಲಿ, ಬೇಲೂರು ಹಳೇಬೀಡು ದೇವಾಲಯದ ಸೂಕ್ಷ್ಮ ಕೆತ್ತನೆಗಳ ದೇವಾಲಯಗಳೇ ಆಗಿರಲಿ, ಮಲೆನಾಡು ಹಾಗೂ ಕರಾವಳಿ ಭಾಗದ ಬೃಹತ್ ದೇವಾಲಯಗಳಮೇಲಿನ ನಯವಾದ ಕಾವಿಕಲೆಯ ರಚನೆಗಳೇ ಆಗಿರಲಿ ವಿಭಿನ್ನವಾಗಿರುತ್ತದೆ. ಇದರೊಟ್ಟಿಗೆ ದಕ್ಷಿಣ ಭಾರತದ ಅರಮನೆ ವಾಸ್ತು ವಿನ್ಯಾಸದ ಶೈಲಿಯು ಉತ್ತರಭಾರತದ ಅರಮನೆ ನಿರ್ಮಾಣಕ್ಕಿಂತ ವಿಭಿನ್ನವಾಗಿರುತ್ತದೆ. ಅದೇನೇ ಇರಲಿ ಕಾಲ ಉರುಳಿದಂತೆ ವಾಸ್ತು ವಿನ್ಯಾಸದಲ್ಲಿ ಅನೇಕ ಬದಲಾವಣೆಗಳು ಬಂದು ಇಂದು ಅತ್ಯಾಧುನಿಕ ತಂತ್ರಜ್ಞಾನಕ್ಕೆ ತಕ್ಕ ಹಾಗೆ ಹಾಗೂ ಐಷಾರಾಮಿ ಜೀವನಕ್ಕೆ ಹೊಂದಿಕೊಳ್ಳುವಂತೆ ವಾಸ್ತು ಮಾರ್ಪಟ್ಟಿರುವುದೇನು ಸುಳ್ಳಲ್ಲ.

 ಭೂಮಿಯು ಪ್ರಕೃತಿಮಾತೆ ಕೊಟ್ಟಂತಹ ಒಂದು ಅದ್ಭುತ ಕಾಣಿಕೆ. ಇದು ಹಿಂದೆ ಯಾರ ಸ್ವತ್ತು ಆಗಿರಲಿಲ್ಲ ಸಾಗುವಳಿಗಾಗಿ ಆದಿಮಾನವ ಕಾಡು ಕಡಿದು ಆಹಾರಧಾನ್ಯವನ್ನು ಬೆಳೆದುಕೊಂಡು ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತಿದ್ದ. ನಾಗರಿಕತೆಯ ಬೆಳವಣಿಗೆ, ರಾಜರಾಳ್ವಿಕೆ, ನಗರಗಳ ಬೆಳವಣಿಗೆಯಿಂದಾಗಿ ಭೂಮಿಯು ಮಾನವನ ಹೆಸರಿಗೆ ಹಸ್ತಾಂತರಿಸಲಾಯಿತು. ಇದೇ ಮುಂದೆ ಆತನ ಹೆಸರಿನಲ್ಲಿ ಸರ್ಕಾರದ ದಾಖಲೆಗಳಲ್ಲಿ ನಮೂದಿಸಲಾಯಿತು.

