Saturday, October 31, 2020

ಮಾತೃಭಾಷೆಯ ಕಳವಳ.



                                           - ಎಸ್. ಪಿ. ತೇಜರಾಜು.

 ಆ ನಾಡೊಳು ಊರೋಳು ಓಳೋಳಿಯಿo ಬೆಳೆದ ಕಳವೆಯ ಕೆಯ್ವೊಲಗಳಿಂ ಅಲ್ಲಲ್ಲಿ ಪರಿವ  ಪರಿಕಾಲ್ ಗಳಿಂ,ಪೊಗ, ಪುನ್ನಾಗ, ನಾಗ, ವಕುಳ,ಚಂಪಕ,ಅವಿಚಕಳ, ಕೇತಕಿ, ಸುಗನ್ಧ, ಕಣವೀರ, ಸೇವಂತಿ, ಕಾಸಾರ ಆಭಾಭರಿತಮೆನಿಪೆ ಪುಷ್ಪಾ ವಾಟಂಗಳಿಂ,ಕೌಂಗು,ತೆಂಗು,ಕದಳೀವನ,ಸಾಂಬ್ರ,ಜಂಬೂದ್ರುಮಾದಿ ನಂದನಂಗಳಿಂ. ನಾಗವಲ್ಲೀವನಂಗಳಿಂ, ಒಸರ್ವ, ತನಿರಸದ ಪುಂಡ್ರೇ ಕ್ಷುವಾಟಂಗಳಿಂ, ಕಂಪನುಗುಳ್ವ ಕವಳ ನೀಳೋತ್ಪಳವನಾವಳಿಯಿಂದ ಅತೀವ ರಮ್ಯಂ ಎನಿಸಿ ಯೋಗಿಗಳ್ಗo ಭೋಗಾಸಕ್ತಿಯನಾಗಿಸುತಿರರ್ಪುದು.

 ಇದು ನಮ್ಮ ಬನವಾಸಿಯ ಸುತ್ತಮುತ್ತ ಇರುವ ನಿಸರ್ಗದ ಸೌಂದರ್ಯವನ್ನು ವರ್ಣಿಸುವ ಶಾಸನ ಯಾವ ಪ್ರದೇಶದಲ್ಲಿ ಈ ರೀತಿಯಾದಂತಹ ಶ್ರೀಮಂತ ಸಸ್ಯ ಸಂಪತ್ತು ಹೊಂದಿರುತ್ತದೆಯೋ ಅಲ್ಲಿ ನೆಲೆ ಕಾಣುವ ಪ್ರತಿಯೊಂದು ವಿಷಯವೂ ಕೂಡ ಅಷ್ಟೇ ಭವ್ಯತೆ, ವಿಶಾಲತೆ, ಶ್ರೀಮಂತಿಕೆಯನ್ನು ಹೊಂದಿರುತ್ತದೆ ಹಾಗೂ ಶ್ರೀಮಂತವಾದ ವನಸಿರಿಯ ಸೌಂದರ್ಯಕ್ಕೆ ಯೋಗಿಗಳಿಗೂ ಇಂದ್ರಿಯ ಸುಖಗಳತ್ತ ಮನಸ್ಸು ಸೆಳೆಯುವಂತೆ ಮಾಡುವ ಶಕ್ತಿ ಈ ನಿಸರ್ಗಕ್ಕಿದೆ ಎಂದು ಹೇಳಲಾಗುತ್ತಿದೆ.

