Saturday, August 29, 2020

                                          ಸಮಯಕ್ಕೆ ಬೆಲೆ ಕಟ್ಟಲು ಸಾಧ್ಯವೇ?

                                              ಎಸ್ ಪಿ ತೇಜರಾಜು.

Student Life is golden life  ಎಂಬ ಮಾತಿದೆ ವಿದ್ಯಾರ್ಥಿ ಜೀವನವನ್ನು ಕಳೆದ ಬಹುಪಾಲು ಮಂದಿ ಹೌದು ಎನ್ನುವುದೇನೋ ನಿಜವಾದರೂ ಇನ್ನುಳಿದವರು ಇಲ್ಲ ಎನ್ನುವುದಕ್ಕೆ ಅವರದ್ದೇ ಆದಂತಹ ಬಲವಾದ ಕಾರಣಗಳಿರಬಹುದು, ರಿಮೋಟ್ ಏರಿಯಾಗಳಲ್ಲೇ ಆಗಲಿ ಅಥವಾ ನಗರಗಳಲ್ಲಿಯೇ ಆಗಲಿ ಬೆರಳೆಣಿಕೆಗೆ ಸಿಗದ ಅದೆಷ್ಟೋ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಇಂತಹ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸರಕಾರ ಹಾಗೂ ಸರಕಾರೇತರ ಸೇವಾ ಸಂಸ್ಥೆಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ,SSLC ಯವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವೇ ಈ ಯೋಜನೆಯ ಒಂದು ಉದಾಹರಣೆಯಾಗಿದೆ.

 ಸೂಕ್ಷ್ಮವಾಗಿ ಗಮನಿಸಿದರೆ ಖಾಸಗಿ ಹಾಗೂ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಬಹಳಷ್ಟು ಲೋಪದೋಷಗಳಿರುವುದರಿಂದಲೇ ಇಂದಿನ ದಿನದ ಚರ್ಚಾ ವಿಷಯವಾಗಿದೆ, ಇದಕ್ಕಾಗಿಯೇ ರಾಷ್ಟ್ರೀಯ ಶಿಕ್ಷಣ ಸಮಿತಿಯು ಸುದೀರ್ಘ ಅಧ್ಯಯನವನ್ನು ನಡೆಸಿ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ತರಲಾರಂಭಿಸಿದೆ, ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡುತ್ತ ಹೋದರೆ ಅಂಕಣದ ವಿಷಯ ಬೇರೆಡೆಗೆ ತಿರುಗುವುದರಿಂದ ವಿಷಯವನ್ನು ಇಲ್ಲಿಗೆ ನಿಲ್ಲಿಸಿ ನಾವು ಓದಿದಂತಹ ಶಾಲಾ - ಕಾಲೇಜಿನ ದಿನಗಳನ್ನು ನೆನಪಿಸಿಕೊಳ್ಳುವುದು ಅಂಕಣದ ಆಶಯವಾಗಿದೆ.

 ಬಹುಪಾಲು ಮಂದಿ ನಮ್ಮ ಪೋಷಕರು ಹಳ್ಳಿಯವರೆ ಆಗಿರುವುದರಿಂದ ಅವರು ಶಿಕ್ಷಣಕ್ಕಾಗಿ ಸಾಹಸವನ್ನೇ ಪಟ್ಟಿದ್ದಾರೆ ತಮ್ಮ ಊರಿನಲ್ಲಿರುವ ಪ್ರೈಮರಿ ಸ್ಕೂಲ್ ಅನ್ನು ಮುಗಿಸಿ ಪಕ್ಕದ ಹಳ್ಳಿಗೆ ಹೈಸ್ಕೂಲ್ ಗಾಗಿ ಹೋಗಬೇಕಾಗಿತ್ತು, ಮನೆಯಲ್ಲಿ ಹಣಕಾಸಿನ ತೊಂದರೆಯಿಂದಲೂ, ದೂರದ ಊರಿಗೆ ನಡೆದು ಹೋಗಬೇಕೆಂದಲೋ, ಗುರುಗಳು ಹೊಡೆಯುತ್ತಾರೆಂತಲೋ ಶಾಲೆಯಿಂದ ಹೊರಗುಳಿದರು ಇದರ ನಡುವೆಯೂ ಕೆಲವರು ಓದಿ ನಗರವನ್ನು ಸೇರಿ ದೊಡ್ಡ ಹುದ್ದೆಗಳನ್ನು ಪಡೆದವರಿದ್ದಾರೆ.