 ಇಂದಿಗೂ ಒಬ್ಬ ವ್ಯಕ್ತಿ ತನ್ನ ಜಮೀನನ್ನು ಮತ್ತೊಬ್ಬರಿಗೆ ಮಾರುವಾಗ ಸರಕಾರದಪತ್ರದಲ್ಲಿ ನಮೂದಿಸುವಂತಹ ಪದ ಬಳಕೆಯನ್ನು ಕಂಡಾಗ ಶ್ಲಾಗನೀಯವೆನಿಸುತ್ತದೆ. ಜಮೀನು ಖರೀದಿದಾರನು ಸಂಪೂರ್ಣವಾಗಿ ಹಣವನ್ನು ಮಾರುವವನಿಗೆ ಸಂದಾಯವಾದ ಬಳಿಕ ಆತನಿಗೆ ಆ ಜಮೀನಿನ ಮೇಲೆ ಇರುವ ಸಂಪೂರ್ಣವಾದಂತಹ ಅಧಿಕಾರ ಬಿಟ್ಟು ಕೊಟ್ಟಿರುತ್ತಾನೆ. ಈ ಪ್ರದೇಶದಲ್ಲಿ ಸಿಗುವಂತಹ ಯಾವುದೇ ನಿಧಿ, ನಿಕ್ಷೇಪ, ಜಲ, ತರು, ಪಾಷಣಾದಿ ಅಷ್ಟಭೋಗ ತೇಜ ಸ್ವಾಮ್ಯಕ್ಕೆ ಅವುಗಳ ಆದಿ, ಕ್ರಯ, ದಾನ, ಪರಿವರ್ತನೆಗಳೆಂಬ ವ್ಯವಹಾರ ಚತುಷ್ಟಯಕ್ಕು ಖರೀದಿದಾರರು ಭಾದ್ಯಾನಾಗಿರುತ್ತಾನೆ. ಇನ್ನುಮುಂದೆ ಸರಕಾರಿ ಕಂದಾಯವನ್ನು ಪಾವತಿಸಿಕೊಂಡು ನಿಮ್ಮ ಇಚ್ಛಾನುಸಾರ ನಿಮ್ಮ ಪುತ್ರ- ಪೌತ್ರ ವಂಶಪಾರಂಪರ್ಯವಾಗಿ ಸುಖದಿಂದ ಅನುಭವಿಸಬಹುದು ಎಂದು ಬರೆದು ಕೊಡಲಾಗುತ್ತದೆ. ಇದರ ಹೊರತಾಗಿಯೂ ಏನಾದರೂ ಸಮಸ್ಯೆಗಳು ಬಂದಲ್ಲಿ ಅದನ್ನು ತನ್ನ ಸ್ವಂತ ಹಣದಲ್ಲಿ ಬಗೆಹರಿಸಿ ಕೊಡುವುದಾಗಿ ನಮೂದಿಸಲಾಗಿರುತ್ತದೆ. ಒಟ್ಟಿನಲ್ಲಿ ಈ ಸರಕಾರಿ ದಾಖಲೆಗಳ ಉದ್ದೇಶವೂ ಕೂಡ ಭೂಮಿಯನ್ನು ವಂಶಪಾರಂಪರ್ಯವಾಗಿ ಮುಂದುವರಿಸಿಕೊಂಡು ಹೋಗಬೇಕೆಂಬುದೇ ಆಗಿದೆ.

 ಮನೆಯಲ್ಲಿ ಒಂದು ಮಗು ಜನಿಸಿದಾಗ ಎಲ್ಲರಿಗೂ ಹೇಗೆ ಸಂತೋಷವಾಗುತ್ತದೆ ಅದೇ ರೀತಿ ಒಂದು ಹೊಸ ಮನೆಯನ್ನು ಕಟ್ಟಿದಾಗಲು ಕೂಡ ಎಲ್ಲರಿಗೂ ಸಂತೋಷವಾಗುತ್ತದೆ. ಮಗುವಿಗೆ ನಾಮಕರಣ ಶಾಸ್ತ್ರ ಮುಗಿದು, ಪುಟ್ಟ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿ, ಮನೆಸುತ್ತ ಅಂಬೆಗಾಲನಿಟ್ಟುಕೊಂಡು, ತೊದಲು ನುಡಿಗಳನ್ನು ನುಡಿಯುತ್ತಾ ಮೇಲಿದ್ದು ನಿಲ್ಲಲು ಪ್ರಯತ್ನಿಸುತ್ತದೆ. ಇದಕ್ಕೇನು ಬಡವ-ಶ್ರೀಮಂತನೆಂಬ ವ್ಯತ್ಯಾಸವಿಲ್ಲ. ಗುಡಿಸಲೆ ಆಗಿರಲಿ, ಪುಟ್ಟಮನೆ ಆಗಿರಲಿ ಅಥವಾ ಅರಮನೆಯೇ ಆಗಿರಲಿ ಈ ಬೆಳವಣಿಗೆಯಿಂದ ಹೊರತಾಗಿಲ್ಲ.


