Saturday, June 27, 2020

ಕಾಲ-ಸಕಾಲ

                 
                         ಎಸ್ ಪಿ ತೇಜರಾಜು.

 ಭರತಖಂಡದ ಕೊಡುಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಶಿಷ್ಟ, ವಿಭಿನ್ನ ಹಾಗೂ ಅವಿಸ್ಮರಣೀಯವಾಗಿರುವಂತಹದ್ದು. ಇಲ್ಲಿಯ ಕಲೆ ಸಾಹಿತ್ಯ ಸಂಸ್ಕೃತಿಯೇ ಆಗಿರಲಿ, ಹಸ್ತಪ್ರತಿ, ಶಿಲಾಶಾಸನ, ಆಚಾರ-ವಿಚಾರ, ಉಡುಗೆ ತೊಡುಗೆಗಳು ಸಂಸ್ಕೃತ ಭಾಷೆ ಹಾಗೂ ಲಿಪಿಯ ಬಳಕೆ, ವೇದ-ಶಾಸ್ತ್ರ- ಪುರಾಣಗಳೇ ಆಗಿರಲಿ, ವಾಗ್ಭಟರ ಆಹಾರ ಪದ್ಧತಿ, ದೈಹಿಕ ಮಾನಸಿಕ ಸ್ಥಿರತೆಯನ್ನು ಉಂಟುಮಾಡುವಂತಹ ಪತಂಜಲಿ ಯೋಗ ಶಿಕ್ಷಣವಾಗಿರಲಿ, ಚರಕನ ಆಯುರ್ವೇದ ಚಿಕಿತ್ಸಾ ವಿಧಾನವೇ ಆಗಿರಲಿ, ಬೌತಿಕ ಸಂಪತ್ತನ್ನು ಹೆಚ್ಚಿಸುವಂತಹ ಗುರುಕುಲ ಮಾದರಿಯ ಪಂಚ ಶಿಕ್ಷಣ ಪದ್ಧತಿಯೇ ಆಗಿರಲಿ, ಇಡೀ ಪ್ರಪಂಚಕ್ಕೆ ಮಾದರಿಯಾದಂತಹ ಪರಿಸರಕ್ಕೆ ಪೂರಕ ಕೃಷಿ ಪದ್ಧತಿಯೇ ಆಗಿರಲಿ, ಇಲ್ಲಿ ನೆಲೆಸಿರುವಂತಹ ಸಸ್ಯ ಕೋಟಿ ಜೀವಸಂಕುಲದ ಜಗತ್ತೇ ಆಗಿರಲಿ, ಇಲ್ಲಿ ದೊರಕುವಂತಹ ಬೆಲೆಬಾಳುವ ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯ, ಮುತ್ತು, ರತ್ನ, ಮಾಣಿಕ್ಯವೇ ಆಗಿರಲಿ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರಕ್ಕೆ ನೀಡಿರುವಂತಹ ಅನೇಕ ಮಹನೀಯರ ಕೊಡುಗೆ ಆಗಿರಲಿ, ನಿಸರ್ಗಕ್ಕೆ ಪೂರಕವಾದಂತಹ ಜೀವನ ನಡೆಸಬೇಕೆಂಬ ವೃಕ್ಷಾಯುರ್ವೇದ ಎಂಬ ವೇದದ ಒಂದು ಶಾಖೆಯೇ ಇದೆ ಎಂದಾಗಲಿ, ಭವಿಷ್ಯದ ನಿಸರ್ಗದಲ್ಲಾಗುವ ಬದಲಾವಣೆಗಳನ್ನು ನಿಖರವಾಗಿ ತಿಳಿದುಕೊಳ್ಳುವಂತಹ ನಮ್ಮ ಪಂಚಾಂಗವೇ ಆಗಿರಲಿ ಹೀಗೆ ಹೇಳುತ್ತಾ ಹೋದರೆ ಪುಟಗಳು ಸಾಲದಾಗುತ್ತದೆ.

 ಜಗತ್ತಿನ ನಾನಾ ಪ್ರದೇಶಗಳಲ್ಲಿ ನಡೆದಂತಹ ನಾಗರಿಕತೆಯ ಬೆಳವಣಿಗೆಯು ವಿಶಿಷ್ಟ ಹಾಗೂ ವಿಭಿನ್ನವಾಗಿರುವಂತಹದ್ದು. ವಿವಿಧ ಮಜಲುಗಳಲ್ಲಿ ನಡೆದಂತಹ ಈ ನಾಗರಿಕತೆಯ ಬೆಳವಣಿಗೆ ಕಾಲಕಾಲಕ್ಕೆ ಬದಲಾಗುತ್ತ ಹೋಯಿತು ಅವರವರ ಸುತ್ತಮುತ್ತಲಿನ ಗುಣಧರ್ಮಗಳನ್ನು ಆಧರಿಸಿದಂತೆ ಅವರವರ ಧರ್ಮಶಾಸ್ತ್ರಗಳು ಬೆಳೆಯುತ್ತಾ ಹೋಯಿತು.