 ಈ ಅಭೂತಪೂರ್ವ ನಿಸರ್ಗಕ್ಕೆ ಹೊಂದಿಕೊಂಡಂತೆ ವಿಧವಿಧವಾದಂತಹ ಪ್ರಾಣಿ-ಪಕ್ಷಿ ವೈಶಿಷ್ಟ್ಯ ನೆಲೆಗೊಂಡಿದೆ. ಇರುವೆ, ಜೇನುಹುಳು, ಚಿಟ್ಟೆಯಿಂದಿಡಿದು ಗುಬ್ಬಿ, ಬಹಳ ಸುಂದರವಾಗಿ ತನ್ನ ಗೂಡು ಹೆಣೆದುಕೊಳ್ಳುವ ಗೀಜಗ, ಚಂದದ ಪಾರಿವಾಳ, ಯಾರೋ ಹೊರಗಿನವರು ಮನೆಗೆ ಬರಬಹುದಾದಂತಹ ಸೂಚನೆಯನ್ನು ನೀಡುವ ಕಾಗೆ, ಹಲ್ಲಿ, ಸುಶ್ರಾವ್ಯವಾಗಿ ಹಾಡುವ ಕೋಗಿಲೆ, ಚಂದದ ಗರಿ ಹೊಂದಿರುವ ನವಿಲು ಹೀಗೆ ನೂರಾರು ಪಕ್ಷಿ ವೈಶಿಷ್ಟ್ಯ ಜೊತೆಜೊತೆಗೆ ಚಂದದ ಮೊಲ, ಆನಂದವಾಗಿ ವಿಹರಿಸುವ ಜಿಂಕೆ, ಕಡವೆ, ಕೋಣ, ಹಲಸಿನ ಹಣ್ಣನ್ನು ಹೆಕ್ಕಿ ತಿನ್ನುವ ಅಳಿಲು, ವಾನರ, ಜೇನು ಹುಡುಕುವ ಕರಡಿ, ಮೈ ಜುಮ್ಮೆನಿಸುವ ಕಾಳಿಂಗಸರ್ಪ, ತನ್ನ ಗರ್ಜನೆಗೆ ಉಸಿರುಗಟ್ಟಿಸುವಂತಹ ವ್ಯಾಘ್ರ, ಭೂಮಿಯ ಮೇಲಿನ ದೊಡ್ಡ ಪ್ರಾಣಿಯಾದಂತಹ ಸಲಗ. ಇಲ್ಲಿಯ ಕಣಿವೆ, ಜಲಪಾತದಲ್ಲಿ ಭೋರ್ಗರೆದು ನದಿ, ತೊರೆ, ಝರಿಗಳ ಮೂಲಕ ಹರಿಯುವ ಜೀವನದಿ, ಮೀನು, ಆಮೆ, ಏಡಿ, ಮೊಸಳೆ, ಹೀಗೆ ನೂರಾರು ಜಲಚರ ಹಾಗೂ ಉಭಯಚರ ಪ್ರಾಣಿಗಳಿಗೆ ನೆಲೆ ಕಲ್ಪಿಸಿದೆ.

 ಈ ಜೀವ ನದಿಗಳಿಗೆ ಹೊಂದಿಕೊಂಡ ಹಾಗೆ ಇಲ್ಲಿಯ ಮಾನವನ ಆಚಾರ-ವಿಚಾರ, ಕಲೆ-ಸಾಹಿತ್ಯ, ಉಡುಗೆ-ತೊಡುಗೆ, ಭಾಷೆ, ನದಿ ಮುಖಜ ಭೂಮಿಗೆ ಹೊಂದಿಕೊಂಡ ಹಾಗೆ ಕೃಷಿ ಮಲೆನಾಡಿನ ಬೆಟ್ಟದ ಸಾಲುಗಳಲ್ಲಿ ಕಾಣಬಹುದಾದ ಕಾಫಿ, ಟೀ, ರಬ್ಬರ್ ತೋಟಗಳು, ಅಸಂಖ್ಯಾತ ಔಷಧಿ ಗಿಡಮೂಲಿಕೆಗಳು, ಧಾರ್ಮಿಕ ಪುಣ್ಯಕ್ಷೇತ್ರಗಳಾದಂತಹ ಹೊರನಾಡು, ಧರ್ಮಸ್ಥಳ, ಶೃಂಗೇರಿ, ಸುಬ್ರಹ್ಮಣ್ಯ, ಇಲ್ಲಿಯ ಜನರ ನೀರಿನ ದಾಹವನ್ನು ತೀರಿಸಿ ತನ್ನೆಡೆಗೆ ಕೈ ಬೀಸಿ ಕರೆಯುವ ಭವ್ಯ ಕರಾವಳಿ ಇದಕ್ಕೆ ಹೊಂದಿಕೊಂಡ ಹಾಗೆ ಇರುವ ಕಾರವಾರ,ಮಂಗಳೂರಿನ ಪುಣ್ಯಕ್ಷೇತ್ರಗಳು ಹೀಗೆ ಎಲ್ಲವೂ ಪೂರಕವಾಗಿ ಬೆಳೆದು ಬಂದಿದೆ.