 ಪೋಷಕರು ಕಡಿಮೆ ಸಮಯವನ್ನು ವಿದ್ಯಾರ್ಥಿ ಜೀವನದಲ್ಲಿ ಕಳೆದಿದ್ದರೂ ಕೂಡ ಅವರ ನೆನಪುಗಳು ಸ್ಮೃತಿಪಟಲದಲ್ಲಿ ಹಸಿರಾಗಿದೆ. ಪಕ್ಕದ ಹಳ್ಳಿಯ ಶಾಲೆಗೆ ನಡೆದುಕೊಂಡು ಹೋಗುವಾಗ ಸ್ನೇಹಿತರೊಂದಿಗೆ ಗೇಲಿ ಮಾಡಿಕೊಂಡು ಹೋಗಿದ್ದು, ರಸ್ತೆಯ ಆಜುಬಾಜಿನಲ್ಲಿ ಬೆಳೆದಿದಂತಹ ನೇರಳೆ, ಹುಣಸೆ ಮರವನ್ನು ಹತ್ತಿ ಕಿತ್ತು ತಿಂದು ಗುರುಗಳಿಗೆ ತಿಳಿಯದ ಹಾಗೆ ಬಾಯಿಯನ್ನು ತೊಳೆದುಕೊಂಡು ಹೋಗಿದ್ದು, ಮಳೆಗಾಲ ಬಂತೆಂದರೆ ತಿಂಗಳುಗಟ್ಟಲೆ ಶಾಲೆ ನಡೆಯದಿದ್ದಿದ್ದು, ಭಾನುವಾರ ಬಂತೆಂದರೆ ಸ್ನೇಹಿತರೊಂದಿಗೆ ಸೈಕಲ್ ತುಳಿದಿದ್ದು, ಚಾನೆಲ್ನಲ್ಲಿ ಈಜು ಹೊಡೆದದ್ದು, ಆಲೆಮನೆಯ ಬೆಲ್ಲದ ಅಂಟು ತಿಂದಿದ್ದು, ರಾಗಿ ತೆನೆ ಕಿತ್ತು ತಿಂದಿದ್ದು, ದನ ಮೇಯಿಸಲೋ ಅಥವಾ ಸೌದೆತರಲು ಕಾಡಿಗೆ ಹೋದಾಗ ಆದಂತಹ ಅನುಭವಗಳು, ಬಿಸಿಲು ಮಳೆ ಚಳಿಗೆ ತಲೆಕೆಡಿಸಿಕೊಳ್ಳದೆ ಸ್ನೇಹಿತರೊಂದಿಗೆ ಹಬ್ಬ ಹರಿದಿನ ಜಾತ್ರೆಗಳಿಗೆ ನಡೆದುಕೊಂಡು ಹೋಗಿದ್ದು, ಬೇಸಿಗೆ ರಜೆಯಲ್ಲಿ ನಡೆದ ಅನೇಕ ಘಟನೆಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

 ನಮ್ಮ ಪೋಷಕರಿಗೆ ಆಗಲಿ ಅಥವಾ ನಮಗೆ ಆಗಲಿ ಈ ವಿದ್ಯಾರ್ಥಿ ಜೀವನ ಎನ್ನುವುದು ಒಂದು ಹೊಸ ಅನುಭವಗಳನ್ನು ಹೊತ್ತು ಸಾಗುವ ಪಯಣವಾಗಿದೆ. ಕೆಲವರು ತಮ್ಮ ವಿದ್ಯಾರ್ಥಿ ಜೀವನದ ಕೊನೆಯ ಘಟ್ಟವನ್ನು ಒಂದೇ ಒಂದು ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿರುತ್ತಾರೆ ಇನ್ನು ಕೆಲವರು ಬೇರೆ ಬೇರೆ ಕಡೆ ಮುಗಿಸಿರುತ್ತಾರೆ, ಕೆಲವು ವಿದ್ಯಾರ್ಥಿಗಳು ಪೋಷಕರಿಗೆ ತಿಳಿಯದ ಹಾಗೆ ದುಶ್ಚಟಗಳಿಗೆ ಬಲಿಯಾಗಿ ಶಾಲೆಯನ್ನು ತೊರೆದವರಿದ್ದಾರೆ, SSLC,PUC, DEGREE ವಿವಿಧ ಸ್ತರಗಳಲ್ಲಿ ಅನುತ್ತೀರ್ಣರಾಗಿ  ವಿದ್ಯಾರ್ಥಿ ಜೀವನಕ್ಕೆ ವಿದಾಯ ಹೇಳಿದವರಿದ್ದಾರೆ, ಇವರುಗಳ ನಡುವೆಯೂ ಬೆರಳೆಣಿಕೆಯಷ್ಟು ಜನ ಸ್ನಾತಕೋತ್ತರವನ್ನು ಮುಗಿಸಿದವರಿದ್ದಾರೆ.