 ಇಂದಿಗೂ ಕಾಲದಲ್ಲೇನು ಬದಲಾವಣೆ ಕಂಡುಬಂದಿಲ್ಲ ಅಂದೂ ಕೂಡ ದಿನಕ್ಕೆ 24 ಗಂಟೆಯೇ ಇದ್ದಿದ್ದು ಈಗಲೂ ಕೂಡ 24 ಗಂಟೆಯೇ ಇದೆ ಮುಂದೆಯೂ ಇದೇ ಮುಂದುವರಿಯಬಹುದು. ಪ್ರತಿದಿನವೂ ಸೂರ್ಯ, ಚಂದ್ರ, ನಕ್ಷತ್ರಗಳು ಪ್ರತ್ಯಕ್ಷವಾಗುತ್ತಲೇ ಇದೆ. ತಿಥಿ ಹಾಗೂ ಪಕ್ಷವಾಧಾರಿತ[ ಶುಕ್ಲ ಪಕ್ಷ-ಕೃಷ್ಣ ಪಕ್ಷ ] ದಿನಕಳೆದು ವಾರವಾಗಿ, ವಾಸವಾಗಿ, ಋತು ಕಳೆದು, ಆಯಣಗಳನ್ನೊಳಗೊಂಡ [ ಉತ್ತರಾಯಣ ಹಾಗೂ ದಕ್ಷಿಣಾಯಣ ] ಸಂವತ್ಸರಗಳು ಹಿಂದೆಯೂ ಇತ್ತು, ಇಂದು ಇದೆ, ಮುಂದೆಯೂ ಇರುತ್ತದೆ. ಈ ರೀತಿ ಯಥಾವತ್ತಾಗಿ ಕಾಲವನ್ನು ನಿರ್ಧರಿಸುವಂತಹ ಏಕಮಾನ ಮಾಪನವು ನಮ್ಮ ಭರತಖಂಡದ ಪಂಚಾಂಗದಲ್ಲಿ ಅಡಗಿದೆ.

 ಪಂಚಾಂಗ ಎಂದ ಕೂಡಲೇ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ನಾವೇ ಮಾಡಿಕೊಂಡಿರುವಂತಹ ಒಂದು ಕಲ್ಪನೆ ಅಥವಾ ಯಾವುದೋ ಕಟ್ಟುಪಾಡುಗಳನ್ನು ಒಳಗೊಂಡ ಪುಸ್ತಕ ಎಂದು ಭಾವಿಸುವವರು/ ಅರಿತಿರುವವರೇ ಹೆಚ್ಚು. ಆದರೆ ಪಂಚಾಂಗವನ್ನು ಸರಿಯಾಗಿ ಬಲ್ಲವರಿಂದ ತಿಳಿದುಕೊಂಡರೆ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ ಇದೆ ಪಂಚಾಂಗ ವಾಸ್ತವಕ್ಕೆ ಹೇಗೆ ಹತ್ತಿರವಾಗಿದೆ ಎಂದು, ಹಾಗೂ ಇದೇ ಪಂಚಾಂಗ ನಮ್ಮ ನಡುವೆಯೇ ಹೇಗೆ ಜೀವಂತವಾಗಿದೆ ಎಂದು ತಿಳಿಯುತ್ತದೆ.

 ಕಾಲಪುರುಷನ ವರ್ಣನೆಯಂತೂ ಅದ್ಭುತವಾಗಿರುವಂತಹದ್ದು ಅದರಲ್ಲಿಯೂ ಕಾಲಪುರುಷನ ಚಿತ್ರವು ನಾವು ಇಂದು ಭೂಮಿಯ ಮೇಲೆ ಜೀವಿಸುತ್ತಿರುವ ವಾಸ್ತವತೆಯನ್ನು ತಿಳಿಸಿಕೊಡುತ್ತದೆ. ಸೂರ್ಯನ ಮಧ್ಯಭಾಗದಲ್ಲಿ ಮಾಕುಷ್ಮಾಂಡದೇವಿ ಇರುತ್ತಾಳೆ ಆಕೆಯ 9 ಶಕ್ತಿಗಳು 9 ಕಿರಣಗಳು ಈಕೆ ಸೂರ್ಯನಿಗೆ ದಿಕ್ಕನ್ನು ತೋರಿಸುತ್ತಾಳೆ. ಸೂರ್ಯನನ್ನು ಹೊತ್ತ ರಥದ ಚಕ್ರ ಹಿಂದೂ ಪಂಚಾಂಗವಾಧಾರಿತವಾಗಿದ್ದು ಅದರ ಅರ್ಧಭಾಗ ಉತ್ತರಾಯಣವನ್ನು ಉಳಿದ ಇನ್ನರ್ಧ ಭಾಗ ದಕ್ಷಿಣಾಯಣವನ್ನು ಪ್ರತಿಬಿಂಬಿಸುತ್ತದೆ. ಈ ಚಕ್ರದಲ್ಲಿರುವ 60 ಸಣ್ಣ ಗೆರೆಗಳು 60 ಸಂವತ್ಸರವನ್ನು, ನಂತರದ ಸಣ್ಣ 12 ಗೆರೆಗಳು ಸಂವತ್ಸರದ 12 ಮಾಸಗಳು ಪ್ರತಿಬಿಂಬಿಸುತ್ತದೆ. ಈ ಚಕ್ರ ದೊಳಗಿನ ಮೂರು ಸಣ್ಣ ಚಕ್ರಗಳು ಭೂತ-ಭವಿಷ್ಯ ಹಾಗೂ ವರ್ತಮಾನವನ್ನು ಇದರ ಮೇಲಿನ ಐದು ಪುಟ್ಟ ಚಕ್ರಗಳು ತಿಥಿ, ವಾರ, ಯೋಗ, ಕರಣ, ನಕ್ಷತ್ರವನ್ನು ಪ್ರತಿಬಿಂಬಿಸುತ್ತದೆ. ಈ ರಥದ ಮುಂಭಾಗ ಉಷಾ ಹಾಗೂ ಪ್ರಭಾತ ದಿನದ ಮೊದಲ ಬೆಳಕನ್ನು ಹಾಗೂ ರೇವಂತ ಭೂಮಿಗೆ ಶಾಖವನ್ನು ಪಸರಿಸುತ್ತಾನೆ. ರಥದ ಮಧ್ಯಭಾಗದಲ್ಲಿ ಆರು ಜನರ ಪೀಠವಿದ್ದು ಅದರ ಹಿಂದೆ ದಂಡಿ ಹಾಗೂ ತಿಂಗಳ ಸೂರ್ಯ ಎಷ್ಟು ಮುಂದೆ ಚಲಿಸುತ್ತಿದ್ದನೆಂದು ಲೆಕ್ಕವಿಡುತ್ತಾರೆ. ಈ ರಥವನ್ನು ಏಳು ಕುದುರೆಗಳು ಮುನ್ನಡೆಸಿದರೆ, ಇವುಗಳೆಲ್ಲದರ ಹಿಂದೆ ಕೊನೆಯದಾಗಿ ಕಾಲಪುರುಷ ಬರುತ್ತಾನೆಂದು ಒಂದು ಕಲ್ಪನೆಯಾದರೂ ಇದೆಲ್ಲವೂ ವಾಸ್ತವಕ್ಕೆ ಹತ್ತಿರವಾಗಿಯೇ ಇದೆ.