 ಇಷ್ಟೆಲ್ಲಾ ಶ್ರೀಮಂತ ನಿಸರ್ಗಸಂಪತ್ತನ್ನು ಹೊಂದಿರುವ ನಾಡನ್ನು ಆಳಿದ ಕದಂಬ, ವಿಜಯನಗರ, ಹೊಯ್ಸಳ, ಮೈಸೂರು ರಾಜಮನೆತನಗಳು ಹಾಗೂ ಅವರು ಕಲೆ, ಸಾಹಿತ್ಯ, ಸಂಸ್ಕೃತಿತೆಗೆ ನೀಡಿದ ಕಾಣಿಕೆ ಕೋಟೆಕೊತ್ತಲಗಳು [ ಚಿತ್ರದುರ್ಗದ ಕಲ್ಲಿನ ಕೋಟೆ], ಜೈನ ಬಸದಿಗಳು, ಶ್ರವಣಬೆಳಗೊಳದ ಗೊಮ್ಮಟೇಶ್ವರ ಏಕಶಿಲಾಸ್ತಂಭ, ಅಸಂಖ್ಯಾತ ಕಲ್ಲಿನ ಶಾಸನಗಳು, ಕೆರೆಕಟ್ಟೆಗಳು, ಭವ್ಯ ಅರಮನೆಗಳು, ಅತ್ಯಂತ ಸೂಕ್ಷ್ಮ ಕೆತ್ತನೆಗಳುಳ್ಳ ಬೇಲೂರು, ಹಳೇಬೀಡಿನ ದೇವಾಲಯಗಳು, ಇಲ್ಲಿಯ ನಯನಮನೋಹರ ಕಾವಿಕಲೆ, ಸಂಗೀತ ಹಾಗೂ ಭಾಷೆಗೆ ನೀಡಿದಂತಹ ಪ್ರಾಶಸ್ತ್ಯ ನಿಜಕ್ಕೂ ಅಮೋಘವಾದದ್ದು.

 ಇಷ್ಟೆಲ್ಲಾ ಭವ್ಯತೆಯನ್ನು ಹೊಂದಿರುವ ನಾಡನ್ನು ನೋಡಲಿಕ್ಕೆ ಸನಾತನ ಕಾಲದಿಂದಲೂ ವಿದೇಶಿ ಯಾತ್ರಿಗಳು ಬರುತ್ತಿದ್ದಾರೆ ಅವರು ತಮ್ಮ ಅನುಭವದ ಪುಸ್ತಕಗಳಲ್ಲಿ ಬರೆದುಕೊಂಡ ಕೆಲವು ಘಟನೆಗಳು ಅದರಲ್ಲಿಯೂ ಇಲ್ಲಿಯ ಜನಸಾಮಾನ್ಯರು ವಿದೇಶಿಯರಿಗೆ ನೀಡುವ ಗೌರವ ಮಾತೃಭೂಮಿ, ಮಾತೃಭಾಷೆ , ನಿಸರ್ಗದ ಮೇಲೆ ಇರುವ ಪ್ರೀತಿ, ಗೌರವ, ಕಾಳಜಿ ಎಲ್ಲವನ್ನೂ ಹಾಡಿ, ಹೊಗಳಿ, ಕೊಂಡಾಡಿದ್ದಾರೆ.