 ಪದವಿ ಶಿಕ್ಷಣವು ಜೀವನದ ಒಂದು ಘಟ್ಟ, ಎರಡು ವರ್ಷದ ಪದವಿಪೂರ್ವ ಶಿಕ್ಷಣವು ತಿಳಿಯದಹಾಗೆ ಮುಗಿದಿರುತ್ತದೆ. ಹೊಸ ಕಾಲೇಜು ಹೊಸ ಸ್ನೇಹಿತರೊಂದಿಗೆ ಪದವಿಗೆ ಕಾಲು ಇಟ್ಟಿರುತ್ತಾರೆ, ಇದರಿಂದ ಎಲ್ಲವೂ ಹೊಸತನದಿಂದ ಕೂಡಿರುತ್ತದೆ. ಈ ಕಾಲಘಟ್ಟ ಪ್ರತಿಯೊಬ್ಬರ ಜೀವನದಲ್ಲಿಯೂ ತಮ್ಮ ಹವ್ಯಾಸಗಳಿಗೆ ಹಾಗೂ ಭವಿಷ್ಯಕ್ಕೆ ರೆಕ್ಕೆ ಬಿಚ್ಚಿ ಹಾರುವ ಕಾಲವಾಗಿರುತ್ತದೆ. ಫೇಲಾಗುವರಿಂದಲೂ ಹಿಡಿದು ರಾಂಕ್ ಗಳಿಸುವವರು ಕೂಡ ಇಲ್ಲಿರುತ್ತಾರೆ, freshers party ಇಂದ ಪ್ರಾರಂಭವಾಗಿ ಪ್ರತಿ ಸೆಮಿಸ್ಟರ್ ನಲ್ಲಿ ನಾಲ್ಕಾರು ತರಹದ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ,CR election, Sports, College annual day, NSS, NCC, ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿಯೇ ಮೊದಲ ವರ್ಷ ಮುಗಿದಿರುತ್ತದೆ.

 ಇಷ್ಟರಲ್ಲಾಗಲೇ ಪ್ರತಿಯೊಬ್ಬರೂ ತಮ್ಮತಮ್ಮ ಬಳಗದ ಸ್ನೇಹಿತರನ್ನು ಮಾಡಿಕೊಂಡು ಆತ್ಮೀಯರಾಗುತ್ತಾರೆ. ಓದುವವರದೇ ಒಂದು ಬಳಗವಾದರೆ, ಓದದವರದು ಮತ್ತೊಂದು ಬಳಗ, ಕಾಲೇಜಿಗೆ ಬಂಕ್ ಹೊಡೆಯುವವರದು ಮತ್ತೊಂದು ಬಳಗ, ಹೀಗೆ ತಮ್ಮ ತಮ್ಮ ಹವ್ಯಾಸಗಳಿಗನುಗುಣವಾಗಿ ಸ್ನೇಹಿತರ ಬಳಗವಾಗಿರುತ್ತದೆ. ಸ್ನೇಹಿತರೊಂದಿಗೆ ಸಣ್ಣಪುಟ್ಟ ಜಗಳಗಳು ನಡೆದಿದ್ದರೂ ಕೂಡ ಪ್ರವಾಸ ಎಂದ ಕೂಡಲೇ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಮೈಸೂರಿನಲ್ಲಿರುವವರಿಗಂತೂ ವಾರಕ್ಕೆರಡು ದಿನ ಚಾಮುಂಡಿ ಬೆಟ್ಟ, ತಿಂಗಳಿಗೆ ಎರಡು ಬಾರಿ KRS backwater, ಪ್ರತಿ ಸೆಮಿಸ್ಟರ್ ನಲಿಯು ತಪ್ಪದ ಹಾಗೆ 8-10 ಜನರ ಬೈಕ್ ಟ್ರಿಪ್ ಇರುವುದುಂಟು, ಮೈಸೂರಿನ ಸುತ್ತಮುತ್ತ ಅನೇಕ ಪ್ರವಾಸಿ ತಾಣಗಳು ಇರುವುದರಿಂದ 1Day trip ಮಾಡಲು ಅನೇಕ ಅವಕಾಶಗಳು ಇರುವುದುಂಟು.