 ಇದರೊಟ್ಟಿಗೆ ಪಂಚಾಂಗವು ನಕ್ಷತ್ರವಾದಾರಿತ ಮಳೆ ಬರಬಹುದಾದಂತಹ ದಿನಗಳನ್ನು ಕೂಡ ತಿಳಿಸುತ್ತದೆ. ಇದರ ಆಧಾರವಾಗಿಯೇ ಈ ನೆಲದ ಕೃಷಿ ಪರಂಪರೆ ಬೆಳೆದುಬಂದಿದೆ. ನಾವು ಪಠಿಸುವಂತಹ ಗಾಯತ್ರಿ ಮಂತ್ರದ ಒಳಾರ್ಥವೇ ಆಗಿರಲಿ, ಆದ್ಯ ಬ್ರಹ್ಮನಿಂದ ಪ್ರಾರಂಭವಾಗುವ ನಮ್ಮ ದಿನಚರಿಯೇ ಆಗಿರಲಿ ಇವುಗಳೆಲ್ಲವೂ ನಮ್ಮ ಇರುವಿಕೆಯನ್ನು ಸ್ಪಷ್ಟವಾಗಿ ತಿಳಿಸುತ್ತದೆ.

 ನಾವು ಇದೇ ಕಾಲವನ್ನು ಎಷ್ಟು ನಿರ್ಲಕ್ಷಿಸಿದ್ದೇವೆ ಎಂದರೆ ಪ್ರಪಂಚದ ಯಾವುದೋ ಮೂಲೆಯ ಜನ ಇದೇ ವಿಷಯವನ್ನು ಅಧ್ಯಯನ ನಡೆಸಿ ಮತ್ತೆ ನಮಗೆ ತಿಳಿಸುವಂತಹ ಶೋಚನೀಯ ಪರಿಸ್ಥಿತಿಗೆ ತಲುಪಿದ್ದೇವೆ.

 ಪ್ರತಿ ದಿನ ಸೂರ್ಯೋದಯದಿಂದ ಪ್ರಾರಂಭವಾಗುವಂತಹ ಅನೇಕ ಜೀವಿಗಳ ದಿನಚರಿ ಚಂದ್ರನ ಆಗಮನದಿಂದಾಗಿ ಮುಕ್ತಾಯಗೊಳ್ಳುತ್ತದೆ ಆದರೆ ಇದೇ ಚಂದ್ರನ ಆಗಮನದಿಂದ ಮತ್ತೊಂದು ಜಗತ್ತು ಜಾಗೃತವಾಗಿರುತ್ತದೆ. ಈ ಬೆಳವಣಿಗೆ ಮಾನವನ ಭೌತಿಕ, ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಸಹಾಯ ಮಾಡಿಕೊಡುತ್ತದೆ. ಈ ರೀತಿ ಪ್ರತಿದಿನ ನಡೆಯುವಂತಹ ಕಾಲಚಕ್ರ ಮಾನವನ ಜೀವನ ಚಕ್ರದಲ್ಲಿ ಅನೇಕ ಮಜಲುಗಳನ್ನು ದಾಟಿ ಕೊನೆಗೆ ಕಾಲಚಕ್ರದಲ್ಲಿ ಲೀನಗೊಳಿಸುತ್ತದೆ.

 ಅಳುತ್ತಾ ತಾಯಿಯ ಭೂ ಗರ್ಭಾಶಯದಿಂದ ಭೂಮಂಡಲಕ್ಕೆ ಆಗಮಿಸಿದಂತಹ ಮಗು ಹುಟ್ಟುತ್ತ ವಿಶ್ವಮಾನವನೇ. ಇದೆ ಮಗುವಿನ ಜನನದಿಂದಾಗಿ ನವದಂಪತಿಗಳು ತಂದೆ-ತಾಯಿಗಳಾಗುತ್ತಾರೆ ಅವರ ಪೋಷಕರು ಅಜ್ಜಿ-ತಾತನ ಎಂಬ ಭಾವ ಬೆಳೆಯುತ್ತದೆ. ಮುಂದೆ ಇದೆ ಮಗು ತನ್ನ ತಮ್ಮನಿಗೆ ಅಣ್ಣನಾಗುತ್ತಾನೆ ಅಥವಾ ಹೆಣ್ಣುಮಗುವಾಗಿದ್ದರೆ ಅಕ್ಕ ಆಗುತ್ತಾಳೆ. ಹೀಗೆ ಬೆಳೆಯುತ್ತಾ ಅತ್ತೆ- ಮಾವ, ಚಿಕ್ಕಪ್ಪ -ಚಿಕ್ಕಮ್ಮ, ದೊಡ್ಡಪ್ಪ- ದೊಡ್ಡಮ್ಮ, ತಾತನ ಯಾವುದೋ ಸಂಬಂಧಿಕರಿಗೆ ಸಂಬಂಧಿಕನಾಗುತ್ತಾನೆ, ದೂರದೂರಿನ ಊರುಗಳಲ್ಲಿನ ಸಂಬಂಧಿಕರಿಗೆ ನೆಂಟರಾಗುತ್ತಾನೆ, ಮುಂದೆ ಅವರದ್ದೇ ಆದಂತಹ ಮನೆತನ ಎಂಬ ಹೆಸರು ಬೆಳೆಯುತ್ತದೆ. ಅದೇನೇ ಇರಲಿ ಜೀವನದಲ್ಲಿ ಎಂತಹ ವಿದ್ಯೆ ಬಲ್ಲವನಾಗಿ ಜಗತ್ತನ್ನೇ ಜಯಿಸಿದರು ಕೂಡ ಆತ ತಾಯಿಗೆ ಮಗನೆ, ಅಜ್ಜಿ ತಾತನಿಗೆ ಮೊಮ್ಮಕ್ಕಳೇ, ಗುರುವಿಗೆ ಶಿಷ್ಯನೇ, ದೇವರಿಗೆ ಭಕ್ತನೆಂಬ ಭಾವವನ್ನು ಮಾತ್ರ ಮುಂದಿನ ಪೀಳಿಗೆಗೆ ಬಿಟ್ಟು ಹೋಗುತ್ತಾನೆ.