 ಮನೆ ಕಟ್ಟಿದಷ್ಟು ವಿಶಾಲವಾಗಿರುತ್ತದೆ ಆದರೆ ಮಗುವಿನ ಬೆಳವಣಿಗೆ ಋತುವಿನಿಂದ ಋತುವಿಗೆ ಹೆಚ್ಚುತ್ತಾ ಹೋಗುತ್ತದೆ. ರಾತ್ರಿ ಅಜ್ಜಿಯ ಬಾಯಿಂದ ಕೇಳಿದ ಸಣ್ಣಕಥೆಗಳೇ ಆಗಿರಲಿ, ಗುಡುಗಿನ ಶಬ್ದಕ್ಕೆ ಬೆಚ್ಚಿದ ನೆನಪಾಗಿರಲಿ, ಮಳೆಗಾಲದಲ್ಲಿ ಮನೆಯ ಮುಂದೆ ಹರಿಯುವ ಪುಟ್ಟ ಹಳ್ಳದಲ್ಲಿ ಹರಿಬಿಟ್ಟ ಕಾಗದದ ದೋಣಿಯ ನೆನಪೇ ಆಗಿರಲಿ ಚಳಿಗಾಲದಲ್ಲಿ ಬಿಸಿ ಬಿಸಿ ಬಜ್ಜಿ ಮಾಡಿಸಿಕೊಂಡ ತಿಂದ ನೆನಪೇ ಆಗಿರಲಿ, ಓಲೆ ಹತ್ತಿಸಲು ಹೋಗಿ ಕಿಡಿ ಕೈ ಮೇಲೆ ಹಾರಿ ನರಕಯಾತನೆ ಪಟ್ಟಿದ್ದರೂ ಕೂಡ ಕೆಂಡದಲ್ಲಿ ಸುಟ್ಟು ತಿಂದ ಗೇರುಬೀಜ, ಆಲೂಗೆಡ್ಡೆ, ಗೆಣಸಾಗಿರಲಿ, ಹುಳಿ ಮಾವಿನಕಾಯಿಯ ಉಪ್ಪಿನಕಾಯಿ ಮಾಡಿಟ್ಟ ಜಾಡಿಯು ಇನ್ನೊಂದು ಕಥೆಯನ್ನು ನೆನಪಿಸುತ್ತದೆ. ಒರಳು ಕಲ್ಲಿನಲ್ಲಿ ಕುಟ್ಟಿದ ಹುಣಸೆಹಣ್ಣಿಗೆ ಉಪ್ಪು ಖಾರದ ಪುಡಿ ಹಾಕಿ ತಿಂದ ನೆನಪು ಇಂದಿಗೂ ಬಾಯಲ್ಲಿ ನೀರೂರಿಸುತ್ತದೆ. ಮನೆಯ ಪ್ರಾಂಗಣದಲ್ಲಿ ಸ್ನೇಹಿತರೊಟ್ಟಿಗೆ ಲಗೋರಿ, ಸಾಕೋ ಬೇಕೋ ಆಡುತ್ತಿರುವಾಗ ಬಿದ್ದು ಚರ್ಮ ತರಚಿ ತುಂಬೆ ರಸ ಹಾಕಿದಾಗ ಚೀರಿದ ನೆನಪು ಇಂದಿಗೂ ಹಸಿಯಾಗಿದೆ. ರಾತ್ರಿ ಚಿಮಣಿ ದೀಪವನ್ನು ಹಿಡಿದು ಓಡಾಡುತ್ತಿರುವಾಗ ನಮ್ಮ ನೆರಳನ್ನೇ ಕಂಡು ಭೂತವೆಂದು ಭಾವಿಸಿದ್ದೆದೆ. ಬೇಸಿಗೆಯ ರಜೆಯಲ್ಲಿ ಮನೆಯ ಮೇಲೆ ಹಪ್ಪಳ-ಸಂಡಿಗೆ ಒತ್ತಿ ಮಾಡಿ ಒಣಗಿಸಿದ ನೆನಪುಗಳಿವೆ. ರಾತ್ರಿ ಕಾಣಿಸಿಕೊಳ್ಳುವಂತಹ ಬೆಳಕಿನ ಹುಳುಗಳನ್ನು ಕಂಡಾಗ ಆಶ್ಚರ್ಯವಾಗಿದ್ದು ಇದೆ ಹಾಗೂ ಅವುಗಳನ್ನು ಹಿಡಿಯುವ ಸಾಹಸ ಮಾಡಿದ್ದಿದೆ. ನೆಂಟರಿಷ್ಟರು ಮನೆಗೆ ಬಂದಾಗ ಎಲ್ಲರೂ ಕೈ ಜೋಡಿಸಿ ಮಾಡಿದಂತಹ ಒತ್ತು ಶಾವಿಗೆ ಕಾಯಿರಸ ಬಾಯಲ್ಲಿ ನೀರೂರಿಸುತ್ತದೆ. ರಾತ್ರಿ ಊಟ ಮಾಡದೆ ಮಲಗಿರುವಾಗ ಅಮ್ಮ ಚಂದ್ರನನ್ನು ತೋರಿಸಿ ಇನ್ನೆರಡು ತುತ್ತು ಊಟವನ್ನು ಹೆಚ್ಚಿಗೆ ತಿನ್ನಿಸಿದ ನೆನಪುಗಳಿವೆ. ರಾತ್ರಿ ಊಟ ಮಾಡದೆ ಮಲಗಿದರೆ ಗುಮ್ಮ ಬಂದು ನಮ್ಮನ್ನು ಎತ್ತಿಕೊಂಡು ಹೋಗುತ್ತಾನೆಂದು ಹೇಳಿದಂತ ಕಥೆ ಇಂದಿಗೂ ನೆನಪಿನಲ್ಲಿದೆ.