ಬಿಳಿಗಿರಿರಂಗನ ಬೆಟ್ಟ(BR Hill's), ಮುತ್ತತ್ತಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಫಾರೆಸ್ಟ್, ತಲಕಾಡು, ಮಲೆ ಮಹದೇಶ್ವರ ಬೆಟ್ಟ, ನಂಜನಗೂಡು, ಮಡಿಕೇರಿಯ ಅಬಿ ಫಾಲ್ಸ್, ಎಣ್ಣೆಹೊಳೆ, ತಲಕಾವೇರಿ, ರಾಜಾಸೀಟ್, ಮಂದಲ್ಪಟ್ಟಿ, ಇರ್ಪು ಫಾಲ್ಸ್, ನಾಗರಹೊಳೆ, ಕಬಿನಿ ಜಲಾಶಯ,kabini back water, ಚಿಕ್ಕಮ್ಮ ಚಿಕ್ಕದೇವಿ ಬೆಟ್ಟ, ಬಳ್ಳೆಫಾರೆಸ್ಟ್, ಭೀಮನಕೊಲ್ಲಿ, ಗದಿಗೆ, ಸುತ್ತೂರು, ಸೋಮನಾಥಪುರ, ವ್ಯವಸ್ಥಿತವಾಗಿ ಯೋಚನೆ ಮಾಡಿದ್ದೆ ಆದರೆ ಪ್ರತಿಯೊಂದು ಒಂದೊಂದು ದಿನದ ಪ್ರವಾಸವಾಗುತ್ತದೆ.

 ಹಾಸನದ ಬೇಲೂರು, ಹಾರಂಗಿ ಜಲಾಶಯ, ಹಳೇಬೀಡು, ಆಗುಂಬೆಯ sunset view point, ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ, ಮುಳ್ಳಯ್ಯನ ಗಿರಿ, ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಬಿಸಿಲೆ ಘಾಟ್, ಮಂಗಳೂರು ಬೀಚ್, ಊಟಿ, ಕೊಡೆಕೆನಾಲ್ ಎರಡರಿಂದ ನಾಲ್ಕು ದಿನದ ಪ್ರವಾಸವಾಗುತ್ತದೆ.

 ಚಾರಣಗಳಲ್ಲಿ ಆಸಕ್ತಿ ಇರುವವರಿಗಂತೂ ಕೊಡಚಾದ್ರಿಯ, ತಡಿಯಂಡಮೋಳ್, ಎತ್ತಿನ ಭುಜ, ಚಾರ್ಮುಡಿ ಘಾಟ್, ನಿಶಾನಿ ಬೆಟ್ಟ, ಕುಮಾರ ಪರ್ವತ, ಕುದುರೆಮುಖ, ಕೆಮ್ಮಣ್ಣುಗುಂಡಿ, ಹೀಗೆ ಹತ್ತು ಹಲವು ಚಾರಣ ಪ್ರದೇಶಗಳು ಎರಡು ಮೂರು ದಿನದ ಪ್ರವಾಸದಲ್ಲಿ ಕೊನೆಯಾಗುತ್ತವೆ.

 ಇವುಗಳೆಲ್ಲವೂ ಸ್ನೇಹಿತರೊಂದಿಗಿನ ಪ್ರವಾಸವಾದರೆ ಕಾಲೇಜಿನಿಂದ NSS camp, Industrial visit ಗಳಿರುತ್ತಿದ್ದವು.