 ಮೇಲೆ ತಿಳಿಸಿರುವಂತಹ ಉದಾಹರಣೆ ಮಾನವನ ಜೀವನ ಕ್ರಮಕ್ಕೆ ಅನ್ವಯಿಸುವಂತಹ ಕಾಲಚಕ್ರ ವಾಗಿದೆ ಆದರೆ ಇದೇ ಕಾಲ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೂಪವನ್ನು ಪಡೆಯುತ್ತದೆ. ಭೂಮಿಯ ಮೇಲೆ ಹಾಗೂ ಭೂ ಗರ್ಭಾಶಯದಲ್ಲಿ ಜೀವಿಸುವಂತೆ ಸಕಲಜೀವ ಕೋಟಿಗಳಿಗೆ ಇದೆ ಕಾಲ ಮತ್ತೊಂದು ರೂಪವನ್ನು ನೀಡುತ್ತದೆ. ಸಾಗರದ ಜೀವಿಗಳಿಗೆ ಹಾಗೂ ಭೂಮಿಯ ಮೇಲೆ ಜೀವಿಸುವಂತಹ ಜೀವಿಗಳಿಗೆ, ಇವುಗಳೆರಡರಲ್ಲೂ  ಜೀವಿಸುವಂತಹ ಉಭಯಚರ ಜೀವಿಗಳಾದ ಆಮೆ, ಕಪ್ಪೆಗೆ, ಸರೀಸೃಪಗಳಿಗೆ ಮತ್ತೊಂದು ರೂಪವನ್ನು, ಮರುಭೂಮಿಯ ಜೀವಿಗಳಿಗೆ, ಹಿಮ ಜೀವಿಗಳಿಗೆ ಮತ್ತೊಂದು ರೂಪವನ್ನು, ಆಕಾಶದಲ್ಲಿ ಸ್ವಚ್ಛಂದವಾಗಿ ವಿಹರಿಸುವಂತಹ ಪಕ್ಷಿಗಳಿಗೆ, ಕೀಟ,ಮಿಡತೆ, ಇರುವೆಯಂತಹ ಪುಟ್ಟ ಜೀವಿಗೂ ಕೂಡ ಮತ್ತೊಂದು ರೂಪವನ್ನು ನೀಡುತ್ತದೆ.

 ಇದೇ ಕಾಲ ಸಾವಿರಾರು ವರ್ಷಗಳಿಂದ ತನ್ನಸ್ತಿತ್ವವನ್ನು ಉಳಿಸಿಕೊಂಡಿರುವಂತಹ ಅಜಾನುಬಾಹು, ಸಾವಿರಾರು ಪ್ರಾಣಿ-ಪಕ್ಷಿಗಳಿಗೆ ಆಹಾರ, ವಸತಿ, ಶುದ್ಧ ಗಾಳಿ, ನೆರಳು, ಭೂಮಿಗೆ ನೀರುಣಿಸುವಂತಹ ಕಾರ್ಯದಲ್ಲಿ ಹಾಗೂ ನೂರಾರು ಕಾರಣಗಳಿಂದ ಮಾನವರಿಗೆ ಪರೋಪಕಾರಿ ಆಗಿರುವಂತಹ ದೈತ್ಯ ಮರಗಳನ್ನು ಧರೆಗುರುಳಿಸುತ್ತದೆ ಮತ್ತೊಂದೆಡೆ ಇದೆ ಮರದಿಂದ ಬಿದ್ದ ಪುಟ್ಟ ಬೀಜಕ್ಕೆ ಸತ್ವ, ಪೋಷಕಾಂಶ ಭರಿತ, ಫಲವತ್ತಾದ ಭೂಮಿಯನ್ನು ನೀಡಿ ಬೀಜ ಮೊಳಕೆಯೊಡೆದು ಮತ್ತೆ ಅದೇ ರೀತಿ ದೈತ್ಯ ಹಾಗೂ ಸಾವಿರಾರು ವರ್ಷಗಳು ಬೆಳೆಯಬಹುದಾದಂತಹ ಮರವನ್ನು ಬೆಳೆಸುತ್ತದೆ. ಸುತ್ತಮುತ್ತಲಿನ ಪರಿಸರವನ್ನು ಸಮತೋಲನದಲ್ಲಿಟ್ಟುಕೊಂಡು ಸೂರ್ಯನ ಬೆಳಕು ಬೀಳದಂತಹ ಕಾನನವನ್ನು ತನ್ನಷ್ಟಕ್ಕೆ ತಾನೇ ಸೃಷ್ಟಿಸಿಕೊಳ್ಳುತ್ತದೆ.

 ಇದೇ ಕಾಲ ವಿನಾಶ ಕಾಲದ ಸಮಯದಲ್ಲಿ ಎಲ್ಲವನ್ನು ಆಹುತಿ ಪಡೆದುಕೊಳ್ಳಬಹುದು ಇದಕ್ಕೆ ಯಾವುದೇ ರೀತಿಯಾದಂತಹ ನಿರ್ದಿಷ್ಟ ಕಾರಣ ಇರಬಹುದು ಅಥವಾ ಇಲ್ಲದೆ ಇರಬಹುದು. ಒಂದೇ ಒಂದು ಬೆಂಕಿಯ ಕಿಡಿ ಸಕಲ ಸಸ್ಯ ಹಾಗೂ ಪ್ರಾಣಿ ಸಂಕುಲವನ್ನು ಆಹುತಿ ಪಡೆಯಬಹುದು. ಒಂದೇ ಒಂದು ವೈರಾಣು ಇಡೀ ಮಾನವ ಸಂಕುಲವನ್ನು ಬಲಿ ತೆಗೆದುಕೊಳ್ಳಬಹುದು. ಒಂದು ಮಾತಿದೆ ವಿನಾಶಕಾಲೇ ವಿಪರೀತ ಬುದ್ಧಿ ಎಂದು ಈ ಮಾತಿಗೆ ಮಾನವನೆಷ್ಟು ಹತ್ತಿರವಾಗಿದ್ದಾನೆಂದು ಹೂಇಸಲಾಗುವುದಿಲ್ಲ ಆದರೆ ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ.

 ಎಲ್ಲರೂ ಒಂದೇ ಮಾತನ್ನು ಹೇಳುವವರೇ ಕಾಲ ಕೆಟ್ಟುಹೋಯಿತು ಎಂದು ಆದರೆ ಕಾಲ ಎಂದು ಕೆಟ್ಟಿಲ್ಲ, ಇಂದು ಕೆಟ್ಟಿಲ್ಲ, ಮುಂದೆಯೂ ಕೆಡುವುದಿಲ್ಲ, ಕೆಡುವುದು ಏನಾದರೂ ಮಾನವ ಮಾತ್ರ. ಸೂಕ್ಷ್ಮತೆ ತುಂಬಿದ ಜೀವನವನ್ನು ನಾವು ಗ್ರಹಿಸಬೇಕು, ಅರ್ಥಮಾಡಿಕೊಳ್ಳಬೇಕಾಗುತ್ತದೆ ಇದಕ್ಕೆಂದು ನಾನೇನು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಅವಶ್ಯಕತೆ ಇಲ್ಲ. ಜೀವನದಲ್ಲಿ ನಾವು ತೆಗೆದುಕೊಳ್ಳುಬಹುದಾದಂತಹ ನಿರ್ಧಾರ ಹಾಗೂ ಸಣ್ಣ ಬದಲಾವಣೆಗಳು ಮಾನವನನ್ನು ಮತ್ತೊಂದು ಶಿಖರವನ್ನೇವಂತೆ ಮಾಡುತ್ತದೆ.

 ಮಾನವನ ಸೃಷ್ಟಿಯೇ ಒಂದು ಅದ್ಭುತ ಅದರಲ್ಲಿಯೂ ನಮ್ಮ ಪಂಚೇಂದ್ರಿಯಗಳ ಕಾರ್ಯಗಳಂತೂ ಅವರ್ಣನೀಯ. ಪಂಚೇಂದ್ರಿಯಗಳಲ್ಲಿ ಒಂದಾದಂತಹ ನಮ್ಮ ನೇತ್ರಗಳು ಬಹಳ ಸೂಕ್ಷ್ಮತೆಯನ್ನು ಗ್ರಹಿಸುವಂತಹ ವಿಶೇಷ ಗುಣವನ್ನು ಹೊಂದಿದೆ ಎಂತಹ ಕತ್ತಲೆಯೇ ಇರಲಿ ನಮ್ಮ ಒಳಮನಸ್ಸನ್ನು ಜಾಗೃತವಾಗಿರುವಂತೆ ಮಾಡುತ್ತದೆ. ರಾತ್ರಿಯ ಬೆಳದಿಂಗಳ ಬೆಳಕಿನಲ್ಲಿ ಸ್ವಲ್ಪಹೊತ್ತು ಏಕಾಂತವಾಗಿ ಕಾಲ ಕಳೆದರೆ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಮೌನವಾಗಿ ಸ್ವಲ್ಪಹೊತ್ತು ಕಾಲ ಕಳೆದರೆ ಮನಸ್ಸಿನ ಭಾಷೆ ಅರ್ಥವಾಗುತ್ತದೆ. ಬೆಳಿಗ್ಗೆ ಸೂರ್ಯೋದಯವಾಗುವ ಮುನ್ನ ಎದ್ದು ಸೂರ್ಯನಿಗಾಗಿ ಕಾದು ಸೂರ್ಯನಮಸ್ಕಾರವನ್ನು ಮಾಡಿದರೆ ಜೀವನ ಸಾರ್ಥಕವೆನಿಸುತ್ತದೆ. ಯಾವುದಾದರೂ ಒಂದು ಪುಟ್ಟ ಹೂಬಿಡುವ ಗಿಡವನ್ನು ಕುಂಡದಲ್ಲಿ ಬೆಳೆಸಿ ಪ್ರತಿದಿನವೂ ನೀರನ್ನು ಹಾಕಿ, ಒಂದು ಚಿಟ್ಟೆ ಅದರ ಹತ್ತಿರ ಬಂದಾಗ ನಮ್ಮ ಸಂತೋಷ ಇಮ್ಮಡಿಸುತ್ತದೆ. ಸಮಯ ಸಿಕ್ಕಾಗ ಪುಸ್ತಕವನ್ನು ಓದಲು ಪ್ರಯತ್ನಿಸಿ ಪುಸ್ತಕ ಪ್ರೀತಿಯು ಹಾಗೂ ಜ್ಞಾನಶಕ್ತಿಯು ಹೆಚ್ಚಾಗುತ್ತದೆ. ಈ ಕಾರ್ಯಗಳೆಲ್ಲವು ಮನಸ್ಸಿಗೆ ಶಾಂತಿ ತಂದುಕೊಡುವುದಲ್ಲದೆ ನಮ್ಮನ್ನು ಇನ್ನಷ್ಟು ಜಾಗೃತವಾಗಿರುವಂತೆ ಮಾಡುತ್ತವೆ.