 ಸಾಧುಗೆ ಸಾದು ಮಾಧುರ್ಯನ್ಗೆ ಮಾಧುರ್ಯo ಬಾಧಿಪ್ಪ । ಕಲಿಗೆ ಕಲಿಯುಗ ವಿಪರೀತನ ಮಾಧವನೀತನ್ ಪೇಱನಲ್ಲಿ.ಎಂದು ಸಾರುವ ಕಪ್ಪೆ ಅರಭಟ್ಟ ಶಾಸನ.ಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಾಗಾರಮo ಮಾಡಿಸು ಹೀಗೆ ಮುಂದುವರೆಯುವ ಲಕ್ಷ್ಮೀ ಧರಾಮಾತ್ಯ ಶಾಸನ. ಮುಂದಿನ ಜನ್ಮವೊಂದಿದ್ದರೆ ಒಂದು ಪುಟ್ಟ ಜೇನುಹುಳವಾದರೂ ಸರಿಯೇ ಬನವಾಸಿಯಲ್ಲಿ ಹುಟ್ಟಬೇಕು ಎಂದು ಸಾರುವ ಪಂಪನ ಕೃತಿ. ಕಾವೇರಿಯಿಂದಮಾ ಗೋದಾವರಿವರಮಿರ್ದ ಈ ಕನ್ನಡ ನಾಡು,ಇಲ್ಲಿಯ ಜನ ಓದದೇ ಇದ್ದರೂ ಕಾವ್ಯ ಪರಿಣತಿಯನ್ನು ಹೊಂದಿದ್ದಾರೆ ಎನ್ನುವ ನೃಪತುಂಗನ ಕಂದಪದ್ಯ, ಕನ್ನಡಿಗರು ಮಾತೃ ಭೂಮಿ ಭಾಷೆಗೆ ನೀಡಿದ ಗೌರವವನ್ನು ತಿಳಿಸುತ್ತದೆ.

 ಈ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ನಿಜಕ್ಕೂ  ಧನ್ಯೋಸ್ಮಿಗಳು. ಕನ್ನಡ ಪುರಾತನ ಹಾಗೂ ಇಂದಿಗೂ ಜೀವಿಸುತ್ತಿರುವ ಭಾಷೆಯಾಗಿರುವುದರಿಂದಲೇ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು.

 ಭಾರತೀಯರು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಳ್ಳಲು ಹೇಗೆ ಎಲ್ಲರೂ ಏಕೀಕರಣ ಗೊಂಡರೋ ಅದೇ ರೀತಿ ಕನ್ನಡ ಉಳಿವಿಗಾಗಿ ಏಕೀಕರಣ ನಡೆಸುವುದು ಅನಿವಾರ್ಯವಾಯಿತು.

 ದೇಶಪಾಂಡೆಯವರು ಕನ್ನಡ ಉಳಿವಿಗಾಗಿ ಮೊದಲ ಹೆಜ್ಜೆಯನ್ನಿಟ್ಟರೆ,ಕರ್ನಾಟಕ ಕುಲಪುರೋಹಿತರಾದ ಆಲೂರು ವೆಂಕಟರಾಯರು ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಅಖಂಡ ಕನ್ನಡ ನಾಡನ್ನಾಗಿ ಮಾಡಲು ಪರಿಶ್ರಮಿಸಿದರು.

 ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆ, ಕುವೆಂಪು ಅವರ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಗೀತೆಗಳು, ಡಿ ಎಸ್ ಕರ್ಕಿಯವರ ಹಚ್ಚೇವು ಕನ್ನಡದ ದೀಪ ಎಂಬ ಗೀತೆ, ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ ಎಂಬ ಜಿ ಪಿ ರಾಜರತ್ನಂ ಅವರ ಗೀತೆಗಳು ಲಕ್ಷಾಂತರ ಮಂದಿ ಕನ್ನಡಿಗರ ಹೃದಯ ಮುಟ್ಟಿದವು.