 ಇವುಗಳ ನಡುನಡುವೆಯೇ ಕಾಲೇಜಿನ ಇಂಟರ್ನಲ್ಸ್(Internals), Record submission,ಗಳಾಗುತ್ತಿದ್ದಂತೆ ಕೊನೆಯ ಸೆಮಿಸ್ಟರ್ನ ಎಕ್ಸಾಮ್ ಹತ್ತಿರವಾಗಿರುತ್ತವೆ, ಕೊನೆಯದಾಗಿ ಉಳಿವುದು ಬೀಳ್ಕೊಡುಗೆ ಕಾರ್ಯಕ್ರಮ ಜೂನಿಯರ್ಸ್ ಗಳು ಕೂಡ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಾರೆ.

 ಕಾಲೇಜಿನ ಎಕ್ಸಾಮ್ ಮುಗಿದ ಮಾರನೇ ದಿನದಿಂದಲೇ ಪ್ರತಿಯೊಬ್ಬರಿಗೂ ಅವರದ್ದೇ ಆದಂತಹ ಜೀವನವಾಗಿರುತ್ತದೆ, ಕೆಲವರು ಸ್ನಾತಕೋತ್ತರ ಬೆನ್ನು ಹತ್ತಿದರೆ, ಇನ್ನು ಕೆಲವರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುತ್ತಾರೆ, ಇನ್ನು ಕೆಲವರು ಕೆಲಸ ಹುಡುಕುವುದರಲ್ಲಿ ಮುಳುಗಿ ಹೋಗುತ್ತಾರೆ, ಕೆಲವರು ಹಳ್ಳಿಗೆ ಹಿಂತಿರುಗುತ್ತಾರೆ, ಮನೆಯಕಡೆ ಶ್ರೀಮಂತವಾಗಿರುವವರು ಸುತ್ತಮುತ್ತಲು ಓಡಾಡಿಕೊಂಡು ಕಾಲ ಕಳೆಯುತ್ತಾರೆ.

 ಯೌವನವು ಪ್ರತಿಯೊಬ್ಬರಿಗೂ ದೊರಕುವಂತಹ ಒಂದು ಸುಸಂದರ್ಭ ಇದರಲ್ಲಿ ನಾವು ನಮ್ಮನ್ನು ಹೇಗೆ ರೂಪಿಸಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅಂದು ಎಲ್ಲರ ಬಳಿ ಹಣ ಇರುತ್ತಿರಲಿಲ್ಲ ಆದರೆ ಸಮಯವಿರುತ್ತಿತ್ತು, ಆದರೆ ಇಂದು ಎಲ್ಲರೂ  ಹಣ ಸಂಪಾದಿಸುತ್ತಿದ್ದಾರೆ ಆದರೆ ಯಾರಿಗೂ ಸಮಯವಿಲ್ಲ, ಪ್ರತಿಯೊಬ್ಬರೂ ತಾವು ವಿದ್ಯಾರ್ಥಿ ಜೀವನದಲ್ಲಿ ಕಳೆದಂತಹ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. ಪ್ರತಿಯೊಬ್ಬರಲ್ಲಿಯೂ ನೆನಪುಗಳು ಸದಾ ಹಸಿರಾಗಿರುತ್ತದೆ. ಅದನ್ನು ಕೇವಲ ನೆನಪಿಸಿಕೊಳ್ಳಬಹುದೇ ಹೊರತು ಹಿಂತಿರುಗಲು ಸಾಧ್ಯವಿಲ್ಲ, ಅರ್ಥಾತ್ ಹಣ ಇದೇ ಸಮಯದಲ್ಲಿ ಮತ್ತಷ್ಟು ಹಣವನ್ನು ಸಂಪಾದಿಸಬಹುದೇ ಹೊರತು ಸಮಯವನ್ನೆಲ್ಲ  ಆದ್ದರಿಂದಲೇ ಸಮಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.

[ ಮೇಲೆ ತಿಳಿದಿರುವಂತಹ ಪ್ರವಾಸಿ ತಾಣಗಳ ಪ್ರಯಾಣ ಒಂದು ಮತ್ತೊಂದಕ್ಕಿಂತ ವಿಭಿನ್ನವಾಗಿರುವಂತಹದ್ದು ಓದುಗರು ಇಚ್ಚಿಸಿದಲ್ಲಿ ಅದರೊಟ್ಟಿಗೆ ಸ್ನಾತಕೋತ್ತರ ಅನುಭವಗಳನ್ನು ಹಂಚಿಕೊಳ್ಳುತ್ತೇನೆ]

 ಧನ್ಯವಾದಗಳು.

5 comments: