Saturday, December 26, 2020

ಓ ನನ್ನ ಬಾಲ್ಯ ಸ್ನೇಹಿತನೇ ನಿನ್ನುಪಸ್ಥಿತಿಗಾಗಿ ಕಾದಿಹೆನು ಬಾ.

                          ಎಸ್ ಪಿ ತೇಜರಾಜು.


ಬಾಲ್ಯದಲಿ ತಾಯಿ ತೋರಿದ ನಿನ್ನಂದಕೆ

 ಮಾರುಹೋಗಿ ಹೆಚ್ಚುoಡು ಬೆಳೆದವ ನಾನು,

ಬೇಸಿಗೆಯ ಧಗೆಗೆ ಮನೆಯ ಪ್ರಾಂಗಣದಿ ನನ್ನಜ್ಜಿಯೊಂದಿಗೆ

 ನಿನ್ನನ್ನು ನೋಡುತ ಮಲಗಿದವ ನಾನು,

|ಓ ನನ್ನ ಬಾಲ್ಯ ಸ್ನೇಹಿತನೇ ನಿನ್ನುಪಸ್ಥಿತಿಗಾಗಿ ಕಾದಿಹೆನು ಬಾ.|


ಭೂಮಿಯಲಿ ಜನಿಸಿದ ಜೀವ ಕೋಟಿಗಳಿಗೆ

ಶಾಂತ ಬೆಳಕಿನ ಆನಂದವನು ನೀಡಿದವ ನೀನು,

ತೊರೆಗಳಲಿ ಹರಿದು, ನದಿ ಸೇರಿ, ಸಮುದ್ರದಬ್ಬರಗಳಿಗೆ

ಬೆಳಕು ನೀಡಿ,ಕಿನಾರೆಯಲಿ ಮುಳುಗಿದವ ನೀನು,

|ಓ ನನ್ನ ಬಾಲ್ಯ|


ಅಂಬೆಗಾಲಲಿ ತೆವಳಿ,ಪುಟ್ಟ ಹೆಜ್ಜೆಯಿಡುತ್ತಿರುವಾಗ,

 ನಾ ಹೋದ ಕಡೆಗೆಲ್ಲ ನನ್ನೊಂದಿಗೆ ಬಂದಿರುವೆ ನೀನು,

ನಾ ಮರೆತರು ನೀ ಮರೆಯದೆ ಪ್ರತಿದಿನವೂ ಬಂದು

 ಕೂಗಿ ಕರೆದಿರುವೆ ನೀನು,| ಓ ನನ್ನ ಬಾಲ್ಯ|


ಪ್ರತಿದಿನವೂ ನಿನ್ನ ಬೆಳಕಿನ ಶೋಭೆಯಲಿ ತರು-ಲತೆ 

ಬಳ್ಳಿಗಳಿಗೆ ಪುಷ್ಠಿ ನೀಡಿ ಬೆಳೆಸಿದವ ನೀನು,

ಪ್ರತಿದಿನವೂ ಕಾದ ಚಾಗರದಕ್ಕಿಗೆ ಷೋಡಶ ಬೆಳಕ

 ಉಣಬಡಿಸಿ ಸಂತೃಪ್ತಿ ಪಡಿಸಿದವ ನೀನು,| ಓ ನನ್ನ ಬಾಲ್ಯ|


 ಕತ್ತಲಾಗಿದೆ, ಮೌನ ಆವರಿಸಿದೆ, ವೃಕ್ಷಗಳ ನೆರಳು ವಿಚಿತ್ರ

 ಆಕಾರ ಪಡೆದು ಭಯ ಮೂಡಿಸುತಲಿವೆ,

ಮೋಡದ ಮರೆಯಲಿ ನಾ ನಡೆವ ಹಾದಿಯನು 

ನಕ್ಷತ್ರಗಳು ಇಣುಕಿ ನೋಡುತಲಿವೆ,

ಕಾಡಿನಲಿ ಉದುರಿದ ತರಗೆಲೆಯ ಮೇಲೆ ಕಾಲಿಡುತಾ  

ನನ್ನೆಜ್ಜೆ ಸಪ್ಪಳಕೆ ಹೆದರಿ ಬೆಂಡಾಗಿಹೆನು,

ಮನೆಯಲ್ಲಿ ತಾಯಿ ಕಾಡಿನ ಭಯಾನಕ ಮೌನವನು 

ನೆನೆದು ನನ್ನ ಹಿಂತಿರುಗುವಿಕೆಗಾಗಿ ಕಾದಿ ಕುಳಿತಿಹಳು, 

ಆ ನಿನ್ನ ಸಣ್ಣ ನಗುವಿನ ಬೆಳಕು ಸಾಕು ನನಗೆ ಧೈರ್ಯ ಬರಲು,

| ಓ ನನ್ನ ಬಾಲ್ಯ|



 ಬೀಜವಾಗಿ ಭೂಮಿಗೆ ಬಿದ್ದು, ಮೊಳಕೆಯೊಡೆದು ಚಿಗುರಿ, 

ಆಳೆತ್ತರದ ಅಜಾನುಬಾಹುಗಳ ನಡುವೆ ಪೈಪೋಟಿಯಲ್ಲಿ ಬೆಳೆದು,

ಹೆಮ್ಮರವಾಗಿ ನೂರಾರು ಜೀವಿಗಳಿಗೆ ಆಶ್ರಯ ನೀಡಿಹೆನು,ನನ್ನ 

ಜೀವಿತಾವಧಿಯಲ್ಲಿ ನಿನ್ನ ಬಹು ಆಯಾಮವನುನೋಡಿಹೆನು, 

ಎಷ್ಟೇ ಆದರೂ ನಾ ಅಳಿಯುವವ, ನೀವು ಉಳಿಯುವವ,

ನಾ ಅಳಿಯುವ ಮುನ್ನ ಚಾಗರದಕ್ಕಿಗೆ ಉಣಬಡಿಸಿದಂತೆ

ನಿನ್ನ ಶೋಭೆಯನ್ನುಮ್ಮೆ ಉಣಬಡಿಸಿ ಬಿಡು ಸಾಕು,

ಓ ನನ್ನ ಬಾಲ್ಯ ಸ್ನೇಹಿತನೇ ನಿನ್ನುಪಸ್ಥಿತಿಗಾಗಿ ಕಾದಿಹೆನು ಬಾ.