 ಪತ್ರಿಕೋದ್ಯಮದ ಪ್ರಭಾವ, ಕನ್ನಡ ಸಾಹಿತ್ಯ ಪರಿಷತ್ ನ ಸ್ಥಾಪನೆ, ಅಸಂಖ್ಯಾತ ಸಾಹಿತಿಗಳ ಬರಹಗಳು ಕರ್ನಾಟಕ ಏಕೀಕರಣಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು.

 ಲಕ್ಷಾಂತರ ಕನ್ನಡಿಗರ ಪರಿಶ್ರಮದ ಫಲವಾಗಿ 1956 ನವೆಂಬರ್ 1 ರಂದು ಕನ್ನಡಿಗರಿಗಾಗಿ ಪ್ರತ್ಯೇಕ ರಾಜ್ಯ ವಿಂಗಡಣೆಯಾಯಿತು.1973 ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು.

 ಇಂದಿಗೂ ಅಣ್ಣಾವ್ರ ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೆ ಗಂಧದ ಗುಡಿ ಎಂಬ ಗೀತೆಯನ್ನು ಕೇಳುವಾಗ ಮೈರೋಮಾಂಚನವೆನಿಸುತ್ತದೆ.

ನಿಸರ್ಗವು ಭಾಷೆಯ ಸೃಷ್ಟಿ ಹಾಗೂ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಭಾಷೆಯು ತಾನೊಂದೇ ಅಜರಾಮರವಾಗಿರಲು ಸಾಧ್ಯವಿಲ್ಲ ಏಕೆಂದರೆ ಅದು ಇಲ್ಲಿಯ ನಿಸರ್ಗಕ್ಕೆ ಪೂರಕವಾಗಿ ಬೆಳೆದಿದೆ ಹಾಗೂ ನಿಸರ್ಗಕ್ಕೆ ಭಾಷೆಯ ಅವಿಭಾಜ್ಯ ಅಂಗವಾಗಿದೆ.

 ಭಾಷೆ ಜೀವಿಸಲಿಕ್ಕೆ ಅದನ್ನು ಬಳಸುವ ಜನರು ಎಷ್ಟು ಮುಖ್ಯವಾಗುತ್ತಾರೆಯೋ ಅದೇ ರೀತಿ ಇಲ್ಲಿಯ ನಿಸರ್ಗವು ಕೂಡ ಮುಖ್ಯವಾಗಿರುತ್ತದೆ. ನಿಸರ್ಗವನ್ನು ಅಳಿಸಿ ಭಾಷೆಯನ್ನು ಬೆಳೆಸುವ ಕಾಯಕ ನಿಜವಾಗಿಯೂ ತ್ರಾಸಮಯವಾಗಿರುವಂತಹದ್ದು. ಮಾತೃಭಾಷೆಯನ್ನು ನಾವೆಷ್ಟು ಪೂಜ್ಯ ಭಾವನೆಯಲ್ಲಿ ಕಾಣುತ್ತೇವೆಯೋ ಅಷ್ಟೇ ಪ್ರಮಾಣದಲ್ಲಿ ಮಾತೃಭೂಮಿ ಹಾಗೂ ಇಲ್ಲಿಯ ನಿಸರ್ಗ ಸಂಪತ್ತನ್ನು ಸಂರಕ್ಷಿಸಿ, ಪೂಜ್ಯ ಭಾವನೆಯಲ್ಲಿ ಕಾಣುವುದರಿಂದ ಮಾತ್ರ ಈ ಭಾಷೆಯ ಅಜರಾಮರವಾಗಿರಲು ಸಾಧ್ಯ.

 ಅಂಕಣದ ಒಳನೋಟ ಮತ್ತಷ್ಟು ಜನರಿಗೆ ತಿಳಿದರೆ ವಿಷಯ ಜಾಗೃತವಾಗಿ ಬರೆದ ಅಂಕಣ ಸಾರ್ಥಕವೆನಿಸುತ್ತದೆ.

  ನಾವೆಲ್ಲರೂ ಕನ್ನಡ ಭಾರತೀಯರು,ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

                                                                          ಧನ್ಯವಾದಗಳು.