 ಕೆಟ್ಟಿರುವುದು ಕಾಲವೇನಲ್ಲ ಬದಲಿಗೆ ಮಾನವ ಮಾತ್ರ. ಇದನ್ನು ಸರಿಪಡಿಸಿಕೊಳ್ಳಲು ಇದೆ ಸರಿಯಾದ ಸಮಯ. ನಮ್ಮ ಪುಟ್ಟ ಪ್ರಯತ್ನಗಳಿಂದ ಮುಂದಿನ ತಲೆಮಾರುಗಳು ಸರಿದಾರಿಯಲ್ಲಿ ನಡೆಯಬಹುದಾದರೆ ನಾವೇಕೆ ಈ ಪುಟ್ಟ ಪ್ರಯತ್ನಗಳನ್ನು ಮಾಡಬಾರದು? ಆದ್ದರಿಂದ ನಾವು ಈ ಸಮಯದಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ ಏಕೆಂದರೆ ಕಾಲಕಳೆದಂತೆ ನಾವು ಮರೆಯಾಗಿ ಭೂತಕಾಲದಲ್ಲಿ ಸೇರಿಕೊಳ್ಳುತ್ತೇವೆ ಇದೆ ಕಾಲ ಮುಂದುವರೆದು ಮುಂದಿನವರಿಗೆ ವರ್ತಮಾನ ಹಾಗೂ ಭವಿಷ್ಯ ಕಾಲವಾಗಿರುತ್ತದೆ.

Saturday, June 13, 2020

ಜೀವನವೇ ಒಂದು ಸಾಧನೆ.

                      ಎಸ್ ಪಿ ತೇಜರಾಜು.
             


 ಇಷ್ಟು ದಿನವಾದರೂ ನಾನು ಕೂಡ ಈ ವಿಷಯಗಳ ಬಗ್ಗೆ ಗ್ರಹಿಸಿಯೇ ಇರಲಿಲ್ಲ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ನಡೆಸುವ ಮಾನವ ಕೆಲವೇ ನಿಮಿಷಗಳಲ್ಲಿ ಮೂಟೆಗಟ್ಟಲೆ ಹಣವನ್ನು ಎಣಿಸುವುದರಲ್ಲಿ ನಿಸ್ಸೀಮನಾಗಿದ್ದ ಆದರೆ ತಾನು ಈ ಭೂಮಿಯ ಮೇಲೆ ಎಷ್ಟು ದಿನಗಳು ಬದುಕಬಹುದೆಂದು ಅಂದಾಜಿಸುವುದುರಲ್ಲಿ ಸೋತಿದ್ದಾನೆ.
  ನಮ್ಮ ಪ್ರಾಚಾರ್ಯರೊಬ್ಬರು ಬರೆದಿದಂತಹ "ಹೀಗೊಂದು ಆಯಸ್ಸಿನ ಲೆಕ್ಕಾಚಾರ" ಎಂಬ ಅಂಕಣವನ್ನು ಓದುವ ಮೊದಲು ಮಾನವ ಕಡಿಮೆ ಎಂದರು ಒಂದು ಲಕ್ಷ ದಿನವಾದರೂ  ಬದುಕಬಹುದೆಂದು ಅಂದಾಜಿಸಿದ್ದೆ ನನ್ನ ಲೆಕ್ಕಾಚಾರದಂತೆ ಮಾನವನೇನಾದರೂ ಲಕ್ಷದಿನ  ಬದುಕಿದರೆ ಅವನ ಆಯಸ್ಸು 274 ವರ್ಷಗಳಾಗಿರುತ್ತದೆ. ಲೆಕ್ಕ ತಿಳಿದು ಗಾಬರಿಯಾಗಿದ್ದರು ಮಾನವ ಕನಿಷ್ಠಪಕ್ಷ ಒಂದು ಲಕ್ಷ ದಿನವೂ ಬದುಕುವುದಿಲ್ಲವಲ್ಲ ಎಂದು ಬೇಸರವಾಯಿತು.

 ಅಂಕಣದಲ್ಲಿಯೇಇರುವಂತೆ ಮಾನವ 70 ವರ್ಷ ಬದುಕಿದ್ದರೆ ಅವನು 25,550 ದಿನಗಳನ್ನು ಕಳೆದಿರುತ್ತಾನೆ. ಇದರಲ್ಲಿ 8517 ದಿನಗಳನ್ನು ನಿದ್ದೆಯಲ್ಲಿ, 6388 ದಿನಗಳು ತನ್ನ ಕೆಲಸಗಳಲ್ಲಿ, 6388 ದಿನಗಳನ್ನು ದಿನ ನಿತ್ಯಕರ್ಮಗಳಲ್ಲಿ, ಊಟ-ಉಪಚಾರಗಳಲ್ಲಿ, ಸ್ನೇಹಿತರು, ಕುಟುಂಬದವರೊಂದಿಗೆ, ಟಿವಿ ಅಥವಾ ಮೊಬೈಲ್ಗಾಗಿ ಕಳೆದು ಹೋಗುತ್ತದೆ ಇಷ್ಟೆಲ್ಲವನ್ನು ಕಳೆದು ತನಗಾಗಿ ಉಳಿಯುವುದು ಕೇವಲ 4258 ದಿನಗಳು ಅಂದರೆ ಸರಾಸರಿ ದಿನಕ್ಕೆ ನಾಲ್ಕು ಗಂಟೆಗಳು ಮಾತ್ರ.