 ಮಕ್ಕಳು ಬೆಳೆದು ದೊಡ್ಡವರಾಗಿ ಹೇಗೆ ಮದುವೆಗೆ  ಸಿಂಗರಿಸಿ ಸಿದ್ದಗೊಳ್ಳುತ್ತಾರೆಯೋ ಅದೇ ರೀತಿ ಮನೆಯೂ ಕೂಡ ತೆಂಗಿನ ಚಪ್ಪರ, ತಳಿರು ತೋರಣ, ಹೂವಿನಹಾರ ಎಲ್ಲವನ್ನೂ ಹೊದ್ದು ಸಿಂಗಾರಗೊಳ್ಳುತ್ತದೆ,ಬಂದು ಹೋದಂತಹ ಎಲ್ಲಾ ಸ್ನೇಹಿತರು, ಬಂಧು ಮಿತ್ರರಿಗೆ ಇದೆ ಮನೆ ಸಾಕ್ಷಿಯಾಗಿರುತ್ತದೆ. ಸ್ವಲ್ಪ ವರ್ಷದ ಬಳಿಕ ಮತ್ತೊಂದು ತೊಟ್ಟಿಲು ಶಾಸ್ತ್ರಕ್ಕೆ ಸಿದ್ಧಗೊಳ್ಳುತ್ತದೆ. ಮುಂದೆ ಮನೆಯ ಹಿರಿಯರೊಬ್ಬರು ಅಸುನೀಗಿದಾಗ ಮನೆಯವರೊಂದಿಗೆ ಮನೆಯುಕೂಡ ಮೌನದ ಮಡುವಿನಲ್ಲಿ ಮುಳುಗುತ್ತದೆ. ಈ ರೀತಿ ಮನೆ ಎಲ್ಲಾ ಕಾರ್ಯಕ್ರಮಗಳಿಗೂ ಸಾಕ್ಷಿಯಾಗಿರುತ್ತದೆ. ಮೊಮ್ಮಕ್ಕಳು ಮನೆಯನ್ನು ಮಾರಿ ವಿದೇಶಗಳಲ್ಲಿ ನೆಲೆಸುವಂತಹ ಸಂದರ್ಭಗಳಲ್ಲಿಯೂ ಕೂಡ ಇದೇ ಮನೆ ಮೌನವಾಗಿ ಎಲ್ಲವನ್ನೂ ಸ್ವೀಕರಿಸುತ್ತದೆ.

 ಮಾನವ ಹೇಗೆ ತನ್ನೆಲ್ಲ ಮಜಲುಗಳನ್ನು ದಾಟಿ ಪಂಚಭೂತಗಳಲ್ಲಿ ಲೀನವಾಗುತ್ತಾನೆಯೋ ಅದೇ ರೀತಿ ಮನೆಯೂ ಕೂಡ ಶಿಥಿಲಾವಸ್ಥೆಗೆ ತಲುಪಿ ಅದೇ ಜಾಗದಲ್ಲಿ ಮತ್ತೊಂದು ಮನೆ ನಿರ್ಮಾಣವಾಗುತ್ತದೆ. ಇಲ್ಲಿ ಬದಲಾಗಿದ್ದು ಮನೆ ಹೊರತು ಭಾವನೆಗಳಲ್ಲ ಭಾವನೆಗಳು ಎಂದೆಂದಿಗೂ ಶಾಶ್ವತ ಹಾಗೂ ಜೀವಂತ. ಭಾವನೆಗಳೆಂಬುವುದು ಮಾನವ ಜೀವನದ ಅವಿಭಾಜ್ಯಅಂಗ ಆದ್ದರಿಂದಲೇ ಭಾವನೆಗಳಿಗೆ ಬೆಲೆ ಕಟ್ಟಲಾಗುವುದಿಲ್ಲ.


 ಇಷ್ಟೆಲ್ಲವನ್ನೂ ನೆನಪಿಸಿದಂತಹ ಸ್ನೇಹಿತನ ಕವಿತೆ ನಿಜಕ್ಕೂ ಶ್ಲಾಘನೀಯ. ಇಂತಹ ಭಾವನಾತ್ಮಕ ಕವಿತೆಗಳು ವಾಸ್ತವ ಹಾಗೂ ನಿರಂತರ.