  ಕೆಲವರು ತನಗಾಗಿಯೇ ಉಳಿದ  4258 ದಿನಗಳನ್ನು ಸಮಾಜದಲ್ಲಿ ತನ್ನ ಹೆಸರನ್ನು ಸಂಪಾದಿಸಲು, ತನ್ನ ಅಸ್ತಿತ್ವವನ್ನು ಉಳಿಸಬೇಕೆಂದು ಬಹಳ ಪ್ರಯತ್ನಗಳನ್ನು ನಡೆಸುತ್ತಾನೆ. ಸೂಕ್ಷ್ಮವಾಗಿ ಗಮನಿಸಿದರೆ ಎಷ್ಟೋ ಮನೆಗಳಲ್ಲಿ ಅವರ ಅಜ್ಜಿ ತಾತಂದಿರ ಕುರುಹೇ ಇರುವುದಿಲ್ಲ ತಾತ ಮುತ್ತಾತಂದಿರುಗಳ ಹೆಸರೇ ನೆನಪಿರುವುದಿಲ್ಲ.

  ಇನ್ನು ಕೆಲವರು ತಮಗಾಗಿಯೇ ಸಿಗುವಂತಹ ಈ ಸುಸಂದರ್ಭವನ್ನು ಬಹಳ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮುಖಾಂತರ ಸದುಪಯೋಗಪಡಿಸಿಕೊಳ್ಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗಳು ಬೆಳೆದಂತಹ ಪೂರಕ ವಾತಾವರಣ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿಭಿನ್ನವಾಗಿರುವುದರಿಂದ ಅವರವರ ಆಸಕ್ತಿಗಳು ಕೂಡ ಬದಲಾಗುತ್ತಾ ಹೋಗುತ್ತವೆ. ಕೆಲವರು ಪುಸ್ತಕಗಳನ್ನು ಓದುವುದರಲ್ಲಿ ತೊಡಗಿಸಿಕೊಂಡರೆ ಇನ್ನು ಕೆಲವರು ಬರಹದಲ್ಲಿ, ಮತ್ತೊಬ್ಬರು ಕ್ರೀಡೆಯಲ್ಲಿ, ಮಗದೊಬ್ಬರು ಕೃಷಿಯಲ್ಲಿ ಹೀಗೆ ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
 ಪ್ರತಿಯೊಂದು ಕ್ಷೇತ್ರದಲ್ಲಿ ಮುಳುಗುತ್ತಾ ಹೋದಷ್ಟು ಅದರ ಆಳ ಆಗಲ ಇನ್ನಷ್ಟು ವಿಸ್ತಾರವಾಗುತ್ತಾ ಹೋಗುತ್ತದೆ. ಹೀಗೆ ಇಷ್ಟೆಲ್ಲಾ ಆಸಕ್ತಿಗಳಲ್ಲಿ ಪುಸ್ತಕ ಬರೆಯುವವರು ಹಾಗೂ ಓದುವರ ಸಂಖ್ಯೆ ಬಹಳ ವಿಶಾಲವಾಗಿದೆ. ಅನೇಕ ಕಾರಣಗಳಿಂದ ಓದುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾದರೂ ಬರೆಯುವವರ ಸಂಖ್ಯೆಯಲ್ಲೇನು ಕಡಿಮೆ ಎಂದೆನಿಸಲಿಲ್ಲ.

 ಈ ಬರವಣಿಗೆಯಲ್ಲಿ ಬಹಳ ಪ್ರಕಾರಗಳು ಇದ್ದರೂ ಕೂಡ ಬರಹಗಾರರು ತಾವು ಹೇಳಬೇಕಾದಂತಹ ವಿಷಯಗಳನ್ನು  ಓದುಗರ ದೃಷ್ಟಿಕೋನದಲ್ಲಿಇಟ್ಟುಕೊಂಡು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಲೆತ್ನಿಸುತ್ತಾರೆ. ಎಷ್ಟೋ ಜನ ಬರಹಗಾರರು ಇಹಲೋಕವನ್ನು ತ್ಯಜಿಸಿದರು ಕೂಡ ಅವರು ಬರೆದಂತಹ ಪುಸ್ತಕಗಳು ಜನರ ಮನಸ್ಸಿನಲ್ಲಿ ಇಂದಿಗೂ ಕೂಡ ಜೀವಂತವಾಗಿದೆ ಇದರಿಂದಲೇ ಪುಸ್ತಕ ಮಹತ್ವ ಎಷ್ಟಿದೆ ಎಂದು ತಿಳಿದುಬರುತ್ತದೆ.

 ಪ್ರತಿಯೊಬ್ಬ ಪುಸ್ತಕ ಓದುಗನ ಅಭಿರುಚಿಗಳು ವಿಭಿನ್ನವಾಗಿರುವುದರಿಂದ ಕೆಲವರು ವೇದ-ಶಾಸ್ತ್ರ ಪುರಾಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು, ಕೆಲವರು ಪರಿಸರ ಸಂಬಂಧಿ ಪುಸ್ತಕಗಳನ್ನು, ಇನ್ನು ಕೆಲವರು ಕೃಷಿ ಸಂಬಂಧಿ, ಪ್ರಾಣಿ-ಪಕ್ಷಿಗಳಿಗೆ ಸಂಬಂಧಿಸಿದಂತೆ, ಹಾಗೂ ಕಥೆ-ಕಾದಂಬರಿ-ಕವನ ಆಧಾರಿತ ಪುಸ್ತಕಗಳನ್ನು, ಪ್ರಚಲಿತ ವಿದ್ಯಮಾನ ಆಧಾರಿತ, ಪಂಚಾಂಗ, ವಿಜ್ಞಾನ ಆಧಾರಿತ, ಪ್ರವಾಸಿ ಕಥನವಾಧಾರಿತ, ಯೋಗ, ಆಹಾರ ಪದ್ಧತಿ ಆಧಾರಿತ ಪುಸ್ತಕಗಳನ್ನು ಓದಲು ಇಚ್ಛೆಪಡುತ್ತಾರೆ.

 ಪುಸ್ತಕಲೋಕವೇ ಒಂದು ಮುದುಡದ, ಮಾಗದ, ಕೊನೆಇಲ್ಲದ ಲೋಕ. ಸಾಮಾನ್ಯವಾಗಿ ಓದುಗರದ್ದೆ ಒಂದು ಪ್ರಪಂಚವಾಗಿರುವುದರಿಂದ ತಮಗೆ ಸಮಯ ಸಿಕ್ಕಾಗ ಅಂದರೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಥವಾ ರಾತ್ರಿ ನಿದ್ದೆಗೆ ಜಾರುವ ಮುನ್ನ ತಮಗಿಷ್ಟವಾದ ಪುಸ್ತಕವನ್ನು ಓದಲು ಇಚ್ಛೆಪಡುತ್ತಾರೆ. ಕೆಲವರು ಒಂದೇ ಒಂದು ವಿಷಯದಲ್ಲಿ ಮುಳುಗಿ ಹೋಗಿದ್ದರೆ, ಇನ್ನು ಕೆಲವರು ವಿವಿಧ ಕ್ಷೇತ್ರಗಳಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿ ಓದುತ್ತಾರೆ. ಯಾವುದೇ ವಿಷಯವಾಗಿರಲಿ ಅಥವಾ ಯಾವುದೇ ಪುಸ್ತಕವಾಗಿರಲಿ ಓದುವುದರಿಂದ ಜ್ಞಾನಾಭಿವೃದ್ಧಿ ಆಗುವುದರ ಜೊತೆಗೆ ಮನಸ್ಸಿಗೆ ಶಾಂತಿ ದೊರಕುವುದೇನಂತು ಸುಳ್ಳೇನಲ್ಲ.

 ಪುಸ್ತಕಗಳ ಮಹತ್ವ ಅಗಾಧವಾದದ್ದು ಮಾನವನ ವಿಕಸನದ ಬಗ್ಗೆಯಾಗಲಿ ಅಥವಾ ವೇದ ಶಾಸ್ತ್ರ ಪುರಾಣಗಳ ಬಗ್ಗೆಯೇ ತಿಳಿದುಕೊಳ್ಳಲು ಈ ಪುಸ್ತಕಗಳು ನೆರವು ಮಾಡಿಕೊಡುತ್ತವೆ. ಒಬ್ಬ ನೊಂದು-ಬೆಂದು ಜೀವನವೇ ಬೇಡ ಎನ್ನುವ ವ್ಯಕ್ತಿಗೂ ಕೂಡ ಸ್ಪೂರ್ತಿಯನ್ನು ನೀಡಿ ಮೇಲೆದ್ದು ಮುನ್ನಡೆಸುವ ಶಕ್ತಿಯನ್ನು ನೀಡುತ್ತದೆ. ಅದಕ್ಕೋಸ್ಕರವಾಗಿಯೇ ನಮ್ಮ ದೇಶದ ಅಪ್ರತಿಮ ವಿಜ್ಞಾನಿ ಅಬ್ದುಲ್ ಕಲಾಂರವರ ಹೇಳಿರುವುದು "ಒಂದು ಉತ್ತಮ ಪುಸ್ತಕ ನೂರು ಉತ್ತಮ ಸ್ನೇಹಿತರಿಗೆ ಸಮಾನವಾಗಿದೆ
ಆದರೆ ಒಬ್ಬ ಉತ್ತಮ ಸ್ನೇಹಿತ ಗ್ರಂಥಾಲಯಕ್ಕೆ ಸಮಾನ" ಎಂದು.


 ಒಮ್ಮೆ ಯೋಚಿಸಿ ನಮ್ಮ ಪೂರ್ವಜರೆಲ್ಲರೂ ಕೂಡ ಬರಿಗೈಯಲ್ಲೇ ಬಂದವರು. ಭೂಮಿತಾಯಿಯನ್ನು ನಂಬಿ ಜಮೀನುಗಳನ್ನು ನೋಡಿಕೊಂಡು, ಕಷ್ಟಪಟ್ಟು ತೋಟವನ್ನು ಮಾಡಿ, ಯಾವುದೇ ವಿಷವನ್ನು ಭೂಮಿಗೆ ಸೇರಿಸದೆ, ಹಬ್ಬ-ಹರಿದಿನ ಜಾತ್ರೆಗಳನ್ನು ಮಾಡಿಕೊಂಡು, ಕೊಯ್ಲು ಕಟಾವಾದ ಬಳಿಕ ಹರಿಕಥೆ, ಕೀರ್ತನೆ, ನಾಟಕ, ಯಕ್ಷಗಾನ, ಪುರಾಣ, ಭಜನೆಗಳನ್ನು ಮಾಡಿಕೊಂಡು ರಾಮಾಯಣ-ಮಹಾಭಾರತದಂತಹ ಪವಿತ್ರ ಪುಸ್ತಕಗಳನ್ನು ಓದಿಕೊಂಡು ಜ್ಞಾನಭಂಡಾರವನ್ನು ಇಮ್ಮಡಿಸಿ ಸಾವನ್ನು ಪ್ರೀತಿಯಿಂದ ಸ್ವಾಗತಿಸಿಕೊಂಡು ಪರಿಸರಕ್ಕೆ ಪೂರಕವಾಗಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ನಿಜವಾದ ಸೌಂದರ್ಯ ಅಡಗಿರುವುದೆ ಈ ನಿಸರ್ಗ ಸ್ನೇಹಿ ಜೀವನದಲ್ಲಿ ಅಲ್ಲವೇ ? ಇದೆ ಅಲ್ಲದೆ ಜೀವನವೇ ಒಂದು ಸಾಧನೆ ಎಂದರೆ.